ಬರಪೀಡಿತ ಪ್ರದೇಶಗಳಲ್ಲಿ ಸರಕಾರದಿಂದ 'ಬೇಸಿಗೆ ಸಂಭ್ರಮ'
ರಾಜ್ಯ ಸರ್ಕಾರ ರಾಜ್ಯಾದ್ಯಂತ ಬೇಸಿಗೆಯ ಬಿಡುವಿನಲ್ಲೂ ಆಯ್ದ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಮಧ್ಯಾಹ್ನದ ಉಪಹಾರದ ಜೊತೆಗೆ “ಸ್ವಲ್ಪ ಓದು-ಸ್ವಲ್ಪ ಮೋಜು”ಆಧಾರಿತ ಬೇಸಿಗೆ ಸಂಭ್ರಮವನ್ನು ಆಯೋಜಿಸಿದೆ.
ಬೆಂಗಳೂರು, ಏಪ್ರಿಲ್ 18: ರಾಜ್ಯದಲ್ಲಿ ಬರದಿಂದಾಗಿ ನೀರಿನ ಬವಣೆ ಸಾಮಾನ್ಯವಾಗಿದೆ. ಬಯಲು ಸೀಮೆಗಳಲಂತೂ ಸಮಸ್ಯೆ ತೀವ್ರವಾಗಿದೆ. ಉತ್ತರ ಕರ್ನಾಟಕದಲ್ಲಿ ಬಿಸಿಲ ಧಗೆಯ ಪ್ರಮಾಣ ವರ್ಷದಿಂದ ವರ್ಷಕ್ಕೆ ಏರುತ್ತಲೇ ಇದೆ. ಇನ್ನು ಬೇಸಿಗೆಯಲ್ಲಂತೂ ಕೇಳೋದೇ ಬೇಡ. ಮಕ್ಕಳು ವೃದ್ಧರ ಪಾಡು ದೇವರಿಗೇ ಪ್ರೀತಿ.
ಇದನ್ನೆಲ್ಲಾ ಮನಗಂಡ ರಾಜ್ಯ ಸರ್ಕಾರ ರಾಜ್ಯಾದ್ಯಂತ ಬೇಸಿಗೆಯ ಬಿಡುವಿನಲ್ಲೂ ಆಯ್ದ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಮಧ್ಯಾಹ್ನದ ಉಪಹಾರದ ಜೊತೆಗೆ "ಸ್ವಲ್ಪ ಓದು-ಸ್ವಲ್ಪ ಮೋಜು"ಆಧಾರಿತ ಬೇಸಿಗೆ ಸಂಭ್ರಮವನ್ನು ಆಯೋಜಿಸಿದೆ. ಹಾಗಾಗಿ ರಾಜ್ಯದ ಸರ್ಕಾರಿ ಶಾಲೆಗಳ ಮಕ್ಕಳೀಗ ಶಾಲೆಯಲ್ಲೇ ಬೇಸಿಗೆ ರಜೆಯನ್ನು ಸ್ವಲ್ಪ ಓದು-ಸ್ವಲ್ಪ ಮೋಜಿನೊಂದಿಗೆ ಹಾಯಾಗಿ ಕಳೆಯಬಹುದು.[ಮೇ 10ರಂದು ಕರ್ನಾಟಕ ಎಸ್ಎಸ್ಎಲ್ ಸಿ ಫಲಿತಾಂಶ]
ಸರ್ಕಾರದ ಈ ನಡೆ ಬರಪೀಡಿತ ಪ್ರದೇಶಗಳಿಗಂತೂ ಆಶಾಕಿರಣವಾಗಿ ಪರಿಣಮಿಸಿದೆ. ಪೋಷಕರು ತಪ್ಪದೆ ತಮ್ಮ ಮಕ್ಕಳನ್ನು ಈ ಬಾರಿ ಈ ಬೇಸಿಗೆಯ ಸಂಭ್ರಮಕ್ಕೆ ಕಳುಹಿಸಿಕೊಡಿ ಎಂದು ಸರಕಾರ ಕೇಳಿಕೊಂಡಿದೆ. ಅಂದಹಾಗೆ ಈ ಬೇಸಿಗೆ ಸಂಭ್ರಮ ಕುರಿತು ಹಾವೇರಿ ಜಿಲ್ಲೆಯಿಂದ ವರದಿಯೊಂದು ಬಂದಿದೆ. ಅದರ ಸಂಪೂರ್ಣ ವಿವರ ಇಲ್ಲಿದೆ.[ಎರಡು ಕಂತಿನಲ್ಲಿ, 2 ಭಾಗವಾಗಿ ಪಠ್ಯಪುಸ್ತಕ ವಿತರಿಸಲು ಸರಕಾರದ ನಿರ್ಧಾರ]
ಅಜ್ಜಿ ಮನೆ, ನೆಂಟರ ಮನೆ ಇದ್ದಿದ್ದೇ..
