ಭದ್ರತಾ ಕೋರ್ಸ್ಗಳಿಗಾಗಿಯೇ ರಾಜ್ಯದಲ್ಲಿ ಹೊಸ ವಿಶ್ವವಿದ್ಯಾಲಯ
ಬೆಂಗಳೂರು, ಅಕ್ಟೋಬರ್ 13: ಭದ್ರತಾ ಕೋರ್ಸ್ಗಳಿಗಾಗಿಯೇ ರಾಜ್ಯದಲ್ಲಿ ಹೊಸ ವಿಶ್ವವಿದ್ಯಾಲಯವನ್ನು ತೆರೆಯಲಾಗುತ್ತಿದೆ. ಇದಕ್ಕೆ ನವೆಂಬರ್ 1ರಂದು ಚಾಲನೆ ದೊರೆಯಲಿದೆ.
ಎಟಿಎಂ, ಸರ್ಕಾರಿ ಕಚೇರಿ, ವಾಣಿಜ್ಯ ಸಮುಚ್ಛಯ ಭದ್ರತಾ ಸಿಬ್ಬಂದಿಗಳ ನೇಮಕಕ್ಕೆ ಇನ್ನುಮುಂದೆ ಈ ಕೋರ್ಸ್ ಕಡ್ಡಾಯವಾಗಿರಲಿದೆ. ಹೀಗಾಗಿ ತಾಯಿನಾಡು ಭದ್ರತಾ ವಿಶ್ವವಿದ್ಯಾಲಯವನ್ನು ತೆರೆಯಲಾಗುತ್ತಿದೆ.
ಎಟಿಎಂನಲ್ಲಿ ಕಳ್ಳತನ, ವಾಣಿಜ್ಯ ಸಮುಚ್ಛಯಗಳಲ್ಲಿ ಇಂತಹ ಸ್ಥಳಗಳಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಹೀಗಾಗಿ ಭದ್ರತಾ ಸಿಬ್ಬಂದಿಗಳಿಗೆ ತರಬೇತಿ ನೀಡುವುದು ಅನಿವಾರ್ಯವೂ ಆಗಿದೆ. ನವೆಂಬರ್ 1 ಕನ್ನಡ ರಾಜ್ಯೋತ್ಸವ ದಿನ ಚಾಲನೆ ನೀಡಲಾಗುತ್ತದೆ.
ಎಸ್ಸೆಸ್ಸೆಲ್ಸಿ, ಪಿಯುಸಿ ಹಂತದಲ್ಲೇ ವಿದ್ಯಾಭ್ಯಾಸ ತೊರೆದ ಯುವಕರಿಗೆ ಉದ್ಯೋಗ ಕಲ್ಪಿಸುವುದು ಒಂದು ಉದ್ದೇಶವಾಗಿದೆ. ವಿಶೇಷವೆಂದರೆ ಉದ್ದೇಶಿತ ಹೋಮ್ಲ್ಯಾಂಡ್ ಸೆಕ್ಯುರಿಟಿ ಯೂನಿವರ್ಸಿಟಿ ಮುಖ್ಯಸ್ಥರು, ತರಬೇತುದಾರರು ಸೇರಿ ಎಲ್ಲ ಹುದ್ದೆಗಳಿಗೆ ಮಾಜಿ ಯೋಧರನ್ನೇ ನೇಮಕ ಮಾಡಲು ಸರ್ಕಾರ ಮುಂದಾಗಿದೆ. ಈ ಸಾಲಿನ ಬಜೆಟ್ ನಲ್ಲಿ ಪ್ರಕಟಿಸಿದಂತೆ ಈ ವಿಶ್ವವಿದ್ಯಾಲಯ ಸ್ಥಾಪನೆ ಸಂಬಂಧ ಮುಂದಿನ ಸಚಿವ ಸಂಪುಟ ಸಭೆಯ ಅನುಮೋದನೆ ಪಡೆದು ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತದೆ.

