ಜೆಡಿಎಸ್ ನಾಯಕರ ವಿರುದ್ಧ ಮತ್ತೆ ಎಚ್.ವಿಶ್ವನಾಥ್ ಗರಂ
Recommended Video
ಬೆಂಗಳೂರು, ಜೂನ್ 18 : 'ಜೆಡಿಎಸ್ ಒಂದು ಜಾತ್ಯಾತೀತ ಪಕ್ಷ. ಆದ್ದರಿಂದ ಎಲ್ಲ ವರ್ಗಕ್ಕೂ ಅವಕಾಶ ನೀಡಬೇಕಿತ್ತು. ಬಿ.ಎಂ.ಫಾರೂಕ್ ಅವರಿಗೆ ಸಚಿವ ಸ್ಥಾನ ಕೊಟ್ಟಿದ್ದರೆ ಅಂಹಿದ ವರ್ಗಕ್ಕೆ ಅವಕಾಶ ಕೊಟ್ಟಂತೆ ಆಗುತ್ತಿತ್ತು' ಎಂದು ಎಚ್.ವಿಶ್ವನಾಥ್ ಹೇಳಿದರು.
ಬೆಂಗಳೂರಿನಲ್ಲಿ ಮಂಗಳವಾರ ಮಾತನಾಡಿದ ಎಚ್.ವಿಶ್ವನಾಥ್ ಅವರು, ಜೆಡಿಎಸ್ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. 'ಅಲ್ಪ ಸಂಖ್ಯಾತರಿಗೆ ಅವಕಾಶ ನೀಡಬೇಕಿತ್ತು. ಬಿ.ಎಂ.ಫಾರೂಕ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕಿತ್ತು' ಎಂದರು.
'ಫಾರೂಕ್ ಅವರಿಗೆ ಸಚಿವ ಸ್ಥಾನ ನೀಡಿದರೆ ಒಬ್ಬ ಅಲ್ಪ ಸಂಖ್ಯಾತ, ಹಿಂದುಳಿದ ವರ್ಗ, ದಲಿತರಿಗೆ ಅವಕಾಶ ಕೊಟ್ಟಂತೆ ಆಗುತ್ತಿತ್ತು. ಜೆಡಿಎಸ್ ಒಂದು ಜಾತ್ಯಾತೀತ ಪಕ್ಷ. ಆದ್ದರಿಂದ, ಎಲ್ಲಾ ವರ್ಗಕ್ಕೂ ಅವಕಾಶ ನೀಡಬೇಕಿತ್ತು' ಎಂದು ತಿಳಿಸಿದರು.
'ದಲಿತರಿಗೆ, ಹಿಂದುಳಿದವರಿಗೆ ಅವಮಾನ ಮಾಡಬೇಡಿ. ಸಚಿವ ಸ್ಥಾನ ನೀಡಿ ಎಷ್ಟು ದಿನ ಆಯಿತು. ಆದರೆ, ಖಾತೆ ಹಂಚಿಕೆ ಏಕೆ ಮಾಡಿಲ್ಲ. ಇದೊಂದು ರೀತಿಯ ಅವಮಾನ ಮಾಡಿದ ಹಾಗೆ' ಎಂದು ಎಚ್.ವಿಶ್ವನಾಥ್ ಸ್ವಪಕ್ಷದ ನಾಯಕರ ವಿರುದ್ಧವೇ ವಾಗ್ದಾಳಿ ನಡೆಸಿದರು.

