ರಾಜ್ಯದಲ್ಲಿ ಕೊರೊನಾಕ್ಕೆ ಬಲಿಯಾದ ಶಿಕ್ಷಕರು ಎಷ್ಟು ಜನರು ಗೊತ್ತಾ?
ಬೆಂಗಳೂರು, ಅ. 18: ರಾಜ್ಯದಲ್ಲಿ ಕೊರೊನಾ ವಾರಿಯರ್ಸ್ ಕುರಿತಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಆಘಾತಕಾರಿ ಅಂಶವನ್ನು ಬಹಿರಂಗಗೊಳಿಸಿದ್ದಾರೆ. ಮೈಸೂರು ದಸರಾದಲ್ಲಿ ಕೊರೊನಾ ವಾರಿಯರ್ಸ್ಗೆ ಸನ್ಮಾನ ಮಾಡುವ ಮೂಲಕ ಗೌರವವನ್ನು ಸರ್ಕಾರ ಕೊಟ್ಟಿತ್ತು. ಆದರೆ ಅದು ತೋರಿಕೆ ಗೌರವವಾ ಎಂಬ ಸಂಶಯ ಕುಮಾರಸ್ವಾಮಿ ಅವರು ಬಹಿರಂಗಗೊಳಿಸಿರುವ ಮಾಹಿತಿಯಿಂದ ಮೂಡುತ್ತಿದೆ.
ಪ್ರತಿ ಸಂದರ್ಭದಲ್ಲಿಯೂ ಕೊರೊನಾ ವಾರಿಯರ್ಸ್ನ್ನು ಹಾಡಿ ಹೊಗಳಿರುವ ರಾಜ್ಯ ಬಿಜೆಪಿ ಸರ್ಕಾರ ಅವರ ಕುರಿತು ಎಷ್ಟರ ಮಟ್ಟಿಗೆ ನಿರ್ಲಕ್ಷ ವಹಿಸಿದೆ ಎಂಬುದನ್ನು ಕುಮಾರಸ್ವಾಮಿ ಅವರು ಬಿಚ್ಚಿಟ್ಟಿದ್ದಾರೆ. ಕೇವಲ ಬಾಯಿ ಚಪಲ ತೀರಿಸಿಕೊಳ್ಳಲು ಕೊರೊನ ವಾರಿಯರ್ಗಳನ್ನು ಭೇಷ್ ಎನ್ನುವ ಸರ್ಕಾರ, ಅವರ ಜೀವದ ಜತೆ ಆಟವಾಡುತ್ತಿದೆ. ಜನರ ಆರೋಗ್ಯ ಕಾಪಾಡುವ ಸಲುವಾಗಿ ತಮ್ಮ ಸರ್ವಸ್ವವನ್ನೇ ಬಲಿಕೊಟ್ಟ ಕೊರೊನಾ ವಾರಿಯರ್ಸ್ ಕುರಿತು ಸರ್ಕಾರದ ಭಯಂಕರ ನಿರ್ಲಕ್ಷವನ್ನು ಎಚ್ಡಿಕೆ ಬಹಿರಂಗಗೊಳಿಸಿದ್ದಾರೆ. ರಾಜ್ಯದಲ್ಲಿ ಕೊರೊನಾಕ್ಕೆ ಬಲಿಯಾಗಿರುವ ಕೊರೊನಾ ವಾರಿಯರ್ಸ್ಗಳ ಸಂಖ್ಯೆ ಹಾಗೂ ಅದಕ್ಕೆ ಸರ್ಕಾರ ಸ್ಪಂದಿಸಿರುವ ರೀತಿ ಆಘಾತಕಾರಿಯಾಗಿದೆ.
ಕೊರೊನಾಕ್ಕೆ ಬಲಿಯಾಗಿರುವ ವಾರಿಯರ್ಸ್ಗಳ ಸಂಖ್ಯೆ ದೊಡ್ಡ ಆತಂಕಕ್ಕೆ ಕಾರಣವಾಗಿದೆ. ಕೋವಿಡ್ ಕುರಿತಂತೆ ನಮ್ಮ ಸರ್ಕಾರ ಯಾವುದೇ ಮಾಹಿತಿಯನ್ನು ಗೌಪ್ಯವಾಗಿ ಇಟ್ಟಿಲ್ಲ ಎನ್ನುತ್ತಿರುವ ಸರ್ಕಾರ ಬಲಿಯಾದ ಕೊರೊನಾ ವಾರಿಯರ್ಸ್ಗಳ ಯಾವುದೇ ಮಾಹಿತಿ ಬಹಿರಂಗೊಳಿಸದಿರುವುದು ಸಂಶಯ ಮೂಡಿಸಿದೆ!

