ಮೂರು ತಿಂಗಳಿನಲ್ಲಿ ಎಲ್ಲಾ ನಗರಗಳಿಗೆ ನಗರ ಸಾರಿಗೆ ಬಸ್
ಬೆಂಗಳೂರು, ಜು.1 : ರಾಜ್ಯದ ಎಲ್ಲಾ ನಗರಗಳಲ್ಲಿ ಮೂರು ತಿಂಗಳ ಅವಧಿಯಲ್ಲಿ ನಗರ ಸಾರಿಗೆ ವ್ಯವಸ್ಥೆ ಅಸ್ತಿತ್ವಕ್ಕೆ ಬರಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಹಂತ-ಹಂತವಾಗಿ ಯೋಜನೆ ಜಾರಿಗೊಳಿಸಲಾಗುವುದು ಎಂದು ಸಚಿವರು ವಿಧಾನಪರಿಷತ್ತಿನಲ್ಲಿ ತಿಳಿಸಿದ್ದಾರೆ.
ಮುಂಗಾರು ಅಧಿವೇಶನದ ಆರನೇ ದಿನವಾದ ಸೋಮವಾರ ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯ ಐವಾನ್ ಡಿಸೋಜಾ ಅವರ ಉಪ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದ ಸಚಿವ ರಾಮಲಿಂಗಾ ರೆಡ್ಡಿ, ಜಿಲ್ಲಾ ಕೇಂದ್ರಗಳು ಮತ್ತು ದೊಡ್ಡ ತಾಲೂಕು ಕೇಂದ್ರಗಳಲ್ಲೂ ನಗರ ಸಾರಿಗೆ ವ್ಯವಸ್ಥೆ ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ ಎಂದರು.

ಹಂತ ಹಂತವಾಗಿ ಈ ಯೋಜನೆ ಜಾರಿಗೊಳಿಸಲು ತೀರ್ಮಾನಿಸಲಾಗಿದೆ. ಮುಂದಿನ ಮೂರು ತಿಂಗಳಿನಲ್ಲಿ ರಾಜ್ಯದ ಎಲ್ಲಾ ನಗರಗಳಲ್ಲಿಯೂ ಸರ್ಕಾರಿ ನಗರ ಸಾರಿಗೆ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಸಚಿವರು ಹೇಳಿದರು. [ಸೋಮವಾರದ ಕಲಾಪದ ಮುಖ್ಯಾಂಶಗಳು]
ಸರ್ಕಾರದ ಗಮನ ಸೆಳೆದ ಐವಾನ್ ಡಿಸೋಜ ಅವರು, ಮಂಗಳೂರು ನಗರದಲ್ಲಿ ಖಾಸಗಿ ಬಸ್ಸುಗಳ ಜತೆಗೆ ಕೆಎಸ್ಆರ್ ಟಿಸಿ ವತಿಯಿಂದ ನಗರ ಸಾರಿಗೆ ಆರಂಭಿಸುವುದಾಗಿ ಸರ್ಕಾರ ಈ ಹಿಂದೆ ಹೇಳಿತ್ತು. ಆದರೆ, ಬಸ್ಸುಗಳು ಬೇರೆ ಕಡೆ ಓಡಾಡುತ್ತಿವೆ ಎಂದು ಹೇಳಿದರು.
ಬಸ್ ಖರೀದಿ : ಬಿಜೆಪಿಯ ರಘುನಾಥ ಮಲ್ಕಾಪುರೆ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈಶಾನ್ಯ ಮತ್ತು ವಾಯವ್ಯ ಸಾರಿಗೆ ಸಂಸ್ಥೆಗಳಿಗೆ ಆಯಾ ನಿಗಮದ ಮೂಲಕವೇ ಬಸ್ ಖರೀದಿ ಮತ್ತು ಬಿಡಿ ಭಾಗಗಳನ್ನು ಖರೀದಿ ಮಾಡುವಂತೆ ಸೂಚಿಸಲಾಗಿದೆ ಎಂದರು.
ಆರ್ಟಿಎ ಸಭೆ ನಡೆಸುವುದು ಕಡ್ಡಾಯ : ರಸ್ತೆ ಸಾರಿಗೆ ಪ್ರಾಧಿಕಾರದ (ಆರ್ಟಿಎ) ಸಭೆಯನ್ನು ಪ್ರತಿ ಎರಡು ತಿಂಗಳಿಗೊಮ್ಮೆ ನಡೆಸುವುದು ಕಡ್ಡಾಯವಾಗಿದೆ. ಸಭೆ ನಡೆಸದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುದು ಎಂದರು. ಗ್ರಾಮ ಸಡಕ್ ಯೋಜನೆ ಮೂಲಕ ರಾಜ್ಯದ ಹಲವು ಕಡೆ ಉತ್ತಮ ರಸ್ತೆ ನಿರ್ಮಾಣಗೊಂಡಿದೆ. ಆದರೆ,ಆ ಮಾರ್ಗಗಳಲ್ಲಿ ಬಸ್ಸುಗಳು ಸಂಚರಿಸುತ್ತಿಲ್ಲ.
ಈ ಕುರಿತು ವಿಚಾರಿಸಿದರೆ ಲಾಭದಾಯಕವಲ್ಲದ ರಸ್ತೆಗಳಲ್ಲಿ ಬಸ್ಸುಗಳನ್ನು ಓಡಿಸಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ ಎಂಬ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಅವಶ್ಯಕತೆ ಇಲ್ಲದ ಕಡೆ ಬಸ್ ಸಂಚಾರ ಇಲ್ಲ ಎನ್ನುವ ಬದಲು ಲಾಭದಾಯಕವಲ್ಲದ ಮಾರ್ಗ ಎಂದು ಹೇಳಲಾಗಿದೆ. ಈ ಮಾರ್ಗ ಲಾಭದಾಯಕವಲ್ಲದಿದ್ದೆರೆ ಬಸ್ ಓಡಿಸುತ್ತಿಲ್ಲ ಎಂದರು.












Click it and Unblock the Notifications