ಗೃಹಲಕ್ಷ್ಮಿ ದುಡ್ಡು ಹಿಂಗೂ ಬಳ್ಸಬೋದಾ, ಏನದು
ಗೃಹಲಕ್ಷ್ಮಿ ಯೋಜನೆ ಜಾರಿಗೆ ಬಂದಾಗಿನಿಂದಲೂ ಹಲವು ಟೀಕೆಗಳು ಕೇಳಿ ಬಂದಿದ್ದವು. ಆದರೆ, ಒಂದು ವರ್ಷ ಕಳೆಯುವ ಅವಧಿಯಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಮಹಿಳೆಯರು ಹೇಗೆಲ್ಲ ಬಳಸಿಕೊಳ್ಳುತ್ತಿದ್ದಾರೆ ಎನ್ನುವ ವಿಚಾರ ಅಚ್ಚರಿ ಮೂಡಿಸಿದೆ. ಇದೀಗ ರಾಜ್ಯದಲ್ಲಿ ಗೃಹಲಕ್ಷ್ಮಿ ಹಣವನ್ನು ಬಳಸಿ ಮಹಿಳೆಯೊಬ್ಬರು ಮಾದರಿಯಾಗಿದ್ದಾರೆ. ಅವರು ಗೃಹಲಕ್ಷ್ಮಿ ಹಣವನ್ನು ಬಳಸಿರುವ ಮಾದರಿ ನೋಡಿದರೆ, ಈ ಯೋಜನೆಯ ಹಣವನ್ನು ಈ ರೀತಿಯೂ ಬಳಸಬಹುದಾ ಎನ್ನುವ ಅಚ್ಚರಿ ಮೂಡುತ್ತದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪರಿಚಯಿಸಿರುವ ಐದು ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆಯೂ ಒಂದು. ಗೃಹಲಕ್ಷ್ಮಿ ಹಾಗೂ ಶಕ್ತಿ ಯೋಜನೆ ರಾಜ್ಯದಲ್ಲಿ ಹೆಚ್ಚು ಚರ್ಚೆ, ವಿಮರ್ಶೆ, ಟೀಕೆ ಹಾಗೂ ಪ್ರಶಂಸೆಗೆ ಪಾತ್ರವಾದ ಯೋಜನೆಗಳು. ವಿರೋಧ ಪಕ್ಷಗಳು ಈ ಯೋಜನೆಯ ಕೆಲವು ನಿರ್ದಿಷ್ಟ ವಿಷಯಗಳ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದವು. ಆದರೆ, ಸಾರ್ವಜನಿಕ ವಲಯದಿಂದ ಸಣ್ಣಪುಟ್ಟ ದೂರುಗಳು ಕೇಳಿ ಬಂದಿದ್ದರ ಹೊರತಾಗಿಯೂ ಈ ಯೋಜನೆಯ ಬಗ್ಗೆ ಸಾರ್ವಜನಿಕರಲ್ಲಿ ಒಳ್ಳೆಯ ಅಭಿಪ್ರಾಯವಿದೆ. ಇದೀಗ ಗೃಹಲಕ್ಷ್ಮಿ ಯೋಜನೆಯಿಂದ ಬಂದ ಹಣದಲ್ಲಿ ಮಹಿಳೆಯೊಬ್ಬರು ಎಲ್ಲರೂ ಮೆಚ್ಚುವಂತಹ ಕೆಲಸವನ್ನು ಮಾಡಿದ್ದಾರೆ.

ಗೃಹಲಕ್ಷ್ಮಿ ಯೋಜನೆಯ ಹಣದಿಂದ ಮಹಿಳೆಯೊಬ್ಬರು ಲೈಬ್ರರಿಯೊಂದನ್ನು ತೆರೆದಿದ್ದಾರೆ. ಈ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ವಿದ್ಯಾರ್ಥಿಗಳಿಗೆ ನೆರವಾಗಲು ಮುಂದಾಗಿದ್ದಾರೆ. ಬೆಳಗಾವಿಯ ಮಹಿಳೆ ಮಾಡಿರುವ ಈ ಕೆಲಸಕ್ಕೆ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಬೆಳಗಾವಿಯ ರಾಯಬಾಗ ತಾಲ್ಲೂಕಿನ ಮಂಟೂರು ಗ್ರಾಮದ ಮಲ್ಲವ್ವ ಮೇಟಿ ಎನ್ನುವವರು ಗೃಹಲಕ್ಷ್ಮಿ ಹಣವನ್ನು ಕೂಡಿಟ್ಟುಕೊಂಡು ಗ್ರಾಮದಲ್ಲಿ ಗ್ರಂಥಾಲಯವನ್ನೇ ಪ್ರಾರಂಭಿಸಿದ್ದಾರೆ. ದಸರಾ ಹಬ್ಬದಂದು ಈ ಲೈಬ್ರರಿಯನ್ನು ಉದ್ಘಾಟಿಸಿದ್ದು ಗ್ರಾಮದ ಹಾಗೂ ಸುತ್ತಮುತ್ತಲ ಗ್ರಾಮದ ವಿದ್ಯಾರ್ಥಿಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಈ ಲೈಬ್ರರಿಯನ್ನು ಉಪಯೋಗಿಸಿಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.
