ಹಾವೇರಿಯಲ್ಲಿ ಕಾಂಗ್ರೆಸ್ ಮೇಲೆ ಹರಿಹಾಯ್ದ ಗುಜರಾತ್ ಸಿಎಂ ರೂಪಾನಿ
ಹಾವೇರಿ, ಜೂನ್ 19 : 'ದೇಶದಲ್ಲಿ ಕಾಂಗ್ರೆಸ್ ಅಳಿವಿನ ಅಂಚಿನಲ್ಲಿದ್ದು, ಕರ್ನಾಟಕದಲ್ಲಿಯೂ ಅದಕ್ಕೆ ದಿನಗಣನೆ ಆರಂಭವಾಗಿದೆ. ಇದಕ್ಕೆ ಕಾರಣ ಆ ಪಕ್ಷಕ್ಕೆ ನೇತಾ, ನೀತಿ ಹಾಗೂ ನಿಯತ್ತು ಇಲ್ಲ'ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದ ಮಾಗಾವಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಕೇಂದ್ರ ಸರ್ಕಾರದ ಸಾಧನೆಗಳನ್ನು ತಿಳಿಸುವ 'ಸಬ್ ಕಾ ಸಾತ್-ಸಬ್ ಕಾ ವಿಕಾಸ್' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, "ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಸರ್ಕಾರ ಪಾರ್ಶ್ವವಾಯು ಪೀಡಿತವಾಗಿತ್ತಲ್ಲದೆ, 10 ವರ್ಷಗಳ ಯುಪಿಎ ಆಡಳಿತ ಹಗರಣಗಳ ಸಂಕೋಲೆಯಲ್ಲಿ ಸಿಲುಕಿ ನಲುಗಿತ್ತು" ಎಂದು ವ್ಯಂಗ್ಯವಾಡಿದರು.
ಆ ಅವಧಿಯ ಆಡಳಿತದಲ್ಲಿ ಹಗರಣಗಳು ಭೂಮಿ ಮತ್ತು ಆಕಾಶಕ್ಕೆ ಹೊಂದಿಕೊಂಡಿದ್ದವು. ಈ ಎಲ್ಲ ಕಾರಣಗಳು ಕಾಂಗ್ರೆಸ್ ಅಳಿವಿಗೆ ಕಾರಣವಾಗಿವೆ. ಇತ್ತ ಕರ್ನಾಟಕದಲ್ಲಿಯೂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಆಡಳಿತ ಯುಪಿಎ ಅವಧಿಗಿಂತ ಭಿನ್ನವಾಗಿಲ್ಲ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಗೋ ಹತ್ಯೆ ನಿಷೇಧವನ್ನು ರಾಜಕೀಯಕ್ಕೆ ಬಳಕೆ
ಗೋ ಹತ್ಯೆ ನಿಷೇಧವನ್ನು ರಾಜಕೀಯಕ್ಕೆ ಬಳಸಿಕೊಳ್ಳಲು ಯತ್ನಿಸುತ್ತಿರುವ ಕಾಂಗ್ರೆಸ್ಗೆ ದೇಶದ ಸಂಸ್ಕೃತಿ ಬಗ್ಗೆ ಎಳ್ಳಷ್ಟು ಗೌರವವಿಲ್ಲ ಎಂದು ವಿಜಯ್ ರೂಪಾನಿ ಆಕ್ರೋಶ ವ್ಯಕ್ತಪಡಿಸಿದರು.
ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತ
ಕಳೆದ ಮೂರು ವರ್ಷಗಳಲ್ಲಿ ಕೇಂದ್ರದ ಎನ್ಡಿಎ ನೇತೃತ್ವದ ಸರ್ಕಾರ ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತ ನೀಡುತ್ತಿದೆ. ಜನರ ಪ್ರತಿ ಪೈಸೆ ತೆರಿಗೆಗೂ ಲೆಕ್ಕ ಕೊಡುವ ಕೆಲಸ ಮಾಡುತ್ತಿದೆ .ದೇಶದ ಜನರ ಅಭಿವೃದ್ಧಿಗಾಗಿ ನೋಟು ರದ್ಧತಿ, ಜಿಎಸ್ ಟಿ, ಒಂದು ಶ್ರೇಣಿ ಒಂದು ಪಿಂಚಣಿ, ಎಫ್ಡಿಎ, ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾದಂತಹ ಮಹತ್ತರ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದರು..
ಬಿಜೆಪಿ ಕೈ ಹಿಡಿಯುವುದರಲ್ಲಿ ಎರಡು ಮಾತಿಲ್ಲ
ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಾ ಸಮುದಾಯ ಕಟ್ಟಕಡೆಯ ಮನಷ್ಯನಿಗೂ ಕನಿಷ್ಠ ಸೌಲಭ್ಯಗಳನ್ನು ಒದಗಿಸುವತ್ತ ಹೆಜ್ಜೆ ಇಟ್ಟಿದ್ದಾರೆ. ಈ ಎಲ್ಲ ಕಾರಣಗಳಿಂದ ಕರ್ನಾಟಕದ ವಿಧಾನ ಸಭಾ ಚುನಾವಣೆಯಲ್ಲಿ ರಾಜ್ಯದ ಜನರು ಬಿಜೆಪಿ ಕೈ ಹಿಡಿಯುವುದರಲ್ಲಿ ಎರಡು ಮಾತಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗುಜರಾತ್ ರಾಜ್ಯದಲ್ಲಿ ಪುನಃ ಪಕ್ಷ ಅಧಿಕಾರಕ್ಕೆ ಬರಲಿದೆ
ಇದಕ್ಕೂ ಮುನ್ನ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಗುಜರಾಜ್ ಮುಖ್ಯಮಂತ್ರಿ, ಸತತ ಮೂರು ಅವಧಿ ಪೂರ್ಣ ಬಹುಮತದೊಂದಿಗೆ ಗುಜರಾತ್ ರಾಜ್ಯದಲ್ಲಿ ಸರ್ಕಾರ ನಡೆಸುತ್ತಿರುವ ಬಿಜೆಪಿಗೆ ಯಾವುದೇ ವಿರೋಧಿ ಅಲೆ ಸೃಷ್ಟಿಯಾಗಿಲ್ಲ. ಈ ಕಾರಣದಿಂದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿಯೂ ಪುನಃ ಪಕ್ಷ ಅಧಿಕಾರಕ್ಕೆ ಬರಲಿದೆ. ಅದೇ ರಾಜ್ಯದಲ್ಲಿಯೂ 150ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿಯಲಿದೆ ಎಂದು ಅವರು ಹೇಳಿದರು.