Breaking; ಸರ್ಕಾರಿ ನೌಕರರ ವರ್ಗಾವಣೆ ಹೊಸ ಸುತ್ತೋಲೆ
ಕರ್ನಾಟಕ ಸರ್ಕಾರ ಮುಂಬರುವ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಸರ್ಕಾರಿ ನೌಕರರ ವರ್ಗಾವಣೆ ಕುರಿತು ಸುತ್ತೋಲೆಯೊಂದನ್ನು ಹೊರಡಿಸಿದೆ.
ಬೆಂಗಳೂರು, ಜನವರಿ 31; ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದೆ. ಚುನಾವಣಾ ಆಯೋಗ, ರಾಜಕೀಯ ಪಕ್ಷಗಳು ಚುನಾವಣೆ ತಯಾರಿ ಮಾಡಿಕೊಳ್ಳುತ್ತಿದೆ. ಸರ್ಕಾರ ಈ ಸಂದರ್ಭದಲ್ಲಿ ನೌಕರರ ವರ್ಗಾವಣೆ ಬಗ್ಗೆ ಸುತ್ತೋಲೆಯೊಂದನ್ನು ಹೊರಡಿಸಿದೆ.
ವೀರಭದ್ರ ಸರ್ಕಾರದ ಅಧೀನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಸೇವಾ ನಿಯಮಗಳು-1) ಈ ಕುರಿತು ಸುತ್ತೋಲೆ ಹೊರಡಿಸಿದ್ದಾರೆ. ವರ್ಗಾವಣೆ ಕುರಿತು ಈ ಸುತ್ತೋಲೆಯಲ್ಲಿ ಸ್ಪಷ್ಟನೆಯನ್ನು ನೀಡಲಾಗಿದೆ.
ವಿಧಾನಸಭಾ ಚುನಾವಣೆ 2023ರ ಚುನಾವಣಾ ಕಾರ್ಯ ನಿಮಿತ್ತ ಮಾಡುವ ವರ್ಗಾವಣೆ/ ಸ್ಥಳ ನಿಯುಕ್ತಿಗಳ ಕುರಿತು ಎಂಬ ವಿಷಯವನ್ನು ಸುತ್ತೋಲೆ ಒಳಗೊಂಡಿದೆ.

ಸುತ್ತೋಲೆಯ ವಿವರದಂತೆ 2022-23ನೇ ಸಾಲಿನ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆಗಳ ಬಗ್ಗೆ ಸರ್ಕಾರಿ ಆದೇಶ ಸಂಖ್ಯೆ ಸಿಆಸುಇ 16 ಸೇನೌವ 2022 ದಿನಾಂಕ 30/04/2022ರಲ್ಲಿ ಮಾರ್ಗಸೂಚಿಗಳನ್ನು ಹೊರಡಿಸಲಾಗಿರುತ್ತದೆ.
ಸದರಿ ಆದೇಶದನ್ವಯ ಸರ್ಕಾರಿ ನೌಕರರ ವರ್ಗಾವಣೆಗಳನ್ನು ದಿನಾಂಕ 01/05/2022 ರಿಂದ 15/06/2022 ರವರೆಗೆ ಮಾಡಲು ಆಯಾ ಇಲಾಖಾ ಸಚಿವರಿಗೆ ಅಧಿಕಾರ ಪ್ರತ್ಯಾಯೋಜಿಸಲಾಗಿದೆ.
ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 16 ಸೇನೌವ 2022 ದಿನಾಂಕ 15/06/2022 ರಲ್ಲಿ ಸದರಿ ವರ್ಗಾವಣಾ ಅವಧಿಯನ್ನು ದಿನಾಂಕ 30/06/2022 ರವರೆಗೆ ವಿಸ್ತರಿಸಿ ಅವಧಿಯು ಆದೇಶಿಸಲಾಗಿರುತ್ತದೆ.
ಪ್ರಸ್ತುತ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣಾ ಮುಕ್ತಾಯಗೊಂಡಿರುತ್ತದೆ. ವರ್ಗಾವಣಾ ಅವಧಿ ಮುಗಿದ ನಂತರ, ಕೆಲವೊಂದು ವಿರಳ ಸಂದರ್ಭಗಳಲ್ಲಿ ಮಾತ್ರ ಮಾನ್ಯ ಮುಖ್ಯಮಂತ್ರಿಯವರ ಅನುಮೋದನೆ ಪಡೆದು ವರ್ಗಾವಣೆಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಲಾಗಿದೆ.