ಭದ್ರತಾ ಸಿಬ್ಬಂದಿಗೆ ಏನೇನು ತರಬೇತಿ
ಭದ್ರತಾ ಸಿಬ್ಬಂದಿಗಳಿಗೆ ವಾಹನ ಚಾಲನೆ, ಪ್ರಥಮ ಚಿಕಿತ್ಸೆ ನೀಡುವುದು, ಲಿಫ್ಟ್ ಕೆಟ್ಟ ಸಂದರ್ಭದಲ್ಲಿ ಒಳಗೆ ಸಿಲುಕಿದವರನ್ನು ರಕ್ಷಣೆ, ನೀರಿನ ಸಂಪ್ನಲ್ಲಿ ಸಿಲುಕಿದವರ ರಕ್ಷಿಸಿ ಪ್ರಾಥಮಿಕ ಚಿಕಿತ್ಸೆ ನೀಡುವುದು, ಶಾರ್ಟ್ ಸರ್ಕ್ಯೂಟ್ ಮತ್ತಿತರೆ ವಿದ್ಯುತ್ ಅವಘಡ ಸಂದರ್ಭದಲ್ಲಿ ತಕ್ಷಣ ಪ್ರತಿಕ್ರಿಯಿಸುವ ಬಗ್ಗೆ ತರಬೇತಿ ನೀಡಲಾಗುತ್ತದೆ. ರಾಜ್ಯಾದ್ಯಂತ ವಿಶೇಷವಾಗಿ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಭದ್ರತಾ ಸಿಬ್ಬಂದಿ ಕೆಲಸಕ್ಕೆ ಸಾಕಷ್ಟು ಅವಕಾಶಗಳಿರುತ್ತವೆ. ಈ ಅವಕಾಶಗಳು ಹೊರರಾಜ್ಯದವರ ಪಾಲಾಗುತ್ತದೆ. ಸೆಕ್ಯುರಿಟಿ ಉಡುಗೆ ಧರಿಸುತ್ತಾರೆ ಎಂಬುದರ ಹೊರತಾಗಿ ಯಾವುದೇ ಕೌಶಲ್ಯಗಳಿರುವುದಿಲ್ಲ, ಭದ್ರತೆಗಾಗಿ ಸೇರಿಕೊಳ್ಳುವವರ ಬಗ್ಗೆ ವಿಶ್ವಾಸವೂ ಕೂಡ ಇರುವುದಿಲ್ಲ, ಹೀಗಾಗಿ ವಿಶ್ವವಿದ್ಯಾಲಯದಲ್ಲಿ ಪ್ರಾಮಾಣಿಕರಿಸಿ ತರಬೇತಿ ಪಡೆದವರ ನೇಮಕ ಸೂಕ್ತ ಹಾಗೂ ಪೂರ್ವಾಪರ ಮಾಹಿತಿಗಳು ಲಭ್ಯವಿರುತ್ತದೆ.

ತರಬೇತಿಗೆ ಪೊಲೀಸ್, ಅಗ್ನಿಶಾಮಕ ಸಿಬ್ಬಂದಿ ನೆರವು
ಈ ತರಬೇತಿಗೆ ಪೊಲೀಸ್ ತರಬೇತಿ ಸಂಸ್ಥೆ, ಅತ್ನಿಶಾಮಕ ದಳ ಮತ್ತಿತರೆ ಸಂಸ್ಥೆಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ. ಸ್ಥಳೀಯ ಭಾಷೆ ಜತೆಗೆ ಇಂಗ್ಲಿಷ್, ಹಿಂದಿ ಮತ್ತಿತರೆ ಭಾಷೆಯಲ್ಲಿ ವ್ಯವಹರಿಸುವ ತಿಳಿವಳಿಕೆಯನ್ನು ಮೂಡಿಸಲಾಗುತ್ತದೆ.

ಅಬಲೆಯರಿಗೂ ಅವಕಾಶ ಲಭ್ಯ
ವಿಧವೆಯರು, ವಿವಾಹ ವಿಚ್ಛೇದನ ಪಡೆದವರು ಹಾಗೂ ಕೌಟುಂಬಿಕ ಕಲಹ ಮತ್ತಿತರೆ ಕಾರಣಗಳಿಂದ ಬಹುಕು ನಿರ್ವಹಣೆ ಮಾಡಲಾಗದ ಸ್ಥಿತಿಯಲ್ಲಿರುವವರಿಗೆ ಅವಕಾಶ ನೀಡಲಾಗುತ್ತದೆ. ಪಿಜಿಗಳಲ್ಲಿ ಅಡುಗೆ ಮತ್ತಿತರೆ ತರಬೇತಿ ನೀಡಿ ಉದ್ಯೋಗ ಸೃಷ್ಟಿಸಿಕೊಡಲಾಗುತ್ತದೆ.

ವರ್ಷಕ್ಕೆ ಹತ್ತು ಸಾವಿರ ಮಂದಿಗೆ ತರಬೇತಿ
ಗ್ರಾಮೀಣ ಭಾಗದ ಎಸ್ಸೆಸ್ಸೆಲ್ಸಿ, ಪಿಯುಸಿ ಹಂತದಲ್ಲೇ ವ್ಯಾಸಂಗ ತೊರೆದು ಉದ್ಯೋಗಕ್ಕಾಗಿ ನಗರಕ್ಕೆ ವಲಸೆ ಬಂದಿರುವ ಹತ್ತು ಸಾವಿರ ಜನರಿಗೆ ಪ್ರತಿ ವರ್ಷ ತರಬೇತಿ ನೀಡುವ ಗುರಿಯನ್ನು ಹೊಂದಲಾಗಿದೆ. ಈ ಉದ್ದೇಶಕ್ಕೆ ಮೊದಲು ಚನ್ನಪಟ್ಟಣದ ಪೊಲೀಸ್ ಟ್ರೈನಿಂಗ್ ಸ್ಕೂಲ್ ನ ಸ್ವಲ್ಪ ಭಾಗವನ್ನು ಆಯ್ದುಕೊಳ್ಳಲಾಗುತ್ತದೆ.











Click it and Unblock the Notifications