ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ: ಭೂಮಾಲೀಕರಿಗೆ ಗುಡ್ನ್ಯೂಸ್
ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆಗೆ ಭೂಸ್ವಾಧೀನ ಹಾಗೂ ಭೂ ಪರಿಹಾರಕ್ಕೆ ಸಂಬಂಧಿಸಿದಂತೆ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಈ ಯೋಜನೆಯ ಭೂ ಪರಿಹಾರದ ವಿಚಾರಗಳ ಕೆಲವೊಂದು ಗೊಂದಲಗಳು ಸೃಷ್ಟಿಯಾಗಿದ್ದವು. ಈ ಯೋಜನೆಗೆ ಭೂ ಪರಿಹಾರದ ಕುರಿತು ಭೂಮಾಲೀಕರೊಂದಿಗೆ ಡಿ.ಸಿ ಸಭೆ ನಡೆಸಿದ್ದು, ಭೂಮಿ ವಹಿವಾಟು ದರ ಆಧರಿಸಿ ಪರಿಹಾರ ಮೊತ್ತ ನಿಗದಿಗೆ ಜಿಲ್ಲಾಡಳಿತ ಮುಂದಾಗಿದೆ. ಅದರ ಸಂಪೂರ್ಣ ವಿವರ ಇಲ್ಲಿದೆ.
ಬೆಂಗಳೂರು ದಕ್ಷಿಣ ಜಿಲ್ಲೆ / ರಾಮನಗರ ತಾಲ್ಲೂಕಿನ ಬಿಡದಿ ಹೋಬಳಿಯ ಭೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಾಣವಾಗಲಿರುವ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಜಿಬಿಐಟಿ) ಯೋಜನೆಗೆ ಭೂಸ್ವಾಧೀನ ಪ್ರಕ್ರಿಯೆ ಚುರುಕುಪಡೆದುಕೊಂಡಿದೆ. ಈ ಯೋಜನೆಗೆ ಭೂ ಸ್ವಾಧೀನವಾಗಲಿರುವ ಭೂಮಿಗೆ ಇನ್ನೊಂದು ವಾರದ ಒಳಗಾಗಿ ಪರಿಹಾರ ದರ ನಿಗದಿ ಮಾಡುವುದಾಗಿ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರು ಹೇಳಿದ್ದಾರೆ.

ಬೆಂಗಳೂರು ನಂತರ ಬೆಂಗಳೂರಿನ ಸಮೀಪದ ವಿವಿಧ ಭಾಗದಲ್ಲಿ ಭೂಮಿ ಬೆಲೆಗೆ ಜಾಕ್ಪಾಟ್ ಸಿಕ್ಕಂತಾಗಿದೆ. ಅದರಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯೂ (ರಾಮನಗರ)ವೂ ಒಂದಾಗಿದೆ. ಜಿಬಿಐಟಿಗೆ ಸಂಬಂಧಿಸಿದಂತೆ ಯೋಜನಾ ಪ್ರದೇಶದ ಜಮೀನಿನ ಮಾಲೀಕರೊಂದಿಗೆ ಭೂ ಪರಿಹಾರದ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ವಿಶೇಷ ಸಭೆ ನಡೆದಿದ್ದು, ಇದರಲ್ಲಿ ಕೆಲವೊಂದು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಯೋಜನಾ ಪ್ರದೇಶದ 9 ಗ್ರಾಮಗಳಲ್ಲಿ ಜೆಎಂಸಿ / ಜಂಟಿ ಅಳತೆ ಪ್ರಮಾಣೀಕರಣ ಪ್ರಕ್ರಿಯೆಯನ್ನು 2026ರ ಮಾರ್ಚ್ ಮೊದಲ ವಾರದೊಳಗೆ ಮುಗಿಸಲು ಹಾಗೂ ತಿಂಗಳಾಂತ್ಯದೊಳಗೆ ಎಲ್ಲರಿಗೂ ಪರಿಹಾರ ಪಾವತಿ ಮಾಡುವುದಾಗಿ ಜಿಲ್ಲಾಡಳಿತದಿಂದ ಭರವಸೆ ಸಿಕ್ಕಂತಾಗಿದೆ.
