ನೆರೆ ಪೀಡಿತ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗದ ಭೀತಿ: ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆ ಆದೇಶ
ಬೆಂಗಳೂರು, ಸೆಪ್ಟಂಬರ್ 07: ಭಾರಿ ಮಳೆಯಿಂದ ಜಲಾವೃತವಾಗಿರುವ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಸೃಷ್ಟಿಯಾಗುವ ಸಾಧ್ಯತೆ ಇದೆ. ಈ ಸಂಬಂಧ ಅಗತ್ಯ ಚಿಕಿತ್ಸೆ, ತುರ್ತು ಆರೋಗ್ಯ ಸ್ಪಂದನೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ.
ಬೆಂಗಳೂರು ಸೇರಿದಂತೆ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ನಿರಂತರ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಈ ನೆರೆ ಪರಿಸ್ಥಿತಿ ತಗ್ಗಿದ ಬೆನ್ನಲ್ಲೆ ಆಯಾ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗ ಭೀತಿ ಉಂಟಾಗುತ್ತದೆ. ಅದನ್ನು ತಪ್ಪಿಸುವ ಸಲುವಾಗಿ ಆರೋಗ್ಯ ಕೇಂದ್ರಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ, ತುರ್ತು ಪರಿಸ್ಥಿತಿಗೆ ತ್ವರಿತವಾಗಿ ಸ್ಪಂದಿಸುವಂತೆ ಇಲಾಖೆ ಸೂಚಿಸಿ ಬುಧವಾರ ಅದೇಶಿಸಿದೆ.
ಈ ಕುರಿತು ಜಿಲ್ಲಾ ಆರೋಗ್ಯಾಧಿಕಾರಿಗಳು, ಮುಖ್ಯ ಆರೋಗ್ಯಾಧಿಕಾರಿಗಳು ಸೇರಿದಂತೆ ಆರೋಗ್ಯ ವಲಯಕ್ಕೆ ಇಲಾಖೆ ಆದೇಶದ ಮೂಲಕ ನೀಡಿದ 10 ಅಂಶಗಳೇನು ಎಂದು ಇಲ್ಲಿ ತಿಳಿಯಿರಿ.

ಆರೋಗ್ಯ ಇಲಾಖೆಯ 10ಅಂಶಗಳು ಹೀಗಿವೆ
1. ಸಾಂಕ್ರಾಮಿಕ ರೋಗಗಳ ನಿರ್ವಹಣೆಗೆ ಸಮಗ್ರ ಕ್ರಿಯಾ ಯೋಜನೆಯು ಆರೋಗ್ಯ ಕೇಂದ್ರಗಳಲ್ಲಿ ಲಭ್ಯವಿರಬೇಕು.
2. ಕ್ರಿಯಾ ಯೋಜನೆಯಂತೆ ಅಗತ್ಯ ಮಾನವ ಸಂಪನ್ಮೂಲ, ಟೆಸ್ಟಿಂಗ್ ಕಿಟ್, ಔಷಧಿಗಳು, ರಾಸಾಯನಿಕ, ಉಪಕರಣಗಳು ಹಾಗೂ ಪ್ರಾಮಾಣಿತ ಕಾರ್ಯಾಚರಣೆ ವಿಧಾನಗಳು ಅಗತ್ಯದಷ್ಟು ಲಭ್ಯವಿರಬೇಕು.
3. ಸಾಂಕ್ರಾಮಿಕ ರೋಗಗಳ ಚಿಕಿತ್ಸೆ ಮತ್ತು ನಿರ್ವಹಣೆಯನ್ನು ಎನ್ಸಿಡಿಸಿ ಮತ್ತು ಎನ್ಸಿವಿಬಿಡಿಸಿ ಕೇಂದ್ರ ಸರ್ಕಾರ ಮತ್ತು ನಿರ್ದೇಶನಾಲಯ ಸೂಚಿಸಿದ ಪ್ರಾಮಾಣಿತ ಕಾರ್ಯಾಚರಣೆ ವಿಧಾನಗಳ ಅನ್ವಯ ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ಲಭ್ಯವಿರಬೇಕು.

