ನಿಮ್ಮ ಮನೆ, ಆಸ್ತಿಪಾಸ್ತಿ ಸ್ವಚ್ಛವಾಗಿದ್ದರೆ ಓಕೆ.. ಇಲ್ಲ ಅಂದ್ರೆ ಬೀಳುತ್ತೆ 500 ರೂಪಾಯಿ ದಂಡ!
ಬೆಂಗಳೂರು, ಜುಲೈ. 09 : ರಾಜ್ಯದಲ್ಲಿ ಹೆಚ್ಚುತ್ತಿರುವ ಡೆಂಗ್ಯೂ ಪ್ರಕರಣಗಳ ನಿಯಂತ್ರಣಕ್ಕೆ ಮುಂದಾಗಿರುವ ಆರೋಗ್ಯ ಇಲಾಖೆಯು ಹೊಸ ಕ್ರಮಕ್ಕೆ ಮುಂದಾಗಿದೆ. ಜನರು ಈ ಬಗ್ಗೆ ಹೆಚ್ಚು ಜಾಗೃತರಾಗುವಂತೆ ಮಾಡಲು ಒಂದು ಹೆಜ್ಜೆ ಮುಂದಿಟ್ಟಿರುವ ಇಲಾಖೆಯು ಸ್ವಚ್ಛತೆ ಕಾಪಾಡುವಲ್ಲಿ ವಿಫಲರಾದವರಿಗೆ ದಂಡ ವಿಧಿಸಲಿದೆ.
ಹೆಚ್ಚುತ್ತಿರುವ ಡೆಂಗ್ಯೂ ಪ್ರಕರಣಗಳಿಗೆ ಸ್ಪಂದಿಸಿರುವ ರಾಜ್ಯ ಆರೋಗ್ಯ ಇಲಾಖೆಯು ತಮ್ಮ ಆವರಣವನ್ನು ಸ್ವಚ್ಛವಾಗಿಟ್ಟುಕೊಳ್ಳಲು ವಿಫಲರಾದ ಆಸ್ತಿ ಮಾಲೀಕರಿಗೆ 500 ರೂಪಾಯಿ ದಂಡ ವಿಧಿಸಲು ಪೌರಾಡಳಿತ ಅಧಿಕಾರಿಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಿದೆ. ಬಿಬಿಎಂಪಿ ಮತ್ತು ಇತರ ನಗರ ಸ್ಥಳೀಯ ಸಂಸ್ಥೆಗಳಿಂದ ಅಧಿಕೃತ ಆದೇಶ ಶೀಘ್ರದಲ್ಲೇ ಹೊರಬೀಳುವ ನಿರೀಕ್ಷೆಯಿದೆ.

ಸೊಳ್ಳೆಗಳ ಉತ್ಪತ್ತಿಯನ್ನು ತಡೆಗಟ್ಟಲು ಮತ್ತು ನಿಯಂತ್ರಿಸಲು ಮತ್ತು ಮಲೇರಿಯಾ ಮತ್ತು ಇತರ ಸೊಳ್ಳೆಗಳಿಂದ ಹರಡುವ ರೋಗಗಳ ನಿರ್ಮೂಲನೆಗೆ ಪ್ರಸ್ತುತ ನಿಯಮಗಳಿವೆ. ಈ ನಿಯಮಗಳ ಪ್ರಕಾರ, ಬಿಬಿಎಂಪಿ ಸೇರಿದಂತೆ ಮಹಾನಗರ ಪಾಲಿಕೆಗಳು ಸೊಳ್ಳೆಗಳು ಹೆಚ್ಚಾಗಲು ಮತ್ತು ಅವುಗಳ ಸಂತಾನೋತ್ಪತ್ತಿಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸುವ ಆಸ್ತಿ ಮಾಲೀಕರಿಗೆ ಗರಿಷ್ಠ 50 ರೂಪಾಯಿ ದಂಡ ವಿಧಿಸುತ್ತಿತ್ತು.
ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಇತ್ತೀಚೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ದಂಡವನ್ನು 50 ರಿಂದ 500 ರೂ.ಗೆ ಹೆಚ್ಚಿಸುವ ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಹರಡುತ್ತಿರುವ ಡೆಂಗ್ಯೂ ನಿಯಂತ್ರಣದತ್ತ ಗಮನ ಹರಿಸಿದ ದಿನೇಶ್ ಗುಂಡೂರಾವ್ ಅವರು ಪ್ರಸ್ತುತ ದಂಡವನ್ನು ತೀರಾ ಕಡಿಮೆ ಎಂದು ಪರಿಗಣಿಸಿದ್ದಾರೆ.

ಇಂತಹ ಕನಿಷ್ಠ ದಂಡವು ಜನರು ಸರ್ಕಾರದ ಕ್ರಮವನ್ನು ಗಂಭೀರವಾಗಿ ತೆಗೆದುಕೊಳ್ಳದಿರಲು ಕಾರಣವಾಗಬಹುದು. ಹೀಗಾಗಿಯೇ ದಂಡವನ್ನು ಹೆಚ್ಚಿಸಿ ಶೀಘ್ರ ಆದೇಶ ಹೊರಡಿಸುವಂತೆ ಬಿಬಿಎಂಪಿ ಸೇರಿದಂತೆ ಮಹಾನಗರ ಪಾಲಿಕೆಗಳಿಗೆ ತಿಳಿಸಲಾಗಿದೆ. ಬಿಬಿಎಂಪಿ ಅಧಿಕಾರಿಗಳು ದಂಡವನ್ನು ಹೆಚ್ಚಿಸುವ ಪ್ರಸ್ತಾಪವನ್ನು ದೃಢಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಡೆಂಗ್ಯೂ ಬಗ್ಗೆ ಜಾಗೃತಿ ಮೂಡಿಸಲು ಸುಮಾರು 14 ಲಕ್ಷ ಮನೆಗಳಿಗೆ ಭೇಟಿ ನೀಡಲು ಬಿಬಿಎಂಪಿ ವತಿಯಿಂದ ಹಲವಾರು ತಂಡಗಳನ್ನು ರಚಿಸಲಾಗಿದೆ. ಈ ಕ್ರಮಗಳು ಜನರ ಸುರಕ್ಷತೆಗೆ ಅತ್ಯಗತ್ಯವಾಗಿರುವುದರಿಂದ ಹೆಚ್ಚಿನ ದಂಡಗಳಿಂದ ಜನ ಹೆಚ್ಚು ಜಾಗೃತರಾಗಿರುತ್ತಾರೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications