ಬಿಜೆಪಿಯಂತಹ ದರಿದ್ರ ಸರ್ಕಾರ ಅಧಿಕಾರಕ್ಕೆ ಬರಲು ಸಿದ್ದರಾಮಯ್ಯ ಕಾರಣ: ಎಚ್‌.ಡಿ.ಕುಮಾರಸ್ವಾಮಿ

ಕೋಲಾರ,ನವೆಂಬರ್ 18: ನಮ್ಮ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತಂದು ಮುಖ್ಯಮಂತ್ರಿ ಆಗುವುದು ಮುಖ್ಯವಲ್ಲ. ಜನರ ಸಮಸ್ಯೆಗಳನ್ನು ಬಗೆಹರಿಸಲು ನಿಮ್ಮ ನಿರೀಕ್ಷೆಗಳ ಕಾರ್ಯಕ್ರಮ ನೀಡಲು ಪಂಚರತ್ನ ರಥಯಾತ್ರೆ ಆರಂಭವಾಗಿದೆ. ನಿಮ್ಮ ಆಶೀರ್ವಾದ ನನಗೆ ಮುಖ್ಯ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

ಕೋಲಾರದ ಮುಳಬಾಗಿಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಮ್ಮಿಕೊಂಡಿದ್ದ ರಥಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಅವರು, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಇಳಿವಯಸ್ಸಿನಲ್ಲಿಯೂ ನಾಡಿನ ಜನರ ಬಗ್ಗೆ ಚಿಂತನೆ ಮಾಡುತ್ತಿದ್ದಾರೆ. ಮುಂದಿನ ಸಂಭವನೀಯ ಅಭ್ಯರ್ಥಿಗಳೆಲ್ಲ ಇಲ್ಲಿ ಇದ್ದಾರೆ. ಈ ಯಾತ್ರೆ ಯಶಸ್ವಿಯಾಗಿ ಸಾಗಲು ತಮ್ಮ ಆಶಿರ್ವಾದ ಬೇಕಿದೆ ಎಂದರು.

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಆಡಳಿತ ನೋಡಿದ್ದೇವೆ. ರೈತ ಕುಟುಂಬಗಳು ಆತ್ಮಹತ್ಯೆ ಮಾಡಿಕೊಂಡರು. ಆತ್ಮವಿಶ್ವಾಸ ಮೂಡಿಸುವ ಕೆಲಸ ಮಾಡಲಿಲ್ಲ. ಮಂಡ್ಯದಲ್ಲಿ ಕಬ್ಬಿನ ಗದ್ದೆಗೆ ಬೆಂಕಿ ಇಟ್ಟು ತಾನೂ ಆತ್ಮಹತ್ಯೆ ಮಾಡಿಕೊಂಡ ಆ ರೈತನ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಲಿಲ್ಲ. ಈ ಪಂಚರತ್ನ ರಥಯಾತ್ರೆ ದೇವರ ಕಾರ್ಯ. ಆರೂವರೆ ಕೋಟಿ ಜನರ ಕಷ್ಟ ಪ್ರತಿದಿನ ನೋಡುತ್ತಿದ್ದೇನೆ. ಸಿದ್ದರಾಮಯ್ಯನವರೇ ಈ ಪಕ್ಷ ಉಳಿಸಲು ಬಡವರಿದ್ದಾರೆ. ನಿಮ್ಮ ಭಾಗ್ಯಗಳಿಂದ ಇವರ ಬದುಕು ಹಸನಾಗಲಿಲ್ಲ ಎಂದು ವಾಗ್ದಾಳಿ ನಡೆಸಿದರು.

