ಅಧಿಕಾರಿ-ಶಾಸಕರ ಮಕ್ಕಳು ಇನ್ನು ಸರ್ಕಾರಿ ಶಾಲೆಲೇ ಓದ್ಬೇಕು!
ಬೆಂಗಳೂರು, ಆಗಸ್ಟ್ 30: ಸರ್ಕಾರಿ ಕಚೇರಿಗಳು, ಸರ್ಕಾರಿ ಆಸ್ಪತ್ರೆಗಳು, ಸರ್ಕಾರಿ ಶಾಲೆಗಳೆಂದರೆ ದ್ವಿತೀಯ ದರ್ಜೆಯ ಸೇವೆಗಳೆಂಬ ಭಾವನೆ ಇದೆ. ಸರ್ಕಾರಿ ಶಾಲೆಗಳ ಮೇಲಿನ ಈ ತಾತ್ಸಾರ ಮನೋಭಾವನೆಯನ್ನು ಹೊಡೆದೋಡಿಸಲು ಕೊನೆಗೂ ಮಾಸ್ಟರ್ ಪ್ಲ್ಯಾನ್ ಒಂದನ್ನು ರಾಜ್ಯ ಸರ್ಕಾರ ರೂಪಿಸುತ್ತಿದೆ.
ಒಂದು ವೇಳೆ ಈ ಹೊಸ ಯೋಜನೆ ಜಾರಿಯಾದರೆ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳನ್ನೇ ಮೀರಿಸುವ ಗುಣಮಟ್ಟ ಹೊಂದುವುದರಲ್ಲಿ ಎರಡು ಮಾತಿಲ್ಲ ಅಂದಹಾಗೆ ಆ ಮಾಸ್ಟರ್ ಪ್ಲ್ಯಾನ್ ಏನು ಗೊತ್ತಾ?
ರಾಜ್ಯ ಸರ್ಕಾರದ ಸರಾಸರಿ ಸರಿಸುಮಾರು ಐದೂವರೆ ಲಕ್ಷ ಸರ್ಕಾರಿ ನೌಕರರು ಹಾಗೂ ರಾಜ್ಯದ ವಿವಿಧ ಹಂತಗಳ ಸರಿಸುಮಾರು ಒಂದೂವರೆ ಲಕ್ಷ ಜನಪ್ರತಿನಿಧಿಗಳು ಹೊಸ ಕಾಯ್ದೆಯನ್ವಯ ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆಯಲ್ಲೇ ಓದಿಸಬೇಕು.
ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಜಿಲ್ಲಾ ಪಂಚಾಯತ್ ಸದಸ್ಯರು, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯ್ತಿ ಸದಸ್ಯರು ಹೀಗೆ ಎಲ್ಲಾ ಹಂತಗಳಲ್ಲಿನ ರಾಜ್ಯ ಸರ್ಕಾರದ ವ್ಯಾಪ್ತಿಯ ಜನಪ್ರತಿನಿಧಿಗಳು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿ ಓದಿಸಿದರೆ ಸರ್ಕಾರಿ ಶಾಲೆಯ ಗುಣಮಟ್ಟ ಸುಧಾರಿಸುವುದಲ್ಲದೇ ಹಾಜರಾತಿ ಪ್ರಮಾಣವೂ ಹೆಚ್ಚಾಗುತ್ತದೆ.
