ಪ್ರಜ್ವಲ್ ರೇವಣ್ಣಗೆ ಪರ್ಯಾಯವಾಗಿ ಎಚ್ ಡಿ ಕುಮಾರಸ್ವಾಮಿ ಪುತ್ರ ನಿಖಿಲ್?
ರಾಜಕಾರಣದಲ್ಲಿ ಸಕ್ರಿಯರಾಗಿರುವ ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ, ಮುಂದಿನ ಚುನಾವಣೆಯಲ್ಲಿ ಬೇಲೂರಿನಿಂದ ಸ್ಪರ್ಧಿಸುವುದಾಗಿ ದೇವೇಗೌಡ ಬಹಿರಂಗ ಹೇಳಿಕೆ ನೀಡಿದ ನಂತರ, ಕುಮಾರಸ್ವಾಮಿ ಪುತ್ರ ನಿಖಿಲ್ ಗೌಡ ಕೂಡಾ ರಾಜಕಾರಣ ಪ್ರವೇಶ ಆರಂಭಿಸಿದ್ದಾರೆ.
ನಿಖಿಲ್, ಚುನಾವಣೆಗೆ ನೇರವಾಗಿ ಸ್ಪರ್ಧಿಸದಿದ್ದರೂ, ಪ್ರಮುಖವಾಗಿ ಕುಮಾರಸ್ವಾಮಿ ಜೊತೆಗೆ ರಾಜ್ಯಾದ್ಯಂತ ಪ್ರಚಾರಕ್ಕಿಳಿಯಲಿದ್ದಾರೆ. ಆ ಮೂಲಕ, ನಿಖಿಲ್ ಗೌಡ ಅವರನ್ನು ಪ್ರಜ್ವಲ್ ರೇವಣ್ಣಗೆ ಪರ್ಯಾಯವಾಗಿ ಬೆಳೆಸಲು ಕುಮಾರಸ್ವಾಮಿ ಕುಟುಂಬ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.
ಬೇಲೂರಿನಿಂದ ಪ್ರಜ್ವಲ್, ಪ್ರಚಾರಕ್ಕೆ ನಿಖಿಲ್: ದೊಡ್ಡಗೌಡರ ಘೋಷಣೆ
ಬೆಂಕಿಯಿಲ್ಲದೇ ಹೊಗೆಯಾಡುತ್ತದೆಯೇ ಎನ್ನುವ ಮಾತಿನಂತೆ, ಕಳೆದ ಕೆಲವು ತಿಂಗಳ ಕೆಳಗೆ ಪ್ರಜ್ವಲ್, ಜೆಡಿಎಸ್ ನಲ್ಲಿನ ಸೂಟ್ ಕೇಸ್ ಸಂಸ್ಕೃತಿಯ ಬಗ್ಗೆ ಮಾತನಾಡಿ ನಂತರ ಚಿಕ್ಕಪ್ಪನ ಕ್ಷಮೆಯಾಚಿಸಿದ್ದರು. ಇದು ರೇವಣ್ಣ ಮತ್ತು ಕುಮಾರಸ್ವಾಮಿ ಕುಟುಂಬದ ನಡುವೆ ಸರಿಯಿಲ್ಲವೇ ಎನ್ನುವ ಗುಮಾನಿಯನ್ನು ಹುಟ್ಟುಹಾಕಿತ್ತು.
ದೇವೇಗೌಡ ಕುಟುಂಬದಿಂದ ಇಬ್ಬರೇ ಸ್ಪರ್ಧಿಸುವುದು (ಎಚ್ಡಿಕೆ, ರೇವಣ್ಣ) ಎಂದು ಕುಮಾರಸ್ವಾಮಿ ಮತ್ತು ದೇವೇಗೌಡ ಇಷ್ಟು ದಿನ ಹೇಳಿಕೊಂಡು ಬರುತ್ತಿದ್ದರೂ, ಪ್ರಜ್ವಲ್ ಸ್ಪರ್ಧಿಸುವ ವಿಚಾರವನ್ನು ದೇವೇಗೌಡರು ಸ್ಪಷ್ಟ ಪಡಿಸಿದ ನಂತರ, ಗೌಡ್ರ ಕುಟುಂಬದಿಂದ ಸೊಸೆಯಂದಿರೂ ಸ್ಪರ್ಧಿಸುವ ಸಾಧ್ಯತೆಯಿಲ್ಲದಿಲ್ಲ.
