Karnataka Monsoon: ಇಂದಿನಿಂದ 3 ದಿನಗಳ ಕಾಲ ವರುಣಾರ್ಭಟ; ಈ ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ ಘೋಷಣೆ
ಕರ್ನಾಟಕ, ಜುಲೈ, 06: ರಾಜ್ಯದಲ್ಲಿ ಈಗಷ್ಟೇ ಮುಂಗಾರು ಚುರುಕಾಗಿದ್ದು, ಇದರಿಂದ ಹಲವು ಜಲಾಶಯಗಳಿಗೆ ಜೀವ ಬಂದಂತಾಗಿದೆ. ಅಲ್ಲದೆ ಮತ್ತೊಂದೆಡೆ ರೈತನ ಮುಖದಲ್ಲೂ ಸಂತಸ ತರಿಸಿದಂತಿದೆ. ಹಾಗೆಯೇ ಇಂದು (ಜುಲೈ 06) ಕೂಡ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದರೆ ಯಾವ ಭಾಗಗಳಲ್ಲಿ ಹೆಚ್ಚು ಮಳೆಯಾಗಲಿದೆ ಎನ್ನುವ ವಿವರವನ್ನು ಇಲ್ಲಿ ತಿಳಿಯಿರಿ.
ಮಳೆಯಿಲ್ಲದೆ ಇಷ್ಟು ದಿನ ಹಲವೆಡೆ ಜಲಾಶಯಗಳು ಬತ್ತಿಹೋಗುವ ಹಂತವನ್ನು ತಲುಪಿದ್ದವು. ಆದರೆ ಇದೀಗ ಮುಂಗಾರು ಚುರುಕಾದ ಹಿನ್ನೆಲೆ ಜಲಾಶಯಗಳಿಗೆ ಜೀವ ಬಂದಂತಾಗಿದೆ. ಪ್ರಮುಖವಾಗಿ ತುಂಗಾ-ಭದ್ರಾ, ಕೆಆರ್ಎಸ್ ಜಲಾಶಯಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಲೇ ಇದ್ದು, ಇದರಿಂದ ರೈತರ ಮುಖದಲ್ಲೂ ಮಂದಹಾಸ ಮೂಡಿದಂತಾಗಿದೆ.

ನೆರೆಯ ರಾಜ್ಯ ಕೇರಳದ ನಂತರ ಕರ್ನಾಟಕದಲ್ಲೂ ಮುಂಗಾರು ಮಳೆ ಚುರುಕು ಪಡೆದಿದೆ. ಅದರಲ್ಲೂ ರಾಜ್ಯದ ಕರಾವಳಿ ಭಾಗದಲ್ಲಿ ಬಿಡುವಿಲ್ಲದೆ ಮಳೆರಾಯ ಅಬ್ಬರಿಸಿ ಬೊಬ್ಬೆರೆಯುತ್ತಲೇ ಇದ್ದಾನೆ. ಅಲ್ಲದೆ ಇತರೆ ಭಾಗಗಳಲ್ಲಿಯೂ ಮುಂಗಾರು ಮಳೆ ಆರ್ಭಟ ಶುರು ಮಾಡಿದೆ. ಹಾಗೆಯೇ ಮುಂಜಾಗ್ರತಾ ಕ್ರಮವಾಗಿ ಹಲವು ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ ಸಹ ಘೋಷಣೆ ಮಾಡಲಾಗಿದೆ.
ಕರಾವಳಿ ಭಾಗದಲ್ಲಿ ಇಂದು ಕೂಡ ಮಳೆ ಆರ್ಭಟಿಸಿದೆ. ಮತ್ತೊಂದೆಡೆ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಸಾಧಾರಣ ಮಳೆ ಸುರಿಯುತ್ತಿದ್ದು, ಇದರಿಂದ ಜಲಾಶಯಗಳಲ್ಲೂ ನೀರಿನ ಮಟ್ಟ ಏರಿಕೆಯಾಗುತ್ತಲೇ ಇದೆ. ಇನ್ನು ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ನಿನ್ನೆ (ಜುಲೈ 5) ಮಳೆರಾಯ ಅಬ್ಬರಿಸಿ ಬೊಬ್ಬೆರೆದಿದ್ದಾನೆ. ಹೀಗೆ ಮುಂದಿನ ಮೂರು ದಿನಗಳ ಕಾಲವೂ ಇಲ್ಲಿ ಭಾರೀ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಅಲ್ಲದೆ ಮುಂಜಾಗ್ರತಾ ಕ್ರಮವಾಗಿ ಈ ಜಿಲ್ಲೆಗಳಲ್ಲಿನ ಶಾಲಾ-ಕಾಲೇಜುಗಳಿಗೆ ಜಿಲ್ಲಾಡಳಿತಗಳಿಂದ ರಜೆ ಘೋಷಣೆ ಮಾಡಲಾಗಿದೆ. ಈಗಾಗಲೇ ಮಳೆ ಅನಾಹುತಕ್ಕೆ ಸಿಲುಕಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಬ್ಬರು