Heavy Rain: ಕರ್ನಾಟಕದ ಹಲವೆಡೆ ಭಾರೀ ಮಳೆಗೆ ನೆಲಕ್ಕಚ್ಚಿದ ಮರಗಿಡಗಳು: ಬೆಳೆ ನಾಶ- ರೈತ ಕಂಗಾಲು
ಬೆಂಗಳೂರು ಮಾರ್ಚ್ 25: ರಾಜ್ಯದ ಹಲವೆಡೆ ವರ್ಷದ ಮೊದಲ ಮಳೆ ಆರಂಭವಾಗಿದೆ. ಶನಿವಾರದಿಂದ ಬೆಂಗಳೂರಿನಲ್ಲಿ ಅಲ್ಲಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಶನಿವಾರ ಒಂದೇ ದಿನ ಸುರಿದ ಮಳೆಗೆ ನಗರದಲ್ಲಿ ಸರಿಸುಮಾರು 65 ಮರಗಳು ಧರೆಗೆ ಉರುಳಿವೆ. ಅಲ್ಲದೆ ರಾಜ್ಯದ ಹಲವೆಡೆ ಕಳೆದ ದಿನ ಜೋರು ಗಾಳಿ ಸಮೇತ ಮಳೆಯಾಗಿದ್ದು, ಬೃಹತ್ ಗಾತ್ರದ ಮರಗಳು ನೆಲಕ್ಕಚ್ಚಿ, ಬೆಳೆ ಹಾನಿಯಿಂದಾಗಿ ರೈತರು ಕಂಗಾಲಾಗಿದ್ದಾರೆ.
ಹೌದು.... ಕಳೆದ ದಿನ (ಮಾರ್ಚ್ 24) ರಾಯಚೂರು, ಬಳ್ಳಾರಿ, ಯಾದಗಿರಿಯಲ್ಲಿ ತುಂತುರು ಮಳೆಯಾಗಿದ್ದು, ಬಾಗಲಕೋಟೆಯ ಹಲವು ಪ್ರದೇಶಗಳಲ್ಲಿ ವರುಣನ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಸೋಮವಾರ ಸಂಜೆ ಸುರಿದ ಭಾರೀ ಮಳೆಗೆ ಹಲವಾರು ಮರಗಿಡಗಳು ಧರೆಗೆ ಉರುಳಿದ್ದು, ಹಲವೆಡೆ ವಿದ್ಯುತ್ ಕಡಿತಗೊಂಡಿದೆ. ಅಲ್ಲದೆ ಅಪಾರ ಬೆಳೆ ಹಾನಿ ಸಂಭವಿಸಿದ್ದು ಬೆಳೆಗಾರರು ಕಂಗಾಲಾಗಿದ್ದಾರೆ.