HD Kumaraswamy outraged on BJP Government

ಪಾನಿಪೂರಿ ಅಂಗಡಿಯಲ್ಲಿ ನಷ್ಟವಾದ ಮಹಿಳೆಗೆ ನಿಮ್ಮ ಸರ್ಕಾರದ ಪರಿಹಾರ ನೀಡಲಿಲ್ಲ. ಜಾತ್ಯಾತೀತ ಜನತಾದಳ ಕೇವಲ ರೈತರ ಬಗ್ಗೆ ಮಾತಾಡುತ್ತದೆ ಎಂಬ ಭಾವನೆ ಬಿಟ್ಟುಬಿಡಿ. ವೆಂಕಟಶಿವಾರೆಡ್ಡಿ ಕಳೆದ ಭಾರಿ ಸೋಲಲು ಕಾರಣ ಡಿಸಿಸಿ ಬ್ಯಾಂಕ್ ನೀಡಿದ ಸಾಲ. ರೈತರ ಸಾಲದ ಮನ್ನಾ ಮಾಡಿದ ನಂತರ ಸ್ತ್ರೀ ಸಾಲ ಮನ್ನಾ ಮಾಡುವ ಉದ್ದೇಶ ಇತ್ತು. ಅಷ್ಟರಲ್ಲಿ ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ನಮ್ಮ ಸರ್ಕಾರ ಉರುಳಿಸಿದರು ಎಂದು ಕಿಡಿಕಾರಿದರು.

ಬಿಜೆಪಿ ಅಧಿಕಾರಕ್ಕೆ ಬರಲು ಸಿದ್ದರಾಮಯ್ಯ ಕಾರಣ

ಜೆಡಿಎಸ್ ಬಿಜೆಪಿ ಬಿ ಟೀಮ್ ಅಂತ ಹೇಳಿ ಪ್ರಚಾರ ಮಾಡಿದ್ರು, ಇದರಿಂದ ನಮ್ಮ ಅಭ್ಯರ್ಥಿಗಳು ಸೋತರು. ಈ ರಾಜ್ಯದಲ್ಲಿ ನಡೆಯುತ್ತಿರುವ ಈಗಿನ ಬಿಜೆಪಿ ಸರ್ಕಾರವನ್ನು ಲಜ್ಜೆಗಟ್ಟ, ಮಾನಗೆಟ್ಟ ಸರ್ಕಾರವೆಂದು ಈಗ ಸಿದ್ದರಾಮಯ್ಯ ಹಾಗೂ ಇತರ ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ನಿಮಗೆ ನಾಚಿಕೆ ಆಗಬೇಕು. ನಾನು ಸಾವಿರ ಸಲ ಹೇಳಿದ್ದೇನೆ. ಬಿಜೆಪಿ ನಾಯಕರ ಜೊತೆ ಸೇರಿ ಕಾಂಗ್ರೆಸ್ ಶಾಸಕರನ್ನು ಸೋಲಿಸಿದ್ದೀರಾ, ಜೆಡಿಎಸ್ ಪಕ್ಷ ಅವಕಾಶವಾದಿ ಅಂತ ಟೀಕೆ ಮಾಡುತ್ತಿರಾ, ಈ ದರಿದ್ರ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಸಿದ್ದರಾಮಯ್ಯ ಅವರಿಂದ ಎಂದು ಹೆಚ್ ಡಿಕೆ ತೀವ್ರ ವಾಗ್ದಾಳಿ ನಡೆಸಿದರು.

2023 ಕ್ಕೆ ಕನ್ನಡಿಗರ ಸರ್ಕಾರ ಬರುವುದು ಶತಸಿದ್ದ

2023 ಕ್ಕೆ ಕನ್ನಡಿಗರ ಸರ್ಕಾರ ಬರುವುದು ಶತಸಿದ್ದ. ನಮಗೆ ಅತ್ಯಂತ ಪ್ರಿಯವಾದ ಸ್ಥಳದಿಂದ ಪಂಚರತ್ನ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಚಾಲನೆ ನೀಡುತ್ತಿದ್ದೇವೆ. ದೇವೇಗೌಡರು ನಾಡಿನ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಕೋವಿಡ್, ಮಳೆಯಿಂದ ಅನಾಹುತ ಬಗ್ಗೆ ನಾನು ಚಿಂತನೆ ಮಾಡಿದ್ದೇನೆ. ನಿಮ್ಮ ಆರ್ಶೀವಾದ ನನಗೆ ಬೇಕಾಗಿದೆ. ಇಂದಿನಿಂದ 22 ಜಿಲ್ಲೆಗಳ 104 ತಾಲೂಕು,ಎಲ್ಲ ಕ್ಷೇತ್ರಗಳಲ್ಲಿ ಸಂಚಾರ ಮಾಡುತ್ತೇನೆ. ಬರೀ ಭಾಷಣದಿಂದ‌ ಈ ಕಾರ್ಯಕ್ರಮ ಯಶಸ್ವಿ ಮಾಡೋಕೆ ಆಗಲ್ಲ ಎಂದು ಹೇಳಿದರು.

