ತಂದೆ ಮುಂದೆ ಕಣ್ಣೀರಿಟ್ಟು ರಾಜಕೀಯ ನಿವೃತ್ತಿಯ ಬಗ್ಗೆ ಮಾತನಾಡಿದ ಕುಮಾರಸ್ವಾಮಿ?
ಪಶ್ಚಿಮ ಬಂಗಾಳ, ಒರಿಸ್ಸಾ, ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬರುವುದಾದರೆ, ಕರ್ನಾಟಕದಲ್ಲಿ ಇದು ಯಾಕೆ ಸಾಧ್ಯವಾಗುತ್ತಿಲ್ಲ? ಜೆಡಿಎಸ್ ಸಂಘಟನೆಯಲ್ಲಿ ಏನಾದರೂ ಸಮಸ್ಯೆ ಇದೆಯೇ?
Recommended Video
ಈ ರೀತಿಯ ಪ್ರಶ್ನೆ ದಳಪತಿಗಳಿಗೆ ಕಾಡುತ್ತಿದೆ ಎನ್ನುವುದಕ್ಕೆ ಎರಡು ದಿನಗಳ ಹಿಂದೆ ಪಕ್ಷದ ಕೇಂದ್ರ ಕಚೇರಿ ಜೆ.ಪಿ.ಭವನದಲ್ಲಿ ನಡೆದ ಪಕ್ಷದ ಕಾರ್ಯಕ್ರಮ ಸಾಕ್ಷಿಯಾಗಿದೆ ಎಂದು ಹೇಳಲಾಗುತ್ತಿದೆ.
ಮಂಡ್ಯ ರಾಜಕೀಯ, ಕೃಷ್ಣರಾಜಸಾಗರ ಅಣೆಕಟ್ಟಿನ ವಿಚಾರದಲ್ಲಿ ಆಕ್ರಮಣಕಾರಿ ಹೆಜ್ಜೆ ಇಟ್ಟಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಇದಾದ ನಂತರ ತಮ್ಮ ನಿಲುವನ್ನು ಸ್ವಲ್ಪ ಮಟ್ಟಿಗೆ ಬದಲಿಸಿಕೊಂಡಿದ್ದರು.
ಮುಂಬರುವ ಅಸೆಂಬ್ಲಿ ಚುನಾವಣೆ ಸೇರಿದಂತೆ ಹಲವು ವಿಚಾರಗಳನ್ನು ಸಭೆಯಲ್ಲಿ ಚರ್ಚಿಸಲಾಗಿತ್ತು. ಆ ಸಭೆಯಲ್ಲಿ ದೇವೇಗೌಡ್ರು, ಎಚ್.ಕೆ.ಕುಮಾರಸ್ವಾಮಿ, ಹೊರಟ್ಟಿ, ಕಾಶಾಂಪೂರ ಸೇರಿದಂತೆ ಹಲವು ಮುಖಂಡರು, ಕಾರ್ಯಕರ್ತರೂ ಭಾಗವಹಿಸಿದ್ದರು. ಆ ವೇಳೆ, ದೇವೇಗೌಡ್ರ ಮುಂದೆ ಕುಮಾರಸ್ವಾಮಿ ಭಾವೋದ್ವೇಗಕ್ಕೆ ಒಳಗಾಗಿ ರಾಜಕೀಯ ನಿವೃತ್ತಿಯ ಮಾತನಾಡಿದರು ಎಂದು ಹೇಳಲಾಗುತ್ತಿದೆ.

2023ರಲ್ಲಿ ನಡೆಬೇಕಾಗಿರುವ ಅಸೆಂಬ್ಲಿ ಚುನಾವಣೆಗೆ ಸಿದ್ದತೆ
2023ರಲ್ಲಿ ನಡೆಬೇಕಾಗಿರುವ ಅಸೆಂಬ್ಲಿ ಚುನಾವಣೆಗೆ ಪಕ್ಷ ಸಂಘಟಿಸುವ ಕೆಲಸವನ್ನು ಜೆಡಿಎಸ್ ಈಗಲೇ ಆರಂಭಿಸಿದೆ. ಪಕ್ಷಕ್ಕೆ ನಿರ್ಣಾಯಕವಾಗಿರುವ ಕಾವೇರಿ ಜಲಾಯನ ಪ್ರದೇಶದ ಜಿಲ್ಲೆಗಳಲ್ಲಿ ಈಗಾಗಲೇ ಕಾರ್ಯಕರ್ತರನ್ನು ಒಗ್ಗೂಡಿಸುವ ಕೆಲಸ ಚುರುಕುಗೊಂಡಿದೆ. ಆದರೆ, ರಾಜ್ಯದ ಇತರ ಜಿಲ್ಲೆಗಳಲ್ಲಿ ಏನು ಮಾಡುವುದು ಎನ್ನುವುದು ದಳಪತಿಗಳಿಗೆ ಕಾಡುತ್ತಿರುವ ಪ್ರಶ್ನೆ.

