ಮಂಡ್ಯ ಅಖಾಡಕ್ಕೆ ದಳಪತಿ ಎಂಟ್ರಿ: ಕಾಂಗ್ರೆಸ್ನಲ್ಲಿರುವ ನೀವು ಏನು?- ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ
ಮೈಸೂರು, ಮಾರ್ಚ್ 28: ಮಂಡ್ಯ ಲೋಕಸಭಾ ಚುನಾವಣೆ ಸ್ಪರ್ಧೆ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಾದ ಹೆಚ್ ಡಿ ಕುಮಾರಸ್ವಾಮಿ ಅವರು ಭರ್ಜರಿ ತಯಾರಿ ನಡೆಸಿದ್ದು, ಮೈಸೂರು ಚಾಮುಂಡೇಶ್ವರ ದರ್ಶನ ಪಡೆಯುವ ಮೂಲಕ ಮಂಡ್ಯ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಮಂಡ್ಯದಲ್ಲಿ ಹೆಚ್ ಡಿ ಕುಮಾರಸ್ವಾಮಿ ಸೋಲುತ್ತಾರೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಕುಮಾರಸ್ವಾಮಿ ಮಾತನಾಡಿ, ಕಳೆದ ಬಾರಿ ನನ್ನ ಮಗನ ಸೋಲಿಗೆ ಈ ಮಹಾನುಭಾವರು ಎಷ್ಟು ಕಾರಣ ಎಂಬುದು ಗೊತ್ತಿದೆ. ಅದರ ಆಧಾರದ ಮೇಲೆ ಇವರು ಈಗ ಮಾತನಾಡುತ್ತಿದ್ದಾರೆ. ಎಲ್ಲದಕ್ಕೂ ಜನರೇ ಉತ್ತರ ಕೊಡುತ್ತಾರೆ, ನಾನು ಸೋಲುತ್ತೇನೆ ಎಂದು ಹೇಳುವ ಸಿದ್ದರಾಮಯ್ಯ ಯಾವಾಗ ಜೋತಿಷಿಯಾದರೋ ನನಗೆ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ನನ್ನನ್ನು ವಲಸಿಗ ಎಂದು ಹೇಳಿದ್ದಾರೆ. ಕಾಂಗ್ರೆಸ್ ನಲ್ಲಿರುವ ನೀವು ಏನು? ನೀವೇನು ಮೂಲ ಕಾಂಗ್ರೆಸ್ಸಿಗರಾ? ಅಲ್ಲಿ ನೀವು ವಲಸಿಗರಲ್ಲವಾ? ಮೂಲ ಕಾಂಗ್ರೆಸ್ ನವರನ್ನು ಕಸದ ಬುಟ್ಟಿಗೆ ಹಾಕಿ ನೀವು ಅಲ್ಲಿ ಅಧಿಕಾರ ಮಾಡುತ್ತಿಲ್ವಾ? ನಾನು ಕನ್ನಡಿಗ, ಎಲ್ಲಿ ಬೇಕಾದರೂ ನಾನು ಸ್ಪರ್ಧೆ ಮಾಡಬಹುದು.ನೀವು ಬಾದಾಮಿಗೆ ಏಕೆ ಹೋಗಿ ಸ್ಪರ್ಧಿ ಮಾಡಿದ್ರಿ? ಅಲ್ಲಿ ಮೂಲದವರಾ ನೀವು. ಈ ಬಾರಿ ಮಂಡ್ಯದಲ್ಲಿ ನಮ್ಮ ಹಳೇಯ ಸ್ನೇಹಿತರುಗಳ ಜೊತೆ ಸ್ಪರ್ಧೆ ಎದುರಿಸಬೇಕು. ನನ್ನ ಹಣೆಬರಹ ಹೇಗಿದೆ. ಹಳೇ ಸ್ನೇಹಿತರುಗಳೇ ನಮಗೆ ವಿರುದ್ಧ ಆಗುತ್ತಾರೆ, ಆಗಲಿ ಬಿಡಿ ಎಂದು ಹೇಳಿದರು.