ಕಾರ್ಯಕರ್ತರ ಮನೆಗೆ, ವೈಯಕ್ತಿಕ ಕಾರ್ಯಕ್ರಮಗಳಿಗೆ ತೆರಳಿ, ರಾಜಕೀಯದಲ್ಲಿ ಭದ್ರ ತಳವೂರುವುದು ಜೆಡಿಎಸ್ ನಲ್ಲಿನ ನಡೆದುಕೊಂಡು ಬರುತ್ತಿರುವ ಪದ್ದತಿ. ಈಗ ಅದೇ ಹಾದಿಯಲ್ಲಿ ಸಾಗುತ್ತಿರುವ ನಿಖಿಲ್ ಗೌಡ, ರಾಜಕಾರಣ ಪ್ರವೇಶಕ್ಕೆ ಮುನ್ನುಡಿ ಬರೆಯುತ್ತಿದ್ದಾರೆ. ನಿಖಿಲ್ ತಮ್ಮ ಇತ್ತೀಚಿನ ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದು ಹೀಗೆ... ಮುಂದೆ ಓದಿ..
ಸಿನಿಮಾ ಕಮಿಟ್ಮೆಂಟ್ ಮುಗಿದ ನಂತರ ರಾಜ್ಯ ಪ್ರವಾಸ
ಸದ್ಯ ಸಿನಿಮಾರಂಗದಲ್ಲಿ ಬ್ಯೂಸಿಯಾಗಿರುವ ನಿಖಿಲ್ ನನ್ನು ರೇವಣ್ಣಗೆ ಪರ್ಯಾಯವಾಗಿ ಬೆಳೆಸಲು ಕುಮಾರಸ್ವಾಮಿ ನಿರ್ಧರಿಸಿದ್ದು, ಈಗಿರುವ ಸಿನಿಮಾದ ಕಮಿಟ್ಮೆಂಟ್ ಮುಗಿದ ನಂತರ ತನ್ನ ಜೊತೆ ರಾಜ್ಯ ಪ್ರವಾಸಕ್ಕೆ ಕರೆದುಕೊಂಡು ಹೋಗಲು ನಿರ್ಧರಿಸಿದ್ದಾರೆ ಎನ್ನುವ ಮಾಹಿತಿಯಿದೆ.
ನಿಖಿಲ್ ನನ್ನು ಪರ್ಯಾಯವಾಗಿ ಬೆಳೆಸುವ ತೀರ್ಮಾನ
ಭವಾನಿ ರೇವಣ್ಣ ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ್ದರೂ, ದೊಡ್ಡ ಗೌಡರ ಅನುಮತಿ ಸಿಕ್ಕಿರಲಿಲ್ಲ. ಈ ವಿಚಾರದಲ್ಲಿ ಕುಮಾರಸ್ವಾಮಿ ಮತ್ತು ರೇವಣ್ಣ ನಡುವೆ ಭಾರೀ ಕಂದಕವೇ ನಿರ್ಮಾಣವಾಗಿತ್ತು ಎಂದು ವರದಿಯಾಗಿತ್ತು. ಈಗ ಪ್ರಜ್ವಲ್ ಗೆ ಚುನಾವಣೆಗೆ ನಿಲ್ಲಲು ಅನುಮತಿ ನೀಡಿರುವುದರಿಂದ, ನಿಖಿಲ್ ನನ್ನು ಪರ್ಯಾಯವಾಗಿ ಬೆಳೆಸುವ ತೀರ್ಮಾನಕ್ಕೆ ಕುಮಾರಸ್ವಾಮಿ ಕುಟುಂಬ ಬಂದಿದೆ ಎನ್ನಲಾಗುತ್ತಿದೆ.
