ಅಗ್ನಿ ಸುರಕ್ಷತಾ ನಿಯಮ ಪಾಲನೆ ಮಾಡದಿದ್ದರೆ ಶಾಲಾ ಮಾನ್ಯತೆ ನವೀಕರಣವಿಲ್ಲ!
ಬೆಂಗಳೂರು, ಡಿ. 24: ನೂತನವಾಗಿ ಆರಂಭವಾಗುವ ಶಾಲೆಗಳಿಗೆ ವಿಧಿಸಿರುವ ಅಗ್ನಿ ಸುರಕ್ಷತೆ ಮತ್ತು ಕಟ್ಟಡ ಸ್ಥಿರತೆ ಷರತ್ತುಗಳನ್ನು ಹಳೆಯ ಖಾಸಗಿ ಶಾಲೆಗಳೂ ಸಹ ಪಾಲಿಸಬೇಕು. ಒಂದು ವೇಳೆ ಪಾಲನೆ ಆಗದಿದ್ದರೆ ಶಾಲೆಯ ನವೀಕರಣ ರದ್ದು ಮಾಡಲಾಗುತ್ತದೆ ಎಂದು ಶಿಕ್ಷಣ ಇಲಾಖೆ ಎಚ್ಚರಿಕೆ ನೀಡಿದೆ.
ಸರ್ಕಾರಿ ಶಾಲೆಗಳನ್ನು ಹೊರಗಿಟ್ಟು ಕೇವಲ ಅನುದಾನ ರಹಿತ ಖಾಸಗಿ ಶಾಲೆಗಳಿಗೆ ಅನ್ವಯವಾಗುವಂತೆ ಅಗ್ನಿ ಸುರಕ್ಷತೆ ಮತ್ತು ಕಟ್ಟಡ ಸ್ಥಿರತೆ ನಿಯಮ ಪಾಲನೆಗೆ ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶ ಹಳೇ ಖಾಸಗಿ ಶಾಲೆಗಳ ಪಾಲಿಗೆ ಮರಣ ಶಾಸನವಾಗುವ ಲಕ್ಷಣ ಗೋಚರಿಸುತ್ತಿದೆ.
ಸುಪ್ರೀಂಕೋರ್ಟ್ ಆದೇಶ ಮುಂದಿಟ್ಟುಕೊಂಡು ರಾಜ್ಯ ಸರ್ಕಾರ ಶಾಲೆಗಳ ಸುರಕ್ಷತೆ ಹೆಸರಿನಲ್ಲಿ ಕೆಲವು ಕಠಿಣ ನಿಯಮಗಳನ್ನು ರೂಪಿಸಿದೆ. ನೂತನವಾಗಿ ಪ್ರಾರಂಭವಾಗುವ ಶಾಲೆಗಳಿಗೆ ವಿಧಿಸಿರುವ ಗರಿಷ್ಠ ಷರತ್ತುಗಳನ್ನು ಈ ಹಿಂದೆ ಅಂದಿನ ಶಿಕ್ಷಣ ನಿಯಮಗಳಿಗೆ ಅನುಸಾರ ಆರಂಭವಾಗಿರುವ ಖಾಸಗಿ ಶಾಲೆಗಳು ಪಾಲಿಸಲೇಬೇಕು ಎಂದು ಸರ್ಕಾರ ಕಟ್ಟುನಿಟ್ಟಾಗಿ ಸೂಚಿಸಿದೆ. ನಿಯಮ ಪಾಲನೆ ವೀಕ್ಷಣೆಗಾಗಿ ಶಿಕ್ಷಣ ಇಲಾಖೆಯ ಅಧೀನದ ಶಾಲೆಗಳಿಗೆ ಲೋಕೋಪಯೋಗಿ ಮತ್ತು ಅಗ್ನಿ ಶಾಮಕ ಇಲಾಖೆಗಳೂ ಕಾಲಿಡಲಿವೆ. ಮಾತ್ರವಲ್ಲ, ದಶಕಗಳ ಹಿಂದಿನಿಂದಲೂ ಶಿಕ್ಷಣ ಕೊಡುತ್ತಿರುವ ಖಾಸಗಿ ಶಾಲೆಗಳು ಅನಧಿಕೃತ ಪಟ್ಟಿಗೆ ಸೇರಲಿವೆ.
