ಪಾಲಕರೇ ಗಮನಿಸಿ: ಶಾಲೆ ಆರಂಭಿಸುವ ಬಗ್ಗೆ ಆರೋಗ್ಯ ಇಲಾಖೆಯ ನಿರ್ಧಾರ ಇದು!
ಬೆಂಗಳೂರು, ಅ. 06: ಇಡೀ ದೇಶಾದ್ಯಂತ ಕೊರೊನಾ ವೈರಸ್ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ದಿನದಿಂದ ದಿನಕ್ಕೆ ಸೋಂಕು ಹರಡುವುದು ಹೆಚ್ಚಾಗುತ್ತಿದೆ. ಆದರೂ ಆದರೂ ಕೊರೊನಾದೊಂದಿಗೆ ಬದುಕು ಎಂದು ಸರ್ಕಾರ ಲಾಕ್ಡೌನ್ ಮಾರ್ಗಸೂಚಿಗಳನ್ನು ಸಡಲಿಸುತ್ತಿದೆ. ಇದೀಗ ಕೇಂದ್ರ ಸರ್ಕಾರದ ಆದೇಶ ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಯಾಕೆಂದರೆ ಕಳೆದ ಸೆ. 30 ರಂದು ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶದಲ್ಲಿ ಶಾಲೆಗಳನ್ನು ತೆರೆಯಲು ಆದೇಶ ಹೊರಡಿಸಿದೆ.
ಕೇಂದ್ರ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ರಾಜ್ಯ ಪ್ರಾಥಮಿಕ ಶಿಕ್ಷಣ ಇಲಾಖೆಯು ಆರೋಗ್ಯ ಇಲಾಖೆಯ ಸಲಹೆಯನ್ನು ಕೇಳಿತ್ತು. ಇದೇ ವಿಚಾರದ ಕುರಿತು ಇವತ್ತು ಆರೋಗ್ಯ ಸಚಿವ ಶ್ರೀರಾಮುಲು ಮಹತ್ವದ ಸಭೆಯನ್ನು ನಡೆಸಿದ್ದು, ತಜ್ಞರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಶಾಲೆ ಆರಂಭಿಸುವ ಕುರಿತು ಶಿಕ್ಷಣ ಇಲಾಖೆಗೆ ಮಹತ್ವದ ಸಲಹೆಯನ್ನು ಕೊಟ್ಟಿದ್ದಾರೆ.

ಶಾಲೆ ಆರಂಭಿಸಲು ಕೇಂದ್ರ ಸರ್ಕಾರದ ಆದೇಶ
ಕೇಂದ್ರ ಸರ್ಕಾರ ಇದೇ ಅಕ್ಟೋಬರ್ 15ರಿಂದ ಶಾಲೆಗಳನ್ನು ತೆರೆಯಲು ನೀಡಿದ್ದ ಆದೇಶಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು 3 ವಿಷಯಗಳ ಕುರಿತು ಆರೋಗ್ಯ ಇಲಾಖೆಯ ಸಲಹೆ ಸೂಚನೆಗಳನ್ನು ಕೇಳಿದ್ದರು. ರಾಜ್ಯದಲ್ಲಿ LKG ಇಂದ PUC ತನಕ ಯಾವಾಗ ತರಗತಿಗಳನ್ನು ಪ್ರಾರಂಭಿಸಬಹುದು? ಒಂದು ವೇಳೆ ಶಾಲೆ ಆರಂಭ ಮಾಡಿದಲ್ಲಿ ಯಾವ ತರಗತಿಗಳನ್ನು ನಾವು ಮೊದಲು ಪ್ರಾರಂಭಿಸಬಹುದು? ಸಮುದಾಯ ಜನಪ್ರತಿನಿಧಿಗಳಿಂದ ಯಾವ ರೀತಿಯಿಂದ ಸಹಕಾರ ನಿರೀಕ್ಷಿಸಬಹುದು? ಎಂಬುದರ ಕುರಿತು ಸಲಹೆ ಕೇಳಿದ್ದರು. ಇದೇ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ತಜ್ಞರೊಂದಿಗೆ ಸಭೆ ನಡೆಸಿದರು.