ಮಲ್ಲವ್ವ ಭೀಮಪ್ಪ ಮೇಟಿ ಹೇಳಿದ್ದೇನು ?
ಗೃಹಲಕ್ಷ್ಮಿ ಯೋಜನೆಯಿಂದ ಬಂದ ಹಣವನ್ನು ಕೂಡಿಟ್ಟು ಲೈಬ್ರರಿ ಮಾಡಿರುವ ಮಲ್ಲವ್ವ ಅವರು ಈ ಬಗ್ಗೆ ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ಟ್ವೀಟ್ ಮಾಡಿದ್ದಾರೆ. ಗೃಹಲಕ್ಷ್ಮಿ ಯೋಜನೆಯಿಂದ ಬಂದಿದ್ದ ದುಡ್ಡಿಂದ ಈ ಲೈಬ್ರರಿ ಮಾಡಿದ್ದು. ಗ್ರಾಮದಲ್ಲಿನ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಈ ಟ್ವೀಟ್ ಅನ್ನು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಟ್ಯಾಗ್ ಮಾಡಲಾಗಿದ್ದು, ಇದೀಗ ಈ ಪೋಸ್ಟ್ ಭಾರೀ ವೈರಲ್ ಆಗಿದೆ.
ನನ್ನಗೆ ಬಂದ ಗೃಹಲಕ್ಷ್ಮಿ ಹಣದಿಂದ ಗ್ರಾಮದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಗ್ರಂಥಾಲಯ ನಿರ್ಮಿಸಿದ್ದು ಇದರ ಸದುಪಯೋಗ ಪಡಿಸಿಕೊಳ್ಳಲು ಸ್ಪರ್ಧಾರ್ಥಿಗಳಿಗೆ ಮನವಿ@laxmi_hebbalkar@readingkafka @siddaramaiah @CMofKarnataka pic.twitter.com/OaOpSH1kU5
— Mallavva Bhimappa Meti (@meti_sadas8671) October 12, 2024
ಕಾಂಗ್ರೆಸ್ ಟ್ವೀಟ್: ಇನ್ನು ಈ ಬಗ್ಗೆ ಕಾಂಗ್ರೆಸ್ ಸಹ ಟ್ವೀಟ್ ಮಾಡಿದೆ. ದೇಶದ ಜಿಡಿಪಿಯ ಪಾಲಿನಲ್ಲಿ ಕರ್ನಾಟಕವು ಅಗ್ರ ಸ್ಥಾನ ಹೊಂದುವ ಮೂಲಕ ನಮ್ಮ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ಹೊರ ಹೊಮ್ಮಿವೆ ಎಂದು ಹೇಳಿದೆ. ಅಲ್ಲದೇ ಗ್ಯಾರಂಟಿ ಯೋಜನೆಗಳು ಸಾಮಾಜಿಕ ಹಾಗೂ ಆರ್ಥಿಕ ಬದಲಾವಣೆ ತರುತ್ತಿರುವುದಕ್ಕೆ ಹಲವು ಉದಾಹರಣೆಗಳು ನಮ್ಮ ಮುಂದಿವೆ.
ಮಲ್ಲವ್ವ ಮೇಟಿ ಎಂಬವರು ಗೃಹಲಕ್ಷ್ಮಿ ಯೋಜನೆಯ ಹಣವನ್ನು ಕೂಡಿಟ್ಟು ಯುವ ಪೀಳಿಗೆಯ ಅನುಕೂಲಕ್ಕಾಗಿ, ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗಾಗಿ ಲೈಬ್ರರಿ ಸ್ಥಾಪಿಸಿ ನಾಡಿಗೆ ಮಾದರಿಯಾಗಿದ್ದಾರೆ. ಮಲ್ಲವ್ವ ಮೇಟಿಯವರ ಈ ಸಾಮಾಜಿಕ ಕಳಕಳಿಗೆ ಕಾಂಗ್ರೆಸ್ ಪಕ್ಷವು ಅಭಿನಂದಿಸುತ್ತದೆ ಎಂದು ಟ್ವೀಟ್ನಲ್ಲಿ ಉಲ್ಲೇಖಿಸಿದೆ.
ಬಡವರ ಸಣ್ಣ ಸಣ್ಣ ಕನಸುಗಳನ್ನು ಈಡೇರಿಸುತ್ತಿರುವ ಗೃಹಲಕ್ಷ್ಮಿ ಹಣದಲ್ಲಿ ಮಗನಿಗೆ ಬೈಕ್ ಕೊಡಿಸಿದ್ದಾರೆ, ಟಿವಿ, ಫ್ರಿಡ್ಜ್ ಖರೀದಿಸಿದ್ದಾರೆ, ಮಗಳ ಮದುವೆಗೆ ಒಡವೆ ಮಾಡಿಸಿದ್ದಾರೆ. ನಮ್ಮ ಗ್ಯಾರಂಟಿ ಯೋಜನೆಗಳು ಸಾಮಾಜಿಕ ಕ್ರಾಂತಿ ಸೃಷ್ಟಿಸುತ್ತಿರುವುದು ನಿಸ್ಸಂಶಯ ಎಂದೂ ಕಾಂಗ್ರೆಸ್ ಹೇಳಿದೆ.












Click it and Unblock the Notifications