ಕುಮಾರಸ್ವಾಮಿ ಅವರಿಗೆ ಮೊದಲಿನಿಂದ ಮುಸ್ಲಿಂ ಸಮುದಾಯ ಕಂಡರೆ ದ್ವೇಷ: ಜಮೀರ್ ಅಹಮದ್ ಹೇಳಿದ್ದೇನು?
ಬೆಂಗಳೂರು, ಅಕ್ಟೋಬರ್ 02: ಎಚ್ ಡಿ ಕುಮಾರಸ್ವಾಮಿ ಅವರಿಗೆ ಮೊದಲಿನಿಂದ ಮುಸ್ಲಿಂ ಸಮುದಾಯ ಕಂಡರೆ ದ್ವೇಷ ಎಂದು ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು.
ಈ ಕುರಿತು ಮಾತನಾಡಿದ ಅವರು, ಸಿ. ಎಂ.ಇಬ್ರಾಹಿಂ ಅವರನ್ನು ಜೆ ಡಿ ಎಸ್ ಗೆ ಕರೆದೋಯ್ದು ನಾಮ್ಕಾ ವಾಸ್ತೆ ಅಧ್ಯಕ್ಷ ಮಾಡಿ ಮೈತ್ರಿ ಮಾತುಕತೆ ಮಾಹಿತಿ ಕೊಡದೆ ಜತೆಗೂ ಕರೆದುಕೊಂಡು ಹೋಗದೆ ಅವಮಾನ ಮಾಡಿದ್ದಾರೆ. ಪರಿಷತ್ ಸದಸ್ಯ ಸ್ಥಾನ ಸಹ ಅವರಿಗೆ ಕೊಡಲಿಲ್ಲ. ಕುಮಾರಸ್ವಾಮಿ ಅವರಿಗೆ ಮೊದಲಿನಿಂದ ಮುಸ್ಲಿಂ ಸಮುದಾಯ ಕಂಡರೆ ದ್ವೇಷ ಎಂದರು.

ಜೆಡಿಎಸ್ -ಬಿಜೆಪಿ ಸರ್ಕಾರದಲ್ಲಿ ಜಮೀರ್ ಅಹಮದ್ ಸಚಿವರಾಗಿರಲಿಲ್ಲವೇ ಎಂದ ಬಿ. ಎಂ. ಫಾರೂಕ್ ಅವರಿಗೆ ತಿರುಗೇಟು ನೀಡಿರುವ ಜಮೀರ್ ಅಹಮದ್ ಖಾನ್, ಆಗ ಮೈತ್ರಿ ಆಗಿರಲಿಲ್ಲ, ಸಾಮಾನ್ಯ ಕನಿಷ್ಠ ಕಾರ್ಯಕ್ರಮದಡಿ ಸರ್ಕಾರ ರಚನೆ ಮಾಡಿದ್ದೆವು. ಮೈತ್ರಿ ಆಗಿದ್ದರೆ ನಾನು ಆಗಲೇ ಪಕ್ಷ ಬಿಡುತ್ತಿದ್ದೆ ಎಂದು ತಿಳಿಸಿದ್ದಾರೆ.
ಜೆಡಿಎಸ್ -ಬಿಜೆಪಿ ಸರ್ಕಾರ ದಲ್ಲಿ ಕುಮಾರಸ್ವಾಮಿ ನನಗೆ ಕಾಟಾಚಾರಕ್ಕೆ ಸಚಿವ ಸ್ಥಾನ ನೀಡಿ ವಖ್ಫ್, ಹಜ್ ಖಾತೆ ಮಾತ್ರ ನೀಡಿದ್ದರು. ಕಾಂಗ್ರೆಸ್ ಸರ್ಕಾರದಲ್ಲಿ ನನಗೆ ಕಳೆದ ಬಾರಿ ನಾಲ್ಕು, ಈ ಬಾರಿ ಮೂರು ಪ್ರಬಲ ಖಾತೆ ನೀಡಿದ್ದಾರೆ. ಇದು ಕುಮಾರ ಸ್ವಾಮಿಗೂ ಕಾಂಗ್ರೆಸ್ ಗೆ ಇರುವ ವ್ಯತಾಸ ಎಂದು ಹೇಳಿದರು.
ಬಿ. ಎಂ. ಫಾರೂಕ್ ಅವರ ಬಗ್ಗೆ ಇದೀಗ ಪ್ರೀತಿ ತೋರುವ ಕುಮಾರಸ್ವಾಮಿ ಅವರು 2018 ರಲ್ಲಿ ಕಾಂಗ್ರೆಸ್ ಜತೆ ಸೇರಿ ಸಮ್ಮಿಶ್ರ ಸರ್ಕಾರ ಮಾಡಿದಾಗ ಜೆಡಿಎಸ್ ನಿಂದ ಯಾಕೆ ಸಚಿವ ಸ್ಥಾನ ನೀಡಲಿಲ್ಲ ಎಂದು ಪ್ರೆಶ್ನೆ ಮಾಡಿದ್ದಾರೆ.