ಹೆಚ್ಚಾಗುತ್ತಿದೆ ಕೊರೊನಾ ವೈರಸ್!
ಸಭೆಯ ಬಳಿಕ ಮಾತನಾಡಿದ ಆರೋಗ್ಯ ಸಚಿವ ಶ್ರೀರಾಮುಲು ಅವರು, ಒಂದೆಡೆ ಕೋವಿಡ್ ಪ್ರಕರಣಗಳಲ್ಲಿ ಏರಿಕೆಯಾಗುತ್ತಿದೆ. ಮತ್ತೊಂದೆಡೆ ಶಾಲೆ ಆರಂಭಿಸಿದರೆ ಮಕ್ಕಳು ಶಾಲೆಗೆ ಬಂದಾಗ ಎಲ್ಲರೊಂದಿಗೂ ಬೆರೆಯಬೇಕಾಗುತ್ತದೆ. ಹೀಗಾಗಿ ಇದು ತುಂಬಾ ಸೂಕ್ಷ್ಮ ವಿಷಯ. ಆದ್ದರಿಂದ ಎಲ್ಲಾ ಆಯಾಮಗಳಲ್ಲಿ ಸಮಾಲೋಚನೆ ಮಾಡಲಾಗಿದೆ. ಶಾಲೆ ಆರಂಭಿಸಿದರೆ ಎದುರಿಸಬಹುದಾದ ಸವಾಲುಗಳನ್ನು ಚರ್ಚೆ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಆರೋಗ್ಯ ಇಲಾಖೆಯ ಮಹತ್ವದ ಸಲಹೆ
ಇದೇ ಸಂದರ್ಭದಲ್ಲಿ ಶಿಕ್ಷಣ ಇಲಾಖೆಗೆ ಆರೋಗ್ಯ ಇಲಾಖೆ ಮಹತ್ವದ ಸಲಹೆ ಕೊಟ್ಟಿದೆ. ಮಕ್ಕಳ-ಪೋಷಕರ-ಶಿಕ್ಷಕರ ಸುರಕ್ಷತೆ, ಆರೋಗ್ಯ ನಮ್ಮ ಸರ್ಕಾರದ ಆದ್ಯತೆಯಾಗಿದ್ದು, ಈ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂದು ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ. ಯಾವುದೇ ನಿರ್ಧಾರ ಕೈಗೊಂಡರು ಮಕ್ಕಳ ಸುರಕ್ಷತೆ, ಆರೋಗ್ಯದ ದೃಷ್ಟಿಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು. ಮಕ್ಕಳ ಸುರಕ್ಷತೆ, ಆರೋಗ್ಯ ಮತ್ತು ಶಿಕ್ಷಣ ಎರಡನ್ನು ಮನಸ್ಸಿನಲ್ಲಿಟ್ಟುಕೊಂಡು ನಿರ್ಧಾರ ಮಾಡುತ್ತೇವೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ.

ಸಧ್ಯಕ್ಕಿಲ್ಲ ಶಾಲೆ ಆರಂಭ
ಆತುರದಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಈಗಾಗಲೇ ಸ್ಪಷ್ಟವಾಗಿ ಹೇಳಿದ್ದಾರೆ. ಆದರೂ ಹಲವು ವದಂತಿಗಳು ಶಾಲಾ ಆರಂಭದ ಕುರಿತು ಹರಿದಾಡುತ್ತಲೆ ಇವೆ. ಹೀಗಾಗಿ ಇದೀಗ ಆರೋಗ್ಯ ಇಲಾಖೆ ಕೂಡ ಮಕ್ಕಳ ವಿಚಾರ ಸೂಕ್ಷ್ಮ ವಿಚಾಋ ಆಗಿರುವುದರಿಂದ ಆತುರದ ನಿರ್ಧಾರ ಇಲ್ಲ ಎಂದು ಸ್ಪಷ್ಟಪಡಿಸಿದೆ.












Click it and Unblock the Notifications