ಗಾಳಿ ಮಳೆಗೆ ಬಾಗಲಕೋಟೆಯ ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದಲ್ಲಿ ಅಪಾರ ದ್ರಾಕ್ಷಿ ಬೆಳೆ ನಾಶವಾಗಿದೆ. ದ್ರಾಕ್ಷಿ ಬೆಳೆಗಾರರಾದ ಅನೀಲ್ ಬಬಲೇಶ್ವರ, ಉಮೇಶ್ ಜಾಧವ್, ಶಿವಾಜಿ ಜಾಧವ್, ಕೇಶವ್ ಜಾಧವ್ ಎಂಬುವವರ ದ್ರಾಕ್ಷಿ ತೋಟದಲ್ಲಿ ಬೆಳೆ ಸಂಪೂರ್ಣವಾಗಿ ನೆಲಕ್ಕಚ್ಚಿದೆ. ಅಲ್ಲದೆ ತೊದಲಬಾಗಿ ಗ್ರಾಮದ ಅಣ್ಣಪ್ಪ ಶಿರಹಟ್ಟಿ ಎನ್ನುವವರ ಜಮೀನಿನಲ್ಲಿ ಬೆಳೆದು ನಿಂತಿದ್ದ ಮೆಕ್ಕೆಜೋಳ ಗಾಳಿ ಹೊಡೆತಕ್ಕೆ ಸಿಕ್ಕು ಕೆಸರಾಗಿದೆ. ಹೀಗಾಗಿ ಜನ ಬೇಸಿಗೆ ಬಿಸಿಲಿನಿಂದ ಭೂಮಿತಾಯಿ ತಂಪಾಗಿರುವುದಕ್ಕೆ ಸಂತೋಷ ಪಟ್ಟರೆ ಕೆಲವರು ಬೆಳೆ ನಾಶದಿಂದ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ.
ಇನ್ನೂ ರಾಜ್ಯದ ಬೀದರ್, ಗುಲ್ಬರ್ಗ, ರಾಯಚೂರು, ಕೊಪ್ಪಳ, ಬಳ್ಳಾರಿ ಹಲವೆಡೆ ಒಣಹವೆ ಮುಂದುವರೆದಿದ್ದು ತಾಪಮಾನ ಹೆಚ್ಚಾಗಿದೆ. ಈ ಭಾಗದ ಹಲವೆಡೆ ಮೋಡ ಕವಿದ ವಾತಾವರಣ ಸೃಷ್ಟಿಯಾಗುತ್ತಿದ್ದು ಗಾಳಿ ಅರ್ಭಟಕ್ಕೆ ಮಳೆಯಾಗುತ್ತಿಲ್ಲ. ಬಿಸಿಲಿನ ಬೇಗೆಯಿಂದ ಬಸವಳಿದ ಜನ ಇಂದು ನಾಳೆ ಮಳೆಯಾಗುವ ಭರವಸೆಯಿಂದ ಮೋಡದತ್ತ ಮುಖ ಮಾಡಿ ಕುಳಿತಿದ್ದಾರೆ.
ಜೊತೆಗೆ ಇಂದು ಕೂಡ ರಾಜ್ಯದ ಹಲವೆಡೆ ಮಳೆಯಾಗುವ ಸೂಚನೆ ನೀಡಲಾಗಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ರಾಜ್ಯದ ಬಳ್ಳಾರಿ, ವಿಜಯನಗರ, ಯಾದಗಿರಿ, ಬಳ್ಳಾರಿ, ಕೊಪ್ಪಳ ರಾಯಚೂರು, ಹಾಸನ , ದಕ್ಷಿಣ ಕನ್ನಡ, ಕೊಡಗು ,ರಾಮನಗರ, ಚಾಮರಾಜನಗರ ಜಿಲ್ಲೆಗಳಲ್ಲಿ ಇಂದು ಗುಡುಗು ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ.

ಮುಂದಿನ 3 ದಿನಗಳಲ್ಲಿ ಹಲವಾರು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ
ಅಲ್ಲದೆ ಭಾರತೀಯ ಹಾಗೂ ರಾಜ್ಯ ಹವಾಮಾನ ಇಲಾಖೆ ರಾಜ್ಯದಲ್ಲಿ ಇನ್ನೂ ಎರಡು ದಿನಗಳ ಕಾಲ ಧಾರಾಕಾರ ಮಳೆಯಾಗುವ ಸೂಚನೆ ನೀಡಿದೆ. ಬೆಂಗಳೂರು ಸೇರಿ ಕರ್ನಾಟಕದ 20ಕ್ಕೂ ಅಧಿಕ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.
ಐಎಂಡಿಯ ಹಿರಿಯ ಹವಾಮಾನ ತಜ್ಞ ಸಿಎಸ್ ಪಾಟೀಲ್ ಮಾತನಾಡಿ, 'ಕರ್ನಾಟಕದಾದ್ಯಂತ ಪೂರ್ವ ಮಾನ್ಸೂನ್ ಚಟುವಟಿಕೆ ತೀವ್ರಗೊಳ್ಳುತ್ತಿದ್ದು, ತಾಪಮಾನದಲ್ಲಿ ಇಳಿಕೆ ಮತ್ತು ಸುಡುವ ಶಾಖದಿಂದ ಪರಿಹಾರ ಸಿಗಲಿದೆ. ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಮಳೆಯ ಪರಿಸ್ಥಿತಿಗಳು ಹೆಚ್ಚು ಅನುಕೂಲಕರವಾಗಿವೆ. ಮುಂದಿನ ಮೂರು ದಿನಗಳಲ್ಲಿ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ವಿಶೇಷವಾಗಿ ದಕ್ಷಿಣ ಮತ್ತು ಕರಾವಳಿ ಪ್ರದೇಶ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ನಿರೀಕ್ಷೆಯಿದೆ' ಎಂದರು.












Click it and Unblock the Notifications