ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳಿ ಕಾಂಗ್ರೆಸ್ ನಾಯಕರ ವಿರುದ್ಧ ಗುಡುಗಿದ ದೇವೇಗೌಡ್ರು: ಕಾರಣವೇನು?
ಬೆಂಗಳೂರು, ಏಪ್ರಿಲ್ 09: ಜಗತ್ತೇ ಮೆಚ್ಚಿಕೊಂಡ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಲಘುವಾಗಿ ಮಾತನಾಡುತ್ತಿರುವ ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಎಸ್ ಟಿ ಮೀಸಲು ಸೌಲಭ್ಯಕ್ಕಾಗಿ ಕರ್ನಾಟಕ ರಾಜ್ಯ ಕಾಡುಗೊಲ್ಲರ ಸಂಘ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದರು ಹೆಚ್.ಡಿ.ದೇವೇಗೌಡರು, ನನ್ನ ಜೀವನದ ಕೊನೆಯ ಘಟ್ಟದಲ್ಲಿ ನಾನು ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುವ ನಿರ್ಧಾರ ತೆಗೆದುಕೊಂಡಿದ್ದೇನೆ. ನನಗೆ ಈಗ 91 ವರ್ಷ. ಮೋದಿ ಅವರ ಜತೆ ಕೈಜೋಡಿಸಿದ್ದೇನೆ. ಅವರು ಏನು, ಅವರ ಸಾಧನೆ ಎನ್ನುವ ತಿಳಿವಳಿಕೆಯೂ ನನಗಿದೆ. ಮೋದಿ ಅವರು 135 ಕೋಟಿ ಜನರನ್ನು ಪ್ರತಿನಿಧಿಸುವ ನಾಯಕ, ಪ್ರಶ್ನಾತೀತ ನಾಯಕ, ಜಗತ್ತೇ ಗೌರವಿಸುವ ನಾಯಕ. ಇಷ್ಟು ಎತ್ತರಕ್ಕೆ ಬೆಳೆದ ನಾಯಕ ಇನ್ನೊಬ್ಬರಿಲ್ಲ ಎಂದು ದೇವೇಗೌಡ್ರು ಹಾಡಿ ಹೊಗಳಿದ್ದಾರೆ.

ನಾನು ಕೂಡ ಈ ದೇಶದ ಪ್ರಧಾನಿಯಾಗಿ ಕೆಲಸ ಮಾಡಿದ್ದೇನೆ. ನಾನೆಂದೂ ಯಾವ ಮಾಜಿ ಪ್ರಧಾನಿಯ ಬಗ್ಗೆಯೂ ಲಘುವಾಗಿ ಮಾತನಾಡಿಲ್ಲ. ನರಸಿಂಹ ರಾವ್, ವಾಜಪೇಯಿ, ಮನಮೋಹನ್ ಸಿಂಗ್ ಯಾರ ಬಗ್ಗೆಯೂ ನಾನು ಲಘುವಾಗಿ ಮಾತನಾಡಿಲ್ಲ. ಆದರೆ, ಕರ್ನಾಟಕದಲ್ಲಿ ಕೆಲವರು ಲಘುವಾಗಿ ಪ್ರಧಾನಿ ಬಗ್ಗೆ ಲಘುವಾಗಿ ಮಾತನಾಡುತ್ತಿದ್ದಾರೆ. ಅವರ ಮಾತುಗಳನ್ನು ಕೇಳಿ ನನಗೆ ಬಹಳ ನೋವಾಗುತ್ತದೆ. ಒಬ್ಬ ಪ್ರಧಾನಿಯ ಬಗ್ಗೆ ಅಂತಹ ಮಾತುಗಳನ್ನೂ ಆಡಬಾರದು ಎಂದು ಕಿವಿಮಾತು ಹೇಳಿದರು. ಮೋದಿ ಈ ಬಾರಿಯೂ ಪ್ರಧಾನಿ ಆಗುತ್ತಾರೆ, ಯಾರೇ ಎಷ್ಟೇ ಲಘುವಾಗಿ ಮಾತನಾಡಿದರೂ ಅವರ ಮಾತುಗಳಿಗೆ ದೇಶದ ಜನರೇ ಉತ್ತರ ಕೊಡುತ್ತಾರೆ ಎಂದರು.