ತಮ್ಮೆಲ್ಲರ ಹಾರೈಕೆಯಿಂದ ತಂದೆ ಸಂಪೂರ್ಣವಾಗಿ ಗುಣಮುಖರಾಗುತ್ತಿದ್ದಾರೆ
ನಿಖಿಲ್ ತನ್ನ ಫೇಸ್ ಬುಕ್ ಪೇಜಿನಲ್ಲಿ ಬರೆದುಕೊಂಡಿದ್ದು ಹೀಗೆ, " ನಮ್ಮ ತಂದೆಯವರು ತಮ್ಮೆಲ್ಲರ ಹಾರೈಕೆಯಿಂದ ಸಂಪೂರ್ಣವಾಗಿ ಗುಣಮುಖರಾಗುತ್ತಿದ್ದಾರೆ. ನಿಮ್ಮ ಪ್ರೀತಿ ವಿಶ್ವಾಸಕ್ಕೆ ನಾನು ಮತ್ತು ನನ್ನ ತಂದೆ ತಾಯಿ ಚಿರ ಋಣಿಯಾಗಿರುತ್ತೇವೆ. ಪ್ರತಿಯೊಬ್ಬರಿಗೂ ಅವರ ತಂದೆ ತಾಯಿ ನಡೆದಾಡುವ ದೇವರಿದ್ದಂತೆ. ಇತ್ತೀಚಿನ ದಿನಗಳಲ್ಲಿ ನಮ್ಮ ಕೆಲಸ ಕಾರ್ಯಗಳ ಒತ್ತಡದಿಂದಾಗಿ ಜನ್ಮದಾತರಿಗಾಗಿ ಹೆಚ್ಚಿನ ಸಮಯ ಕೊಡಲು ಸಾಧ್ಯವಾಗುತ್ತಿಲ್ಲ ಎಂದು ಕೊಳ್ಳುವ ಮೊದಲು ಒಂದು ಕ್ಷಣ ಯೋಚಿಸಬೇಕಾದ ವಿಷಯವೇನೆಂದರೆ, ನಮಗೆ ಬರೀ ಸಮಯವಿಲ್ಲದಿರಬಹುದು ಆದರೆ ಅದೆಷ್ಟೋ ಜನರಿಗೆ ತಂದೆ ತಾಯಿಯರೇ ಇಲ್ಲ"
ತಂದೆ ತಾಯಿಯರ ಜೊತೆಗೆ ಆದಷ್ಟು ಹೆಚ್ಚಿನ ಸಮಯ ವಿನಿಯೋಗಿಸಿ
"ಇಂದು ನಮ್ಮನ್ನು ಈ ಮಟ್ಟಕ್ಕೆ ಸ್ವಾವಲಂಬಿಗಳನ್ನಾಗಿಸಿ ನಮಗೊಂದು ಬದುಕು ರೂಪಿಸಿಕೊಟ್ಟಿರುವ ತಂದೆ ತಾಯಿ ನಮ್ಮನ್ನು ಬೆಳೆಸುವಾಗ ನಮ್ಮಿಂದ ಯಾವ ಪ್ರತಿಫಲಾಪೇಕ್ಷೆಯನ್ನೂ ಇಟ್ಟುಕೊಂಡಿರುವುದಿಲ್ಲ.ಆದ್ದರಿಂದ ಕಣ್ಣಮುಂದಿರುವ ತಂದೆ ತಾಯಿಯರ ಜೊತೆಗೆ ಆದಷ್ಟು ಹೆಚ್ಚಿನ ಸಮಯ ವಿನಿಯೋಗಿಸಿ.. ಅವರ ಪ್ರೀತಿ ವಾತ್ಸಲ್ಯ ಅಜರಾಮರ. ಅವರ ಸೇವೆ ನಮ್ಮೆಲ್ಲರ ಆದ್ಯ ಕರ್ತವ್ಯ. ನನ್ನ ಪ್ರೀತಿಯ ಸಹೋದರ ಸಹೋದರಿಯರೆ ತಂದೆತಾಯಿಗಳನ್ನು ಗೌರವಿಸಿ" ಎಂದು ನಿಖಿಲ್ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
ಜೆಡಿಎಸ್ ವರಿಷ್ಠ ದೇವೇಗೌಡರ ಹೇಳಿಕೆ
ಈ ಬಾರಿಯ ವಿಧಾನಸಭಾ ಚುನಾವಣೆಗೆ ಪ್ರಜ್ವಲ್ ರೇವಣ್ಣ ಬೇಲೂರಿನಿಂದ ಸ್ಪರ್ಧಿಸಲಿದ್ದಾನೆ. ಇನ್ನೂ ಒಂದು ಸಾಧ್ಯತೆ ಏನೆಂದರೆ ಮುಂದಿನ ಲೋಕಸಭೆ ಚುನಾವಣೆಗೆ ಯಾರೂ ಸ್ಪರ್ಧಿಸಲು ಮುಂದೆ ಬರದಿದ್ದರೆ ಹಾಸನದಿಂದ ಸ್ಪರ್ಧೆ ಮಾಡುತ್ತಾನೆ. ನಿಖಿಲ್ ಪಕ್ಷಕ್ಕೆ ಶಕ್ತಿ ತುಂಬುವುದಾದರೆ ಏಕೆ ಬೇಡ ಎನ್ನಲಿ? ಆತ ನಟ. ಅವನ ಚರಿಷ್ಮಾದಿಂದ ಪಕ್ಷಕ್ಕೆ ಅನುಕೂಲ ಅನ್ನೋದಾದರೆ ಏಕೆ ಬಳಸಿಕೊಳ್ಳಬಾರದು ಎಂದು ದೇವೇಗೌಡರು, ಇಬ್ಬರು ಮೊಮ್ಮಕ್ಕಳ ರಾಜಕೀಯ ಎಂಟ್ರಿ ಬಗ್ಗೆ ಹೇಳಿದ್ದರು.