ಆ ಮೂಲಕ ಮುಚ್ಚಿ ಹೋಗುತ್ತಿರುವ ಸರ್ಕಾರಿ ಶಾಲೆಯನ್ನು ಉಳಿಸಬಹುದು ಹಾಗೂ ಗುಣಮಟ್ಟವನ್ನು ಸುಧಾರಿಸಬಹುದು ಎಂಬ ಚಿಂತನೆಯನ್ನು ರಾಜ್ಯ ಸರ್ಕಾರ ನಡೆಸಿದೆ.
ಸರ್ಕಾರಿ ಶಾಲೆಗಳು ಉತ್ತಮ ಮೂಲಭೂತ ಸೌಕರ್ಯಗಳನ್ನು ಹೊಂದಿದ್ದರೂ ಕೂಡ ಮಕ್ಕಳಿಲ್ಲದೆ ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಪ್ರತಿಯೊಬ್ಬ ಸರ್ಕಾರಿ ನೌಕರರ ಮಕ್ಕಳು ಹಾಗೂ ಜನಪ್ರತಿನಿಧಿಗಳ ಮಕ್ಕಳು ಕಡ್ಡಾಯವಾಗಿ ಸರ್ಕಾರಿ ಶಾಲೆಯಲ್ಲೇ ಕಲಿಯಬೇಕು ಈ ಕುರಿತು ರಾಜ್ಯ ಸರ್ಕಾರ ಸಿದ್ಧತೆ ಆರಂಭಿಸಿದೆ.
ಸರ್ಕಾರಿ ಶಾಲೆಗಳು ಯಾವ ರೀತಿಯಲ್ಲೂ ಕಡಿಮೆಯಿಲ್ಲ ಎಲ್ಲಾ ಸೌಕರ್ಯಗಳನ್ನು ಹೊಂದಿದೆ ಆದರೆ ಸರ್ಕಾರಿ ನೌಕರರೇ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸಿದರೆ ಸರ್ಕಾರಿ ಶಾಲೆಗಳು ಏಳಿಗೆಯಾಗುವುದಿಲ್ಲ ಎಂದಿದ್ದಾರೆ.
ವಿಜ್ಞಾನಿ ಕೆ ಕಸ್ತೂರಿ ರಂಗನ್ ನೇತೃತ್ವದ ಕರ್ನಾಟಕ ಜ್ಞಾನ ಆಯೋಗ ಹಾಗೂ ಪ್ರೊ. ಎಸ್.ಜಿ. ಸಿದ್ದರಾಮಯ್ಯ ನೇತೃತ್ವದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ನೀಡಿರುವ ಶಾಲೆಗಳ ಸಬಲೀಕರಣ ವರದಿಯ ಶಿಫಾರಸ್ಸುಗಳನ್ನು ಆಧರಿಸಿ ರಾಜ್ಯದಲ್ಲಿ ಮೊದಲ ಬಾರಿಗೆ ಶಿಕ್ಷಣ ನೀತಿ ಜಾರಿಗೆ ತರಲು ಚಿಂತಿಸಿದೆ.
ಈ ಕುರಿತು ರಾಜ್ಯ ಸಚಿವ ಸಂಪುಟದಲ್ಲಿ ಈಗಾಗಲೇ ಚರ್ಚೆ ನಡೆದಿದೆ. ಸಂಪುಟ ಉಪ ಸಮಿತಿ ರಚನೆ ಮಾಡಿ ಕೆಲವು ಅಂಶಗಳಲ್ಲಿ ಕಾನೂನು ತೊಡಕು ಎದುರಾಗದಂತೆ ಎಚ್ಚರವಹಿಸಬೇಕು.
ನೂತನ ನೀತಿಯ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿ, ನಂತರ ಅಂತಿಮಗೊಳಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್ ತಿಳಿಸಿದ್ದಾರೆ.

