ಬೆಳಗಾವಿ ಸರ್ಕಾರಿ ಶಾಲೆ ಶಿಕ್ಷಕರ ಸಸ್ಪೆಂಡ್ : ಸರ್ಕಾರದ ಕನ್ನಡ ವಿರೋಧಿ ನಡೆ ಎಂದ ವಿಜಯೇಂದ್ರ!
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಭಿವೃದ್ಧಿ ಚಕ್ರ ತುಕ್ಕು ಹಿಡಿದು ನಿಂತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಟೀಕೆ ಮಾಡಿದ್ದಾರೆ. ಕನಿಷ್ಠ ಶಿಕ್ಷಣ ಕ್ಷೇತ್ರಕ್ಕಾದರೂ ಅಲ್ಪವಾದರೂ ಕಾಯಕಲ್ಪ ನೀಡದ ನಿಷ್ಕ್ರೀಯತೆ ಪ್ರದರ್ಶಿಸಲಾಗುತ್ತಿದೆ ಎಂಬುದಕ್ಕೆ ಶಾಲಾ ಕೊಠಡಿಗಳಿಗಾಗಿ ಮಕ್ಕಳ ಶಿಕ್ಷಣದ ಪರ ಕಾಳಜಿಪೂರ್ವಕ ಪ್ರತಿಭಟನೆ ನಡೆಸಿದ ಮುಖ್ಯ ಶಿಕ್ಷಕ ವೀರಣ್ಣ ಮಡಿವಾಳರ ಅವರನ್ನು ಅಮಾನತ್ತು ಮಾಡಿ ಸರ್ಕಾರ ತನ್ನ ಕ್ರೌರ್ಯತನ ಮೆರದಿರುವುದು ಅತ್ಯಂತ ಖಂಡನೀಯ ಕ್ರಮವಾಗಿದೆ ಎಂದು ಅವರು ಕರ್ನಾಟಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ನಿಡಗುಂದಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳ ಕೊರತೆಯ ಕುರಿತು ನಿರಂತರ ನಿವೇದನೆ ಸಲ್ಲಿಸಿ ಇದು ನಿರರ್ಥಕವಾದಾಗ ಗತ್ಯಂತರವಿಲ್ಲದೇ ವೀರಣ್ಣ ಮಡಿವಾಳರ ಅವರು ಸರ್ಕಾರದ ಕಣ್ಣು ತೆರೆಸಲು ಶಿಕ್ಷಣ ಕಳಕಳಿಯ ಪ್ರತೀಕವಾಗಿ ಸಾತ್ವಿಕ ಪ್ರತಿಭಟನೆ ತೋರಿಸಿದ್ದಾರೆ, ಇದನ್ನು ಅಶಿಸ್ತು ಎಂದು ಪರಿಗಣಿಸಿ ಅವರನ್ನು ಸೇವೆಯಿಂದ ಅಮಾನತ್ತು ಪಡಿಸುವ ಕಠಿಣ ನಿರ್ಧಾರದ ಮೂಲಕ ಶಿಕ್ಷಣದಲ್ಲಿ ಸುಧಾರಣೆ ತರುವ ಸಮರ್ಪಣಾ ಮನೋಭಾವದ ಬದ್ಧತೆಯ ಶಿಕ್ಷಕರನ್ನು ಕಾಂಗ್ರೆಸ್ ಸರ್ಕಾರ ಶಿಕ್ಷಿಸಲು ಹೊರಟಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ, ಇದು ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಶಿಕ್ಷಣದ ಬಗ್ಗೆ ಇರುವ ಉಪೇಕ್ಷೆ ಹಾಗೂ ತಾತ್ಸಾರವನ್ನು ತೋರಿಸಿದೆ.

ವೀರಣ್ಣ ಮಡಿವಾಳ ಅವರ ಅಮಾನತು ಕೂಡಲೇ ಹಿಂಪಡೆದು ಸದರಿ ಶಾಲೆಗೆ ಅಗತ್ಯ ಕೊಠಡಿಗಳ ಜೊತೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಬೇಕೆಂದು ಸಂಕಲ್ಪ ತೊಟ್ಟು ಈಗಾಗಲೇ ಸದರಿ ಶಾಲೆಯ ಘನತೆಯನ್ನು ರಾಷ್ಟ್ರ ಮಟ್ಟದಲ್ಲಿ ಗಮನಸೆಳೆಯುವ ಮಟ್ಟದಲ್ಲಿ ಚಟುವಟಿಕೆಯಿಂದಿರಿಸಿರುವ ವೀರಣ್ಣ ಮಡಿವಾಳರ ಅವರನ್ನು ಸರ್ಕಾರ ಗೌರವಿಸಲಿ.
ಈ ಶಾಲೆ ದೇಶದ ಅತ್ಯತ್ತಮ ಸರ್ಕಾರಿ ಶಾಲೆಗಳಲ್ಲೊಂದು ಎಂಬ ಹೆಗ್ಗಳಿಕೆ ಪಡೆದು ಕೊಂಡಿದೆ. ಅನೇಕ ಶಿಕ್ಷಣ ತಜ್ಞರಿಂದ ಪ್ರಶಂಸೆಗೊಳಗಾಗಿದೆ. ನಾಡಿನ ಪ್ರತಿಷ್ಠಿತ ಮಾಧ್ಯಮಗಳು ಸದರಿ ಶಾಲೆಯ ಕುರಿತು ಸಾಕ್ಷ್ಯ ಚಿತ್ರವನ್ನು ನಿರ್ಮಿಸಿವೆ, ಈ ಹಿರಿಮೆಗಳ ಹಿನ್ನಲೆಯಲ್ಲಿ ಸರ್ಕಾರ ಶಾಲೆಯ ಈ ಸಾಧನೆಯನ್ನು ಗುರುತಿಸಬೇಕಿತ್ತು, ಅಗತ್ಯ ವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸ ಬೇಕಿತ್ತು, ಅಕ್ಷರ ವಂಚಿತ ಅತೀ ಹಿಂದುಳಿದ ಸಮುದಾಯದಿಂದ ಬಂದು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಯ ಹೆಜ್ಜೆಗಳನ್ನಿಟ್ಟಿರುವ ಶಿಕ್ಷಕ ವೀರಣ್ಣ ಮಡಿವಾಳರ ಅವರನ್ನು ಅಭಿನಂದಿಸಿ ಗೌರವಿಸ ಬೇಕಿತ್ತು. ಆದರೆ ಇದರ ಬದಲಾಗಿ ಅವರನ್ನು ಅಮಾನತ್ತುಗೊಳಿಸಿ ಶಿಕ್ಷೆ ವಿಧಿಸಿರುವ ರಾಜ್ಯ ಸರ್ಕಾರದ ನಿರ್ಧಾರ ಶಿಕ್ಷಣ ವಿರೋಧಿ ನಡೆಯಾಗಿದೆ ಎಂದು ಅವರು ಹೇಳಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಖಂಡನೆ: ಇನ್ನು ಮುಖ್ಯ ಶಿಕ್ಷಕ ಹಾಗೂ ಕವಿ ವಿ ಸೋಮಣ್ಣ ಅವರನ್ನು ಸರ್ಕಾರ ನಡೆಸಿಕೊಂಡಿರುವ ರೀತಿಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಸರ್ಕಾರವು ಈ ರೀತಿ ನಿರ್ಧಾರ ತೆಗೆದುಕೊಳ್ಳಬಾರದಿತ್ತು ಎನ್ನುವ ಅಭಿಪ್ರಾಯ ಕೇಳಿ ಬಂದಿದೆ.












Click it and Unblock the Notifications