ಅಧಿಕಾರಿಗಳನ್ನು ಜೈಲಿಗೆ ಕಳಿಸಿದ್ರೆ ಬುದ್ದಿ ಬರುತ್ತೆ- ಸರ್ಕಾರಕ್ಕೆ ಹೈಕೋರ್ಟ್ ವಾರ್ನಿಂಗ್
ಬೆಂಗಳೂರು, ಜೂ.06. ಕೋರ್ಟ್ ಆದೇಶ ಪಾಲಿಸದ ರಾಜ್ಯ ಸರ್ಕಾರ ಮತ್ತು ಅಧಿಕಾರಿಗಳ ವರ್ತನೆಗೆ ಕಿಡಿಕಾರಿರುವ ಹೈಕೋರ್ಟ್, ಅಧಿಕಾರಿಯೊಬ್ಬರನ್ನು ಜೈಲಿಗೆ ಕಳುಹಿಸದ ಹೊರತು ಬುದ್ದಿ ಬರೋದಿಲ್ಲ ಎಂದು ಎಚ್ಚರಿಕೆ ನೀಡಿತು.
ನ್ಯಾಯಾಂಗ ನಿಂದನೆ ಪ್ರಕರಣವೊಂದರಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅಧಿಕಾರಿ ನಡವಳಿಕೆಯನ್ನು ತರಾಟೆಗೆ ತೆಗೆದುಕೊಂಡರು ಮತ್ತು ಅಧಿಕಾರಿಗಳನ್ನು ಜೈಲಿಗೆ ಕಳುಹಿಸಲು ಇದು ಸಕಾಲ ಎಂದರು.
ರಾಜ್ಯದ ವಿವಿಧ ಪೌರ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 'ಗ್ರೂಪ್-ಸಿ' ಸಿಬ್ಬಂದಿಯನ್ನು 'ಗ್ರೂಪ್-ಬಿ'ಗೆ ವಿಲೀನ ಆದೇಶ ಪಾಲಿಸದ ಕ್ರಮದ ವಿರುದ್ದ ಕರ್ನಾಟಕ ನಗರ ಪಾಲಿಕೆಗಳ ಉದ್ಯೋಗಿಗಳ ಸಂಘ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ವಿಚಾರಣೆ ಸೋಮವಾರ ಬಂದಿತು.
ಆಗ ಅರ್ಜಿ ಸಂಬಂಧ ಮೇ 30ರಂದು ಹೈಕೋರ್ಟ್ ನೀಡಿದ್ದ ನಿರ್ದೇಶನದ ಮೇರೆಗೆ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಮತ್ತು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕಿ ಎಂ.ಎಸ್. ಅರ್ಚನಾ ವಿಚಾರಣೆಗೆ ಖುದ್ದು ಹಾಜರಾಗಿದ್ದರು.
ವಿಚಾರಣೆ ಆರಂಭವಾದ ಕೂಡಲೇ ಮುಖ್ಯ ನ್ಯಾಯಮೂರ್ತಿ, ಅಧಿಕಾರಿಗಳು ಕೋರ್ಟ್ ಆದೇಶಗಳನ್ನು ಹಗುರವಾಗಿ ಪರಿಗಣಿಸುತ್ತಿದ್ದಾರೆ. ಇದು ದಿನನಿತ್ಯದ ಅಭ್ಯಾಸವಾಗಿ ಹೋಗಿದೆ. ಅಧಿಕಾರಿಗಳ ಮೇಲೆ ನ್ಯಾಯಾಂಗ ನಿಂದನೆಯಡಿ ಆರೋಪ ಹೊರಿಸಲಾಗುವುದು. ಅವರು ಜೈಲಿಗೆ ಹೋಗಲಿ. ಒಬ್ಬರು ಅಥವಾ ಇಬ್ಬರು ಅಧಿಕಾರಿಗಳನ್ನು ಜೈಲಿಗೆ ಕಳುಹಿಸುವುದಕ್ಕೆ ಇದು ಸಕಾಲ. ಅದರಲ್ಲೂ ಓರ್ವ ಹಿರಿಯ ಐಎಎಸ್ ಅಧಿಕಾರಿಯನ್ನು ಜೈಲಿಗೆ ಕಳುಹಿಸಬೇಕಿದೆ ಎಂದರು.
ಅಲ್ಲದೆ, ಸಚಿವ ಸಂಪುಟ ಸಭೆ ನಡೆಯಲಿಲ್ಲ ಮತ್ತು ಅಧಿಕಾರಿಗಳು ಆದೇಶ ಹೊರಡಿಸಿಲ್ಲ ಎಂದು ಒಂದಲ್ಲಾ ಒಂದು ಕಾರಣ ನೀಡಿ ಕೋರ್ಟ್ ತೀರ್ಪು ಪಾಲಿಸಲು ವಿಳಂಬ ಮಾಡುತ್ತಿದ್ದೀರಿ. ಸಚಿವ ಸಂಪುಟ ಅನಮೋದನೆ ವಿಳಂಬವಾಗಿರುವುದಕ್ಕೆ ಅಧಿಕಾರಿಗಳು ಜೈಲಿಗೆ ಹೋಗಲಿ ಬಿಡಿ. ಕರಡು ನಿಯಮ ಪ್ರಕಟಿಸಲು ಕೋರ್ಟ್ ನಿಮಗೆ ಎಷ್ಟು ಸಮಯ ನೀಡಿತ್ತು? ಈಗ ಎಷ್ಟು ಸಮಯ ಆಗಿದೆ. ಹಿರಿಯ ಐಎಎಸ್ ಅಧಿಕಾರಿ ನಡೆದುಕೊಳ್ಳುವ ವಿಧಾನ ಇದೇನಾ? ಎಂದು ಖಾರವಾಗಿ ಪ್ರಶಿಸಿತು.