4. ತುರ್ತು ಆರೋಗ್ಯ ಪರಿಸ್ಥಿತಿಯನ್ನು ಎದುರಿಸಲು ಜಿಲ್ಲಾ ಮತ್ತು ತಾಲೂಕು ಮಟ್ಟದ ತ್ವರಿತ ಪ್ರತಿಕ್ರಿಯಾ ತಂಡಗಳು, ಅಗತ್ಯ ಔಷಧ ಸಲಕರಣೆ, ವಾಹನ ಸೌಲಭ್ಯ ಸಿಗುವಂತೆ ಸಜ್ಜುಗೊಳಿಸಬೇಕು.
5. ಪ್ರವಾಹ ಪೀಡಿತ ಪ್ರದೇಶಗಳು/ವಾರ್ಡಗಳು/ ಗ್ರಾಮಗಳ ಕುರಿತು ಸೂಕ್ಷ್ಮ ಯೋಜನೆಯನ್ನು ಸಿದ್ಧಪಡಿಸಿ ಇಟ್ಟುಕೊಳ್ಳಬೇಕು. ತುರ್ತು ಪರಿಸ್ಥಿತಿಗೆ ಶೀಘ್ರ ಸ್ಪಂದಿಸಬೇಕು.
6. ವೈದ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ನಗರ ಆರೋಗ್ಯ ಕೇಂದ್ರ ಇವರು ಮುನ್ನೆಚ್ಚರಿಕೆ ದೃಷ್ಟಿಯಿಂದ ರೋಗ ನಿರ್ದಿಷ್ಟ ಸರ್ವೇಕ್ಷಣೆಯನ್ನು ಹೆಚ್ಚಿಸುವ ಜತೆಗೆ ಮುಂದುವರಿಸಬೇಕು. ತಾಲೂಕು ವೈದ್ಯಾಧಿಕಾರಿಗಳು ಅಗತ್ಯ ದತ್ತಾಂಶ ವಿಶ್ಲೇಷಿಸಿ, ರೋಗ ಹರಡುವಿಕೆ ಪತ್ತೆ ಮಾಡಿ ತುರ್ತು ನಿಯಂತ್ರಣ ಕ್ರಮಗಳನ್ನು ಜಾರಿಗೆ ಸೂಚಿಸಬೇಕು.
7. ಕೀಟಶಾಸ್ತ್ರೀಯ ಸೂಚ್ಯಂಕಗಳನ್ನು ಮುಂಚಿತವಾಗಿಯೇ ವಿಶ್ಲೇಷಿಸಿ, ಎದುರಾಗಬಹುದಾದ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು.
8. ಮುಖ್ಯ ಆರೋಗ್ಯಾಧಿಕಾರಿಗಳು, ಬಿಬಿಎಂಪಿ, ಜಿಲ್ಲಾ ಆರೋಗ್ಯಾಧಿಕಾರಿಗಳು, ಕ್ರಮವಾಗಿ ನಗರ ಪಾಲಿಕೆ ಮತ್ತು ಜಿಲ್ಲಾಡಳಿತದಿಂದ ಅಗತ್ಯ ಸಹಕಾರ ಪಡೆಯುವುದು. ಅಲ್ಲದೇ ಆರೋಗ್ಯ ಇಲಾಖೆಯು ಇನ್ನಿತರ ಇಲಾಖೆ ಜತೆ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸರ್ವೇಕ್ಷಣಾ ಚಟುವಟಿಕೆ ಅನುಷ್ಠಾನಗೊಳಿಸುವುದು. ಪರಿಸ್ಥಿತಿ ಕುರಿತು ಇಲಾಖೆಗೆ ಮಾಹಿತಿ ಒದಗಿಸಬೇಕು.
9. ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ನಿರ್ವಹಿಸಬೇಕಾದ ಕರ್ತವ್ಯಗಳನ್ನು ಮನದಟ್ಟು ಮಾಡಿಕೊಂಡು ಅಂತರ ಇಲಾಖೆ ಸಮನ್ವಯ ಸಮಿತಿ ಸಭೆ ಮಾಡಿ ಅಗತ್ಯ ಸಹಕಾರ ಪಡೆಯಬೇಕು.
10. ಈ ಮೇಲಿನ ಎಲ್ಲ ಅಂಶಗಳ ಅನುಷ್ಠಾನದ ಉಸ್ತುವಾರಿ ಮತ್ತು ಮೇಲ್ವಿಚಾರಣೆಗಾಗಿ ಹಾಗೂ ಸಮನ್ವಯತೆ ಸಾಧಿಸಲು ನಿಯಂತ್ರಣ ಕೊಠಡಿ ಸ್ಥಾಪಿಸಬೇಕು.












Click it and Unblock the Notifications