ಅಹಮದ್ ಪಟೇಲ್ ಗೆಲುವು, ಡಿಕೆಶಿ ಹೇಳಿದ್ದೇನು?
ಬೆಂಗಳೂರು, ಆ.09 : 'ಪಕ್ಷದ ಹೈಕಮಾಂಡ್ ನೀಡಿದ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ರಾಜಕೀಯ ಸ್ಥಾನಮಾನದ ಬಗ್ಗೆ ಎಲ್ಲಾ ಕಾಲವೇ ನಿರ್ಣಯಿಸಲಿದೆ' ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.
ಮಂಗಳವಾರ ಇಡೀ ದಿನ ನಡೆದ ರಾಜಕೀಯ ಹಗ್ಗ-ಜಗ್ಗಾಟ ಅಂತ್ಯಗೊಂಡಿದ್ದು, ಗುಜರಾತ್ ವಿಧಾನಸಭೆಯಿಂದ ರಾಜ್ಯಸಭೆಗೆ ಅಹಮದ್ ಪಟೇಲ್ ಆಯ್ಕೆಯಾಗಿದ್ದಾರೆ. ರಾಜ್ಯಸಭೆ ಚುನಾವಣೆಯಲ್ಲಿ ಕರ್ನಾಟಕದ ಪಾತ್ರವೂ ಮುಖ್ಯವಾಗಿತ್ತು.

ಬುಧವಾರ ಬೆಳಗ್ಗೆ ಸದಾಶಿವನಗರದ ನಿವಾಸದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ.ಶಿವಕುಮಾರ್, 'ಪಕ್ಷದ ಹೈಕಮಾಂಡ್ ನನಗೆ ವಹಿಸಿದ ಕೆಲಸವನ್ನು ಯಾವುದೇ ಅಡೆ ತಡೆಗಳು ಎದುರಾದರೂ ಪ್ರಾಮಾಣಿಕವಾಗಿ ಮಾಡಿದ್ದೇನೆ' ಎಂದರು.
'ನಾನು ಮಾಡಿದ ಕೆಲಸಕ್ಕೆ ಕ್ರೆಡಿಟ್ ಬೇಡ. ಚುನಾವಣಾ ಆಯೋಗ ಎಲ್ಲರಿಗೂ ತಕ್ಕಪಾಠ ಕಲಿಸಿದೆ. ರಾಜಕೀಯ ಸ್ಥಾನ ಮಾನದ ಕುರಿತು ಕಾಲವೇ ನಿರ್ಣಯಿಸಲಿದೆ' ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಗುಜರಾತ್ ರಾಜ್ಯಸಭೆ ಚುನಾವಣೆ ಬಳಿಕ ಡಿ.ಕೆ.ಶಿವಕುಮಾರ್ ಅವರಿಗೆ ದೂರವಾಣಿ ಕರೆ ಮಾಡಿರುವ ಅಹಮದ್ ಪಟೇಲ್ ಕೃತಜ್ಞತೆ ಸಲ್ಲಿಸಿದ್ದಾರೆ. ಗುಜರಾತ್ ಕಾಂಗ್ರೆಸ್ ಶಾಸಕರು ಅಪರೇಷನ್ ಕಮಲದ ಭೀತಿಯಿಂದಾಗಿ ಬೆಂಗಳೂರು ಹೊರವಲಯದ ಈಗಲ್ ಟನ್ ಗಾಲ್ಫ್ ರೆಸಾರ್ಟ್ ನಲ್ಲಿ ಒಂಭತ್ತು ದಿನಗಳ ಕಾಲ ವಾಸ್ತವ್ಯ ಹೂಡಿದ್ದರು.












Click it and Unblock the Notifications