ಬಸ್ಗಳಲ್ಲಿ ಆಡಿಯೋ ಘೋಷಣಾ ವ್ಯವಸ್ಥೆಗೆ ಹೈಕೋರ್ಟ್ ಆದೇಶ
ಬೆಂಗಳೂರು, ನವೆಂಬರ್ 10: ದೃಷ್ಟಿ ವಿಕಲಚೇತನರೂ ಸೇರಿದಂತೆ ಎಲ್ಲ ಬಗೆಯ ದಿವ್ಯಾಂಗರ ಸುಗುಮ ಸಂಚಾರಕ್ಕೆ ಬಸ್ಗಳಲ್ಲಿ ಅನುಕೂಲವಾಗುವಂತೆ ಆಡಿಯೋ ಘೋಷಣಾ ವ್ಯವಸ್ಥೆಯನ್ನು ಅಳವಡಿಸುವಂತೆ ನಿರ್ದೇಶಿಸುವ ಸುತ್ತೋಲೆ ಹೊರಡಿಸಲು ಕರ್ನಾಟಕ ಹೈಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿದೆ.
ಬೆಂಗಳೂರಿನ ಶ್ರೇಯಸ್ ಗ್ಲೋಬಲ್ ಟ್ರಸ್ಟ್ ಫಾರ್ ಸೋಷಿಯಲ್ ಕಾಸ್ ಮತ್ತು ಅಂಗವಿಕಲರೂ ಆಗಿರುವ ಎನ್. ಶ್ರೇಯಸ್ ಅಂಗವಿಕಲರಿಗೆ ಸುಗಮ ಸಂಚಾರಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಿಜೆ ಪಿ. ಬಿ. ವರಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿ ಈ ಸೂಚನೆ ನೀಡಿ ಆದೇಶಿಸಿದೆ.

ಅಲ್ಲದೆ, ವಿಚಾರಣೆ ವೇಳೆ ಪ್ರತಿವಾದಿ ಪರ ವಕೀಲರು ಸಲ್ಲಿಸಿದ ಪ್ರಮಾಣ ಪತ್ರವನ್ನು ಅಸಮರ್ಥ ಎಂದು ತಿಳಿಸಿದ ನ್ಯಾಯಾಲಯವು ಸರ್ಕಾರ ಮತ್ತು ಬಿಎಂಟಿಸಿ ವಾರದೊಳಗೆ ಅಂಗವಿಕಲರ ಸಂಚಾರ ಸುಗುಮಗೊಳಿಸಲು ತೆಗೆದುಕೊಂಡಿರುವ ಯೋಜನೆಯ ಕುರಿತು ಅರ್ಜಿದಾರರಿಗೆ ತಿಳಿಸಬೇಕು ಮತ್ತು ಮೂರು ವಾರದೊಳಗಾಗಿ ಹೈಕೋರ್ಟ್ಗೆ ಈ ಬಗ್ಗೆ ಸಮರ್ಥ ಮಾಹಿತಿ ಸಲ್ಲಿಸಬೇಕು ಎಂದು ವಿಚಾರಣೆಯನ್ನು ನಾಲ್ಕು ವಾರದ ಅವಧಿಯ ಕಾಲ ಮುಂದೂಡಿದೆ.
ರಾಜ್ಯದಲ್ಲಿ ದೃಷ್ಟಿಹೀನರೂ ಸೇರಿದಂತೆ ಅಂಗವಿಕಲರ ಸುಗಮ ಸಂಚಾರಕ್ಕೆ ಕೈಗೊಳ್ಳಬಹುದಾದ ದೇಶಕ್ಕೆ ಮಾದರಿಯಾಗುವಂತಹ ಸುರಕ್ಷತಾ ಕ್ರಮ ಯೋಜನೆ ಜಾರಿಗೆ ಸಲಹೆಗಳೊಂದಿಗೆ ಮಾಹಿತಿ ನೀಡಲು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿ, ವಿಚಾರಣೆ ಮುಂದೂಡಿತು.
ಪ್ರಕರಣದ ಹಿನ್ನೆಲೆ: ಅಂಗವಿಕಲರಿಗೆ ಸುಗಮ ಸಂಚಾರ ಕಲ್ಪಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಬೆಂಗಳೂರಿನ ಶ್ರೇಯಸ್ ಗ್ಲೋಬಲ್ ಟ್ರಸ್ಟ್ ಫಾರ್ ಸೋಷಿಯಲ್ ಕಾಸ್ ಮತ್ತು ಅಂಗವಿಕಲರೂ ಆಗಿರುವ ಎನ್. ಶ್ರೇಯಸ್ ಎಂಬುವರು 2022ರ ಮೇ ತಿಂಗಳಲ್ಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದರು.
ಆ.3ರಂದು ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ಕೋರ್ಟ್ ಮನವಿ ಮಾಡಿದ್ದರು. ಸರ್ಕಾರ ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದ್ದರಿಂದ ಈ ಕುರಿತಂತೆ ನಿಲಕ್ಷ್ಯಕ್ಕೆ ಮುಂದಾಗದೆ ಸೂಕ್ತ ಕ್ರಮಗಳ ಕೈಗೊಳ್ಳುವ ಕುರಿತು ಸರ್ಕಾರ ಮುಂದಾಗಬೇಕು ಎಂದು ಸೂಚನೆ ನೀಡಿತ್ತು.
ನಂತರದಲ್ಲಿ ನಡೆದ ವಿಚಾರಣೆ ವೇಳೆ ಅರ್ಜಿದಾರರು ವಾದ ಮಂಡಿಸಿ, ಖಾಸಗಿ ಸಾರಿಗೆ ಸಂಸ್ಥೆಗಳಾದ ಒಲಾ, ಉಬರ್ಗಳಲ್ಲಿ ಸಂಚರಿಸುವ ಸಂದರ್ಭದಲ್ಲಿ ಮಾರ್ಗದ ವಿವರವನ್ನು ಧ್ವನಿಯ ಮೂಲಕ ಕೇಳಿಸಿಕೊಳ್ಳಬಹುದಾಗಿದೆ. ಜತೆಗೆ, ಯಾವುದೇ ರೀತಿಯ ತೊಂದರೆಗೆ ಸಿಲುಕಿದಲ್ಲಿ ತಕ್ಷಣ ಸಂಬಂಧಿಕರನ್ನು ಸಂಪರ್ಕಿಸಲು ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿಯಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಈ ಸೌಲಭ್ಯ ಕಲ್ಪಿಸಲು ನಿರ್ದೇಶನ ನೀಡಬೇಕು ಎಂದು ಕೋರಿದ್ದರು.











Click it and Unblock the Notifications