ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿಗೆ ಸವಾಲು ಹಾಕಿದ ಗುರುಪಾದಪ್ಪ ನಾಗಮಾರಪಲ್ಲಿ

|
Google Oneindia Kannada News

ಬೀದರ್, ಜೂ. 30 : ಪಕ್ಷದ ನಾಯಕರಿಗೆ ಧೈರ್ಯವಿದ್ದರೆ ನನ್ನನ್ನು ಪಕ್ಷದಿಂದ ಉಚ್ಛಾಟಿಸಲಿ ಎಂದು ಬೀದರ್ ಕ್ಷೇತ್ರದ ಶಾಸಕ ಗುರುಪಾದಪ್ಪ ನಾಗಮಾರಪಲ್ಲಿ ಸವಾಲು ಹಾಕಿದ್ದಾರೆ. ಬೀದರ್ ಜಿಲ್ಲಾ ಬಿಜೆಪಿ ಘಟಕ ಗುರುಪಾದಪ್ಪ ನಾಗಮಾರಪಲ್ಲಿ ಸೇರಿದಂತೆ ಇಬ್ಬರು ನಾಯಕರನ್ನು ಪಕ್ಷ ವಿರೋಧಿ ಚಟುವಟಿಕೆ ಹಿನ್ನಲೆಯಲ್ಲಿ ಉಚ್ಛಾಟನೆ ಮಾಡುವಂತೆ ರಾಜ್ಯ ಘಟಕಕ್ಕೆ ಶಿಫಾರಸು ಮಾಡಿದೆ.

ಬೀದರ್ ಜಿಲ್ಲಾ ಬಿಜೆಪಿ ಘಟಕದ ಶಿಫಾರಸಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಗುರುಪಾದಪ್ಪ ನಾಗಮಾರಪಲ್ಲಿ ಅವರು, "ಬಿಜೆಪಿಯಿಂದ ನನಗೇನೂ ಲಾಭ ಆಗಿಲ್ಲ. ಆದರೆ, ಶಾಸಕನಾಗಿರುವ ನನ್ನಿಂದ ಪಕ್ಷಕ್ಕೆ ಲಾಭವಾಗಿದೆ. ನಾನು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದೇನೆ ಎಂದು ಜಿಲ್ಲಾ ಬಿಜೆಪಿ ದೂರಿದೆ. ಇದು ಸತ್ಯಕ್ಕೆ ದೂರವಾದ ಮಾತು" ಎಂದು ಸ್ಪಷ್ಟನೆ ನೀಡಿದರು.

Gurupadappa Nagamarapalli

ಲೋಕಸಭೆ ಚುನಾವಣೆಯಲ್ಲಿ ನಾನು ಕಾಂಗ್ರೆಸ್ ಪರವಾಗಿ ಕೆಲಸ ಮಾಡಿದ್ದರೆ, ಕಾಂಗ್ರೆಸ್‌ ಅಭ್ಯರ್ಥಿ ಧರ್ಮಸಿಂಗ್‌ ಗೆಲುವು ಸಾಧಿಸುತ್ತಿದ್ದರು ಎಂದು ಬಿಜೆಪಿ ಘಟಕಕ್ಕೆ ತಿರುಗೇಟು ನೀಡಿದ ಗುರುಪಾದಪ್ಪ ನಾಗಮಾರಪಲ್ಲಿ ಅವರು, ರಾಜ್ಯ ಘಟಕ ಧೈರ್ಯವಿದ್ದರೆ, ನನ್ನನ್ನು ಪಕ್ಷದಿಂದ ಉಚ್ಛಾಟನೆ ಮಾಡಲಿ ಎಂದು ಸವಾಲು ಹಾಕಿದರು. [ನಾಗಮಾರಪಲ್ಲಿ ಬಿಜೆಪಿಯಿಂದ ಉಚ್ಛಾಟನೆ?]

