ಸಿದ್ದರಾಮಯ್ಯ ಬಾಯಿ ಮುಚ್ಚಿಸಲು ಎಚ್ಡಿಕೆ ಬಳಿ ಇದೆಯಾ 3 ಫೈಲು?!
Recommended Video
ಬೆಂಗಳೂರು, ಜೂನ್ 30: ಆ ಮೂರು ಫೈಲುಗಳು...! ಸಿದ್ದರಾಮಯ್ಯ ಅವರು,ಮೈತ್ರಿ ಸರ್ಕಾರದ ವಿರುದ್ಧ ಯಾವುದೇ ಮಾತನಾಡದಂತೆ ಅವರ ಬಾಯಿ ಮುಚ್ಚಿಸುವುದಕ್ಕಾಗಿ ಎಚ್ ಡಿ ಕುಮಾರಸ್ವಾಮಿ ಅವರ ಬಳಿ ಮೂರು ಫೈಲುಗಳಿರುವುದು ನಿಜವಾ?
ಸಿದ್ದರಾಮಯ್ಯ ಸರ್ಕಾದ ಹುಳುಕುಗಳನ್ನು ತೋರಿಸುವ ಈ ಫೈಲುಗಳನ್ನಿಟ್ಟುಕೊಂಡು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಸಿದ್ದರಾಮಯ್ಯ ಅವರ ಬಾಯಿ ಮುಚ್ಚಿಸುತ್ತಿದ್ದಾರಾ?
ಮುಖ್ಯಮಂತ್ರಿ ಕುಮಾರಸ್ವಾಮಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಪತ್ರ
ಸಿದ್ದರಾಮಯ್ಯ-ಎಚ್ ಡಿ ಕುಮಾರಸ್ವಾಮಿ ಅವರ ಜಟಾಪಟಿ ಬೂದಿ ಮುಚ್ಚಿರುವ ಕೆಂಡವೇ. ಯಾವ ಗಾಳಿಗೆ ಬೂದಿ ಹಾರಿ ಕೆಂಡದಿಂದ ಕಿಡಿ ಹಾರುತ್ತೋ..! ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೈತ್ರಿ ಸರ್ಕಾರದ ವಿರುದ್ಧ ಪರೋಕ್ಷವಾಗಿ ಎಷ್ಟೇ ಹರಿಹಾಯ್ದರೂ, ಸಿದ್ದರಾಮಯ್ಯ ಅವರ ಬಾಯಿ ಮುಚ್ಚಿಸುವ ಐಡಿಯಾ ಎಚ್ಡಿಕೆ ಬಳಿ ಇದೆ ಎಂಬುದು ಕೆಲವು ಮೂಲಗಳ ಮಾಹಿತಿ!
ಅಷ್ಟಕ್ಕೂ ಎಚ್ ಡಿ ಕುಮಾರಸ್ವಾಮಿ ಅವರ ಬಳಿ ಇರುವ ಆ ಮೂರು ಫೈಲುಗಳು ಯಾವವು?
ಡಿನೋಟಿಫಿಕೇಶನ್ ಫೈಲು?
ಅರ್ಕಾವತಿ ಬಡಾವಣೆ ಡಿನೋಟಿಫಿಕೇಶನ್ ಪ್ರಕರಣದ ಕುರಿತು ನ್ಯಾ.ಕೆಂಪಣ್ಣ ಆಯೋಗ ಸರ್ಕಾರಕ್ಕೆ ನೀಡಿದ್ದ ತನಿಖಾ ವರದಿಯ ಕುರಿತ ಕಡತವೂ ಎಚ್ ಡಿ ಕುಮಾರಸ್ವಾಮಿ ಅವರ ಬಳಿ ಇದೆ. ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಸೃಷ್ಟಿಸಿದ್ದ ಈ ವರದಿಯನ್ನು ಸರ್ಕಾರ ಒಪ್ಪಿಕೊಳ್ಳಬೇಕೇ, ಅಥವಾ ಮರು ತನಿಖೆಗೆ ಆದೇಶಿಸಬೇಕೆ ಎಂಬ ಕುರಿತು ಈ ಫೈಲಿನಲ್ಲಿ ಮಾಹಿತಿ ಇದೆ ಎನ್ನಲಾಗಿದೆ.
ಸಿದ್ದರಾಮಯ್ಯ ಮುನಿಸಿಗೆ ಎಚ್ಡಿಕೆ ಕೊಟ್ಟ ಸಮಜಾಯಿಷಿಯೇನು?
