ಜಿಎಸ್ಐಟಿ ವಿನಾಯಿತಿಗೆ ಆಗ್ರಹ, ಪ್ರಸನ್ನರ ಸತ್ಯಾಗ್ರಹ 5ನೇ ದಿನಕ್ಕೆ
ಬೆಂಗಳೂರು, ಅಕ್ಟೋಬರ್ 18 : ಕೈಮಗ್ಗ ಉತ್ಪನ್ನಗಳಿಗೆ ಜಿಎಸ್ಟಿಯಿಂದ ವಿನಾಯಿತಿ ನೀಡಬೇಕು ಎಂದು ಆಗ್ರಹಿಸಿ ಹಿರಿಯ ರಂಗಕರ್ಮಿ ಪ್ರಸನ್ನ ಅವರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ನಟ ಪ್ರಕಾಶ್ ರಾಜ್ ಅವರು ಸತ್ಯಾಗ್ರಹಕ್ಕೆ ಬೆಂಬಲ ನೀಡಿದ್ದಾರೆ.
ಬೆಂಗಳೂರಿನ ಬಸವನಗುಡಿಯಲ್ಲಿರುವ ನಿಡುಮಾಮಿಡಿ ಸಂಸ್ಥಾನ ಸಭಾಂಗಣದಲ್ಲಿ ಶನಿವಾರದಿಂದ ಪ್ರಸನ್ನ ಅವರು ಸತ್ಯಾಗ್ರಹ ನಡೆಸುತ್ತಿದ್ದಾರೆ. ಬುಧವಾರ ಪ್ರಕಾಶ್ ರಾಜ್, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಪ್ರಸನ್ನ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

'ಗಾಂಧೀಜಿ ಮತ್ತು ಅಂಬೇಡ್ಕರ್ ಮಾರ್ಗದರ್ಶನವನ್ನು ಅನುಸರಿಸಿ ಉಪವಾಸ ಆರಂಭಿಸಿದ್ದೇವೆ. ದೇಸಿ ವಸ್ತುಗಳಿಗೆ ಸಹಕಾರ ಸಿಕ್ಕರೆ ಮಾತ್ರ ಗ್ರಾಮೀಣ ಜನರು ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ರಾಜ್ಯದಲ್ಲಿ ಶೇ 60ರಷ್ಟು ಕುಂಬಾರರು, ಗೌಳಿಗಳು, ಕುರುಬರು ಕೈಮಗ್ಗದ ಉತ್ಪನ್ನ ನಂಬಿ ಜೀವನ ನಡೆಸುತ್ತಿದ್ದಾರೆ. ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ಒಟ್ಟಾಗಿ ಜಿಎಸ್ಟಿ ಕೌನ್ಸಿಲ್ಗೆ ತೆರಿಗೆ ವಿನಾಯಿತಿ ನೀಡಲು ಮನವಿ ಮಾಡಬೇಕು' ಎಂದು ಪ್ರಸನ್ನ ಹೇಳಿದರು.

ಸ್ವಾತಂತ್ರ ಪೂರ್ವದಲ್ಲಿ ಕೃಷಿ, ಕರಕುಶಲ ಉತ್ಪನ್ನಗಳಿಗೆ ತೆರಿಗೆ ವಿಧಿಸುತ್ತಿರಲಿಲ್ಲ. ಇದೇ ಮೊದಲ ಬಾರಿಗೆ ತೆರಿಗೆ ವಿಧಿಸಲಾಗುತ್ತಿದೆ. ಇದರಿಂದಾಗಿ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಮಡಿಕೆ, ಕುಡಿಕೆ, ಚಪ್ಪಲಿ, ಖಾದಿ ಬಟ್ಟೆ, ಕೈಮಗ್ಗ, ಕಂಬಳಿ ಮುಂತಾದ ವಸ್ತುಗಳನ್ನು ಶೂನ್ಯ ಕರದ ವ್ಯಾಪ್ತಿಗೆ ತರಬೇಕು ಎಂದು ಒತ್ತಾಯಿಸಲಾಗುತ್ತಿದೆ.
ಉಪವಾಸ ಸತ್ಯಾಗ್ರಹದ ಪ್ರತಿದಿನದ ಮಾಹಿತಿಗಳನ್ನು ಗ್ರಾಮ ಸೇವಾ ಸಂಘ ಫೇಸ್ಬುಕ್ ಪುಟದಲ್ಲಿ ತಿಳಿಸಲಾಗುತ್ತದೆ. ಬುಧವಾರ ಪ್ರಕಾಶ್ ರಾಜ್, ಎಚ್.ಡಿ.ದೇವೇಗೌಡ ಅವರು ಸತ್ಯಾಗ್ರಹಕ್ಕೆ ಬೆಂಬಲ ನೀಡಿದ್ದಾರೆ.












Click it and Unblock the Notifications