ಅನುದಾನ ರಹಿತ ಖಾಸಗಿ ಶಾಲೆಗಳಿಗೆ ಅಗ್ನಿ ಸುರಕ್ಷತಾ ನಿಯಮ ಸಡಿಲಿಕೆ ಮಾಡುವ ಸಂಬಂಧ ಬೆಳಗಾವಿ ಅಧಿವೇಶನದಲ್ಲಿ ದೊಡ್ಡ ಕೋಲಾಹಲ ಎಬ್ಬಿಸಿತ್ತು. ಅಗ್ನಿ ಸುರಕ್ಷತಾ ನಿಯಮ ಮತ್ತು ಲೋಕೋಪಯೋಗಿ ಸ್ಥಿರತೆ ಪ್ರಮಾಣ ಪತ್ರ ಷರತ್ತು ಸಡಿಲಿಕೆ ಸಂಬಂಧ ಶಿಕ್ಷಣ ಸಚಿವರು ಭರವಸೆ ನೀಡಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಒಂದು ವರ್ಷದ ಮಟ್ಟಿಗೆ ಸರಳೀಕರಣ ಮಾಡಲು ಹೇಳಿದ್ದಾರೆ. ಅಗ್ನಿ ಸುರಕ್ಷತೆ ಮತ್ತು ಲೋಕೋಪಯೋಗಿ ಕಟ್ಟಡ ಸ್ಥಿರತೆ ಕುರಿತ ವಾಸ್ತವ ನಿಯಮ ಅರಿತಂತೆ ಕಾಣುತ್ತಿಲ್ಲ. ಸರ್ಕಾರಿ ಶಾಲೆಗಳಿಗೆ ಅಗ್ನಿ ಸುರಕ್ಷತಾ ನಿಯಮ ಪಾಲನೆ ಪ್ರಸ್ತಾಪ ಕೇಳಿ ಬಂದ ಕೂಡಲೇ ಆರ್ಟಿಓ ಏಜೆಂಟರನ್ನು ಮೀರಿಸುವಂತಹ ಏಜೆಂಟರು ಅದಾಗಲೇ ಹುಟ್ಟುಕೊಂಡಿದ್ದಾರೆ.
ಅಗ್ನಿ ಸುರಕ್ಷತೆ ಬಗ್ಗೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸಡಿಲಿಕೆ ಪ್ರಸ್ತಾಪ ಮಾಡಿ, ಬಹುತೇಕ ಸರ್ಕಾರಿ ಶಾಲೆಗಳು ಒಂದೇ ಮಹಡಿ ಹೊಂದಿದ್ದು, ಅಲ್ಲಿ ಅಗ್ನಿ ಅವಘಡ ಜರುಗುವುದಿಲ್ಲ ಎಂಬ ಅರ್ಥದಲ್ಲಿ ಸ್ಪಷ್ಟೀಕರಣ ನೀಡಿದ್ದಾರೆ. ಸರ್ಕಾರಿ ಶಾಲೆಗಳ ಕಟ್ಟಡ ಸ್ಥಿರತೆ ಕುರಿತು ಲೋಕೋಪಯೋಗಿ ಇಲಾಖೆ ಷರತ್ತುಗಳನ್ನು ಸರ್ಕಾರಿ ಶಾಲೆಗಳು ಪಾಲಿಸಲು ಸಾಧ್ಯವೇ ? ಅಥವಾ ಎಲ್ಲಾ ಸರ್ಕಾರಿ ಶಾಲೆಗಳು ಕಟ್ಟಡ ಸ್ಥಿರತೆ ಪ್ರಮಾಣ ಪತ್ರ ಪಡೆದಿವೆಯೇ ಎಂಬುದನ್ನು ಶಿಕ್ಷಣ ಮಂತ್ರಿ ಬಿ.ಸಿ ನಾಗೇಶ್ ಸ್ಪಷ್ಟಪಡಿಸಬೇಕಿದೆ.

