ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಗೆ ತರಾಟೆ
ಬೆಂಗಳೂರು,ಸೆ.2. ಪ್ರಕರಣವೊಂದರ ಸಂಬಂಧ ತಪ್ಪು ಮಾಹಿತಿ ನೀಡಿದ ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರನ್ನು ಹೈಕೋರ್ಟ್ ತೀವ್ರ ತರಾಟೆಗೆ ತೆಗದುಕೊಂಡಿದೆ.
ಅಲ್ಲದೆ, ವಿಚಾರಣೆಗೆ ಸ್ವಂತ ಖರ್ಚಿನಲ್ಲಿಹಾಜರಾಗಬೇಕು, ಸರ್ಕಾರದಿಂದ ಯಾವುದೇ ಪ್ರಯಾಣ ಭತ್ಯೆ ಪಡೆದುಕೊಳ್ಳುವಂತಿಲ್ಲಎಂದು ತಾಕೀತು ಮಾಡಿದೆ.
ರಾಯಚೂರು ನಗರದ ತೀಮಾಪುರ ಪೇಟೆಯ ಟಿ. ಮರೆಪ್ಪ ಎಂಬುವರು ಸಲ್ಲಿಸಿದ ಪಿಐಎಲ್ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ನ್ಯಾ. ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ಸತ್ಯನಾಥ ಹೌಸಿಂಗ್ ಕೋ-ಅಪರೇಟಿವ್ ಸೊಸೈಟಿ ವತಿಯಿಂದ ನಿರ್ಮಿಸಲಾದ ಬಡಾವಣೆಯಲ್ಲಿನಾಗರಿಕ ಸೌಲಭ್ಯ ನಿವೇಶನ (ಸಿಎ ಸೈಟ್) ಪಾರ್ಕ್ ಜಾಗ ಹಾಗೂ ಸಾರ್ವಜನಿಕ ಸ್ಥಳಕ್ಕೆ ಮೀಸಲಿಟ್ಟ ಜಾಗದಲ್ಲಿಅಕ್ರಮವಾಗಿ ನಿವೇಶನಗಳನ್ನು ಮಾಡಿ ಹಂಚಲಾಗಿದೆ ಎಂದು ಆರೋಪಿಲಾಗಿತ್ತು.
ವಿಚಾರಣೆಗೆ ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಜಯಪಾಲ ರೆಡ್ಡಿ ಖುದ್ದು ಹಾಜರಾಗಿದ್ದರು. ಈ ವೇಳೆ ಆಯುಕ್ತರ ಪರ ವಕೀಲರು ವಾದ ಮಂಡಿಸಿ, ಪ್ರಕರಣದ ಬಗ್ಗೆ ತಮ್ಮ ಆಯುಕ್ತರಿಗೆ ಮಾಹಿತಿಯೇ ಇಲ್ಲ ಎಂದರು. ಜೊತೆಗೆ ಸ್ವತಃ ಆಯುಕ್ತರು, ನನ್ನ ವಿರುದ್ಧ ಜಾಮೀನು ಸಹಿತ ವಾರಂಟ್ ಹೊರಡಿಸಲಾದ ಬಳಿಕವೇ ಈ ಪ್ರಕರಣದ ಬಗ್ಗೆ ನನಗೆ ಗೊತ್ತಾಗಿದ್ದು ಎಂದು ನ್ಯಾಯಪೀಠದ ಮುಂದೆ ಹೇಳಿಕೆ ನೀಡಿದರು.