ಎಸ್ ಟಿ ಪ್ರವರ್ಗಕ್ಕೆ ಸೇರಿಸಬೇಕು ಎನ್ನುವ ಕಾಡುಗೊಲ್ಲ ಸಮುದಾಯದ ಬೇಡಿಕೆ ಈಡೇರುತ್ತದೆ. ನರೇಂದ್ರ ಮೋದಿ, ಅಮಿತ್ ಶಾ ಅವರನ್ನು ನಂಬಿ. ಅವರ ಜತೆ ನಾನು ಮಾತನಾಡಿದ್ದೇನೆ. ನಿಮಗೆ ನಿರಾಶೆ ಆಗುವುದಿಲ್ಲ. ಚುನಾವಣೆಯ ನಂತರ ಕುಮಾರಸ್ವಾಮಿ ಅವರೂ ಸೇರಿದಂತೆ ಗೆದ್ದ ಎಲ್ಲಾ ಸಂಸದರನ್ನು ಕರೆದುಕೊಂಡು ಹೋಗಿ ನಾನು, ಯಡಿಯೂರಪ್ಪ ಅವರು ಮೋದಿ, ಶಾ ಅವರನ್ನು ಭೇಟಿಯಾಗಿ ನಿಮ್ಮ ಮನವಿ ಈಡೇರಿಸಿ ಎಂದು ಎದೆಯುಬ್ಬಿಸಿ ಕೇಳುತ್ತೇವೆ. ನಿಮ್ಮ ನಂಬಿಕೆಗೆ ನಾವು ಮೋಸ ಮಾಡಲ್ಲ, ನಿಮ್ಮ ಸಮುದಾಯವನ್ನು ಎಸ್ ಟಿ ಪ್ರವರ್ಗಕ್ಕೆ ತರುತ್ತೇವೆ ತರುತ್ತೇವೆ ಎಂದರು.
ಸಭೆಯಲ್ಲಿ ತಾವು ಕೂತು ಮಾತನಾಡಿದ್ದಕ್ಕೆ ಸಭೆಯ ಕೊನೆಯಲ್ಲಿ ಕ್ಷಮೆ ಕೋರಿದ ಮಾಜಿ ಪ್ರಧಾನಿ ದೇವೇಗೌಡರು, ನಾನು ಒಂದು ತಪ್ಪು ಮಾಡಿದ್ದೇನೆ. ಸಭೆಯಲ್ಲಿ ಕೂತೇ ಮಾತನಾಡಿದ್ದೇನೆ, ನಿಮ್ಮ ಅನುಮತಿ ಕೇಳಿ ಮಾತನಾಡಬೇಕಿತ್ತು. ನನಗೆ ಮಂಡಿ ನೋವಿದೆ, ಎಲ್ಲಾ ಸಂದರ್ಭದಲ್ಲಿ ಕೂತೇ ಇದ್ದೇ, ದಯಮಾಡಿ ಕ್ಷಮಿಸಿ ಎಂದು ಮನವಿ ಮಾಡಿದರು.
ವಿಳಂಬ ಇಲ್ಲದೆ ಬೇಡಿಕೆ ಈಡೇರಿಕೆ: ಕುಮಾರಸ್ವಾಮಿ
ನಾನು ಮತ್ತು ಯಡಿಯೂರಪ್ಪ ಸೇರಿ ಸರ್ಕಾರ ಮಾಡಿದ್ದಾಗ ಶಿರಾದ ಗೊಲ್ಲರ ಹಟ್ಟಿಯಲ್ಲಿ ನಾನು ಗ್ರಾಮ ವಾಸ್ತವ್ಯ ಹೂಡಿದ್ದೆ. ನಾಡಿಗೆ ಅದೊಂದು ಸಂದೇಶವಾಗಿತ್ತು. ಚುನಾವಣೆ ಅದ ಕೂಡಲೇ ನಿಮ್ಮ ಈಡೇರಲಿದೆ. ವಿಳಂಬ ಮಾಡುವುದಿಲ್ಲ, ಕೇಂದ್ರದಿಂದ ನಾವು ಒಪ್ಪಿಗೆ ಪಡೆಯುತ್ತೇವೆ. ನಾವೆಲ್ಲರೂ ಯಾವುದೇ ರಾಜಿಗೆ ಒಳಗಾಗದೆ ನಿಮ್ಮ ಬೇಡಿಕೆಯನ್ನು ಈಡೆರಿಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಭರವಸೆ ನೀಡಿದರು.