ಏನಿದು ನಿಯಮ
ಶಾಲೆಯೊಂದರ ಅಗ್ನಿ ಅವಘಡ ಉಲ್ಲೇಖಿಸಿ ಸುಪ್ರೀಂಕೋರ್ಟ್ 2009 ರಲ್ಲಿ ಅಗ್ನಿ ಸುರಕ್ಷತೆ ಮತ್ತು ಕಟ್ಟಡ ಸ್ಥಿರತೆ ಕುರಿತು ಕಟ್ಟು ನಿಟ್ಟಿನ ನಿಯಮ ರೂಪಿಸುವಂತೆ ಸೂಚಿಸಿತ್ತು. ಅದರ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅಗ್ನಿ ಸುರಕ್ಷತೆ ಮತ್ತು ಕಟ್ಟಡ ಸ್ಥಿರತೆ ಕುರಿತು ಶಾಲೆಗಳು ಪಾಲಿಸಬೇಕಾದ ಷರತ್ತುಗಳನ್ನು ರೂಪಿಸಲಾಗಿದೆ. ದಶಕಗಳ ಹಿಂದಿನಿಂದ ಆರಂಭವಾಗಿವ ಶಾಲೆಗಳಿಗೆ ಕನಿಷ್ಠ ನಿಯಮ ಪಾಲನೆಗೆ ಅವಕಾಶ ಕೊಟ್ಟಿಲ್ಲ. ಬದಲಿಗೆ ಹೊಸದಾಗಿ ನಿರ್ಮಿಸುವ ಶಾಲೆಗಳು ಪಾಲಿಸಬೇಕಾದ ನಿಯಮಗಳನ್ನೇ ಹಳೇ ಶಾಲೆಗಳು ಪಾಲಿಸಬೇಕೆಂಬ ನಿಯಮಗಳನ್ನು ರೂಪಿಸಲಾಗಿದೆ. ಯಾವ ಶಾಲೆ ಅಗ್ನಿ ಸುರಕ್ಷೆತೆ ಮತ್ತು ಕಟ್ಟಡ ಸ್ಥಿರತೆ ಕುರಿತು ಪ್ರಮಾಣ ಪತ್ರ ಪಡೆಯುವುದಿಲ್ಲವೋ ಆ ಶಾಲೆಗಳ ಮಾನ್ಯತೆ ನವೀಕರಣ ಮಾಡದಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕಳೆದ ಮೂರು ವರ್ಷದಿಂದ ಈ ನಿಯಮ ಜಾರಿಗೆ ತರಲು ಸರ್ಕಾರ ಹರ ಸಾಹಸ ಮಾಡುತ್ತಿದ್ದು, ಕೊರೊನಾ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷ ಸಡಿಲಿಕೆ ನೀಡಲಾಗಿತ್ತು. ಇದೀಗ ಪುನಃ ಶಿಕ್ಷಣ ಇಲಾಖೆ ಅಗ್ನಿ ಸುರಕ್ಷತೆ ಮತ್ತು ಕಟ್ಟಡ ಸ್ಥಿರತೆ ನಿಯಮ ಪಾಲಿಸಿ ಪ್ರಮಾಣ ಪತ್ರ ಪಡೆಯುವುದನ್ನು ಕಡ್ಡಾಯಗೊಳಿಸಲು ಶಿಕ್ಷಣ ಇಲಾಖೆ ಮುಂದಾಗಿದೆ.

ಷರತ್ತುಗಳೇನು?
