Agriculture: ಹಾವೇರಿಯಲ್ಲಿ 'ಸೋಯಾಬಿನ್'ಗೆ ಭಾರೀ ಡಿಮ್ಯಾಂಡ್, ಶೇ 29ರಷ್ಟು ಗುರಿ ಸಾಧನೆ, ಪಡಿತರ ಅಕ್ಕಿ ಸಾಗಣೆಗೆ ಬ್ರೇಕ್
ಹಾವೇರಿ: ಮುಂಗಾರು ಮಳೆ (Monsoon Rains) ಜಿಲ್ಲೆ ವ್ಯಾಪ್ತಿಯಲ್ಲಿ ಉತ್ತಮವಾಗಿ ಸುರಿದಿದ್ದು, ರೈತರು ಈಗಾಗಲೇ ಬಿತ್ತನೆ ಆರಂಭಿಸಿದ್ದಾರೆ. ಈ ಬಾರಿ ಸೋಯಾಬಿನ್ ಹೆಚ್ಚು ಬಿತ್ತನೆ ಆಗುತ್ತಿದೆ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ (2026) ಜಿಲ್ಲೆಯಲ್ಲಿ ಜಿಲ್ಲೆಯಲ್ಲಿ 3.28 ಲಕ್ಷ ಹೆ.ಬಿತ್ತನೆ ಗುರಿ ಹೊಂದಲಾಗಿದ್ದು, ಈವರೆಗೆ ಶೇ.29.09 ರಷ್ಟು ಬಿತ್ತನೆಯಾಗಿದೆ ಎಂದು ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕ ಡಾ.ಮಲ್ಲಿರ್ಜುನ ಅವರು ತಿಳಿಸಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾ ಅಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿಯ ದಿಶಾ ಸಭೆಯಲ್ಲಿ, ವಿವಿಧ ಇಲಾಖೆಗಳ ಯೋಜನೆಗಳ ಕುರಿತು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾಹಿತಿ ಪಡೆದರು. ಈ ವೇಳೆ ಮಲ್ಲಿಕಾರ್ಜುನ ಅವರು ಬಿತ್ತನೆ, ರಸಗೊಬ್ಬರ, ಬಿತ್ತನೆ ಬೀಜ ದಾಸ್ತಾನು ಕುರಿತು ವಿವರಿಸಿದರು.

ಜಿಲ್ಲೆಯಲ್ಲಿ ನಿರೀಕ್ಷಿತ ಬಿತ್ತನೆ ಬಾಕಿ ಇದೆ. ಮುಂಬರುವ ದಿನಗಳಲ್ಲಿ ಉತ್ತಮ ಮಳೆ ನಿರೀಕ್ಷೆ ಇದೆ. ಈಗ ಸೋಯಾಬಿನ್ ಬೀಜದ ಬೇಡಿಕೆ ಹೆಚ್ಚಾಗಿದೆ. ರೈತರ ಬೇಡಿಕೆಗೆ ಅನುಗುಣವಾಗಿ ಬೀಜ ಹಾಗೂ ರಸಗೊಬ್ಬರ ವಿತರಣೆ ಮಾಡಲಾಗುತ್ತಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ '12,400 ಸೋಯಾಬಿನ್'ಗೆ ಹೆಚ್ಚಿನ ಬೇಡಿಕೆ ಉಂಟಾಗಿದೆ. ಇಲಾಖೆಯು ಹೆಚ್ಚುವರಿ 1 ಕ್ವಿಂಟಲ್ ದಾಸ್ತಾನು ಮಾಡಿಟ್ಟುಕೊಂಡಿದೆ. ಶೇಂಗಾ, ಗೋವಿಜೋವಿನ ಜೋಳ, ಭತ್ತದ ಬೀಜಗಳು ಲಭ್ಯವಿವೆ ಹಾಗೂ 33,944 ಟನ್ ಸರಗೊಬ್ಬರ ದಾಸ್ತಾನು ಲಭ್ಯವಿದೆ. ರೈತರ ಎಫ್ಐಡಿ ಮೂಲಕ ರಸಗೊಬ್ಬರ ಹಂಚಿಕೆ ಮಾಡಲಾಗುತ್ತಿದೆ. ಫಸಲ್ ಭಿಮಾ ಯೋಜನೆಯಡಿ 2025ರ ಮುಂಗಾರು ಹಂಗಾಮಿಗೆ 58,780 ರೈತರಿಗೆ 52.70 ಕೋಟಿ ಬೆಳೆ ಪರಿಹಾರ ಮೊತ್ತ ಮಂಜೂರಾಗಿದೆ ಎಂದು ಸಭೆಗೆ ಮಾಹಿತಿ ಕೊಟ್ಟರು.