ಭಾರತೀಯ ಚುನಾವಣಾ ಆಯೋಗವು ದಿನಾಕ 08/12/2022ರಂದು ರಾಜ್ಯ ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ ಕರ್ನಾಟಕ ವಿಧಾನ ಸಭೆಗೆ 2023ರಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗಳ ಹಿನ್ನೆಲೆಯಲ್ಲಿ ಅಧಿಕಾರಿ/ ಸಿಬ್ಬಂದಿಗಳ ವರ್ಗಾವಣೆ ಮತ್ತು ಸ್ಥಳನಿಯುಕ್ತಿಗೆ ಸಂಬಂಧಿಸಿದಂತೆ ಕೆಲವು ಮಾರ್ಗಸೂಚಿಗಳನ್ನು ನೀಡಿರುತ್ತದೆ.
ಈ ಮಾರ್ಗಸೂಚಿಗಳ ಅನುಸಾರ ಕ್ರಮವಹಿಸಿ ಆಯೋಗಕ್ಕೆ ದಿನಾಂಕ 31/01/2023ರ ಒಳಗಾಗಿ ಅನುಪಾಲನಾ ವರದಿಯನ್ನು ಸಲ್ಲಿಸುವಂತೆ ಸೂಚಿಸಿರುತ್ತದೆ.
ಕಾಲಮಿತಿಯಲ್ಲಿ ಈ ಆಯೋಗದ ವರ್ಗಾವಣೆ/ ಸ್ಥಳ ನಿಯುಕ್ತಿಗಳನ್ನು ಮಾಡಬೇಕಿರುವುದರಿಂದ, ಭಾರತೀಯ ಚುನಾವಣಾ ಮಾರ್ಗಸೂಚನೆಗಳ ಅನುಸಾರ ದಿನಾಂಕ 31/01/2023ರ ಒಳಗಾಗಿ ವರ್ಗಾವಣೆ/ ಸ್ಥಳನಿಯುಕ್ತಿಗೊಳಿಸುವ ಅಧಿಕಾರವನ್ನು ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣಾ ಅವಧಿಯಲ್ಲಿ ಯಾವ ನಿರ್ದಿಷ್ಟ ಪ್ರಾಧಿಕಾರಗಳ ವರ್ಗಾವಣೆಯನ್ನು ಕೈಗೊಳ್ಳುತ್ತಿದ್ದರೋ ಅವರಿಗೇ ಪ್ರತ್ಯಾಯೋಜಿಸಿ ಆದೇಶಿಸಲಾಗಿದೆ.
ಈ ವರ್ಗಾವಣೆಗಳನ್ನು ಸಂಪೂರ್ಣವಾಗಿ ಭಾರತೀಯ ಚುನಾವಣಾ ಆಯೋಗದ ಮಾರ್ಗಸೂಚಿಗಳು/ ನಿರ್ದೇಶನಗಳ ಅನುಸಾರ ಕೈಗೊಳ್ಳಲಾಗಿರುತ್ತದೆ ಎಂದು ಸಂಬಂಧಿಸಿದ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು/ ಪ್ರಧಾನ ಕಾರ್ಯದರ್ಶಿಗಳು/ ಕಾರ್ಯದರ್ಶಿಗಳು/ ಇಲಾಖಾ ಮುಖ್ಯಸ್ಥರು ಪ್ರಮಾಣೀಕರಿಸುವುದು ಎಂದು ತಿಳಿಸಲಾಗಿದೆ.
ಮೇಲ್ಕಂಡ ಅಂಶಗಳನ್ನು ಎಲ್ಲಾ ಸಕ್ಷಮ ಪ್ರಾಧಿಕಾರಗಳು ಅನುಸರಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದೆ.
ಯಾವಾಗ ಚುನಾವಣೆ; ಕರ್ನಾಟಕದಲ್ಲಿ ಮೇ 24ರೊಳಗೆ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಬೇಕಿದೆ. ಆದ್ದರಿಂದ ಏಪ್ರಿಲ್ ಅಂತ್ಯ ಅಥವ ಮೇ ಮೊದಲ ವಾರದಲ್ಲಿ ಚುನಾವಣೆ ನಡೆಯುವ ನಿರೀಕ್ಷೆ ಇದೆ.












Click it and Unblock the Notifications