ನೂತನವಾಗಿ ಅರಂಭವಾಗುವ ಶಾಲೆಯ ಸುತ್ತಲೂ ಎಂಟು ಮೀಟರ್ ನಷ್ಟು ರಸ್ತೆ ಬಿಟ್ಟಿರಬೇಕು. ಶಾಲೆಯ ಮೇಲೆ 10 ಸಾವಿರ ಲೀಟರ್ ವಾಟರ್ ಟ್ಯಾಂಕ್ ಇರಬೇಕು. ಶಾಲೆಗೆ ಎಂಟ್ರಿ - ಮತ್ತು ಎಕ್ಸಿಟ್ ಗೇಟ್ ಇರಬೇಕು. ಶಾಲೆಯ ಒಳಗೆ ಅಗ್ನಿ ಶಾಮಕ ವಾಹನ ಓಡಾಡುಂತಿರಬೇಕು. ಶಾಲಾ ಕೊಠಡಿಗಳಲ್ಲಿ ಅಗ್ನಿ ನಂದಕಗಳನ್ನು ಅಳವಡಿಸಬೇಕು. ಇನ್ನು ಕಟ್ಟಡ ಸ್ಥಿರತೆ ಕುರಿತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕಟ್ಟಡ ಪರಿಶೀಲಿಸಿ ಸ್ಥಿರತೆ ಪ್ರಮಾಣ ಪತ್ರ ನೀಡಬೇಕು ಎಂಬ ಷರತ್ತುಗಳನ್ನು ಪಾಲಿಸಬೇಕು.

ನೂತನ ಶಾಲೆಗಳಿಗೆ ಅನ್ವಯ
ರಾಜ್ಯದಲ್ಲಿ ನೂತನವಾಗಿ ಅರಂಭವಾಗುವ ಶಾಲೆಗಳಿಗೆ ಇಂತಿಷ್ಟು ಜಾಗದಲ್ಲಿ ಶಾಲೆ ಕಟ್ಟಬೇಕು ಎಂಬ ನಿಯಮ ರೂಪಿಸಲಾಗಿದೆ. ಅ ನಿಯಮಗಳಿಗೆ ಅನುಗುಣವಾಗಿ ನೂತನವಾಗಿ ಆರಂಭವಾಗುವ ಶಾಲೆಗಳು ಈ ಷರತ್ತುಗಳನ್ನು ಪಾಲಿಸಬಹುದು. ಆದರೆ, ಹಲವು ದಶಕಗಳಿಂದ ಅಂದು ಜಾರಿಯಲ್ಲಿದ್ದ ನಿಯಮಗಳಿಗೆ ಅನುಗುಣವಾಗಿ ಅರಂಭವಾಗಿರುವ ಶೇ. 90 ರಷ್ಟು ಶಾಲೆಗಳು ಈ ಷರತ್ತುಗಳನ್ನು ಪೂರೈಸಲು ಸಾಧ್ಯವಿಲ್ಲ. ಕೆಲವು ಶಾಲೆಗಳು ಕೃಷಿ ಜಾಗದಲ್ಲಿ ನಿರ್ಮಾಣವಾದರೆ, ಇನ್ನೂ ಕೆಲವು ಶಾಲೆಗಳ ಜಾಗ ಬಿ ಖಾತೆ ಹೊಂದಿವೆ. ಇನ್ನೂ ಕೆಲವು ಶಾಲೆಗಳು ಬಾಡಿಗೆ ಕಟ್ಟಡದಲ್ಲಿ ಚಾಲ್ತಿಯಲ್ಲಿವೆ. ಅಂದಿನ ನಿಯಮಗಳ ಅನ್ವಯ ರೂಪಗೊಂಡಿರುವ ಶೇ. 90 ರಷ್ಟು ಶಾಲೆಗಳು ನೂತನ ಶಾಲೆಗಳು ಪಾಲಿಸೇಬೇಕಾದ ಗರಿಷ್ಠ ನಿಯಮಗಳನ್ನು ಪಾಲಿಸಲು ಸಾಧ್ಯವಿಲ್ಲ.