ಸ್ಟೀಲ್ ಬ್ರಿಡ್ಜ್ ಕಡತ
ಬೆಂಗಳೂರಿನ ಬಸವೇಶ್ವರ ವೃತ್ತದಿಂದ ಹೆಬ್ಬಾಳದವರೆಗೆ ನಿರ್ಮಿಸಲು ಉದ್ದೇಶಿಸಿದ್ದ ಸ್ಟೀಲ್ ಬ್ರಿಡ್ಜ್ ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಸಾಕಷ್ಟು ವಿವಾದ ಸೃಷ್ಟಿಸಿತ್ತು. ನಂತರ ಪರಿಸರ ಪ್ರೇಮಿಗಳ ಹೋರಾಟದಿಂದಾಗಿ ಈ ಯೋಜನೆಯನ್ನು ಸರ್ಕಾರ ಕೈಬಿಟ್ಟಿತು. ಆದರೆ ಇದಕ್ಕೆ ಸಂಬಂಧಿಸಿದ ಎಲ್ಲಾ ಮಹಿತಿಗಳನ್ನು ಒಂದೆಡೆ ಕಲೆಹಾಕಿರುವ ಎಚ್ ಡಿ ಕುಮಾರಸ್ವಾಮಿ ಸಿದ್ಧಪಡಿಸಿರುವ ಎರಡನೇ ಫೈಲು ಸಿದ್ದರಾಮಯ್ಯ ಅವರ ಬಾಯಿಮುಚ್ಚಿಸಿದೆ!
ವಿದ್ಯುತ್ ಖರೀದಿಗೆ ಸಂಬಂಧಿಸಿದ ಕಡತ
ಇನ್ನುಳಿದಂತೆ ಆಗಿನ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ವಿದ್ಯತ್ ಖರೀದಿಗೆ ಸಂಬಂಧಿಸಿದಂತೆ ನಡೆದಿದೆ ಎನ್ನಲಾದ ಅವ್ಯವಹಾರಗಳ ಬಗ್ಗೆಯೂ ಎಚ್ ಡಿ ಕುಮಾರಸ್ವಾಮಿ ಒಂದು ಫೈಲಿನಷ್ಟು ಮಾಹಿತಿ ಕಲೆಹಾಕಿದ್ದಾರೆ. ಇದು ಕೇವಲ ಸಿದ್ದರಾಮಯ್ಯ ಅವರನ್ನು ಮಾತ್ರವಲ್ಲ, ಆಗಿನ ಇಂಧನ ಸಚಿವರೂ ಆಗಿದ್ದ ಡಿಕೆ ಶಿವಕುಮಾರ್ ಅವರ ಬಾಯನ್ನೂ ಮುಚ್ಚಿಸುವ ಯತ್ನ ಎನ್ನಲಾಗಿದೆ!
ಇನ್ನೂ ಹಲವು ಕಡತಗಳು?
ಇಷ್ಟೇ ಅಲ್ಲದೆ, ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆಯೂ ಎಚ್ ಡಿ ಕುಮಾರಸ್ವಾಮಿ ಫೈಲೊಂದನ್ನು ತಯಾರಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಎದುರಿನಲ್ಲಿ, ಕಾಂಗ್ರೆಸ್-ಜೆಡಿಎಸ್ ಭಾಯಿ-ಭಾಯಿ ಎನ್ನುತ್ತಲೇ ಒಳಗಿಂತ ಮಸಲತ್ತು ನಡೆಸುತ್ತಿರುವವರ ವಿರುದ್ಧ ಎಚ್ಡಿಕೆ ಒಳ್ಳೆಯ ಬಲೆ ಹೆಣೆಯುತ್ತಿದ್ದಾರಾ? 'ನಮ್ಮ ಬೆಂಬಲ ಜೆಡಿಎಸ್ ಗೆ, ಕುಮಾರಸ್ವಾಮಿ ನಮ್ಮ ಮುಖ್ಯಮಂತ್ರಿ' ಎಂಬ ಮಾತನ್ನು ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಜರೂರತ್ತು ಸಿದ್ದರಾಮಯ್ಯ ಅವರ ಬಾಯಲ್ಲಿ ಹೇಳಿಸಿರು. ಆದರೆ ಇದೀಗ ಪಕ್ಷದಲ್ಲಿ ಮೂಲೆಗುಂಪಾಗುತ್ತಿರುವ ಸಿದ್ದರಾಮಯ್ಯ ಮತ್ತವರ ಬೆಂಬಲಿಗರು ಸರ್ಕಾರದ ವಿರುದ್ಧವೇ ಪರೋಕ್ಷವಾಗಿ ಕತ್ತಿ ಮಸೆಯುತ್ತಿದ್ದಾರೆ ಎಂಬ ಅನುಮಾನ ಎಚ್ಡಿಕೆ ಅವರಲ್ಲಿ ಹುಟ್ಟಿದ್ದೇ ತಡ, ಅವರ ಬಾಯಿ ಮುಚ್ಚಿಸುವ ನಾನಾ ಉಪಾಯಗಳನ್ನು ಹೆಣೆಯುತ್ತಿದ್ದಾರೆ. ಅದರ ಫಲವೇ ಈ ಮೂರು ಫೈಲುಗಳಾ ಎಂಬುದು ಈಗಿರುವ ಪ್ರಶ್ನೆ.