SWR: ಭಾರೀ ಮಳೆಗೆ ಗುಡ್ಡ ಕುಸಿತ: ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ರೈಲುಗಳ ಸೇವೆ ವ್ಯತ್ಯಯ, ವಿವರ
ಹಾಸನ, ಆಗಸ್ಟ್ 17: ಹಾಸನ ಜಿಲ್ಲೆ ವ್ಯಾಪ್ತಿಯಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿರಂತರ ಮಳೆ ಆರ್ಭಟಿಸುತ್ತಿದೆ. ಇದರ ಪರಿಣಾಮವಾಗಿ ಸಕಲೇಶಪುರ ಎಡಕುಮಾರಿ ಬಳಿ ರೈಲು ಹಳಿಗಳ ಮೇಲೆ ಅಲ್ಲಲ್ಲಿ ಗುಡ್ಡದ ಮಣ್ಣು ಕುಸಿದಿದೆ. ಇದರಿಂದಾಗಿ ಬೆಂಗಳೂರು-ಮಂಗಳೂರು ರೈಲ್ವೆ ಮಾರ್ಗದಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಿದೆ. ಇತ್ತರ ಮಂಗಳೂರು ಸಂಪರ್ಕಿಸುವ ಶಿರಾಡಿ ಘಾಟ್ನಲ್ಲಿ ವ್ಯಾಪಕ ಮಳೆ ಅಬ್ಬರದಿಂದಾಗಿ ಸಂಚಾರ ದಟ್ಟಣೆ ಕಂಡ ಬಂದಿದೆ. ಈ ಮಾರ್ಗದಲ್ಲಿ ಸಂಚರಿಸುವವರು ಸಮಸ್ಯೆ ಎದುರಿಸುವಂತಾಗಿದೆ.
ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆ ಆಗುತ್ತಿದ್ದು, ಹಾಸನ, ಸಕಲೇಶಪುರ ವ್ಯಾಪ್ತಿಯಲ್ಲಿ ವಿಪರೀತ ಮಳೆ ಆಗುತ್ತಿದೆ. ಇದರಿಂದ ಗುಡ್ಡ್ ಕುಸಿತ ಸಂಭವಿಸಿದೆ. ರೈಲ್ವೆ ಟ್ರ್ಯಾಕ್ ಮೇಲೆ ಗುಡ್ಡ ಕಲ್ಲು ಮಣ್ಣು ಕುಸಿತ ರೈಲು ಸಂಚಾರಕ್ಕೆ ತೊಂದರೆ ಆಗಿದೆ. ಯಡೆಕುಮರಿ ರೈಲ್ವೇ ಹಳಿ 68/800 ರ ಬಳಿ ಕುಸಿತವಾಗಿರುವ ಪರಿಣಾಮ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಬೆಂಗಳೂರಿನಿಂದ ಮಂಗಳೂರಿಗೆ ಹೊರಟಿದ್ದ ರೈಲು ಹಾಗೂ ಈ ಮಾರ್ಗದ ಎಲ್ಲ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ. ಮಂಗಳೂರು ವಿಜಯವಾಡ ಎಕ್ಸ್ಪ್ರೆಸ್ ರೈಲು (07378) ಸೇವೆ ಬಂಟ್ವಾಳದಲ್ಲಿ ಕೊನೆಗೊಂಡಿದೆ. ಮಳೆ ಕಡಿಮೆ ಆಗುವ ಲಕ್ಷಣಗಳು ಕಾಣುತ್ತಿಲ್ಲ. ಕುಸಿತ ಗುಡ್ಡ ತೆರವು ಬಳಿಕ ಸಂಚಾರ ಎಂದಿನಂತೆ ಆರಂಭವಾಗುವ ನಿರೀಕ್ಷೆ ಇದೆ.
ಪ್ರತಿ ಬಾರಿ ಮಳೆಗಾಲದಲ್ಲೂ ಇದೇ ರೀತಿ ವಾತಾವರಣ ನಿರ್ಮಾಣವಾಗುತ್ತದೆ. ಇತ್ತೀಚೆಗಷ್ಟೇ ಗುಡ್ಡ ಕುಸಿತ ಇದೇ ಕುಕ್ಕೆ ಸುಬ್ರಹ್ಮಣ್ಯ ಮಾರ್ಗದಲ್ಲಿ ರೈಲು ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಇದೀಗ ಮತ್ತೊಂದು ಬಾರಿ ಅಂತದ್ದೆ ಸಮಸ್ಯೆ ಎದುರಾಗಿದೆ. ಇಂದು ಸಂಜೆ ಹೊತ್ತಿಗೆ ಸೇವೆ ಪುನಾರಂಭಗೊಳ್ಳುವ ನಿರೀಕ್ಷೆ ಇದೆ.
ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್
ಬರೀ ರೈಲ್ವೆ ಸೇವೆ ಮಾತ್ರವಲ್ಲದೇ ಹೆದ್ದಾರಿ ವಾಹನಗಳ ಸಂಚಾರಕ್ಕೂ ಮಲೆನಾಡಿನ ಮಳೆ ಕಿರಿ ಕಿರಿ ಮಾಡಿದೆ. ಭೂಮಿ ಕುಸಿತ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ. ಸಕಲೇಶಪುರ ತಾಲೂಕಿನ ಮಾರನಹಳ್ಳಿ ಬಳಿ ಭೂಮಿ ಕುಸಿದಿದೆ. ಗಿಡ ಮರಗಳ ಸಮೇತ ಮಣ್ಣು ರಸ್ತೆಗೆ ಬಿದ್ದ ಪರಿಣಾಮ ಅದರ ತೆರವಿಗೆ ಅಧಿಕಾರಿಗಳು ಹರಸಾಹಸ ಪಡುವಂತಾಗಿದೆ. ವಾರಾಂತ್ಯ ಹಿನ್ನೆಲೆಯಲ್ಲಿ ಶಿರಾಡಿ-ಸಕಲೇಶಪುರ-ಮಂಗಳೂರು ಮಾರ್ಗದಲ್ಲಿ ಹೆಚ್ಚಿನ ವಾಹನ ಸಂಚಾರ ಕಂಡು ಬಂದಿದೆ. ಇದೇ ವೇಳೆ ಹೀಗೆ ಆಗಿರುವುದು ಸಮಸ್ಯೆ ಆಗಿದೆ. ಅಲ್ಲಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಮಳೆಯಲ್ಲಿ ಸವಾರರು, ಪ್ರಯಾಣಿಕರು ಕಿರಿಕಿರಿ ಅನುಭವಿಸುವಂತಾಗಿದೆ.












Click it and Unblock the Notifications