ಆದರೆ, ಈ ವಾಸ್ತವ ಅರಿತು ಕನಿಷ್ಠ ಅಗ್ನಿ ಸುರಕ್ಷತಾ ಮತ್ತು ಕಟ್ಟಡ ಸುರಕ್ಷತಾ ನಿಯಮಗಳನ್ನು ರೂಪಿಸಿ ಅವನ್ನು ಪಾಲಿಸುವಂತೆ ಸರ್ಕಾರ ಮಹತ್ವದ ಹೆಜ್ಜೆ ಇಡಬೇಕಿತ್ತು. ಅದ್ಯಾವುದನ್ನು ರೂಪಿಸದೇ ನೂತನ ಶಾಲೆಗಳು ಪಾಲಿಸಬೇಕಾದ ನಿಯಮಗಳನ್ನೇ ಹಳೆಯ ಶಾಲೆಗಳೂ ಪಾಲಿಸಬೇಕು ಎಂದು ಪಟ್ಟು ಹಿಡಿದು ಕೂತಿದೆ. ಇದರಿಂದ ಹಲವಾರು ದಶಕಗಳಿಂದ ಶಿಕ್ಷಣ ಒದಗಿಸುತ್ತಿರುವ ಖಾಸಗಿ ಶಾಲೆಗಳು ಈ ನಿಯಮ ಪಾಲಿಸಲು ಆಗದೇ ವಾಮ ಮಾರ್ಗ ಹಿಡಿದು ಸರ್ಟಿಫಿಕೇಟ್ ಪಡೆಯುವ ಹಾದಿ ಹಿಡಿಯಬೇಕಾದ ಅನಿವಾರ್ಯತೆ ಸೃಷ್ಠಿಯಾಗಿದೆ. ಈ ಹಿಂದೆ ಪ್ರಾರಂಭವಾಗಿರುವ ಶಾಲೆಗಳಿಗೆ ಅನ್ವಯ ಆಗುವಂತೆ ಕನಿಷ್ಠ ಅಗ್ನಿ ಸುರಕ್ಷತಾ ನಿಯಮ ರೂಪಿಸದೇ ಎಡವಟ್ಟು ಮಾಡಿದೆ.

ಸರ್ಕಾರಿ ಶಾಲೆಗಳಿಗೆ ಅನ್ವಯವಿಲ್ಲ
ರಾಜ್ಯ ಸರ್ಕಾರ ಖಾಸಗಿ ಅನುದಾನ ರಹಿತ ಶಾಲೆಗಳ ಪಾಲನೆಗೆ ರೂಪಿಸಿರುವ ಕಟ್ಟಡ ಸುರಕ್ಷತೆ ಮತ್ತು ಅಗ್ನಿ ಸುರಕ್ಷತೆ ನಿಯಮಗಳ ಪಾಲನೆ ಷರತ್ತಿನಿಂದ ಸರ್ಕಾರಿ ಶಾಲೆಗಳನ್ನು ಹೊರಗಿಡಲಾಗಿದೆ. ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಈವರೆಗೂ ಯಾವುದೇ ಅಗ್ನಿ ಸುರಕ್ಷತೆ ಮತ್ತು ಕಟ್ಟಡ ಸ್ಥಿರತೆ ಸುರಕ್ಷತಾ ನಿಯಮ ರೂಪಿಸಿರಲಿಲ್ಲ. ಹೀಗಾಗಿ ಯಾವ ಸರ್ಕಾರಿ ಶಾಲೆಯೂ ಪಾಲನೆ ಮಾಡಿಲ್ಲ. ಇದು ಮನಗೊಂಡ ಸರ್ಕಾರ ಸರ್ಕಾರಿ ಶಾಲೆಗಳನ್ನು ಈ ಷರತ್ತುಗಳ ಪಾಲನೆಯಿಂದ ಹೊರಗಿಟ್ಟಿದೆ. ಅನುದಾನ ರಹಿತ ಖಾಸಗಿ ಶಾಳೆಗಳಿಗೆ ಸೀಮಿತಗೊಳಿಸಿ ಈ ನಿಯಮ ಪಾಲನೆಗೆ ಒತ್ತಡ ಹೇರುತ್ತಿದೆ.