ಚುನಾವಣೆಗೆ ಮುಂಚೆ ಅಧಿಕಾರಕ್ಕೆ ಬಂದರೆ ಮುಸ್ಲಿಂ ಸಮುದಾಯಕ್ಕೆ ಉಪ ಮುಖ್ಯಮಂತ್ರಿ, ಗೃಹ ಮಂತ್ರಿ ಮಾಡ್ತೇನೆ ಅಂದಿದ್ದರು. ಸಂಪುಟದಲ್ಲಿ ಮೂರು ಸ್ಥಾನ ಖಾಲಿ ಇದ್ದರೂ ಫಾರೂಕ್ ಅವರನ್ನು ಸಚಿವರಾನ್ನಾಗಿ ಮಾಡಲಿಲ್ಲ. ರಾಜ್ಯಸಭೆ ಚುನಾವಣೆಯಲ್ಲಿ ಗೆಲ್ಲುವ ಅವಕಾಶ ಇದ್ದಾಗ ರಾಮಸ್ವಾಮಿ, ಕುಪೇಂದ್ರ ರೆಡ್ಡಿ ಅವರನ್ನು ಅಭ್ಯರ್ಥಿ ಮಾಡಿದರು. ಸೋಲುವ ಸಮಯದಲ್ಲಿ ಫಾರೂಕ್ ಅವರಿಗೆ ಟಿಕೆಟ್ ನೀಡಿ ಕಾಂಗ್ರೆಸ್ ಮೇಲೆ ಗೂಬೆ ಕೂರಿಸಲಾಯಿತು ಎಂದು ಕಿಡಿಕಾರಿದರು.
ಹಿಜಾಬ್, ಹಜಾನ್, ಹಲಾಲ್ ವಿಚಾರ ತೆಗೆದು ಬಿಜೆಪಿ ಮುಸ್ಲಿಂ ಸಮುದಾಯದ ಬಗ್ಗೆ ಹೇಗೆ ನಡೆದು ಕೊಂಡಿತು ಗೊತ್ತಿದೆ. ಇದನ್ನು ಫಾರೂಕ್ ಹೇಗೆ ಸಮರ್ಥಿಸಿಕೊಂಡು ಬಿಜೆಪಿ ಮೈತ್ರಿ ಒಪ್ಪುತ್ತಾರೆ. ಸಮುದಾಯ ಎಲ್ಲವನ್ನೂ ಗಮನಿಸುತ್ತಿದೆ ಎಂದು ಹೇಳಿದ್ದಾರೆ.
ಬಿಜೆಪಿ ಜತೆ ಜೆಡಿಎಸ್ ಮೈತ್ರಿಯಿಂದ ರಾಮನಗರ, ಚನ್ನಪಟ್ಟಣ, ಹಾಸನ, ಮಂಡ್ಯ ಸಹಿತ ರಾಜ್ಯದ ಎಲ್ಲ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಅಲ್ಪಸಂಖ್ಯಾತರು ಸೇರಿ ಜಾತ್ಯತೀತ ಮನೋಭಾವವುಳ್ಳ ಮುಖಂಡರು ಬೇಸರಗೊಂಡು ನಮ್ಮ ಸಂಪರ್ಕ ದಲ್ಲಿದ್ದು ಅರಮನೆ ಮೈದಾನದಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಿದ ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂದು ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.
ಸೋಮವಾರ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಚನ್ನಪಟ್ಟಣ ಮಾಜಿ ಶಾಸಕ ಅಶ್ವತ್, ಹಾಗೂ ಜಬಿ, ಜಿಯಾಜಿಲ್ಲಾಖಾನ್ ಸೇರಿದಂತೆ ನೂರಾರು ಮುಖಂಡರನ್ನು ಸ್ವಾಗತಿಸಿ ಮಾತನಾಡಿದ ಅವರು, ಹಾಲಿ ಹಾಗೂ ಮಾಜಿ ಶಾಸಕರು, ಪಾಲಿಕೆ ಸದಸ್ಯರು ಸೇರಿ ಸಾವಿರಾರು ಮುಖಂಡರು ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ ಎಂದು ಹೇಳಿದರು.
ದೇವೇಗೌಡರು ಈಗಲೂ ಸೆಕ್ಯುಲರ್ ಆಗಲೂ ಸೆಕ್ಯುಲರ್. ಅವರಿಂದ ನಮ್ಮ ಸಮಾಜಕ್ಕೆ ನ್ಯಾಯ ಸಿಕ್ಕಿದೆ,ಎರಡನೇ ಹಂತದ ನಾಯಕರನ್ನೂ ಬೆಳೆಸಿದ್ದಾರೆ. ಆದರೆ ಕುಮಾರಸ್ವಾಮಿ ಸೆಕ್ಯುಲರ್ ಅಲ್ಲ. ಮುಸ್ಲಿಂ ಸಮುದಾಯದ ಮತ ನನಗೆ ಅನಿವಾರ್ಯ ವಾಗಿ ಹಾಕಿದರು ಎಂದು ಹೇಳಿರುವುದು ನೋವು ತಂದಿದೆ ಎಂ ಅವರು ಗೆದ್ದಿದ್ದು 12 ಸಾವಿರ ಮತ ಅಂತರದಿಂದ, ಡಿ. ಕೆ. ಶಿವಕುಮಾರ್ ಅವರಂತೆ 1.20 ಸಾವಿರ ಮತ ಅಂತರದಿಂದ ಅಲ್ಲ.
ಮುಸ್ಲಿಂ ಸಮುದಾಯ ಮತ ಕೊಡದಿದ್ದರೆ ಏನಾಗುತ್ತಿತ್ತು ಎಂಬುದು ಅರ್ಥ ಮಾಡಿಕೊಳ್ಳಬೇಕು. ಎಚ್. ಡಿ. ಕುಮಾರಸ್ವಾಮಿ ಅವರ ಎಲ್ಲ ವಿದ್ಯೆ ನೋಡಿದ್ದೆ ಆದರೆ ಪ್ಯಾಂಟ್ ಒಳಗೆ ಆರ್ ಎಸ್ ಎಸ್ ಚಡ್ಡಿ ಹಾಕಿದ್ದು ಗೊತ್ತಿರಲಿಲ್ಲ ಎಂದು ಲೇವಡಿ ಮಾಡಿದರು.












Click it and Unblock the Notifications