ಪ್ಲಾಸ್ಟಿಕ್ ಉತ್ಪನ್ನ ನಿಗ್ರಹಕ್ಕೆ ಶೇ.5ರಷ್ಟು ಹೆಚ್ಚುವರಿ ತೆರಿಗೆ ಹೇರಲು ಸರ್ಕಾರ ಚಿಂತನೆ
ಬೆಂಗಳೂರು, ಜೂನ್ 5: ಪರಿಸರದ ಮೇಲೆ ತೀವ್ರ ಹಾನಿ ಉಂಟು ಮಾಡುವ ಪ್ಲಾಸ್ಟಿಕ್ ಬಳಕೆ ತಡೆಗಟ್ಟಲು ಪ್ಲಾಸ್ಟಿಕ್ ವಸ್ತುಗಳ ಉತ್ಪನ್ನ ಮತ್ತು ಮಾರಾಟದ ಮೇಲೆ ಶೇಕಡಾ 5ರಷ್ಟು ತೆರಿಗೆ ವಿಧಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಹೆಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ಲಾಸ್ಟಿಕ್ ನಿಷೇಧ ಹೇರಿದ್ದರೂ ಅದರ ಬಳಕೆ ಪ್ರಮಾಣ ನಿರೀಕ್ಷಿತ ಮ ಟ್ಟದಲ್ಲಿ ಕಡಿಮೆಯಾಗಿಲ್ಲ. ಪ್ಲಾಸ್ಟಿಕ್ ಉತ್ಪನ್ನ, ಮಾರಾಟ ಮತ್ತು ಬಳಕೆ ನಿರ್ಬಂಧಿಸುವ ಅನೇಕ ಕಾನೂನುಗಳು ಜಾರಿಯಲ್ಲಿದ್ದರೂ ಪ್ಲಾಸ್ಟಿಕ್ ಬಳಕೆ ಮಾತ್ರ ಅವ್ಯಾಹಿತವಾಗಿ ಮುಂದುವರೆದಿದೆ.
ವಿಶ್ವ ಪರಿಸರ ದಿನ: ಪರಿಸರ ಸಂರಕ್ಷಣೆಗೆ ಧ್ವನಿ ಎತ್ತಿದ ನೇತಾರರು
ಇದಕ್ಕೆ ಕಡಿವಾಣ ಹಾಕಲು ಪ್ಲಾಸ್ಟಿಕ್ ವಸ್ತುಗಳ ಉತ್ಪನ್ನ ಹಾಗೂ ಮಾರಾಟದ ಪ್ರಮಾಣ ಕಡಿಮೆ ಮಾಡಲು ಹೆಚ್ಚುವರಿ ತೆರಿಗೆ ವಿಧಿಸುವುದರಿಂದ ಪ್ಲಾಸ್ಟಿಕ್ ಬಳಕೆ ನಿಯಂತ್ರಣಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಪರಿಸರದ ಸಂರಕ್ಷಣೆಗೆ ಅನೇಕ ಕಾನೂನುಗಳನ್ನು ಜಾರಿಗೆ ತಂದರು. ಪರಿಸರದ ಮೇಲಾಗುವ ದುಷ್ಪರಿಣಾಮವನ್ನು ಪೂರ್ಣಪ್ರಮಾಣದಲ್ಲಿ ತಡೆಯಲು ಇದುವರೆಗೂ ಸಾಧ್ಯವಾಗಿಲ್ಲ.
ಎಪ್ಪತ್ತು-ಎಂಬತ್ತರ ದಶಕಗಳಲ್ಲಿ ಬೆಂಗಳೂರು ಮಹಾ ನಗರದಲ್ಲಿ ಬೇಸಿಗೆ ಸಮಯದಲ್ಲಿಯೂ ಉಣ್ಣೆ ಬಟ್ಟೆಗಳನ್ನು ತೊಡಬೇಕಾದ ಸ್ಥಿತಿ ಇತ್ತು. ಇದೀಗ ಪರಿಸರ ಮಾಲಿನ್ಯದಿಂದ ಉಂಟಾಗಿರುವ ಕಲುಷಿತ ವಾತಾವರಣದಿಂದಾಗಿ ಅನೇಕ ರೋಗ ರುಜಿನಗಳು ಉಲ್ಬಣಗೊಂಡಿವೆ. ಹೀಗೆಯೇ ಮುಂದುವರೆದಲ್ಲಿ ಮುಂದಿನ ಜನಾಂಗಕ್ಕೆ ಶುದ್ಧವಾದ ಗಾಳಿ - ಶುದ್ಧವಾದ ನೀರು ದೊರೆಯುವುದೂ ಕಷ್ಟಕರವಾಗಲಿದೆ.
