ಸಂಸ್ಕೃತ ಉಳಿಸಿ ಎಂದು ಪ್ರಾಂಶುಪಾಲರ ಕಾಲಿಗೆ ಬಿದ್ದ ಉಪನ್ಯಾಸಕ!
ಶಿರಸಿ, ಸೆಪ್ಟೆಂಬರ್ 24, : ಸಂಸ್ಕೃತವನ್ನು ಉಳಿಸಿಕೊಡಿ ಎಂದು ಅತಿಥಿ ಉಪನ್ಯಾಸಕರೊಬ್ಬರು ಪ್ರಾಂಶುಪಾಲರ ಕಾಲಿಗೆ ಬಿದ್ದು ಬೇಡಿಕೊಂಡ ಘಟನೆ ಶಿರಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದಿದೆ.
ಕಾಲೇಜಿನ ಸಂಸ್ಕೃತ ಉಪನ್ಯಾಸಕ ಡಾ.ವಿನಾಯಕ ಭಟ್ ಪ್ರಾಂಶುಪಾಲ ಜನಾರ್ಧನ ಭಟ್ ಅವರ ಕಾಲಿಗೆ ಬಿದ್ದವರು. ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಸಂಸ್ಕೃತ ವಿಷಯವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡದಿರುವ ಕಾರಣ, ಕಾಲಿಗೆ ಬಿದ್ದು ಸಂಸ್ಕೃತವನ್ನು ಉಳಿಸಿಕೊಳ್ಳಲು ಮುಂದಾಗಿದ್ದಾರೆ.

ಸಂಸ್ಕೃತ ವಿಷಯವನ್ನು ಆಯ್ಕೆ ಮಾಡಿಕೊಳ್ಳಲು ಹೋದ ಸುಮಾರು 15 ವಿದ್ಯಾರ್ಥಿಗಳಿಗೆ, ಕಾಲೇಜಿನಲ್ಲಿ ವಿದ್ಯಾರ್ಥಿಗಳ ಕೊರತೆಯಿದೆ. ಆದ ಕಾರಣ ನೀವು ಕನ್ನಡವನ್ನೇ ಪಡೆಯಿರಿ ಎಂದು ಒತ್ತಾಯ ಪೂರ್ವಕವಾಗಿ ಕನ್ನಡ ವಿಷಯ ಆಯ್ಕೆ ಮಾಡಿಕೊಳ್ಳುವಂತೆ ಪ್ರಾಂಶುಪಾಲರು ಒತ್ತಾಯಿಸಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಪರೀಕ್ಷಾ ಪ್ರವೇಶಾತಿ ಪಡೆಯುವ ಸಂದರ್ಭದಲ್ಲಿ ಮತ್ತೆ ವಿದ್ಯಾರ್ಥಿಗಳು ಪ್ರಾಂಶುಪಾಲರ ಬಳಿ ಸಂಸ್ಕೃತ ವಿಷಯ ನೀಡುವಂತೆ ಕೇಳಿಕೊಂಡಾಗ ಅವರು ಒಪ್ಪದಿರುವ ಕಾರಣಕ್ಕೆ ಉಪನ್ಯಾಸಕ ವಿನಾಯಕ ಭಟ್ ಕಾಲಿಗೆ ಬಿದ್ದು ಸಂಸ್ಕೃತ ಉಳಿಸುವಂತೆ ಕೇಳಿಕೊಂಡಿದ್ದಾರೆ.
ಈ ವೇಳೆ ವಿದ್ಯಾರ್ಥಿಗಳು, ತಮಗೆ ಮೊದಲಿನಿಂದಲೂ ಸಂಸ್ಕೃತ ವಿಷಯದಲ್ಲಿ ಆಸಕ್ತಿ. ಹೀಗಾಗಿ ಅದನ್ನು ಕಲಿಯಬೇಕು ಎಂದು ಇಲ್ಲಿಗೆ ಬಂದಿದ್ದೇವೆ. ದಯವಿಟ್ಟು ಸಂಸ್ಕೃತ ವಿಷಯ ಸಿಗುವಂತೆ ಮಾಡಿ ಎಂದು ಪ್ರಾಂಶುಪಾಲರ ಬಳಿ ಬೇಡಿಕೊಂಡರು. ಆದರೆ, ಪ್ರಾಂಶುಪಾಲರು ಉಪನ್ಯಾಸಕರಿಂದ ಕಾಲು ಬಿಡಿಸಿಕೊಂಡು ಹೊರಟು ಹೋಗಿದ್ದಾರೆ.












Click it and Unblock the Notifications