1995 ರ ಶಿಕ್ಷಣ ಕಾಯ್ದೆ ಪ್ರಕಾರ ಸರ್ಕಾರದ ಯಾವುದೇ ನಿಯಮಗಳು ಖಾಸಗಿ ಮತ್ತು ಸರ್ಕಾರ ಎಂದು ತಾರತಮ್ಯ ಮಾಡುವಂತಿಲ್ಲ. ಅದರ ಪ್ರಕಾರ ಸರ್ಕಾರದ ಅಗ್ನಿ ಸುರಕ್ಷತಾ ಮತ್ತು ಕಟ್ಟಡ ಸುರಕ್ಷತಾ ನಿಯಮಗಳನ್ನು ಸರ್ಕಾರಿ ಶಾಲೆಗಳು ಪಾಲಿಸಲೇಬೇಕು. ಬಹುತೇಕ ಶೇ. 90 ರಷ್ಟು ಸರ್ಕಾರಿ ಶಾಲೆಗಳು ಕೂಡ ಪಾಲಿಸಲಾಗದಂತಹ ಷರತ್ತುಗಳನ್ನು ವಿಧಸಿಲಾಗಿದೆ. ಇದನ್ನು ಅರಿತು ಸರ್ಕಾರ ಕನಿಷ್ಠ ಅಗ್ನಿ ಸುರಕ್ಷತಾ ನಿಯಮ ರೂಪಿಸಿ ಪಾಲನೆಗೆ ಸೂಚಿಸಬೇಕಿತ್ತು. ಅದರ ಬದಲಿಗೆ ಅನುದಾನ ರಹಿತ ಖಾಸಗಿ ಶಾಲೆಗಳಿಗೆ ಮಾತ್ರ ಅನ್ವಯ ವಾಗುವಂತೆ ನಿಯಮ ರೂಪಿಸಿ ಪಾಲನೆಗೆ ಹೇಳುವ ಮೂಲಕ ಸರ್ಕಾರವೇ ಶಿಕ್ಷಣ ಕಾಯ್ದೆ ಉಲ್ಲಂಘನೆ ಮಾಡುತ್ತಿದೆ.

ಖಾಸಗಿ ಶಿಕ್ಷಣ ಸಂಸ್ಥೆಗಳ ಆಗ್ರಹ
ಈ ಹಿಂದೆ ಪ್ರಾರಂಭವಾಗಿರುವ ಶಾಲೆಗಳು ನೂತನ ಶಾಲೆಗಳಿಗೆ ವಿಧಿಸಿರುವ ಗರಿಷ್ಠ ಅಗ್ನಿ ಸುರಕ್ಷತಾ ಮತ್ತು ಕಟ್ಟಡ ಸ್ಥಿರತೆ ನಿಯಮ ಪಾಲನೆ ಮಾಡಲು ಸಾಧ್ಯವಿಲ್ಲ. ಕನಿಷ್ಠ ಸುರಕ್ಷತಾ ನಿಯಮ ರೂಪಿಸಿ ಅದನ್ನು ಪಾಲಿಸಲು ಹೇಳಬೇಕು. ಸಾರ್ವತ್ರಿಕವಾಗಿ ಸಾಧ್ಯವಾಗದ ಸುರಕ್ಷತಾ ನಿಯಮಗಳನ್ನು ಪಾಲಿಸು ಎಂದರೆ ಅದು ಅಸಾಧ್ಯವಾದುದು. ಈ ವಾಸ್ತವ ಅರಿಯುವಲ್ಲಿ ಸರ್ಕಾರ ವಿಫಲವಾಗಿದೆ. ಸರ್ಕಾರದ ಈ ನಡೆಯಿಂದ ವಸೂಲಿ ದಂಧೆಗೆ ನಾಂದಿ ಹಾಡುತ್ತದೆ. ವಾಮ ಮಾರ್ಗದ ಮೂಲಕ ಸುಳ್ಳು ಸರ್ಟಿಫಿಕೇಟ್ ಪಡೆಯುವ ಹೊಸ ದಂಧೆ ಆರಂಭವಾಗುವುದರಲ್ಲಿ ಅನುಮಾನವಿಲ್ಲ. ಈ ವಾಸ್ತವ ಅರಿತು ಮುಖ್ಯಮಂತ್ರಿಗಳು ಮತ್ತು ಶಿಕ್ಷಣ ಮಂತ್ರಿಗಳು ಈ ನಿಯಮ ರೂಪಿಸಿರುವ ಪ್ರತಿಭಾನ್ವಿತ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಬೇಕು ಎಂದು ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಒತ್ತಾಯಿಸಿದ್ದಾರೆ.