ಸಭೆಯಲ್ಲಿ ಬಸವರಾಜ್ ಬೊಮ್ಮಾಯಿ ಅವರು ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಆಯಾ ಇಲಾಖೆ ಅಧಿಕಾರಿಗಳು ಕ್ರೀಯಾಯೋಜನೆ ರೂಪಿಸಿ, ಕಾರ್ಯಕ್ಷಮತೆ ಹಾಗೂ ಬದ್ಧತೆಯಿಂದ ಕೆಲಸಮಾಡಬೇಕೆಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಇನ್ಣೂ ಮುಂಗಾರು ಆರಂಭವಾದ ಬೆನ್ನಲ್ಲೇ ಜಿಲ್ಲೆಯ ರೈತರಿಗೆ ಬಿತ್ತನೆಗೆ ಬೀಜ ಹಾಗೂ ರಸಗೊಬ್ಬರ ಕೊರತೆಯಾಗದಂತೆ ಸರ್ಕಾರ ಕ್ರಮ ವಹಿಸಬೇಕು. ಅಗತ್ಯ ದಾಸ್ತಾನು ಮಾಡಿಕೊಳ್ಳಬೇಕು. ಯಾವುದೇ ದೂರುಗಳು ಬಾರದಂತೆ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಬೇಕು ಎಂದರು.
ಡೀಲರ್ ಗಳಿಂದ ರಸಗೊಬ್ಬರ ದಾಸ್ತಾನು ತಡೆಯಿರಿ
ರೈತರ ಬೇಡಿಕೆಗೆ ಅನುಗುಣವಾಗಿ ಸೊಸೈಟಿಗಳಿಗೆ ರಗೊಸಬ್ಬರ ಹಂಚಿಕೆ ಮಾಡಿ. ರಸಗೊಬ್ಬರ ದಾಸ್ತಾನು ಮಾಡಿದರೆ ಕಾಳಸಂತೆ ಆರಂಭವಾಗುತ್ತದೆ. ಹಾಗಾಗಿ ಡೀಲರ್ಗಳು ಗೊಬ್ಬರದ ದಾಸ್ತಾನು ಮಾಡದಂತೆ ಮುಂಜಾಗ್ರತೆ ವಹಿಸಬೇಕು. ಡಿಎಪಿ ಹೆಚ್ಚಿನ ಬೇಡಿಕೆ ಇದ್ದರೆ ನಾನೂ ಸಹ ಮಾತನಾಡಿ ಕೊಡಿಸುವ ಕೆಲಸ ಮಾಡುತ್ತೇನೆ. ಜಿಲ್ಲೆಯಲ್ಲಿ ಸೋಯಾಬಿನ್ ಸೇರಿದಂತೆ ಅಗತ್ಯ ಬೀಜ ಹಾಗೂ ರಸಗೊಬ್ಬರ ಕೊರತೆಯಾಗಬಾರದೆಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಬೆಳೆ ವಿಮೆ: ಅಧಿಕಾರಿಗಳ ತಲೆದಂಡ ಎಚ್ಚರಿಕೆ
ಸವಣೂರ, ಶಿಗ್ಗಾವಿ ಹಾಗೂ ರಾಣೇಬೆನ್ನೂರ ತಾಲೂಕಿನ ಫಸಲ ಭೀಮಾ ಯೋಜನೆ ವಂಚಿತ ಅರ್ಹ ರೈತರಿಗೆ ಬೆಳೆ ವಿಮೆ ಸೌಲಭ್ಯ ದೊರೆಯುವಂತಾಗಬೇಕು. ನೀರಾವರಿ ಬೆಳೆಗಳಿಗೆ ಒಣ ಬೇಸಾಯ ಎಂದು ನಮೂದಿಸಲಾಗಿದೆ. ಕೆರೆಗಳ ವ್ಯಾಪ್ತಿಯಲ್ಲಿ ನೀರಾವರಿಯಾಗಿದೆ. ಮರು ಪರಿಶೀಲನೆ ಮಾಡಿ ಅರ್ಹ ರೈತರಿಗೆ ನ್ಯಾಯ ದೊರಕುವಂತಾಗಬೇಕು. ಯಾವುದೇ ರೈತರಿಗೆ ಅನ್ಯಾಯವಾಗಬಾರದು. ಕೃಷಿ ಇಲಾಖೆ ಅಧಿಕಾರಿಗಳು ಹೊರಗಿನ ಏಜೆನ್ಸಿಗಳು ಶ್ಯಾಮಿಲಾಗಿ ಬೆಳೆವಿಮೆ ಕ್ಲೇಮ್ ಮಾಡಿದ್ದಾರೆ. ಬರುವ ದಿನಗಳಲ್ಲಿ ವಿಶೇಷ ತಂಡ ಬರುತ್ತದೆ. ಆಗ ಅಧಿಕಾರಿಗಳ ತಲೆದಂಡವಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಅಕ್ರಮ ಪಡಿತರ ಅಕ್ಕಿ ರಫ್ತು! ಅಧಿಕಾರಿಗಳಿಗೆ ಖಡಕ್ ಸೂಚನೆ
ಜಿಲ್ಲೆಯಿಂದ ಪಡಿತರ ಅಕ್ಕಿ ಹೊರ ಹೊಗುತ್ತಿದ್ದು, ಪಡಿತರ ಅಕ್ಕಿ ಸಾಗಾಣಿಕೆಗೆ ಕಡಿವಾಣ ಹಾಕಬೇಕು. ಇಂತಹ ಘಟನೆಗಳು ಅಧಿಕಾರಿಗಳ ಗಮನಕ್ಕೆ ಬಾರದೆ ಇರದು. ಅನ್ನ ಕದಿಯುವವರಿಗೆ ಜಾಮೀನು ರಹಿತ ವಾರೆಂಟ್ ಆಗಬೇಕು. ತೆರಿಗೆ ಪಾವತಿದಾರರು, ಸರ್ಕಾರಿ ಕೆಲಸ ಸೇರಿದಂತೆ ಅನರ್ಹರನ್ನು ಪಡಿತರ ಚೀಟಿಯಿಂದ ತೆಗೆಯುವ ಕೆಲಸವಾಗಬೇಕು. ನ್ಯಾಯ ಬೆಲೆ ಅಂಗಡಿಗಳಲ್ಲಿ ರಾಷ್ಟ್ರೀಯ ಆಹಾರ ಭದ್ರತೆ ಯೋಜನೆ ನಾಮಫಲಕ ಅಳವಡಿಸಬೇಕು ಹಾಗೂ ಜಿಲ್ಲೆಯಿಂದ ಅಕ್ರಮ ಪಡಿತರ ಅಕ್ಕಿ ರಫ್ತು ತಡೆಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಆಹಾರ ಇಲಾಖೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ರೂ.34 ಲಕ್ಷ ಮೊತ್ತದ ಅಕ್ಕಿ ವಶ
ಆಹಾರ ಇಲಾಖೆ ಅಧಿಕಾರಿಗಳು ಮಾತನಾಡಿ, ಜಿಲ್ಲೆಯಲ್ಲಿ 465 ನ್ಯಾಯಬೆಲೆ ಅಂಗಡಿಗಳಿವೆ. 4,92,770 ಪಡಿತರ ಚೀಟಿಗಳಿದ್ದು, ಅರ್ಹ ಫಲಾನುಭವಿಗಳ ಪಡಿತರ ಚೀಟಿ ಪಟ್ಟಿ ಮಾಡಿ ಪರಿಶೀಲನೆ ಮಾಡಲಾಗುತ್ತಿದೆ. ಅನರ್ಹರರನ್ನು ಪಟ್ಟಿಯಿಂದ ಕೈಬಿಡಲಾಗಿದೆ. 17 ಅಕ್ರಮ ಅಕ್ಕಿ ದಾಸ್ತಾನು ಪ್ರಕರಣ ದಾಖಲಿಸಲಾಗಿದೆ. 