HD Kumaraswamy outraged on BJP Government

ಕಾಂಗ್ರೆಸ್ ಸರ್ಕಾರದಲ್ಲಿ ಮೂರು ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆ ಮಾಡಿಕೊಂಡ ‌ರೈತರ ಮನೆಗಳಿಗೆ ಭೇಟಿ ಮಾಡಿ ಕೈಲಾದ ಪರಿಹಾರ ನೀಡಿದ್ದು ಜೆಡಿಎಸ್ ಮುಖಂಡರು. ಹಾವೇರಿ ಜಿಲ್ಲೆ,ಮಂಡ್ಯ ಜಿಲ್ಲೆ ನಂತರ ಅತಿ ಹೆಚ್ಚಿನ ಆತ್ಮಹತ್ಯೆ ಆಗಿದ್ದ ಜಿಲ್ಲೆಗಳು. ಹಾವೇರಿ ಜಿಲ್ಲೆಯಲ್ಲಿ ನಮ್ಮ ಹೆಚ್ಚಿನ ಬಲ ಇರಲಿಲ್ಲ. ಜನ ಬಲ ಇಲ್ಲದೆ ಇದ್ದರು 75 ಲಕ್ಷ ಪರಿಹಾರ ನೀಡಿದ್ದು ಜೆಡಿಎಸ್ ಪಕ್ಷ. ಸಿಂದನೂರಿನಲ್ಲಿ 52 ಲಕ್ಷ ಪರಹಾರ ನೀಡಿದ್ದೇವೆ.

ನಾವು ರೈತರಲ್ಲಿ ಮನವಿ ಮಾಡಿದ್ದೆಆತ್ಮಹತ್ಯೆ ಮಾಡಿಕೊಳ್ಳಬೇಡಿ ನಮ್ಮ ಸರ್ಕಾರ ಬಂದರೆ ಸಾಲ ಮನ್ನಾ ಮಾಡ್ತೀನಿ ಅಂತ ಹೇಳಿದ್ದೆ. ಬಿಜೆಪಿ,ಕಾಂಗ್ರೆಸ್ ನಾಯಕರು ಲಘುವಾಗಿ ಮಾತಾಡಿದರು. ಸಿದ್ದರಾಮಯ್ಯ ವ್ಯಂಗ್ಯ ಮಾಡಿದ್ರು. ನಾನು ಸಾಲ ಮನ್ನಾಕ್ಕೂ ನಮಗೂ ಸಂಬಂಧ ಇಲ್ಲ. ನಾನು‌ ನೀಡಿರುವ ಭಾಗ್ಯದ ಯೋಜನೆಗಳನ್ನ ನಿಲ್ಲಿಸಬಾರದು ಎಂದು ಸಿದ್ದರಾಮಯ್ಯ ಹೇಳಿದ್ದರು. ಆದರೂ, ರೈತರ 25 ಸಾವಿರ ಕೋಟಿ ಸಾಲ ಮನ್ನಾ ಮಾಡಿದೆ ಎಂದು ವಿವರಿಸಿದರು.

ಸಿದ್ದರಾಮಯ್ಯ ಪಂಚರತ್ನ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಸಿದ್ದರಾಮಯ್ಯ ಅವರೇ ರಾಜ್ಯದ ಜನರ ಕಷ್ಟಗಳು ನನ್ನ ಮನಸ್ಸಿನಲ್ಲಿ ಇದೆ. ಈ ಪಕ್ಷ ಉಳಿದಿರುವುದು ಬಡ ಕುಟುಂಬಗಳಿಂದ. ನಿಮ್ಮ ಭಾಗ್ಯ ಯೋಜನೆಯಿಂದ ಬಡವರು ಉದ್ದಾರ ಆಗಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

HD Kumaraswamy outraged on BJP Government

ಸಿದ್ದರಾಮಯ್ಯ ನಿಮಗೆ ನೀರಾವರಿ ನೀಡಿದ್ದಕ್ಕೆ ಭಗೀರಥ ಅಂತ ಕರೆದ್ರು. ನೀವು ಕೊಟ್ಟಿದ್ದು ವಿಷ ತುಂಬಿರುವ ಬೆಂಗಳೂರಿನ ನೀರು. ವಿಷದ ನೀರು ಕೊಟ್ಟು ಕ್ಯಾನ್ಸರ್ ಗೆ ಕಾರಣವಾಯಿತು. ಇದಕ್ಕೆ ಕಾರಣ ಕಾಂಗ್ರೆಸ್. ಚಿಕ್ಕಬಳ್ಳಾಪುರ ಜನರು, ರೈತರು ನೀರಿಗಾಗಿ ಬೆಂಗಳೂರಿಗೆ ಬಂದಾಗ ರೈತರ ಮೇಲೆ ಲಾಠಿ ಬೀಸಿದ್ರು. ಈಗ ಸಿದ್ದರಾಮಯ್ಯ ಅವರು ಕೋಲಾರ ಉದ್ದಾರ ಮಾಡ್ತೀನಿ ಅಂತ ಬಂದಿದ್ದಾರೆ ಎಂದು ಟೀಕಿಸಿದರು.

ದೇವರ ಕೃಪೆಯಿಂದ ಮಳೆ ಬಂದಿದೆ. ಅದರಿಂದ ಒಳ್ಳೆಯ ನೀರು ಇದೆ. ಎತ್ತಿನಹೊಳೆ ನೀರು ನೀಡಿಲ್ಲ. ಯೋಜನೆ ಹಣ ಕಮಿಷನ್ ನಿಮ್ಮ ಜೇಬು ತುಂಬಿಸಿಕೊಂಡಿದ್ದೀರಾ?. ಇವತ್ತು ನೀವು ಕಮಿಷನ್ ಬಗ್ಗೆ ಮಾತಾಡ್ತೀರಾ?. ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗೆ 10 ಟಿಎಂಸಿ ನೀರು ನೀಡುತ್ತೇವೆ ಅಂದ್ರು. ಆದರೆ ಅದನ್ನು ಮಾಡಿಲ್ಲ. ಕೋಲಾರದ ರೈತರು ಬೆಳೆದ ಟೊಮ್ಯಾಟೊವನ್ನು ಖರೀದಿ ಮಾಡಲಿಲ್ಲ. ಇದು ರಮೇಶ್ ಕುಮಾರ್, ಸಿದ್ದರಾಮಯ್ಯ ನೀಡಿದ ಕೊಡುಗೆ ಎಂದು ವಾಗ್ದಾಳಿ ನಡೆಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರ ಭಾಷಣ ನೋಡಿದೆ. 24 ಸಾವಿರ ಕೋಟಿ ಸಾಲ ನೀಡಿದ್ದೇವೆ ಅಂತ ಹೇಳಿದ್ದಾರೆ. ಆ ಸಾಲ‌ ತೀರಿಸುವುದು ಯಾರು?. ಕಳೆದ ಮೂರು ವರ್ಷದಿಂದ‌ ಮಳೆಯಿಂದ ಬೆಲೆ ನಷ್ಟ ಆಗಿದೆ. ಆ ರೈತನ ಸಾಲ‌ ತೀರಿಸುವುದು ಯಾರು? ಎಂದು ಪ್ರಶ್ನಿಸಿದರು.

ಪಂಚರತ್ನ ಯೋಜನೆ ಹುಡುಗಾಟ ಅಲ್ಲ. ನಮ್ಮ ತಂದೆಯವರ ಹೆಸರಿನಲ್ಲಿ ತೆಗೆದುಕೊಂಡಿರುವ ಇದು ಅತಿ‌ ಕಠಿಣ ನಿರ್ಧಾರ. ಕೋವಿಡ್ ಅನಾಹುತದಲ್ಲಿ ವೆಂಟಿಲೇಟರ್ ಇಲ್ಲದೆ, ಆಕ್ಸಿಜನ್ ಇಲ್ಲದೆ ರಸ್ತೆಯಲ್ಲಿ ಸಾವು, ನೋವು ನೋಡಿದ್ದೇವೆ. ಇದರಿಂದ ಪಂಚರತ್ನ ಯೋಜನೆ ನಿರ್ಧಾರ ಮಾಡಿದ್ದು. ನಾನು ಅಧಿಕಾರಕ್ಕೆ ಬಂದು ಈ ಯೋಜನೆಗಳನ್ನು ಮನೆ ಮನೆಗೆ ತಲುಪಿಲ್ಲವೆಂದರೆ ನಾನು ಪಕ್ಷ ವಿಸರ್ಜನೆ ಮಾಡ್ತೇನೆ. ಇನ್ನು ಮುಂದೆ ಮತ‌ ಕೇಳೋಕೆ ಬರಲ್ಲ ಸಿದ್ದರಾಮಯ್ಯನವರೇ ಎಂದು ಸವಾಲು ಹಾಕಿದರು.