Recommended Video

ಆರ್ಟಿಐ ಬಹಿರಂಗಗೊಳಿಸಿದ ಸತ್ಯ
ರಾಜ್ಯದಲ್ಲಿರುವ ಸರ್ಕಾರಿ ಶಾಲೆಗಳು ಕಟ್ಟಡ ಸುರಕ್ಷತೆ ಪಾಲನೆ ಮಾಡಿಲ್ಲ. ಅಗ್ನಿ ಸುರಕ್ಷತಾ ನಿಯಮಗಳನ್ನು ಪಾಲನೆ ಮಾಡಿರುವ ಬಗ್ಗೆ ಮಾಹಿತಿ ಹಕ್ಕು ಅಧಿನಿಯಮದಡಿ ಕೇಳಿದ ಪ್ರಶ್ನೆಗೆ ಸ್ಫೋಟಕ ಅಂಶ ಬೆಳಕಿಗೆ ಬಂದಿದೆ. ಬಳ್ಳಾರಿ ಜಿಲ್ಲೆಯ ಹರನಪನಹಳ್ಳಿ ತಾಲೂಕಿನ ಯಾವ ಸರ್ಕಾರಿ ಕಟ್ಟಡದಲ್ಲೂ ಅಗ್ನಿ ಸುರಕ್ಷತಾ ನಿಯಮ ಪಾಲನೆ ಮಾಡಿಲ್ಲ. ಅದೇ ರೀತಿ ಚಿಕ್ಕಬಳ್ಳಾಪುರ ತಾಲೂಕಿನ ಯಾವ ಶಾಲೆಯಲ್ಲೂ ಅಗ್ನಿ ಮತ್ತು ಕಟ್ಟಡ ಸುರಕ್ಷತಾ ನಿಯಮ ಪಾಲನೆ ಮಾಡಿಲ್ಲ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳೇ ಮಾಹಿತಿ ಹಕ್ಕು ಅಧಿನಿಯಮದಡಿ ಸಲ್ಲಿಸಿದ ಅರ್ಜಿಗೆ ಉತ್ತರ ನೀಡಿದ್ದಾರೆ. ಈ ದಾಖಲೆಗಳು ಒನ್ ಇಂಡಿಯಾ ಕನ್ನಡಕ್ಕೆ ಲಭ್ಯವಾಗಿವೆ. ಬಿಸಿಯೂಟ ಯೋಜನೆಯಡಿ ಪ್ರತಿ ಶಾಲೆಗೂ ಗ್ಯಾಸ್ ಸಿಲಿಂಡರ್ ನೀಡಲಾಗಿದೆ. ಅಲ್ಲಿಯೇ ಬಿಸಿಯೂಟ ತಯರಿಸಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಸರ್ಕಾರಿ ಶಾಲೆಗಳಿಗೆ ಅನ್ವಯವಾಗದ ನಿಯಮಗಳು ಅನುದಾನ ರಹಿತ ಖಾಸಗಿ ಶಾಲೆಗಳಿಗೆ ಮಾತ್ರ ಸೀಮಿತಗೊಳಿಸಿರುವುದು ಎಷ್ಟು ಸರಿ ? ಈ ಪ್ರಶ್ನೆಗೆ ಶಿಕ್ಷಣ ಇಲಾಖೆ ಅಧಿಕಾರಿಗಳೇ ಉತ್ತರಿಸಬೇಕು.
-
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
ಮಾರ್ಚ್ 25ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
School Land Bill: ಸರ್ಕಾರಿ ಶಾಲೆಗಳ ಭೂರಕ್ಷಣ ವಿಧೇಯಕ ಜಾರಿ; ಕನ್ನಡದ ಹಿತದೃಷ್ಠಿಯಿಂದ ಮಹತ್ವದ ಹೆಜ್ಜೆ -
ಮಾರ್ಚ್ 24ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Bengaluru: 50 ವಾರ್ಡ್ಗಳಲ್ಲಿ ಕಸ ವಿಲೇವಾರಿ ಸ್ಥಗಿತ; ವೇತನ ವಿಳಂಬಕ್ಕೆ ಮುನಿದು ಸಾಮೂಹಿಕ ರಜೆ ಹಾಕಿದ ಕಾರ್ಮಿಕರು -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ












Click it and Unblock the Notifications