ತುರ್ತಾಗಿ ಒಬ್ಬರು ಸಚಿವರು ಬೇಕಾಗಿದ್ದಾರೆ
'ಮಹೇಶ್ ಅವರ ರಾಜೀನಾಮೆ ಬಳಿಕ ಶಿಕ್ಷಣ ಇಲಾಖೆಗೆ ಮುಖ್ಯಸ್ಥರೇ ಇಲ್ಲದಂತಾಗಿದೆ. ಈ ಇಲಾಖೆಗೆ ತುರ್ತಾಗಿ ಇಬ್ಬ ಸಚಿವರು ಬೇಕಾಗಿದ್ದಾರೆ. ಮುಖ್ಯಮಂತ್ರಿಗಳ ಬಳಿ ಅಬಕಾರಿ ಸೇರಿದಂತೆ ಹಲವು ಖಾತೆಗಳಿವೆ. ಕೆಲವು ಖಾತೆಗಳನ್ನು ಬೇರೆಯವರಿಗೆ ಹಂಚಿಕೆ ಮಾಡಲಿ' ಎಂದು ಎಚ್.ವಿಶ್ವನಾಥ್ ಸಲಹೆ ನೀಡಿದರು.

ಸಿದ್ದರಾಮಯ್ಯ ಏಕೆ ಮೌನವಾಗಿದ್ದಾರೆ?
'ಜಿಂದಾಲ್ ವಿಚಾರದಲ್ಲಿ ಸಿದ್ದರಾಮಯ್ಯ ಏಕೆ ಮೌನವಾಗಿದ್ದಾರೆ?. ತೊಡೆ ತಟ್ಟಿ 350 ಕಿ.ಲೋ. ಮೀಟರ್ ಪಾದಯಾತ್ರೆ ಮಾಡಿದ್ದ ಸಿದ್ದರಾಮಯ್ಯ ಈಗ ಏನು ಮಾಡುತ್ತಿದ್ದರೆ. ಸರ್ಕಾರದ ಭಾಗವಾಗಿ ಇದ್ದವರು ಏಕೆ ಮಾತನಾಡುತ್ತಿಲ್ಲ. ಸಮನ್ವಯ ಸಮಿತಿ ಅಧ್ಯಕ್ಷರಾಗಿ ತಮ್ಮ ಕೆಲಸವನ್ನೇ ಅವರು ಮರೆತಿದ್ದಾರೆ' ಎಂದು ವಿಶ್ವನಾಥ್ ಆರೋಪಿಸಿದರು.

ಸಿದ್ದರಾಮಯ್ಯ ಮಂತ್ರಿಗಳ ಮಂತ್ರಿ
'ಸಿದ್ದರಾಮಯ್ಯ ಅವರು ಈ ಸರ್ಕಾರದಲ್ಲಿ ಮಂತ್ರಿಗಳ ಮಂತ್ರಿ. ಅದು ಹೇಗೆ ನೀವು ಸರ್ಕಾರದ ಭಾಗವಲ್ಲ ಎಂದು ಹೇಳುತ್ತೀರಿ. ಅಂದು ತೊಡೆ ತಟ್ಟಿದವರಿಗೆ ಇಂದು ಏನಾಯಿತು?. ಸಿದ್ದರಾಮಯ್ಯ ಅವರೇ ಜಿಂದಾಲ್ ಬಗ್ಗೆ ಮಾತನಾಡಿ' ಎಂದು ಎಚ್.ವಿಶ್ವನಾಥ್ ಒತ್ತಾಯಿಸಿದರು.

ರಾಜೀನಾನೆ ವಾಪಸ್ ಪಡೆಯಲ್ಲ
'ನನ್ನ ನಿರ್ಧಾರದಿಂದ ವಾಪಸ್ ಬರುವ ಪ್ರಶ್ನೆ ಇಲ್ಲ. ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೀಡಿರುವ ರಾಜೀನಾಮೆ ವಾಪಸ್ ಪಡೆಯೋಲ್ಲಾ, ದೇವೇಗೌಡರಿಗೆ ರಾಜೀನಾಮೆ ಅಂಗೀಕಾರ ಮಾಡುವಂತೆ ಇಂದು ಮನವಿ ಮಾಡುತ್ತೇನೆ' ಎಂದು ಎಚ್.ವಿಶ್ವನಾಥ್ ಸ್ಪಷ್ಟಪಡಿಸಿದರು.












Click it and Unblock the Notifications