ನಾನು‌ ನೀವು ಯಾವ ಜಾತಿ ಅಂತ ಹೇಳಲ್ಲ ಸಿದ್ದರಾಮಯ್ಯ ಅವರೇ, ಸಿದ್ದರಾಮಯ್ಯ ಅವರ ರೀತಿ‌ ಮಾತನಾಡುವರು ಬೇಕೋ, ಈ ನಾಡಿನ ಸಂಪತ್ತು ಲೋಟಿ ಮಾಡುವವರು ಬೇಕೋ ಅಥವಾ ನಾನು‌ ಬೇಕೋ ನಿರ್ಧಾರ ಮಾಡಿ ಎಂದು ನಾಡಿನ ಜನರನ್ನು ಕೇಳಿದರು.

2006 ರ ಬಿಜೆಪಿ ಸರ್ಕಾರ ಇಲ್ಲ ಈಗ. ಲಕೋಟೆಯಲ್ಲಿ ಬರುವ ವೀರಶೈವ ಪಕ್ಷ ಅಲ್ಲ ಈಗ ಬಿಜೆಪಿ. ಯಡಿಯೂರಪ್ಪ ಎನು ಮಾಡಿದ್ರು. ಕಷ್ಟ ಪಟ್ಟು ಅಧಿಕಾರಿಕ್ಕೆ ತಂದಿದ್ದು ಯಡಿಯೂರಪ್ಪ, ಬೊಮ್ಮಾಯಿ‌ ಮುಖ್ಯಮಂತ್ರಿ ಅಂತ ಎಷ್ಟೋ ಜನರಿಗೆ ಗೊತ್ತಿಲ್ಲ ಎಂದು ಬಸವರಾಜ ಬೊಮ್ಮಾಯಿ ವಿರುದ್ಧವೂ ವಾಗ್ದಾಳಿ ನಡೆಸಿದರು.

ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಎಲ್ಲಿದೆ ಎಂದು ಕೇಳುತ್ತೀರಾ, 35 ಸ್ಥಾನ ಗೆಲ್ಲೋಕೆ ಪ್ಲಾನ್ ಮಾಡಿಕೊಂಡಿದ್ದಾರೆ. ಕಳೆದ‌ ಬಾರಿ‌ ಬಾದಾಮಿಯಲ್ಲಿ ವೀರಶೈವ ಸಮುದಾಯಕ್ಕೆ ಸೇರಿದ ಯುವಕ ಸಂಘಟನೆ ಮಾಡಿದ್ದ. ಸಿದ್ದರಾಮಯ್ಯ ಅವರಿಂದ ಶಾಸಕ ಸ್ಥಾನ ವಂಚಿತರಾದರು ಎಂದು ಹೇಳಿದರು. ಎಷ್ಟು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ. ಕೆ.ಆರ್.ಪುರಂ ಇನ್ಸ್ ಪೆಕ್ಟರ್ ನಂದೀಶ್ ಸಾವಿನಪ್ಪಿದರು. 80 ಲಕ್ಷ ರೂ. ಕೊಟ್ಟು ಬಂದರೆಂದು ಹೊಸಕೋಟೆ ತಾಲೂಕಿನ ಸಚಿವ ಎಂಟಿಬಿ ನಾಗರಾಜ್ ಹೇಳಿದರು. ಎಲ್ಲಿಂದ ತರುತ್ತಾರೆ. ಮತ್ತೆ ಬಡವರ ಜೇಬಿಗೆ ಕೈಹಾಕುತ್ತಾರೆ. ಇಂತಹ ಸರ್ಕಾರ ಇರಬೇಕಾ?. ಇನ್ನೂ ಎಷ್ಟು ದಿನ ಸಹಿಸುತ್ತೀರಾ? ಎಂದು ಪ್ರಶ್ನಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+