KRS Dam: ಭರ್ಜರಿ ಮಳೆಯಿಂದ ಕಾವೇರಿಗೆ ಜೀವಕಳೆ; ಕೆ ಆರ್ ಎಸ್ ಗೆ ಹರಿದು ಬರುತ್ತಿದೆ ಭಾರೀ ಪ್ರಮಾಣದ ಒಳಹರಿವು!
ಮಂಡ್ಯ, ಜುಲೈ 16: ರಾಜ್ಯದ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು,ಅಣೆಕಟ್ಟುಗಳಲ್ಲಿ ಉತ್ತಮ ಒಳಹರಿವು ಮುಂದುವರೆದಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಬಿಟ್ಟು ಬಿಡದೇ ಮಳೆಯಾಗುತ್ತಿದ್ದು, ಮಳೆಯಿಂದಾಗಿ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ KRS ಡ್ಯಾಂಗೆ ಭಾರೀ ಪ್ರಮಾಣದ ಒಳಹರಿವು ಹರಿದು ಬರುತ್ತಿದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಪ್ರತಿ ಗಂಟೆ ಗಂಟೆಗೂ KRS ಒಳ ಹರಿವು ಏರಿಕೆಯಾಗುತ್ತಿದೆ. ಇದರಿಂದಾಗಿ ಜೀವನದಿ ಕಾವೇರಿಗೆ ಜೀವಕಳೆ ಬಂದಿದೆ. ಮಳೆಯಿಂದಾಗಿ 25 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ಡ್ಯಾಂಗೆ ಹರಿದು ಬರುತ್ತಿದೆ. ಸೋಮವಾರ ಬೆಳಿಗ್ಗೆ 10,121 ಕ್ಯೂಸೆಕ್ ನೀರು ಹರಿದು ಬಂದಿದೆ. ನಿನ್ನೆ ಸಂಜೆ ವೇಳೆಗೆ 19,202 ಕ್ಯೂಸೆಕ್ ಏರಿಕೆಯಾಗಿತ್ತು. ಆದರೆ ಇಂದು ಒಳ ಹರಿವಿನ ಪ್ರಮಾಣ 25,933 ಕ್ಯೂಸೆಕ್ಗೆ ಏರಿಕೆಯಾಗಿದೆ. ಸಂಜೆಗೆ 30 ಸಾವಿರ ಕ್ಯೂಸೆಕ್ಗೆ ಏರಿಕೆಯಾಗುವ ಸಾಧ್ಯತೆಯಿದೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ಭರ್ಜರಿ ಮಳೆಯಾಗುತ್ತಿದ್ದು, 24 ಗಂಟೆಯಲ್ಲೇ 2 ಟಿಎಂಸಿ ನೀರು ಸಂಗ್ರಹವಾಗಿದೆ. ನಿನ್ನೆ ಕೆಆರ್ಎಸ್ ಡ್ಯಾಂ 105.40 ಅಡಿಯಿತ್ತು. ಆದರೆ ಇಂದು ಕನ್ನಂಬಾಡಿ ಅಣೆಕಟ್ಟೆ 107.60 ಅಡಿ ಭರ್ತಿಯಾಗಿದೆ. ಡ್ಯಾಂ ನೀರಿನ ಮಟ್ಟ ಏರಿಕೆಯಿಂದ ರೈತರಲ್ಲಿ ಸಂತಸ ಮನೆಮಾಡಿದೆ. ಇನ್ನೂ ಇದೇ ರೀತಿಯಾಗಿ ಮಳೆಯ ಅಬ್ಬರ ಹೆಚ್ಚಾದರೆ ಒಳ ಹರಿವಿನಿಂದ ಕೆಲವೇ ದಿನದಲ್ಲಿ ಡ್ಯಾಂ ಭರ್ತಿಯಾಗಲಿದೆ.
ಕಬಿನಿ ಜಲಾಶಯ ಭರ್ತಿ!
ಇನ್ನೂ ಕೇರಳದ ವೈನಾಡು ಪ್ರದೇಶದಲ್ಲಿ ಭಾರೀ ಮಳೆ ಆಗುತ್ತಿರುವ ಕಾರಣ ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಕಬಿನಿ ಜಲಾಶಯ ಭರ್ತಿಯಾಗಿದೆ. ದಿನದಿಂದ ದಿನಕ್ಕೆ ಜಲಾಶಯದ ಒಳಹರಿವು ಹೆಚ್ಚಾಗುತ್ತಿರುವ ಕಾರಣ ಸೋಮವಾರ 15 ಸಾವಿರ ಕ್ಯುಸೆಕ್ ನೀರನ್ನು ಹೊರಬಿಡಲಾಗಿದ್ದು, ಇಂದು 4 ಕ್ರಸ್ಟ್ ಗೇಟ್ ತೆರೆದು 25 ಸಾವಿರ ಕ್ಯುಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಕಬಿನಿ ಜಲಾಶಯ ಗರಿಷ್ಠ ಮಟ್ಟ 2284 ಅಡಿ ಆಗಿದ್ದು, ಇಂದಿನ ನೀರಿನ ಮಟ್ಟ 2283 ಅಡಿ ಇದೆ. ಒಳ ಹರಿವು 20,217 ಕ್ಯುಸೆಕ್ ಇದೆ. 25 ಸಾವಿರ ಕ್ಯುಸೆಕ್ ನೀರು ಬಿಡುಗಡೆ ಮಾಡಿದ ಪರಿಣಾಮ ಹಲವು ಸಣ್ಣ ಸೇತುವೆಗಳು ಮುಳುಗಡೆಯಾಗಲಿದೆ.