34 ವಾಹನಗಳನ್ನು ಸೀಜ್ ಮಾಡಲಾಗಿದೆ. ರೂ.34 ಲಕ್ಷ ಮೊತ್ತದ ಅಕ್ಕಿ ವಶಪಡಿಸಿಕೊಳ್ಳಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಜಲಜೀವನ ನೀರಿನ ಯೋಜನೆಗಳ ಮಾಹಿತಿ ಪಡೆದ ಅವರು, ನಳ ಹಾಕಿ ನೀರು ಕೊಡಲಿಲ್ಲ ಅಂದರ ಹೇಗೆ? ಅಮೃತ 2.0 ಯೋಜನೆ ಅನುಷ್ಠಾನಕ್ಕೆ ಯುಟಿಪಿ ಹಾಗೂ ವರದಾ ನದಿ ನೀರನ್ನು ಹೆಗ್ಗೇರಿ ಕೆರೆ ದಾಸ್ತಾನು ಮಾಡಿದರೆ ಬೇಸಿಗೆಯಲ್ಲಿ ಸಮರ್ಪಕವಾಗಿ ನೀರು ಪೂರೈಸಬಹುದು. ಈ ಹಿನ್ನಲೆಯಲ್ಲಿ ಹೆಗ್ಗೇರಿ ಕೆರೆಗೆ ನೀರು ತುಂಬಿಸಲು ಮುಂದಾಗಬೇಕು ಎಂದು ಅಧಿಕಾರಿಗಳಿಗೆ ಬೊಮ್ಮಾಯಿ ನಿರ್ದೇಶಿಸಿದರು.
ಆರೋಗ್ಯ ಇಲಾಖೆ ವಿವಿಧ ಯೋಜನೆಗಳ ಪ್ರಗತಿ ಪರಿಶೀಲಿಸಿದ ಅವರು, ಮಲ್ಟಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಹಾವೇರಿ ನಗರದಲ್ಲೇ ನಿರ್ಮಾಣವಾಗಬೇಕು. ವೈದ್ಯಕೀಯ ಕಾಲೇಜಿನಲ್ಲಿ ನಿರ್ಮಾಣವಾದರೆ ಸಾರ್ವಜನಿಕರಿಗೆ ಓಡಾಡಲು ತೊಂದರೆಯಾಗುತ್ತದೆ. ಹಾಗೂ ಜಿಲ್ಲಾ ಆಸ್ಪತ್ರೆಯ ಸಮೀಪದಲ್ಲೇ ಮಾಡಲು ಜಾಗ ಗುರುತಿಸಬೇಕು ಎಂದರು.
ಯೋಜನೆಗಳ ಅನುಷ್ಠಾನ ಸಮಸ್ಯೆ ಇದ್ದಲ್ಲಿ ಪರಿಹಾರ
ಜಿಲ್ಲೆಯ ಅಭಿವೃದ್ಧಿಗೆ ಎಲ್ಲ ಇಲಾಖೆಗಳ ಅಧಿಕಾರಿಗಳು ಸಮನ್ವಯದಿಂದ ಕೆಲಸಮಾಡಬೇಕು. ಜನರಿಗೆ ತ್ವರಿತ ಪರಿಹಾರ ನೀಡಿ, ಕೋವಿಡ್ ಸಮಯದಲ್ಲಿ ಆದಂತಹ ಕೆಲಸವಾಗಬೇಕು. ಯೋಜನೆಗಳ ಅನುಷ್ಠಾನದಲ್ಲಿ ಸಮಸ್ಯೆಗಳಿದ್ದರೆ ವಿಳಂಬ ಮಾಡದೇ ನನ್ನ ಗಮನಕ್ಕೆ ತನ್ನಿ, ಅದನ್ನು ಸರಿಪಡಿಸಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಕ್ರಮವಹಿಸಲಾಗುವುದು. ಜಿಲ್ಲೆ ರಾಜ್ಯದಲ್ಲೇ ನಂ.1 ಆಗಬೇಕು ಎಂದು ತಿಳಿಸಿದರು. ಇದೇ ವೇಳೆತೋಟಗಾರಿಕೆ, ಕೈಗಾರಿಕೆ, ಆರೋಗ್ಯ, ಪಶು ಸಂಗೋಪನೆ, ಹೆಸ್ಕಾಂ, ವಿಕಲಚೇತನರ ಕಲ್ಯಾಣ,ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಅಗತ್ಯ ಸಲಹೆ ಸೂಚನೆ ನೀಡಿದರು.














Click it and Unblock the Notifications