ಕರ್ನಾಟಕದಲ್ಲಿ ಇನ್ನು 10 ದಿನ ವರುಣನ ವಾಸ್ತವ್ಯ
ಬೆಂಗಳೂರು, ಆಗಸ್ಟ್, 01: ರಾಜ್ಯದಲ್ಲಿ ಆಗಸ್ಟ್ 10 ರವರೆಗೆ ಮಳೆ ಮುಂದುವರಿಯಲಿದೆ. ಕರಾವಳಿ, ಉತ್ತರ ಒಳನಾಡು ಜಿಲ್ಲೆಗಳಾದ ಬೆಳಗಾವಿ, ಗದಗ ರಾಯಚೂರು ಹಾಗೂ ದಕ್ಷಿಣ ಒಳನಾಡಾದ ಬಳ್ಳಾರಿ, ಹಾಸನ ಮತ್ತು ಶಿವಮೊಗ್ಗದಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.[ಬೆಳ್ಳಂದೂರು ಕೆರೆ ಮತ್ತೆ ನೊರೆ ಉಗುಳಲು ಯಾರು ಕಾರಣ?]
ಯಾದಗಿರಿ ಜಿಲ್ಲೆಯ ಕೆಂಬಾವಿಯಲ್ಲಿ ಭಾನುವಾರ 7 ಸೆಂ.ಮೀ. ಭಾರಿ ಮಳೆಯಾಗಿದೆ. ಸೇಡಂ, ಸೈದಾಪುರ, ಧರ್ಮಸ್ಥಳ, ಹುಲಿಕಲ್, ಅಥಣಿ, ಕಲಬುರಗಿ, ವಿಜಯಪುರ, ಕಾರ್ಕಳ, ತಾಳಗುಪ್ಪ, ಚಿಕ್ಕನಾಯಕನಹಳ್ಳಿ, ಜಮಖಂಡಿ, ಮುಂಡಗೋಡ ಸೇರಿದಂತೆ ರಾಜ್ಯದ ಎಲ್ಲ ಕಡೆ ಮಳೆಯಾಗಿದೆ.[ಮಳೆ ಬಂತು, ಕೊಳಚೆ ನೀರಿನ ಕೆರೆಯಾದ ಬೆಂಗಳೂರು]

ಬೆಂಗಳೂರಲ್ಲೂ ಮಳೆ ಅಬ್ಬರ
ಬೆಂಗಳೂರು ನಗರದಲ್ಲಿ ಭಾನುವಾರ ರಾತ್ರಿ ವೇಳೆಗೆ 11 ಮಿ.ಮೀ. ಮಳೆ ದಾಖಲಾಗಿದೆ. ನಗರದಲ್ಲಿ ಜೂನ್ 1ರಿಂದ ಜುಲೈ 31ರವರೆಗೆ 401 ಮಿ.ಮೀ. ಮಳೆ ದಾಖಲಾಗಿದ್ದು ವಾಡಿಕೆಗಿಂತ 204 ಮಿ.ಮೀ. ಹೆಚ್ಚು ಮಳೆಯಾಗಿದೆ. ಸಂಜೆ ಮತ್ತು ರಾತ್ರಿ ವೇಳೆ ವರುಣ ಅಬ್ಬರಿಸಲಿದ್ದಾನೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ತುಂಬಿದ ಜಲಾಶಯಗಳು
ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾಗಿವೆ. ಆಲಮಟ್ಟಿ, ಬಸವಸಾಗರ, ಲಿಂಗನಮಕ್ಕಿ, ಮಲಪ್ರಭಾ ಜಲಾಶಯಗಳು ತುಂಬಲು ಕೆಲವೇ ಅಡಿ ಬಾಕಿ ಇದೆ.

ಒಳಹರಿವು ಹೆಚ್ಚಳ
ಜಲಾಶಯಗಳ ಒಳಹರಿವು ಹೆಚ್ಚಿದ್ದು ಕೆಆರ್ ಎಸ್, ಭದ್ರಾ, ಹಾರಂಗಿ, ಕಬಿನಿ, ಘಟಪ್ರಭಾ ಜಲಾಶಯಗಳಿಗೆ ಒಳಬರುತ್ತಿರುವ ನೀರಿನ ಹರಿವು ಹೆಚ್ಚಿದೆ.

ಸಾಂಕ್ರಾಮಿಕ ರೋಗ ಭೀತಿ
ಮಳೆ ಆರ್ಭಟಕ್ಕೆ ತತ್ತರಿಸಿದ್ದ ಬೆಂಗಳೂರಿನ ಕೋಡಿಚಿಕ್ಕನಹಳ್ಳಿಯಲ್ಲಿ ಈಗ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆ ಸಕಲ ಮುನ್ನೆಚ್ಚರಿಕೆ ತೆಗೆದುಕೊಂಡಿದ್ದು ಶುದ್ಧ ಕುಡಿಯುವ ನೀರಿಗೆ ಕೊರತೆ ಎದುರಾಗಿದೆ.

ಆರೋಗ್ಯ ತಪಾಸಣೆ
ಆರೋಗ್ಯ ಇಲಾಖೆ ಕೋಡಿಚಿಕ್ಕನಹಳ್ಳಿಯ ಪ್ರತಿಯೊಬ್ಬರನ್ನು ತಪಾಸಣೆಗೊಳಪಡಿಸುತ್ತಿದ್ದಾರೆ. ಸೊಳ್ಳೆ ಕಾಟ ಹೆಚ್ಚಾಗದಂತೆ ಮಾಡಲು ಕ್ರಿಮಿನಾಶಕ ಸಿಂಪಡಣೆ ಮಾಡಲಾಗುತ್ತಿದೆ. ಕಿತ್ತು ಹೋಗಿರುವ ರಸ್ತೆಗಳ ದುರಸ್ತಿ ಕಾರ್ಯವೂ ಮುಂದುವರಿದಿದೆ.












Click it and Unblock the Notifications