ಮೈಸೂರಿನಲ್ಲಿ 2014 ರಿಂದಲೂ ಅನಧಿಕೃತವಾಗಿ ಜೆಡಿಎಸ್ ಬಿಜೆಪಿ ಮೈತ್ರಿ ಮಾಡಿಕೊಂಡಿವೆ. ಈಗಿನ ಮೈತ್ರಿ ಹೊಸದೇನಲ್ಲ, ಹೀಗಾಗಿ ಎರಡೂ ಪಕ್ಷಗಳ ಕಾರ್ಯಕರ್ತರಲ್ಲಿ ಯಾವುದೇ ರೀತಿಯ ಗೊಂದಲಗಳು ಇಲ್ಲ. ಎರಡು ಪಕ್ಷಗಳ ಕಾರ್ಯಕರ್ತರು ಬಹಳ ಸಮನ್ವತೆಯಿಂದ ಮೊದಲನಿಂದಲೂ ಇದ್ದಾರೆ, ಈಗಲೂ ಇರುತ್ತಾರೆ.
ಕುರುಕ್ಷೇತ್ರ ಯುದ್ದ ನಡೆದಿದ್ದು ದಾಯಾದಿಗಳ ನಡುವೆಯೇ. ರಾಮಾಂಜನೇಯರ ನಡುವೆಯೂ ಯುದ್ದ ನಡೆದಿಲ್ಲವೇ? ಜೆಡಿಎಸ್ ಕೋಮುವಾದಿ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಸಿದ್ದರಾಮಯ್ಯ ಸರ್ಟಿಫಿಕೆಟ್ ನನಗೆ ಬೇಕಾಗಿಲ್ಲ. ಮೇಕೆದಾಟು ವಿಚಾರದಲ್ಲಿ ದೇವೇಗೌಡರನ್ನು ಪ್ರಶ್ನಿಸುವ ನೈತಿಕತೆ ಕಾಂಗ್ರೆಸ್ ನವರಿಗೆ ಇಲ್ಲ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಕಿಡಿಕಾರಿದರು.

ಜೆಡಿಎಸ್ ಗೆ ಸುಮಲತಾ ಬೆಂಬಲ ವಿಚಾರವಾಗಿ ಮಾತನಾಡಿ, ಸುಮಲತಾ ಏನು ನನ್ನ ಶಾಶ್ವತ ಶತ್ರುನಾ? ರಾಮಾಂಜನೇಯರ ಯುದ್ಧವೇ ಈ ಮಣ್ಣಿನಲ್ಲಿ ನಡೆದು ಹೋಗಿಲ್ವಾ. ನಾವೆಲ್ಲಾ ಹುಲು ಮಾನವರು, ಅದರ ಮುಂದೆ ಯಾವ ಲೆಕ್ಕ ಹೇಳಿ. ರಾಜಕೀಯದಲ್ಲಿ ಹೋರಾಟ ಜಗಳ ಎಲ್ಲವೂ ಇದ್ದೇ ಇರುತ್ತದೆ, ಅವನ್ನೆಲ್ಲಾ ಒಮ್ಮೊಮ್ಮೆ ದಾಟಿಕೊಂಡು ಹೋಗಬೇಕು. ನಮಗೇನು ಸುಮಲತಾ ಬಹಳ ದೂರದವರೇನೂ ಅಲ್ಲ. ಅಂಬರೀಷ್ ಇದ್ದ ಕಾಲದಲ್ಲಿ ಪರಸ್ಪರ ಜೊತೆಯಲ್ಲಿದ್ದವರು, ರಾಜಕಾರಣಕ್ಕಾಗಿ ಕೆಲವು ವ್ಯತ್ಯಾಸಗಳಾಗಿತ್ತು ಅಷ್ಟೇ. ಅಗತ್ಯಬಿದ್ದರೆ ಸುಮಲತಾ ಅವರನ್ನೂ ಭೇಟಿ ಮಾಡುತ್ತೇವೆ ಎಂದು ಕುಮಾರಸ್ವಾಮಿ ಹೇಳಿದರು.












Click it and Unblock the Notifications