ಇನ್ನು ಈ ಯೋಜನೆಗೆ ಕೇಂದ್ರ ಸರ್ಕಾರ 2013ರಲ್ಲಿ ಜಾರಿಗೆ ತಂದಿರುವ ಭೂ ಸ್ವಾಧೀನ ಪಾರದರ್ಶಕತೆ, ಸೂಕ್ತ ಪರಿಹಾರದ ಹಕ್ಕು, ಪುನರ್ವಸತಿ ಹಾಗೂ ಪುನರ್ ನಿರ್ಮಾಣ ಕಾಯ್ದೆ-2013 ಪ್ರಕಾರವೇ ಪರಿಹಾರ ಕೊಡಲಾಗುವುದು. ಇದು ಜಗತ್ತಿನಲ್ಲಿರುವ ಅತ್ಯಂತ ಅತ್ಯುತ್ತಮವಾದ ಕಾಯ್ದೆಯಾಗಿದೆ. ಎಸ್.ಆರ್ ಮೌಲ್ಯಕ್ಕೆ ಬದಲಾಗಿ ಭೂಮಿಯ ವಹಿವಾಟು ದರ ಆಧರಿಸಿ 3 ಪಟ್ಟು ಪರಿಹಾರ ಕೊಡಲಿದ್ದೇವೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ. ಅಲ್ಲದೇ ಸಿವಿಲ್ ಕಾಮಗಾರಿ ಸೇರಿದಂತೆ ಯೋಜನೆಯು 3 ವರ್ಷದಲ್ಲಿ ಪೂರ್ಣಗೊಳ್ಳಲಿದೆ. ಆ್ಯಪ್ ಆಧರಿಸಿ ನಿತ್ಯ 90 ಎಕರೆ ಜೆಎಂಸಿ ಜೊತೆಗೆ ಸಂಗ್ರಹಿಸಿದ ಅಂಕಿಅಂಶಗಳ ಮೌಲ್ಯಮಾಪನವೂ ನಡೆಯುತ್ತಿದ್ದು, ತ್ವರಿತವಾಗಿ ಬೇರೆಲ್ಲೂ ಜೆಎಂಸಿ ನಡೆದಿಲ್ಲ ಎಂದಿದ್ದಾರೆ.
ಶೇ.80% ರಷ್ಟು ಆಸ್ತಿ ಮಾಲೀಕರ ಅನುಮತಿ: ಇನ್ನು ಈ ಯೋಜನಾ ಪ್ರದೇಶದಲ್ಲಿ ಒಟ್ಟು 10,452 ಪ್ಲಾಟ್ಗಳಿದ್ದು, ಇದರಲ್ಲಿ 1,466 ಪ್ಲಾಟ್ಗಳ ಮಾಲೀಕರು ಮಾತ್ರ ಗುರುವಾರ ಲಿಖಿತವಾಗಿ ತಮ್ಮ ಆಕ್ಷೇಪಣೆ ಸಲ್ಲಿಕೆ ಮಾಡಿದ್ದಾರೆ. ಭೂ ಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ಸಂದರ್ಭದಲ್ಲಿ ಒಟ್ಟು 6,200 ಜಮೀನು ಮಾಲೀಕರಲ್ಲಿ ಪೈಕಿ 1,190 ಮಾಲೀಕರು ಈ ಯೋಜನೆಯನ್ನು ಕೈ ಬಿಡುವಂತೆ ಆಕ್ಷೇಪಣೆ ಸಲ್ಲಿಸಿದ್ದರು.
ಆಕ್ಷೇಪಣೆಗಳ ವಿಚಾರಣೆ ನಡೆಸಿದಾಗ ಅದರಲ್ಲಿ 240 ಜನ ಆಕ್ಷೇಪಣೆ ಹಿಂಪಡೆದು ಪರಿಹಾರ ಪಡೆಯಲು ಒಪ್ಪಿಕೊಂಡಿದ್ದಾರೆ. ಯೋಜನೆಗೆ ಇದೀಗ ಶೇ 80ರಷ್ಟು ಜನ ಒಪ್ಪಿಗೆ ಸೂಚಿಸಿದ್ದು, ಮುಂದಿನ ಪ್ರಕ್ರಿಯೆಯನ್ನು ನಾವು ಮುಂದುವರಿಸಲಿದ್ದೇವೆ ಎಂದು ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ತಿಳಿಸಿದ್ದಾರೆ.
ಈ ಮೂಲಕ ಈ ಭಾಗದಲ್ಲಿ ಆಸ್ತಿದಾರರಿಗೆ ಆಸ್ತಿ ಬೆಲೆ ಹೆಚ್ಚಳವಾಗುವ ನಿರೀಕ್ಷೆ ಮೂಡಿದೆ.












Click it and Unblock the Notifications