ಕೇವಲ ಸರ್ಕಾರದ ಇಲಾಖೆಗಳು ಹಾಗೂ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಮಾತ್ರವಲ್ಲದೆ, ಎಲ್ಲಾ ಸಾರ್ವಜನಿಕರೂ ಪರಿಸರ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಿದ್ದಲ್ಲಿ ಮಾತ್ರ ಮುಂದಿನ ಯುವ ಪೀಳಿಗೆಗಳಿಗೆ ಉಸಿರಾಡಲು ಶುದ್ಧವಾದ ಗಾಳಿ ಹಾಗೂ ಕುಡಿಯಲು ಪರಿಶುದ್ಧ ನೀರು ದೊರೆಯಲಿದೆ. ಮಾಲಿನ್ಯ ರಹಿತ ವಾತಾವರಣ ನಿರ್ಮಿಸಲು ಸಾಧ್ಯವಾಗುತ್ತದೆ ಎಂದು ಮುಖ್ಯಮಂತ್ರಿ ಅಭಿಪ್ರಾಯಪಟ್ಟರು.
ಅಭಿವೃದ್ಧಿ ಹೆಸರಿನಲ್ಲಿ ಒಂದೆಡೆ ಭೂಕಬಳಿಕೆಯಾಗಿ ಕೆರೆಗಳ ಗಾತ್ರ ಕಡಿಮೆಯಾಗುತ್ತಿದೆ. ಮತ್ತೊಂದೆಡೆ ನೂರಾರು ವರ್ಷ ವಯೋಮಾನದ ಮರಗಳ ಹನನವಾಗುತ್ತಿವೆ. ಇವೆಲ್ಲವೂ ನಮ್ಮ ಪರಿಸರದ ಮೇಲೆ ಭಾರೀ ದುಷ್ಪರಿಣಾಮ ಬೀರುತ್ತಿವೆ.
ಉಷ್ಣಾಂಶದಲ್ಲಿ ಏರಿಕೆ ಹಾಗೂ ಹವಾಮಾನದಲ್ಲಿ ಏರು-ಪೇರು ಉಂಟಾಗಲು ನಾವೇ ಕಾರಣರಾಗುತ್ತಿದ್ದೇವೆ. ಇಂತಹ ಸಂದರ್ಭಗಳಲ್ಲಿ ಅಗತ್ಯಕ್ಕಿಂತಲೂ ಹೆಚ್ಚು ಸಸ್ಯ ಸಂಪತ್ತು ನಾಶವಾಗದಂತೆ ಎಚ್ಚರ ವಹಿಸುವುದು ನಮ್ಮ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ.
ಪ್ರತಿವರ್ಷ ಪರಿಸರ ಸಂರಕ್ಷಣೆ ಹೆಸರಿನಲ್ಲಿ ಕೋಟ್ಯಾಂತರ ಸಸಿಗಳನ್ನು ನೆಟ್ಟಿರುವ ಬಗ್ಗೆ ಅರಣ್ಯ ಇಲಾಖೆ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಂಕಿ-ಅಂಶಗಳು ಕೇವಲ ಪುಸ್ತಕದ ದಾಖಲೆಗಳಾಗಿವೆ. ಪ್ರತಿಯೊಂದು ಮನೆಯಲ್ಲಿ ಒಂದು ಸಸಿಯನ್ನು ನೆಟ್ಟು ಅದನ್ನು ಮರವಾಗಿ ಬೆಳೆಸಲು ಪ್ರಾಮಾಣಿಕ ಪ್ರಯತ್ನ ಮಾಡುವುದು ಇಂದಿನ ಅಗತ್ಯ ಹಾಗೂ ಆಧ್ಯತೆಗಳಾಗಿವೆ. ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಅತ್ಯಾವಶ್ಯಕ ಎಂದು ಹೆಚ್ ಡಿ ಕುಮಾರಸ್ವಾಮಿ ಅವರು ರಾಜ್ಯದ ಜನತೆಯಲ್ಲಿ ಕಳಕಳಿಯ ಮನವಿ ಮಾಡಿದರು.
ಅಂತೆಯೇ, ಗುಡಿ ಕೈಗಾರಿಕೆಗಳಿಗೆ ಆಧ್ಯತೆ ನೀಡಿ, ಪರಿಸರ-ಸ್ನೇಹೀ ಉತ್ಪನ್ನಗಳ ಉತ್ಪಾದನೆಗೆ ಪ್ರೋತ್ಸಾಹಿಸಿ ಗ್ರಾಮೀಣ ಜನತೆಗೆ, ಅದರಲ್ಲೂ ವಿಶೇಷವಾಗಿ ರೈತರಿಗೆ, ಆರ್ಥಿಕ ಶಕ್ತಿ ತುಂಬಿ ಉದ್ಯೋಗ ಸೃಷ್ಠಿ ಹಾಗೂ ನಗರಗಳಿಗೆ ವಲಸೆ ಬರುವುದನ್ನು ತಡೆಗಟ್ಟಬೇಕು. ಸಮಾಜ ಮತ್ತು ನೀತಿ-ನಿರೂಪಕರು ಈ ನಿಟ್ಟಿನಲ್ಲಿ ಗಮನಹರಿಸಬೇಕು ಎಂದು ಮುಖ್ಯಮಂತ್ರಿ ಹಿತನುಡಿದರು.
ಶಾಸಕ ಡಾ ಸಿ ಎನ್ ಅಶ್ವಥನಾರಾಯಣ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಹಾಪೌರ ಸಂಪತ್ ರಾಜ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಲಕ್ಷ್ಮಣ್, ಹೆಸರಾಂತ ಚಿತ್ರ ನಟ ದರ್ಶನ್ ಅವರೂ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.