ಸರ್ಕಾರಿ ಶಾಲೆಗೆ ಕಳುಹಿಸಲು ವಿರೋಧ ನಿರೀಕ್ಷಿತ
ಇಷ್ಟು ದಿನ ಸರ್ಕಾರಿ ನೌಕರು ಮತ್ತು ಜನಪ್ರತಿನಿಧಿಗಳ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸುತ್ತಿದ್ದರು ಈಗ ಸರ್ಕಾರಿ ಶಾಲೆಗೆ ಕಡ್ಡಾಯವಾಗಿ ಕಳುಹಿಸಬೇಕು ಎಂದು ಖಾಸಗಿ ಶಾಲೆಗಳ ನಿಯಂತ್ರಣಕ್ಕೆ ಮುಂದಾದರೆ ರಾಜಕೀಯ ವಿರೋಧ ಎದುರಾಗುತ್ತದೆ ಎಂಬುದನ್ನು ಸರ್ಕಾರ ನಿರೀಕ್ಷಿಸಿದೆ.

ಸರ್ಕಾರಿ ಶಾಲೆಎಡೆಗೆ ಪ್ರಭಾವಿಗಳ ಮಕ್ಕಳು
ಸರ್ಕಾರಿ ಶಾಲೆಗಳನ್ನು ಸಬಲೀಕರಣಗೊಳಿಸಲು ಎಲ್ಲ ಸರ್ಕಾರಿ ನೌಕರರು ಹಾಗೂ ಜನಪ್ರತಿನಿಧಿಗಳು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮಾಡಿದ್ದ ಶಿಫಾರಸನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಯಾವ ಮಾಧ್ಯಮದಲ್ಲಿ ಮಕ್ಕಳು ಕಲಿಯಬೇಕು ಎಂಬುದು ಪೋಷಕರ ನಿರ್ಧಾರಕ್ಕೆ ಬಿಡುವಂತೆ ಸುಪ್ರೀಂಕೋರ್ಟ್ ಇತ್ತೀಚೆಗೆ ತೀರ್ಪು ನೀಡಿತ್ತು. ಈ ಹಿನ್ನೆಲೆಯಲ್ಲಿ ಶಿಕ್ಷಣ ಹಾಗೂ ಕಾನೂನು ಇಲಾಖೆ ಅಧಿಕಾರಿಗಳು ಸಭೆ ನಡೆಸಿ, ಚರ್ಚಿಸಿದ್ದಾರೆ.

ಹೊಸ ಶಿಕ್ಷಣ ನೀತಿಯಲ್ಲಿ ಏನಿದೆ?
-ಸಮಯ ಹಾಗೂ ಸ್ಥಳದ ಅಡೆತಡೆ ಮೀರಿ ಸಮಾನತೆ ಮತ್ತು ಗುಣಮಟ್ಟದ ಶಿಕ್ಷಣ ಒದಗಿಸುವುದು
-ಮಕ್ಕಳಿಗೆ ಶೈಕ್ಷಣಿಕ ಅಡಿಪಾಯ ಹಾಕಲು ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆ
-ಉತ್ತಮ ವಿದ್ಯಾರ್ಹತೆ ಹೊಂದಿದ ಶಿಕ್ಷಕರಿಗೆ ಉತ್ತಮ ವೇತನದೊಂದಿಗೆ ನೇಮಕ
-6ನೇ ತರಗತಿಯಿಂದ ವಿಷಯಗಳ ಆಯ್ಕೆ ಮಗುವಿಗೇ ಬಿಡುವುದು
-ಬಯೋಮೆಟ್ರಿಕ್ ಆಧಾರಿತ ಹಾಜರಾತಿ

ಖಾಸಗಿ ಸಂಸ್ಥೆ ನಿಯಂತ್ರಣಕ್ಕೆ ಪ್ರಾಧಿಕಾರ
ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮ ಮನಸಿಗೆ ಬಂದಂತೆ ಕಾನೂನುಗಳನ್ನು ಮಾಡುತ್ತಿವೆ, ಶುಲ್ಕಗಳನ್ನು ವೀಧಿಸುತ್ತಿವೆ, ಇದರಿಂದ ಪೋಷಕರಿಗೆ ಹೊರೆಯಾಗುತ್ತಿದೆ. ಹಾಗಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುತ್ತಿರುವ ಶೋಷಣೆ ತಪ್ಪಿಸಲು ಪ್ರತ್ಯೇಕ ಸಂಸ್ಥೆಯೊಂದನ್ನು ರೂಪಿಸಲು ಸರ್ಕಾರ ನಿರ್ಧರಿಸಿದೆ.

ಹೊಸ ನೀತಿ ರಚಿಸಲು ಕಾರಣವೇನು?
-ಉಚಿತ ಶಿಕ್ಷಣ, ಪುಸ್ತಕ, ಸಮವಸ್ತ್ರ, ಬೈಸಿಕಲ್, ಮಧ್ಯಾಹ್ನದ ಊಟ, ಹಾಲು ಕೊಡಲಾಗುತ್ತಿದ್ದರೂ, ಸಾಧಾರಣ ಗುಣಮಟ್ಟದ ಶಿಕ್ಷಣ, ಶಿಕ್ಷಕರು, ಮೂಲಸೌಕರ್ಯಗಳ ಕೊರತೆ ಇದೆ. ಇದರಿಂದ ದಾಖಲಾತಿ ಉತ್ತಮವಾಗಿಲ್ಲ
-ಸರ್ಕಾರಿ ಶಾಲೆಗಳಲ್ಲಿ ಕಳಪೆ ಗುಣಮಟ್ಟ ಹಿನ್ನೆಲೆಯಲ್ಲಿ ಖಾಸಗಿ ಶಾಲೆಗಳತ್ತ ಜನರು ಹೆಚ್ಚು ಒಲವು ತೋರುತ್ತಿದ್ದಾರೆ ಹಾಗಾಗಿ ಹೊಸ ಶಿಕ್ಷಣ ನೀತಿ ರೂಪಿಸುವುದು ಅನಿವಾರ್ಯವಾಗಿದೆ.











Click it and Unblock the Notifications