ಶೃಂಗೇರಿ ಶಾರದಾಂಬೆಯ ಚರಣಕ್ಕೆ 'ಬಿಫಾರಂ' ಅರ್ಪಿಸಿದ ದೇವೇಗೌಡ್ರು
Recommended Video

ಶೃಂಗೇರಿ, ಏ 19: ಅಪ್ರತಿಮ ದೈವಭಕ್ತರಾದ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ್ರು, ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವ ಪಕ್ಷದ ಅಭ್ಯರ್ಥಿಗಳ 'ಬಿಫಾರಂ' ಅನ್ನು ಶೃಂಗೇರಿ ಶಾರದಾಂಬೆಯ ಪಾದಚರಣಕ್ಕೆ ಅರ್ಪಿಸಿದ್ದಾರೆ.
ಬಸವ ಜಯಂತಿಯ ದಿನವಾದ ಬುಧವಾರ (ಏ 18) ಶೃಂಗೇರಿ ಮಠಕ್ಕೆ ಭೇಟಿ ನೀಡಿದ ದೇವೇಗೌಡ್ರು, ಮೊದಲ ಹಂತದಲ್ಲಿ ಘೋಷಣೆ ಮಾಡಿದ 126 ಅಭ್ಯರ್ಥಿಗಳ ಬಿಫಾರಂ ಅನ್ನು ಶಾರದಾಂಬೆಯ ಮುಂದೆ ಇಟ್ಟು, ಭಾರತೀತೀರ್ಥ ಶ್ರೀಗಳ ಆಶೀರ್ವಾದ ಪಡೆದರು.
ಬಿಫಾರಂ ಸಲ್ಲಿಕೆಯ ದಿನದಿಂದ ಚುನಾವಣೆ ನಡೆಯುವ ದಿನವಾದ ಮೇ ಹನ್ನೆರಡರವರೆಗೆ ದುರ್ಗಾ ಪಾರಾಯಣ ನಡೆಯಲಿದೆ. ಪಕ್ಷದ ಮೊದಲ ಬಿಫಾರಂ ಅನ್ನು ಶೃಂಗೇರಿ ಕ್ಷೇತ್ರದ ಅಭ್ಯರ್ಥಿ ವೆಂಕಟೇಶ್ ಅವರಿಗೆ ದೇವಾಲಯದಲ್ಲಿ ಗೌಡ್ರು ವಿತರಿಸಿದರು.

ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ದೇವೇಗೌಡ್ರು ದಂಪತಿ ಸಮೇತ ಶೃಂಗೇರಿಗೆ ಆಗಮಿಸಿದ್ದರು. ಹಿಂದಿನಿಂದಲೂ ಶ್ರೀಕ್ಷೇತ್ರದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿದ್ದೆವು. ಈ ಬಾರಿಯ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳ ಮೇಲೆ ತಾಯಿಯ ಅನುಗ್ರಹವಿರಲಿ ಎಂದು ಪೂಜಿಸಿದ್ದೇವೆ ಎಂದು ದೇವೇಗೌಡರು ಹೇಳಿದ್ದಾರೆ.
ಈ ವರ್ಷಾರಂಭದಲ್ಲಿ ಶೃಂಗೇರಿಯಲ್ಲಿ ಜನವರಿ 3ರಿಂದ ಅತಿರುದ್ರ ಮಹಾಯಾಗವನ್ನು ದೇವೇಗೌಡರು ಮಾಡಿಸಿದ್ದರು. ಹತ್ತು ದಿನಗಳ ಕಾಲ ನಡೆದ ಈ ಮಹಾಯಾಗದಲ್ಲಿ ನೂರಿಪ್ಪತ್ತಕ್ಕೂ ಹೆಚ್ಚು ಪುರೋಹಿತರು ಭಾಗವಹಿಸಿದ್ದರು.
ಯಜುರ್ವೇದ ಪದ್ದತಿಯಂತೆ ನಡೆದ ಅತಿರುದ್ರ ಮಹಾಯಾಗ ಪವಿತ್ರ, ಅಪರೂಪದ ಮತ್ತು ಅತ್ಯಂತ ಶಕ್ತಿಶಾಲಿ ವೈದಿಕ ಆಚರಣೆಯಾಗಿದ್ದು, ಈ ಯಾಗ ನಡೆಸಿದರೆ, ಆರೋಗ್ಯ, ಶಕ್ತಿ, ಬುದ್ಧಿವಂತಿಕೆ, ಶತ್ರು ಸಂಹಾರ ಮತ್ತು ಎಲ್ಲಾ ಪ್ರಯತ್ನಗಳಲ್ಲಿ ಯಶಸ್ಸು ಸಿಗುತ್ತದೆ ಎನ್ನುವುದು ನಂಬಿಕೆ.
ಶಿವನಿಗೆ ರುದ್ರಾಭಿಷೇಕ ನಡೆಯುವ ವೇಳೆ, 121 ಋತ್ವಿಜರು. 14,641 ರುದ್ರ ಮತ್ತು ಚಮಕ ಜೊತೆಗೆ ರುದ್ರ ಹೋಮವನ್ನು ಅತ್ತಿರುದ್ರ ಮಹಾಯಾಗದ ವೇಳೆ ನಡೆಸುತ್ತಾರೆ. ಜನವರಿ ಮೂರಕ್ಕೆ ಗೌಡರು ಈ ಯಾಗ ಆರಂಭಿಸಿದರೆ, ಅತ್ತ ಡಿ ಕೆ ಶಿವಕುಮಾರ್ ಜನವರಿ ಆರಕ್ಕೆ ಶತ ಚಂಡಿಕಾ ಯಾಗ ನಡೆಸಿದ್ದು ಸುದ್ದಿಯಾಗಿತ್ತು.












Click it and Unblock the Notifications