ಮತ್ತು ಉಡುಪಿ ಜಿಲ್ಲೆಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಇನ್ನೂ ಭಾರೀ ಮಳೆಯಾಗುವ ಮುನ್ಸೂಚನೆ ಇರುವ ಕಾರಣ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಳಗಾವಿ, ಧಾರವಾಡ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಮತ್ತೊಂದೆಡೆ ವಿಜಯಪುರ, ಚಾಮರಾಜನಗರ, ಗುಲ್ಬರ್ಗ, ಕೋಲಾರ, ಮೈಸೂರು, ರಾಯಚೂರು, ರಾಮನಗರ, ತುಮಕೂರು ಸೇರಿದಂತೆ ಹಲವೆಡೆ ಇಂದು ಭಾರೀ ಮಳೆಯಾಗುವ ಸಾಧ್ಯತೆಯಿದೆ. ಅದರಲ್ಲೂ ಕೊಡಗಿನಲ್ಲಿ ಕಳೆದ ಎರಡು ದಿನಗಳಿಂದ ಮಳೆಯ ಪ್ರಮಾಣ ಹೆಚ್ಚಳವಾಗಿದೆ. ನಿನ್ನೆ ತಲಕಾವೇರಿ, ಭಾಗಮಂಡಲ ಭಾಗದಲ್ಲಿ ಭಾರೀ ಮಳೆ ಬಿದ್ದಿದ್ದು, ಇದರ ಪರಿಣಾಮ ಕಾವೇರಿ ತ್ರಿವೇಣಿ ಸಂಗಮದಲ್ಲಿ ನೀರಿನ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.
ಇನ್ನು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಮೋಡ ಕವಿದ ವಾತಾವರಣ ಇರಲಿದ್ದು, ಇಲ್ಲಿ ಜಿನುಗು ಮಳೆಯಾಗುವ ಸಾಧ್ಯತೆಯಿದೆ. ಹಾಗೆಯೇ ಮಂಜಿನ ನಗರಿ ಕೊಡಗಿನಲ್ಲಿ ಮಳೆ ಸುರಿಯುತ್ತಿರುವುದರಿಂದ ಕೆಆರ್ಎಸ್ ಜಲಾಶಯ ಮಟ್ಟದಲ್ಲಿ ನೀರಿನ ಪ್ರಮಾಣ ಸ್ವಲ್ಪ ಮಟ್ಟಿಗೆ ಏರಿಕೆ ಆಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಕೇರಳದ ವೈನಾಡು ಭಾಗದಲ್ಲಿ ಮಳೆ ಬೀಳುತ್ತಿರುವುದರಿಂದ ಕಬಿನಿ ಜಲಾಶಯದಲ್ಲೂ ನೀರಿನ ಮಟ್ಟ ಮೂರು ದಿನದಲ್ಲಿ ಹೆಚ್ಚಳವಾಗಿದೆ. ಇನ್ನು ಕೊಡಗಿನ ಹಾರಂಗಿ, ಹಾಸನ ಜಿಲ್ಲೆಯ ಹೇಮಾವತಿ ಜಲಾಶಯದಲ್ಲೂ ನೀರಿನ ಮಟ್ಟದಲ್ಲಿ ಹೆಚ್ಚಳ ಕಂಡುಬಂದಿದೆ. ಮಲೆನಾಡಿನಲ್ಲಿ ಮಳೆ ಆರ್ಭಟ ಹೆಚ್ಚಾಗಿದ್ದರಿಂದ ಭದ್ರಾ -ತುಂಗಾ ಜಲಾಶಯಗಳಲ್ಲೂ ನೀರಿನ ಪ್ರಮಾಣ ಏರಿಕೆ ಆಗಿದೆ ಎನ್ನುವ ಮಾಹಿತಿ ಲಭ್ಯವಾಹಿದೆ.
ಒಟ್ಟಿನಲ್ಲಿ ಹೇಳುವುದಾದರೆ, ಮುಂಗಾರು ಆರ್ಭಟ ಈಗಷ್ಟೇ ಚುರುಕು ಪಡೆದ ಹಿನ್ನೆಲೆ ಹಲವು ಜಲಮೂಲಗಳಿಗೆ ಕಳೆ ಬಂದಂತಾಗಿದೆ. ಅಲ್ಲದೆ ಇಷ್ಟು ದಿನ ಮೋಡದ ಕಡೆ ಮುಖ ಮಾಡಿ ಕುಳಿತ್ತಿದ್ದ ರೈತರು ಕೂಡ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅಂತೂ ಇಂತೂ ಕೆಲವೆಡೆ ಮುಂಗಾರು ದಯೆ ತೋರಿರುವುದು ರೈತರ ಬಾಳಿಗೆ ಆಸರೆಯಾದಂತಾಗಿದೆ. ಮತ್ತೆ ಹಲವೆಡೆ ಇನ್ನಾದರೂ ಮಳೆಯಿಲ್ಲದೆ ಅನ್ನದಾತರು ಕಂಗೆಟ್ಟು ಹೋಗಿದ್ದಾರೆ.












Click it and Unblock the Notifications