ಅಲ್ಲದೆ, ಹಿರಿಯ ಅಧಿಕಾರಿಯನ್ನು ಜೈಲಿಗೆ ಕಳುಹಿಸಿದರೆ ಮಾತ್ರ ಸರ್ಕಾರ ಎಚ್ಚೆತ್ತುಕೊಳ್ಳುತ್ತದೆ. ಒಂದು ವೇಳೆ ಈ ಅಧಿಕಾರಿಗಳನ್ನು ಕೋರ್ಟ್ಗೆ ಕರೆಯಿಸದೆ ಹೋಗಿದ್ದರೆ, ಈಗಲಾದರೂ ಕರಡು ನಿಯಮಗಳು ಪ್ರಕಟವಾಗುತ್ತಿರಲಿಲ್ಲ ಎಂದು ಹೇಳಿತು.
ಸಮಜಾಯಿಷಿ ಒಪ್ಪದ ಕೋರ್ಟ್:
ಸರ್ಕಾರಿ ವಕೀಲರು, ಕರಡು ನಿಯಮಗಳು ಸಿದ್ಧವಾಗಿದ್ದವು. ಸಚಿವ ಸಂಪುಟದಿಂದ ಅನುಮೋದನೆ ಪಡೆಯುವುದು ತಡವಾದ ಕಾರಣ ಅಧಿಸೂಚನೆ ಹೊರಡಿಸಲಾಗಲಿಲ್ಲ. ಸದ್ಯ ಕರಡು ನಿಯಮಗಳನ್ನು ಜೂ.3ರಂದು ಪ್ರಕಟಿಸಿದ್ದು, ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು 15 ದಿನ ಕಾಲಾವಕಾಶ ನೀಡಲಾಗಿದೆ ಎಂದು ಸಮಜಾಯಿಷಿ ನೀಡಿದರು. ಆದರೆ ಅದನ್ನು ನ್ಯಾಯಾಲಯ ಒಪ್ಪಲಿಲ್ಲ. ಕೊನೆಗೆ ಕರಡು ನಿಯಮಗಳನ್ನು ಹೊರಡಿಸಲಾಗಿದೆ. ಇನ್ನೂ ಗ್ರೂಪ್-ಬಿ ಮತ್ತು ಗ್ರೂಪ್-ಸಿ ಕೇಡರ್ನಲ್ಲಿ ಖಾಲಿಯಿರುವ ಹುದ್ದೆಗಳ ತಾತ್ಕಾಲಿಕ ಭರ್ತಿಗೆ ಕ್ರಮ ಜರುಗಿಸಬೇಕೆಂಬ ಏಕ ಸದಸ್ಯ ಪೀಠದ ಆದೇಶದ ಉಳಿದ ಭಾಗವನ್ನು ಒಂದು ತಿಂಗಳಲ್ಲಿ ಪಾಲಿಸಲಾಗುವುದು ಎಂದು ಭರವಸೆ ನೀಡಿದರು.
ಅದಕ್ಕೆ ಸಮ್ಮತಿ ಸೂಚಿಸಿದ ನ್ಯಾಯಪೀಠ, ಆರು ತಿಂಗಳ ಕಾಲಾವಕಾಶ ನೀಡಿ ವಿಚಾರಣೆ ಮುಂದೂಡಿತು. ಜತೆಗೆ, ಮುಂದಿನ ವಿಚಾರಣೆಗೂ ರಾಕೇಶ್ ಸಿಂಗ್ ಮತ್ತು ಅರ್ಚನಾ ಹಾಜರಾಗಬೇಕು ಎಂದು ಸೂಚಿಸಿತು.
ಬಿಡಿಎ
ಆಯುಕ್ತರಿಗೂ
ತರಾಟೆ:
ಪ್ರಕರಣವೊಂದರಲ್ಲಿ
ಹೈಕೋರ್ಟ್
ಏಕ
ಸದಸ್ಯ
ನ್ಯಾಯಪೀಠ
ನೀಡಿದ್ದ
ಆದೇಶ
ಪಾಲಿಸದ
ಬಿಡಿಎ
ಆಯುಕ್ತ
ರಾಜೇಶ್
ಗೌಡ
ಅವರನ್ನೂ
ತರಾಟೆಗೆ
ತೆಗೆದುಕೊಂಡಿತು.
ವಿಚಾರಣೆಗೆ ಹಾಜರಾಗಿದ ರಾಜೇಶ್ ಗೌಡ ಅವರನ್ನು ಉದ್ದೇಶಿಸಿ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿಗಳು, ಪ್ರಕರಣದಲ್ಲಿ ಅರ್ಜಿದಾರರ ಮನವಿ ಪರಿಗಣಿಸುವಂತೆ ಏಕ ಸದಸ್ಯ ನ್ಯಾಯಪೀಠ ನಿರ್ದೇಶಿಸಿತ್ತು. ಆದರೆ, ಈ ಹಿಂದೆ ಆದೇಶವನ್ನು ಏಕೆ ಪಾಲಿಸಲಿಲ್ಲ. ಆದೇಶ ಪಾಲಿಸಲು ನಿಮಗೆ ಸಮಯ ಇರಲಿಲ್ಲವೇ? ನೀವು ಅಷ್ಟೊಂದು ಬ್ಯುಸಿ ವ್ಯಕ್ತಿನಾ? ಕೋರ್ಟ್ ಆದೇಶವನ್ನು ಲಘುವಾಗಿ ಪರಿಗಣಿಸಿದ್ದೀರಿ ಎಂದು ಚಾಟಿ ಬೀಸಿತು.
Recommended Video