ಬೇಸಿಗೆ ಸಂಭ್ರಮಕ್ಕೆ ಬಂದರೆ ಮಕ್ಕಳಿಗೆ ಒಳ್ಳೆಯ ವಿದ್ಯೆ ದಕ್ಕುತ್ತದೆ. ಹೊಸ ಕಲಿಕೆ ಪ್ರಾಪ್ತವಾಗುತ್ತದೆ. ಬೇಸಿಗೆ ರಜೆಗೆಂದು ಅಜ್ಜಿ ಮನೆಗೋ, ನೆಂಟರ ಮನೆಗೂ ಹೋಗೋದು ಪ್ರತಿ ವರ್ಷ ಇದ್ದದ್ದೇ. ಈ ಬಾರಿ ಬೇಸಿಗೆ ಸಂಭ್ರಮಕ್ಕೆ ಬನ್ನಿ ಎಂದು ಸರಕಾರ ಕೇಳಿಕೊಂಡಿದೆ.
ಸ್ವಲ್ಪ ಓದು-ಸ್ವಲ್ಪ ಮೋಜು
ಸರ್ಕಾರವು ಹಾವೇರಿ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿರುವುದರಿಂದ ಜಿಲ್ಲೆಯ ಎಲ್ಲ ಬ್ಲಾಕ್ಗಳ ಆಯ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮಧ್ಯಾಹ್ನದ ಉಪಹಾರ ಯೋಜನೆಯನ್ನು ಜಾರಿಗೆ ತಂದಿದೆ, ಜತೆಗೆ 2016-17ನೇ ಸಾಲಿನಲ್ಲಿ 5 ಮತ್ತು 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಂದರೆ 2017-18ನೇ ಸಾಲಿನಲ್ಲಿ 6 ಮತ್ತು 7ನೇ ತರಗತಿಗೆ ದಾಖಲಾಗುವ ಮಕ್ಕಳಿಗೆ "ಸ್ವಲ್ಪ ಓದು-ಸ್ವಲ್ಪ ಮೋಜು" ಆಧಾರಿತ ಬೇಸಿಗೆ ಸಂಭ್ರಮ ಕಲಿಕಾ ಯೋಜನೆಯ ಕಾರ್ಯಕ್ರಮವನ್ನು ಎಪ್ರಿಲ್ 17 ರಿಂದ ಮೇ 28ರವರೆಗೆ ಆಯೋಜಿಸಲಾಗಿದೆ.
300 ಶಾಲೆಗಳಲ್ಲಿ ಕಾರ್ಯಕ್ರಮ
ಜಿಲ್ಲೆಯಲ್ಲಿ ಈಗಾಗಲೇ 300 ಶಾಲೆಗಳನ್ನು ಗುರುತಿಸಿದ್ದು, ಪ್ರತಿ ಶಾಲೆಯ ಇಬ್ಬರು ಶಿಕ್ಷಕರಿಗೆ ತರಬೇತಿ ನೀಡಲಾಗಿದೆ ಹಾಗೂ ಕಲಿಕಾ ಸಾಮಗ್ರಿಗಳನ್ನು ಸರಬರಾಜು ಮಾಡಲಾಗಿದೆ. ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ಎಸ್.ಡಿ.ಎಂ.ಸಿ.ಸದಸ್ಯರು ಹಾಗೂ ಪೋಷಕರು ಈ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಡಯಟ್ ಪ್ರಾಂಶುಪಾಲರು ಕೋರಿದ್ದಾರೆ.
ಇವರನ್ನು ಸಂಪರ್ಕಿಸಿ
ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಬೇಕು ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಶಾಲಾ ಮುಖ್ಯ ಶಿಕ್ಷಕರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಉತ್ತಮ ಯೋಜನೆ
ಕರ್ನಾಟಕದ ಹೆಚ್ಚಿನ ತಾಲೂಕುಗಳಲ್ಲಿ ಈ ಬಾರಿ ಬರಗಾಲವಿದೆ. ಹಲವು ಕಡೆಗಳಲ್ಲಿ ಜಾನುವಾರುಗಳಿಗೆ ತಿನ್ನಲು ಮೇವಿಲ್ಲ. ಈ ಸಂದರ್ಭದಲ್ಲಿ ಸರಕಾರ ಮಕ್ಕಳಿಗೆ ಹೊಟ್ಟೆ ತುಂಬಿಸಲು ಬೇಸಿಗೆ ಸಂಭ್ರಮ ಹಮ್ಮಿಕೊಂಡಿದ್ದು ನಿಜಕ್ಕೂ ಶ್ಲಾಘನೀಯ.