ಕೈಕೊಟ್ಟ ಮಳೆ; ಬರ ಪರಿಸ್ಥಿತಿ ಘೋಷಣೆಗೆ ಮಾನದಂಡಗಳು
ಬೆಂಗಳೂರು, ಆಗಸ್ಟ್ 28; ಕರ್ನಾಟಕದಲ್ಲಿ ಈ ಬಾರಿ ನೈಋತ್ಯ ಮುಂಗಾರು ಮಳೆ ಕೈ ಕೊಟ್ಟಿದೆ. ವಿವಿಧ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ಎದುರಾಗಿದೆ. ಕಂದಾಯ ಇಲಾಖೆ ಜಿಲ್ಲೆಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡುವ ತಯಾರಿ ನಡೆಸಿದೆ.
ಆಗಸ್ಟ್ 22ರಂದು ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ರಾಜ್ಯದ ಬರ ಪರಿಸ್ಥಿತಿ ಕುರಿತು ಚರ್ಚೆಗಳು ನಡೆದಿವೆ. ಈ ಸಭೆಯ ಬಳಿಕ ಟಿ. ಸಿ. ಕಾಂತರಾಜ್ ಸರ್ಕಾರದ ಜಂಟಿ ಕಾರ್ಯದರ್ಶಿ, ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ ಮತ್ತು ನೋಂ & ಮು) ಸುತ್ತೋಲೆಯೊಂದನ್ನು ಹೊರಡಿಸಿದ್ದಾರೆ.
ಈ ಸುತ್ತೋಲೆ 2023-24ನೇ ಸಾಲಿನಲ್ಲಿ ರಾಜ್ಯದ ಬರ ನಿರ್ವಹಣೆ ಕುರಿತಂತೆ ಜಿಲ್ಲಾಧಿಕಾರಿಗಳ ಉಸ್ತುವಾರಿಯಲ್ಲಿ ಜಂಟಿ ಸಮೀಕ್ಷೆ ಕೈಗೊಂಡು ನಿಗದಿತ ತಾಲ್ಲೂಕುಗಳಲ್ಲಿನ ಕ್ಷೇತ್ರ ಪರಿಶೀಲನೆ ದೃಢೀಕರಣ (Ground Truthing) ಕುರಿತು ಎಂಬ ವಿಚಾರವನ್ನು ಒಳಗೊಂಡಿದೆ. ಬರ ಪರಿಸ್ಥಿತಿ ಘೋಷಿಸಲು ಅನುಸರಿಸಬೇಕಾದ ಮಾನದಂಡಗಳನ್ನು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ಚರ್ಚಿಸಿ ನಿರ್ದೇಶಿಸಿದಂತೆ ಕೃಷಿ, ಸಹಕಾರ ಮತ್ತು ರೈತರ ಕಲ್ಯಾಣ ಮಂತ್ರಾಲಯ, ಕೇಂದ್ರ ಸರ್ಕಾರದ ಪರಿಷ್ಕೃತ ಬರ ಕೈಪಿಡಿ-2020ರಲ್ಲಿ ಬರ ಪರಿಸ್ಥಿತಿ ಘೋಷಿಸಲು ಅನುಸರಿಸಬೇಕಾದ ಮಾನದಂಡಗಳ ಅನ್ವಯ ಹಂತ-1ರಲ್ಲಿ ಕಡ್ಡಾಯ ಮಾನದಂಡಗಳಾದ ಮಳೆ ಕೊರತೆ (ಶೇ. 60ಕ್ಕಿಂತ ಹೆಚ್ಚು) ಮತ್ತು ಸತತ 3 ವಾರಗಳ ಅಥವಾ ಅದಕ್ಕಿಂತ ಹೆಚ್ಚು ಶುಷ್ಕ ವಾತಾವರಣ (Dry Spell) ಕಂಡು ಬಂದಿರಬೇಕು ಎಂದು ತಿಳಿಸಿದೆ.
ಹಂತ-2ರಲ್ಲಿ ತತ್ಪರಿಣಾಮ ಮಾನದಂಡಗಳಾದ ಕೃಷಿ ಬಿತ್ತನೆ ಪ್ರದೇಶ, ಉಪಗ್ರಹ ಆಧಾರಿತ ಬೆಳೆ ಆರೋಗ್ಯ ಸೂಚ್ಯಾಂಕ, ತೇವಾಂಶ ಕೊರತೆ (MAI) ಹಾಗೂ ನದಿಗಳಲ್ಲಿನ ಹರಿವು, ಜಲಾಶಯಗಳ ನೀರಿನ ಸಂಗ್ರಹಣೆ ಹಾಗೂ ಅಂತರ್ಜಲ ಮಟ್ಟದ ಸೂಚ್ಯಂಕಗಳಲ್ಲಿನ ತೀವ್ರತೆಯನ್ನು ಆಧರಿಸಿ ಬರ ಪರಿಸ್ಥಿತಿ ಉದ್ಭವಿಸಿರುವ ತಾಲ್ಲೂಕುಗಳೆಂದು ಗುರುತಿಸಲಾಗುತ್ತದೆ ಎಂದು ಹೇಳಿದೆ.