ಬಲಿಯಾದವರು 500 ಜನ, ಒಬ್ಬರಿಗೆ ಪರಿಹಾರ
ರಾಜ್ಯದಲ್ಲಿ ಕೊರೊನ ಸಂದರ್ಭದಲ್ಲೂ ನಾಗರಿಕರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಜೀವ ಪಣಕ್ಕಿಟ್ಟು ಕೆಲಸ ಮಾಡಿದ 500ಕ್ಕೂ ಹೆಚ್ಚು ಕೊರೊನಾ ವಾರಿಯರ್ಗಳು ಜೀವ ಕಳೆದುಕೊಂಡಿದ್ದಾರೆ. ಆ ಪೈಕಿ ಕೇವಲ ಒಂದೇ ಒಂದು ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಿದೆ ಎಂಬ ಆತಂಕಕಾರಿ ವಿಚಾರವನ್ನು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಸರ್ಕಾರದ ಈ ವರ್ತನೆ ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತಹುದು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಲಿಯಾದ ಕೊರೊನಾ ವಾರಿಯರ್ಸ್
ರಾಜ್ಯದಲ್ಲಿ ಒಟ್ಟು ವಿವಿಧ ಕ್ಷೇತ್ರಗಳ ಒಟ್ಟು 5 ನೂರು ಕೊರೊನಾ ವಾರಿಯರ್ಸ್ ಬಲಿಯಾಗಿದ್ದಾರೆ. ಅವರಲ್ಲಿ 60 ವೈದ್ಯರು, 20 ನರ್ಸ್ಗಳು, 82 ಪೊಲೀಸರು, 10 ಪೌರ ಕಾರ್ಮಿಕರು, 96 ಚಾಲಕ-ನಿರ್ವಾಹಕರು, 235 ಶಿಕ್ಷಕರು- ಉಪನ್ಯಾಸಕರು, 10 ಆಶಾ ಕಾರ್ಯಕರ್ತೆಯರು ಹೀಗೆ 500 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ ಎಂಬ ಆಘಾತಕಾರಿ ವಿಚಾರವನ್ನು ಮಾಜಿ ಮುಖ್ಯಮಂತ್ರಿ ಎಚ್ಡಿಕೆ ಬಹಿರಂಗೊಳಿಸಿದ್ದಾರೆ.

ಹೃದಯಹೀನ ರಾಜ್ಯದ ಶಿಕ್ಷಣ ಮಂತ್ರಿ
ತನ್ನ ಹೆತ್ತ ತಾಯಿಯನ್ನು ಉಳಿಸಿಕೊಡಿ ಎಂದು ವಿದ್ಯಾಗಮ ಯೋಜನೆಯಡಿ ಕೆಲಸ ಮಾಡಿದ ಶಿಕ್ಷಕಿಯ ಪುತ್ರಿಯೊಬ್ಬಳು ಸರ್ಕಾರಕ್ಕೆ ಪತ್ರ ಬರೆದರೆ, ಶಿಕ್ಷಕಿಯ ಚಿಕಿತ್ಸಾ ವೆಚ್ಚದ ಬಿಲ್ ಕೊಡುತ್ತೇನೆ ಎಂಬ ಹೃದಯಹೀನ ಉತ್ತರ ಕೊಡುವ ಈ ರಾಜ್ಯದ ಶಿಕ್ಷಣ ಮಂತ್ರಿಯಿಂದ ಹಾಗೂ ಇಂತಹ ಮನಸ್ಥಿತಿಯ ಸರ್ಕಾರದಿಂದ ಕೊರೊನ ವಾರಿಯರ್ಗಳ ಕುಟುಂಬಗಳು ಇನ್ನೇನು ನಿರೀಕ್ಷಿಸಲು ಸಾಧ್ಯ? ಎಂದು ಎಚ್ಡಿಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ!
ಇನ್ನು ಪತ್ರಕರ್ತರು, ಬ್ಯಾಂಕ್ ಸೇರಿದಂತೆ ವಿವಿಧ ಸೇವಾ ವಲಯದ ನೌಕರರು ಕೂಡ ಜೀವ ತೆತ್ತಿದ್ದಾರೆ. ಇವರ ಕುಟುಂಬಗಳಿಗೆ ಸರ್ಕಾರ ಉತ್ತರದಾಯಿತ್ವ ಪ್ರದರ್ಶಿಸಬೇಕಲ್ಲವೇ? ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪ್ರಶ್ನೆ ಮಾಡಿದ್ದಾರೆ.
ತಮಟೆ ಬಾರಿಸಿ, ದೀಪ ಹಚ್ಚಿ, ಜನಪ್ರಿಯತೆ ಗಳಿಸಿ, ಪೋಷಾಕು ಕೊಟ್ಟರೆ ಕೊರೊನಾ ವಾರಿಯರ್ಗಳು ಹಾಗೂ ಅವರ ಕುಟುಂಬಗಳು ಹೇಗೆ ಸಮಾಧಾನ ಪಟ್ಟುಕೊಳ್ಳಬೇಕು? ಕನಿಷ್ಠ ಪಕ್ಷ ಕೊರೊನ ವಾರಿಯರ್ಗಳ ಸುರಕ್ಷತೆಗೆ ಸರ್ಕಾರ ಕ್ರಮಕೈಗೊಳ್ಳಬೇಕು, ಅದನ್ನೂ ಮೀರಿ ಜೀವ ಕಳೆದುಕೊಳ್ಳುವ ಕುಟುಂಬಗಳಿಗೆ ಪರಿಹಾರ ಕೊಡದೇ ಹೋದರೆ ಇತಿಹಾಸ ನಮ್ಮನ್ನು ಕ್ಷಮಿಸುವುದಿಲ್ಲ ಎಂದು ಕುಮಾರಸ್ವಾಮಿ ಎಚ್ಚರಿಸಿದ್ದಾರೆ!












Click it and Unblock the Notifications