ಯಾರ ಬಳಿಯೂ ಹೋಗೋಲ್ಲ : ಬೀದರ್ ಘಟಕ ಮಾಡಿರುವ ಉಚ್ಛಾಟನೆ ಕುರಿತು ಶಿಫಾರಸಿನ ಕುರಿತು ಚರ್ಚಿಸಲು ಯಾವ ನಾಯಕರ ಬಳಿಯೂ ತೆರಳುವುದಿಲ್ಲ. ಈ ಸಂಬಂಧ ಹೈಕಮಾಂಡ್‌ ಬಳಿ ಹೋಗಿ ಗೋಗರೆಯುವುದಿಲ್ಲ. ಮುಂದೆ ಏನಾಗುತ್ತದೆ ಎಂಬುದನ್ನು ಕಾದು ನೋಡುತ್ತೇನೆ ಎಂದು ಅವರು ಸ್ಪಷ್ಟಪಡಿಸಿದರು. [ಕರ್ನಾಟಕ ಲೋಕಸಭೆ : ಗೆದ್ದವರು ಸೋತವರು]

ಉಚ್ಛಾಟನೆ ಶಿಫಾರಸು : ಶನಿವಾರ ಬೀದರ್‌ ನಲ್ಲಿ ನಡೆದ ಬಿಜೆಪಿ ಯುವಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ, ಬೀದರ್‌ ಬಿಜೆಪಿ ಘಟಕ ಗುರುಪಾದಪ್ಪ ನಾಗಮಾರಪಲ್ಲಿ ಅವರ ಪುತ್ರ ಸೂರ್ಯಕಾಂತ ನಾಗಮಾರಪಲ್ಲಿ, ಡಿ.ಕೆ. ಸಿದ್ಧರಾಮ್‌ ಅವರು ಲೋಕಸಭೆ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ. ಆದ್ದರಿಂದ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಬೇಕು ಎಂದು ಶಿಫಾರಸು ಮಾಡಿತ್ತು.

2014ರ ಲೋಕಸಭಾ ಚುನಾವಣೆಯಲ್ಲಿ ಸೂರ್ಯಕಾಂತ ನಾಗಮಾರಪಲ್ಲಿ ಅವರಿಗೆ ಬೀದರ್‌ ಕ್ಷೇತ್ರದ ಟಿಕೆಟ್‌ ನಿರಾಕರಿಸಲಾಗಿತ್ತು. ಪಕ್ಷ ಅಲ್ಲಿ ಭಗವಂತ ಖೂಬಾ ಅವರಿಗೆ ಟಿಕೆಟ್ ನೀಡಿತ್ತು. ಇದರಿಂದಾಗಿ ಅಸಮಾಧಾನಗೊಂಡ ನಾಗಮಾರಪಲ್ಲಿ ಮತ್ತು ಅವರ ಬೆಂಬಲಿಗರು ಕಾಂಗ್ರೆಸ್ ಅಭ್ಯರ್ಥಿ ಧರ್ಮಸಿಂಗ್ ಪರವಾಗಿ ಪ್ರಚಾರ ಮಾಡಿದ್ದಾರೆ ಎಂದು ಜಿಲ್ಲಾ ಘಟಕ ಶಿಫಾರಸಿನಲ್ಲಿ ವಿವರಣೆ ನೀಡಿದೆ.

ಶಾಸಕರ ಪ್ರತಿಕ್ರಿಯೆ : ಬೀದರ್ ಶಾಸಕ ಗುರುಪಾದಪ್ಪ ನಾಗಮಾರಪಲ್ಲಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಾಥ ಮಲ್ಕಾಪುರೆ, ಬೀದರ್ ಜಿಲ್ಲಾ ಬಿಜೆಪಿ ಘಟಕದ ಉಚ್ಛಾಟನೆ ಶಿಫಾರಸಿನ ಬಗ್ಗೆ ಕೋರ್ ಕಮಿಟಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗುವುದು. ಗುರುಪಾದಪ್ಪ ನಾಗಮಾರಪಲ್ಲಿ ಅವರು ಉಚ್ಛಾಟನೆ ಕುರಿತು ನೀಡಿರುವ ಹೇಳಿಕೆ ಅವರಿಗೆ ಶೋಭೆ ತರುವುದಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

English summary
Bidar BJP MLA Gurupadappa Nagamarapalli challenged the party leaders to expel him if they had the nerve. On Friday BJP’s Bidar unit recommended to expulsion the Gurupadappa Nagamarapalli, Suryakanth Nagamarapalli and D.K.Siddaram who work against party candidate in Lok Sabha Election 2014.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X