ತುಂಗಾ ಜಲಾಶಯ ಸಂಪೂರ್ಣ ಭರ್ತಿ
ಮಲೆನಾಡು ಭಾಗದಲ್ಲಿ ಭಾರೀ ಮಳೆಯಿಂದಾಗಿ ತುಂಗಾ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿದೆ. ತುಂಗಾ ಜಲಾಶಯದಿಂದ 61757 ಕ್ಯೂಸೆಕ್ ನೀರು ಬಿಡುಗಡೆಯಾಗಿದ್ದು, ಮಳೆಯಿಂದಾಗಿ ತುಂಗಾ ಜಲಾಶಯಕ್ಕೆ ಸಾವಿರಾರು ಕ್ಯೂಸೆಕ್ ನೀರು ಹರಿದು ಬರ್ತಿದ್ದು, 21 ಗೇಟ್ ಗಳ ಮೂಲಕ ನದಿಗೆ ನೀರು ಬಿಡುಗಡೆ ಮಾಡಲಾಗಿದೆ. ಗಾಜನೂರಿನಲ್ಲಿರುವ ತುಂಗಾ ಜಲಾಶಯದಿಂದ 61,757 ಕ್ಯೂಸೆಕ್ ನೀರನ್ನು ತುಂಗಾ ನದಿಗೆ ಹರಿಸಲಾಗುತ್ತಿದೆ. ಶೃಂಗೇರಿ, ತೀರ್ಥಹಳ್ಳಿ ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ.
ತುಂಗಾ ಡ್ಯಾಂನಿಂದ ಬಿಟ್ಟ ನೀರು ಶಿವಮೊಗ್ಗ ನಗರದ ಮೂಲಕ ಕೂಡಲಿ ತಲುಪಿ ಅಲ್ಲಿ ಭದ್ರಾನದಿಯೂ ಸೇರಿಕೊಂಡು ಬಳ್ಳಾರಿಯಲ್ಲಿರುವ ತುಂಗಾಭದ್ರಾ ಜಲಾಶಯ ತಲುಪುತ್ತದೆ. ಗಾಜನೂರಿನಲ್ಲಿರುವ ತುಂಗಾ ಡ್ಯಾಂ 588.24 ಮೀಟರ್ ಎತ್ತರ ಹೊಂದಿದೆ. ಜಲಾಶಯದಲ್ಲಿ 3.24 ಟಿಎಂಸಿ ಅಡಿ ನೀರನ್ನು ಸಂಗ್ರಹಿಸಬಹುದು. ತೀರ್ಥಹಳ್ಳಿ, ಶೃಂಗೇರಿ ಭಾಗದಲ್ಲಿ ಧಾರಾಕಾರ ಸುರಿಯುತ್ತಿರುವ ಮಳೆಯಿಂದ ಜಲಾಶಯಗಳಲ್ಲಿ ನೀರು ಉಕ್ಕಿ ಹರಿಯುತ್ತಿದೆ.
ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮುಂದುವರೆದ ಮಳೆ
ಭಾರೀ ಮಳೆಯಿಂದ ಹೇಮಾವತಿ ಜಲಾಶಯಕ್ಕೆ ಹೆಚ್ಚಿದ ಒಳ ಹರಿವು ಹರಿದು ಬರುತ್ತಿದ್ದು, ಜೀವನದಿ ಹೇಮಾವತಿ ಜಲಾಶಯಕ್ಕೆ 14027 ಕ್ಯುಸೆಕ್ ಒಳ ಹರಿವು ಹೆಚ್ಚಳಗಾವಿದೆ. ಹಾಸನ ತಾಲ್ಲೂಕಿನ ಗೊರೂರು ಸಮೀಪದ ಹೇಮಾವತಿ ಜಲಾಶಯದಲ್ಲಿ 2922 ಅಡಿ 37 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿದೆ. ಇಂದು 2906 ಅಡಿ 23.838 ಟಿಎಂಸಿ ನೀರು ಸಂಗ್ರಹವಾಗಿದ್ದು, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನಾದ್ಯಂತ ಹೆಚ್ಚಿದ ಮಳೆ ಹಿನ್ನೆಲೆಯಲ್ಲಿ ಹೇಮಾವತಿ ನದಿಗೆ ನೀರು ಹರಿದು ಬರುತ್ತಿದೆ.












Click it and Unblock the Notifications