ಪಕ್ಷಕ್ಕೆ ನೆಲೆ ಸಿಗುತ್ತಿಲ್ಲ ಎನ್ನುವುದು ಕುಮಾರಸ್ವಾಮಿಯವರ ನೋವಿಗೆ ಕಾರಣ
ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಾತ್ರ ಪಕ್ಷ ಅಸ್ತಿತ್ವದಲ್ಲಿರುವುದು ಜೆಡಿಎಸ್ ಮುಖಂಡರಿಗೆ ಕಾಡುತ್ತಿರುವ ದೊಡ್ಡ ಸಮಸ್ಯೆ. ರಾಜ್ಯಾದ್ಯಂತ ಪ್ರವಾಸ ಕೈಗೊಂಡರೂ, ಪಕ್ಷಕ್ಕೆ ನೆಲೆ ಸಿಗುತ್ತಿಲ್ಲ ಎನ್ನುವುದು ಕುಮಾರಸ್ವಾಮಿಯವರ ನೋವಿಗೆ ಅಂದಿನ ಸಭೆಯಲ್ಲಿ ಕಾರಣವಾಗಿತ್ತು ಎಂದು ಹೇಳಲಾಗುತ್ತಿದೆ. ಈ ವಿಚಾರವನ್ನು ತಮ್ಮ ತಂದೆಯ ಮುಂದೆ ಎಚ್ಡಿಕೆ ತೋಡಿಕೊಂಡಿದ್ದಾರೆ.

ಪ್ರಾದೇಶಿಕ ಪಕ್ಷಗಳು ಮಾಡುತ್ತಿರುವ ಸಾಧನೆ ನಮ್ಮಿಂದ ಮಾಡಲು ಸಾಧ್ಯವಾಗುತ್ತಿಲ್ಲ
ಎಷ್ಟೇ ಪ್ರಯತ್ನ ಪಟ್ಟರೂ, ತಮ್ಮ ಸರಕಾರದ ಅವಧಿಯಲ್ಲಿ ಜನಪರ ಯೋಜನೆ ಕೈಗೊಂಡರೂ, ಜನರು ನಮ್ಮನ್ನು ಕೈಹಿಡಿಯುತ್ತಿಲ್ಲ. ಬರೀ 30-40ಸ್ಥಾನಕ್ಕೆ ನಾವು ಸೀಮಿತರಾಗಿದ್ದೇವೆ. ದೇಶದ ಇತರ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಮಾಡುತ್ತಿರುವ ಸಾಧನೆ ನಮ್ಮಿಂದ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಸಭೆಯಲ್ಲಿ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

ನಾನು ರಾಜಕೀಯ ನಿವೃತ್ತಿಯನ್ನು ತೆಗೆದುಕೊಳ್ಳುತ್ತೇನೆ
ಮುಂಬರುವ ಚುನಾವಣೆಯಲ್ಲೂ ನಾವು ಅಧಿಕಾರಕ್ಕೆ ಬರದಿದ್ದಲ್ಲಿ, ನಾನು ರಾಜಕೀಯ ನಿವೃತ್ತಿಯನ್ನು ತೆಗೆದುಕೊಳ್ಳುತ್ತೇನೆ ಎಂದು ಕುಮಾರಸ್ವಾಮಿಯವರು ದೇವೇಗೌಡ್ರ ಮುಂದೆ ಭಾವೋದ್ವೇಗಕ್ಕೆ ಒಳಗಾದರು. ಆ ವೇಳೆ, ಗೌಡ್ರು ಮತ್ತು ಹೊರಟ್ಟಿಯವರು ಕುಮಾರಸ್ವಾಮಿಯವರನ್ನು ಸಮಾಧಾನ ಪಡಿಸಿದರು ಎಂದು ಹೇಳಲಾಗುತ್ತಿದೆ.












Click it and Unblock the Notifications