ಪರಿಷ್ಕೃತ ಪಠ್ಯ ತಡೆದು, ಹಳೆಯ ಪುಸ್ತಕಗಳನ್ನೇ ಮಕ್ಕಳಿಗೆ ಒದಗಿಸಲಿ: ಹಂಪನಾ
ಬೆಂಗಳೂರು, ಮೇ25: ಕರ್ನಾಟಕ ಪಠ್ಯಪುಸ್ತಕ ವಿವಾದಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಸಾಹಿತಿ ಹಂಪ ನಾಗರಾಜಯ್ಯರವರು ಮುಖ್ಯಮಂತ್ರಿಗಳಿಗೆ ಹೊಸಪುಸ್ತಕ ತಡೆಹಿಡಿದು ಹಳೇಯ ಪುಸ್ತಕವನ್ನೇ ಮುಂದುವರೆಸುವಂತೆ ಆಗ್ರಹಿಸಿ ಪತ್ರವನ್ನು ಬರೆದಿದ್ದಾರೆ.
ಹಂಪನಾ ಬರೆದ ಪತ್ರದ ವಿವರ:
"ಶಾಲೆಗಳು ಪ್ರಾರಂಭವಾಗಿವೆ. ಪಠ್ಯಪುಸ್ತಕ ವಿವಾದದ ಚಕ್ರತೀರ್ಥದಲ್ಲಿ ಒದ್ದಾಡುತ್ತಾ ಸರ್ಕಾರವನ್ನು ಪೇಚಿಗೆ ಸಿಲುಕಿಸಿದೆ. ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ತಳಮಳವಾಗಿದೆ. ವ್ಯಕ್ತಿಗಳನ್ನು ನಿಂದಿಸುವ ಅಪಾಯಕಾರಿ ಪ್ರವೃತ್ತಿ ಹಬ್ಬುತ್ತಿದೆ. ಕುವೆಂಪು ಕುರಿತು ಅವಹೇಳನಕಾರಿ ಬರಹಗಳು ಹರಿದಾಡುತ್ತಿವೆ. ದಿನದಿಂದ ದಿನಕ್ಕೆ ಪರವಿರೋಧ ಚರ್ಚೆಗಳು ತೂಕ ತಪ್ಪಿ ಬಿಸಿ ಏರುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿ ಆಗುತ್ತಿರುವ ಈ ಅನಾರೋಗ್ಯ ಬೆಳವಣಿಗೆಗೆ ತಟಸ್ಥವಾಗಿರದೆ ಸರ್ಕಾರ ಕೂಡಲೇ ಕಾರ್ಯಪ್ರವೃತ್ತರಾಗಬೇಕು ಎಂದು ಒತ್ತಾಯಿಸುತ್ತೇನೆ. ಭಿನ್ನಾಭಿಪ್ರಾಯಗಳು ಒಂದು ತಾರ್ಕಿಕ ಅಂತ್ಯ ಕಾಣುವವರೆಗೂ ಪಠ್ಯಪುಸ್ತಕ ಸಮಿತಿ ಸಿದ್ದಪಡಿಸಿರುವ ಹೊಸ ಪುಸ್ತಕವನ್ನು ತಡೆಹಿಡಿದು ಹಿಂದಿನ ಪಠ್ಯವನ್ನೇ ಮುಂದುವರೆಸುವಂತೆ ಸುತ್ತೋಲೆಯನ್ನು ಸರ್ಕಾರ ತಕ್ಷಣ ಹೊರಡಿಸಿ ಕಲುಷಿತ ವಾತಾವರಣವನ್ನು ತಿಳಿಗೊಳಿಸುವಂತೆ ವಿನಂತಿಸುತ್ತೇನೆ'' ಎಂದು ಬರೆದಿದ್ದಾರೆ.