113 ತಾಲೂಕುಗಳ ಪಟ್ಟಿ; ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಸರ್ಕಾರದ ಪರಿಷ್ಕೃತ ಬರ ಕೈಪಿಡಿ-2020ರನ್ವಯ ಹಂತ-1 ಮತ್ತು ಹಂತ-2ರಲ್ಲಿ ಸೂಚಿಸಿರುವ ಮಾನದಂಡಗಳನ್ವಯ ಪರಿಶೀಲಿಸಿ ಪ್ರಸಕ್ತ ಮುಂಗಾರು (ಜೂನ್ 1 ರಿಂದ 19ನೇ ಆಗಸ್ಟ್) ಅವಧಿಯಲ್ಲಿ ರಾಜ್ಯದಲ್ಲಿ 38 ತಾಲೂಕುಗಳನ್ನು ತೀವ್ರ ಬರ ಮತ್ತು 75 ತಾಲ್ಲೂಕುಗಳಲ್ಲಿ ಸಾಧಾರಣ ಬರ ಪರಿಸ್ಥಿತಿ ಕಂಡುಬಂದಿರುವ ಒಟ್ಟು 113 ತಾಲೂಕುಗಳನ್ನು ಬರ ಪರಿಸ್ಥಿತಿ ಉದ್ಭವಿಸಿರುವ ತಾಲೂಕುಗಳೆಂದು ಗುರುತಿಸಿ ಪಟ್ಟಿ ಮಾಡಲಾಗಿದೆ.
ಮೂರನೇ ಹಂತದಲ್ಲಿ ಬರ ಪರಿಸ್ಥಿತಿ ಎದುರಿಸುತ್ತಿರುವ ತಾಲೂಕುಗಳಲ್ಲಿ ಶೇಕಡ 10ರಷ್ಟು ಗ್ರಾಮಗಳನ್ನು Random ಆಗಿ ಆಯ್ಕೆ ಮಾಡಿ, ಪ್ರಮುಖ ಬೆಳೆಗಳನ್ನು ಗುರುತಿಸಿ ಪ್ರತಿ ಬೆಳೆಗಳ ಸುಮಾರು 5 sites ಇ-ಆಡಳಿತ ಇಲಾಖೆ ಅಭಿವೃದ್ಧಿ ಪಡಿಸಿರುವ App ಮೂಲಕ Ground Truthing or Verification ಮಾಡುವುದು. ಈ ಸಂಬಂಧ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕಂದಾಯ, ಕೃಷಿ, ತೋಟಗಾರಿಕೆ ಅಧಿಕಾರಿಗಳು ಜಂಟಿ ಸಮೀಕ್ಷೆಯನ್ನು ಕೈಗೊಂಡು ಬರಕೈಪಿಡಿಯಲ್ಲಿ ನಮೂದಿಸಿರುವ Form No.11 ರಲ್ಲಿ ದೃಢೀಕೃತ ವರದಿಯನ್ನು ಸಲ್ಲಿಸಬೇಕಾಗಿರುತ್ತದೆ ಎಂದು ಹೇಳಿದೆ.
ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುವ ಮುನ್ನ ಪೂರಕವಾಗಿ ಬರ ಕೈಪಿಡಿ 2020ರಲ್ಲಿ ಸೂಚಿಸಿರುವಂತೆ ವಿವಿಧ ಇಲಾಖೆಗಳಿಂದ ಮಾಹಿತಿಯನ್ನು ಪಡೆಯಬೇಕಾಗುತ್ತದೆ. ಕೇಂದ್ರ ಸರ್ಕಾರದ ಕೃಷಿ ಮಂತ್ರಾಲಯದ ಪರಿಷ್ಕೃತ ಬರ ಕೈಪಿಡಿ 2020ರ ಅನ್ವಯ Ground Truthing/ Verification ಪ್ರಕ್ರಿಯೆಯನ್ನು ಕೈಗೊಳ್ಳಲು ಜಿಲ್ಲಾಧಿಕಾರಿಗಳು ಸಂಬಂದಪಟ್ಟ ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿ/ ಸಿಬ್ಬಂದಿ ಒಳಗೊಂಡ ಜಂಟಿ ಸಮೀಕ್ಷೆ ತಂಡಗಳನ್ನು ರಚಿಸಿ ಇ-ಆಡಳಿತ ಇಲಾಖೆಯಿಂದ ಅಭಿವೃದ್ಧಿಪಡಿಸಿರುವ App & Web Application ರಂತೆ ದೃಡೀಕರಣ (Ground Truthing) ನಡೆಸಲು ಕ್ರಮ ಕೈಗೊಳ್ಳುವುದು ಎಂದು ಸುತ್ತೋಲೆ ವಿವರಣೆ ನೀಡಿದೆ.
ಸಂಬಂಧಪಟ್ಟ ಜಿಲ್ಲಾಧಿಕಾರಿಗಳು Ground Truthing/ Verification ಮಾಹಿತಿಯನ್ನು ಪಡೆದು ಅರ್ಜಿ-11ರಲ್ಲಿ ಕ್ರೋಢಿಕರಿಸಿ ದೃಡೀಕೃತ ದಾಖಲಾತಿಗಳನ್ನು ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ ಶಾಖೆ) 31/8/2023ಕ್ಕೆ ಸಲ್ಲಿಸಬೇಕು ಎಂದು ಸೂಚನೆ ನೀಡಲಾಗಿದೆ.












Click it and Unblock the Notifications