ಆದರೆ, ಪ್ರಕರಣದ ದಾಖಲೆಗಳು ಮತ್ತು ಹಿಂದಿನ ನಿರ್ದೇಶನಗಳನ್ನು ಪರಿಶೀಲಿಸಿದ ನ್ಯಾಯಪೀಠ, ಈ ಪ್ರಕರಣದಲ್ಲಿಆಯುಕ್ತರಿಗೆ 2019ರ ಜು.8ರಂದು ನೋಟಿಸ್ ಜಾರಿಯಾಗಿದೆ. ಅಲ್ಲದೆ, ಪ್ರಕರಣದ ಬಗ್ಗೆ 2022ರ ಜು.25ರಂದು ಆಯುಕ್ತರಿಗೆ ಮಾಹಿತಿ ನೀಡಲಾಗಿದೆ ಎಂದು 2022ರ ಆಗಸ್ಟ್ 8ರಂದು ಸರ್ಕಾರದ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಅದನ್ನು ಆಧರಿಸಿಯೇ ಆ.8ರಂದು ಆಯುಕ್ತರ ವಿರುದ್ಧ ವಾರಂಟ್ ಹೊರಡಿಸಲಾಗಿದೆ. ಹೀಗಿದ್ದರೂ, ಅರ್ಜಿದಾರ ಮತ್ತು ಅವರ ವಕೀಲರು ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಹೈಕೋರ್ಟ್ ಇಬ್ಬರನ್ನೂ ತರಾಟೆಗೆ ತೆಗೆದುಕೊಂಡಿತು.
ಸ್ವಂತ ಖರ್ಚಿನಲ್ಲೇ ಹಾಜರಿಗೆ ಸೂಚನೆ:
ತನಗೆ ಮಾಹಿತಿಯೇ ಇಲ್ಲಎಂದು ಆಯುಕ್ತರು ಹೇಳಿದ್ದು ಒಂದು ಮಟ್ಟಿಗೆ ಸಹಿಸಿಕೊಳ್ಳಬಹುದು. ಆದರೆ, ವಕೀಲರು ತಾವೊಬ್ಬ ಕೋರ್ಟ್ ಆಫೀಸರ್ ಅನ್ನುವುದು ಮರೆತು ದಾಖಲೆಗಳನ್ನು ಪರಿಶೀಲಿಸಿದೆ ತಮ್ಮ ಕಕ್ಷಿದಾರ ಹೇಳಿದ್ದನ್ನೇ ನ್ಯಾಯಾಲಯಕ್ಕೆ ತಿಳಿಸಿರುವುದು ದುರಾದೃಷ್ಟಕರ ಸಂಗತಿ. ವಕೀಲರ ಇಂತಹ ನಡೆಯನ್ನು ನ್ಯಾಯಾಲಯ ಸಹಿಸುವುದಿಲ್ಲ. ಯಾವುದೇ ಪ್ರಕರಣದಲ್ಲಿಅಂತಿಮವಾಗಿ ನ್ಯಾಯಾಲಯ ವಕೀಲರನ್ನು ನಂಬಿರುತ್ತದೆ ಎಂದು ಪ್ರಶ್ನಿಸಿತು.
ಅವರೇ ಈ ರೀತಿಯ ಬೇಜಾವಾಬ್ದಾರಿ ತೋರಿದರೆ ಹೇಗೆ? ಎಂದು ಆಕ್ರೋಶ ವ್ಯಕ್ತಪಡಿಸಿದ ನ್ಯಾಯಪೀಠ, ಆಯುಕ್ತರು ಮತ್ತು ವಕೀಲರು ಇಬ್ಬರೂ ತಮ್ಮ ನಡತೆ ಬಗ್ಗೆ ಪ್ರಮಾಣಪತ್ರ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿತು. ಅಲ್ಲದೇ, ಆಯುಕ್ತರು ಪ್ರಯಾಣ ಭತ್ಯೆ ಪಡೆಯಲು ಅರ್ಹರಲ್ಲ. ಮುಂದಿನ ವಿಚಾರಣೆಗೆ ಸ್ವಂತ ಖರ್ಚಿನಲ್ಲಿಹಾಜರಾಗಬೇಕು. ಅಷ್ಟೇ ಅಲ್ಲ. ಪ್ರಕರಣ ಮುಗಿಯುವವರೆಗೆ ಪ್ರತಿ ವಿಚಾರಣೆಗೂ ಸ್ವಂತ ಖರ್ಚಿನಲ್ಲೇ ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ತಾಕೀತು ಮಾಡಿ ವಿಚಾರಣೆಯನ್ನು ಸೆ.15ಕ್ಕೆ ಮುಂದೂಡಿತು.