ನಾಯಕ ಸಮಾಜಕ್ಕೆ ದೇವೇಗೌಡರು ಕೊಟ್ಟ ಕೊಡುಗೆಯನ್ನು ಸ್ಮರಿಸಿದ ಮಾಜಿ ಮುಖ್ಯಮಂತ್ರಿಗಳು; ಚಂದ್ರಶೇಖರ್ ಅವರು ಪ್ರಧಾನಿ ಆಗಿದ್ದರು. ಆಗ ಅವರು ದೇವೇಗೌಡರನ್ನು ಮಂತ್ರಿ ಮಾಡುತ್ತೇನೆ ಎಂದು ಹೇಳಿದ್ದರು. ನನಗೆ ಮಂತ್ರಿ ಸ್ಥಾನ ಬೇಡ, ನಾಯಕ ಸಮಾಜವನ್ನು ಎಸ್ ಟಿ ಮೀಸಲು ಪ್ರವರ್ಗಕ್ಕೆ ಸೇರಿಸಿ ಎಂದು ಮನವಿ ಮಾಡಿದ್ದರು. ಅದರಂತೆ ಚಂದ್ರಶೇಖರ್ ಅವರು ಆ ಬೇಡಿಕೆ ಈಡೇರಿಸಿದರು. ಅಂದಿನಿಂದ ಆ ಸಮುದಾಯದಿಂದ ಶಾಸಕರು, ಸಂಸತ್ ಸದಸ್ಯರು ಆಯ್ಕೆಯಾಗಿ ಬರುತ್ತಿದ್ದಾರೆ ಎಂದು ನೆನಪಿಸಿಕೊಂಡರು.
ಕಾಡುಗೊಲ್ಲರಿಗೆ ಎಸ್ ಟಿ ಮೀಸಲು ಕಲ್ಪಿಸುವ ಬಗ್ಗೆ ದೇವೇಗೌಡರು ಬಹಳ ಶ್ರಮ ವಹಿಸಿದ್ದರು. ಫೆ.9ನೇ ತಾರೀಖು ಈ ರಾಜ್ಯಸಭೆಯ ಕಲಾಪದ ಕೊನೆಯ ದಿನವೂ ದೊಡ್ಡ ಶ್ರಮ ಹಾಕಿದ್ದರು. ಅವರ ಶ್ರಮ ವ್ಯರ್ಥ ಆಗುವುದಿಲ್ಲ ಎಂದರು.
ಮನೆ ನಿರ್ಮಾಣಕ್ಕೆ ನೆರವು: ಯಡಿಯೂರಪ್ಪ
ನಿಮ್ಮ ಬೇಡಿಕೆ ನ್ಯಾಯಬದ್ಧವಾಗಿದೆ. ಚುನಾವಣೆ ಮುಗಿದ ಮೇಲೆ ಪ್ರಧಾನಿ, ಗೃಹ ಸಚಿವರನ್ನು ಎಲ್ಲಾ ಸಂಸದರೊಂದಿಗೆ ಭೇಟಿ ಮಾಡಿ ನಿಮ್ಮ ಬೇಡಿಕೆ ಈಡೆರಿಸುತ್ತೇವೆ. ಎಸ್ ಟಿ ಮೀಸಲು ಸೌಲಭ್ಯ ಅಷ್ಟೇ ಅಲ್ಲ, ಮನೆ ಕಟ್ಟಿಕೊಳ್ಳಲು ಐದು ಲಕ್ಷ ಕೊಡಬೇಕು. ನಾನು ಕೊಟ್ಟಿದ್ದನ್ನು ಈ ಕಾಂಗ್ರೆಸ್ ಸರ್ಕಾರ ಹಿಂಪಡೆದಿದೆ. ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಬೇಕು. ನಾವೆಲ್ಲರೂ ನ್ಯಾಯ ಒದಗಿಸಿಕೊಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಭರವಸೆ ನೀಡಿದರು.
ಮಾಜಿ ಸಚಿವರು, ತುಮಕೂರು ಲೋಕಸಭೆ ಕ್ಷೇತ್ರದ ಜೆಡಿಎಸ್ ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿಯಾದ ವಿ.ಸೋಮಣ್ಣ ಮಾತನಾಡಿ; ಕುಮಾರಸ್ವಾಮಿ ಅವರು ಕೇಂದ್ರದಲ್ಲಿ ಸಚಿವರಾಗುತ್ತಾರೆ. ಮುಂದೆ ಒಳ್ಳೆಯ ಕಾಲ ಬರುತ್ತದೆ. ಇನ್ನು ಮೂರು ತಿಂಗಳಲ್ಲಿ ಕಾಡುಗೊಲ್ಲರ ಎಸ್ ಟಿ ಮೀಸಲು ಕನಸು ನನಸಾಗಲಿದೆ ಎಂದರು.












Click it and Unblock the Notifications