ಸರ್ಕಾರಿ ಆಸ್ಪತ್ರೆ ಆವರಣದ ಔಷಧಿ ಅಂಗಡಿಗಳು ಮುಚ್ಚಿದರೆ ಕಠಿಣ ಕ್ರಮ: ಡಿಕೆಶಿ
ಬೆಂಗಳೂರು, ಸೆಪ್ಟೆಂಬರ್ 27: ಇ-ಫಾರ್ಮಸಿ ವ್ಯವಸ್ಥೆ ವಿರೋಧಿಸಿ ಆಲ್ ಇಂಡಿಯಾ ಆರ್ಗನೈಸೇಷನ್ ಆಫ್ ಕೆಮಿಸ್ಟ್ ಅಂಡ್ ಡ್ರಗಿಸ್ಟ್ ಸಂಸ್ಥೆಯು ನಾಳೆ (ಸೆಪ್ಟೆಂಬರ್ 28) ಕರೆ ನೀಡುವ ಬಂದ್ಗೆ ಸರ್ಕಾರಿ ಔಷಧಿ ಅಂಗಡಿಗಳು ಬೆಂಬಲ ನೀಡುವಂತಿಲ್ಲ ಎಂದು ವೈದ್ಯಕೀಯ ಸಚಿವ ಡಿ.ಕೆ.ಶಿವಕುಮಾರ್ ಎಚ್ಚರಿಸಿದ್ದಾರೆ.
ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಔಷಧಿ ಅಂಗಡಿಗಳು ಯಾವುದೇ ಕಾರಣಕ್ಕೂ ಬಂದ್ ಮಾಡುವಂತಿಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಸಹ ಮಾಡಿರುವ ಸಚಿವರು, ಸಾರ್ವಜನಿಕರಿಗೆ ಸೇವೆ ನೀಡದ ಸರ್ಕಾರಿ ಔಷಧಿ ಅಂಗಡಿಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೆ ಮುಂದಾಗಿರುವ ಇ-ಫಾರ್ಮಸಿ ವ್ಯವಸ್ಥೆ ವಿರೋಧಿಸಿ ಆಲ್ ಇಂಡಿಯಾ ಆರ್ಗನೈಸೇಷನ್ ಆಫ್ ಕೆಮಿಸ್ಟ್ ಅಂಡ್ ಡ್ರಗಿಸ್ಟ್ ಸಂಸ್ಥೆಯು ನಾಳೆ ಒಂದು ದಿನದ ಬಂದ್ ಗೆ ಕರೆ ನೀಡಿದೆ. ನಾಳೆ ದೇಶದೆಲ್ಲೆಡೆ ಔಷಧಿ ಅಂಗಡಿ ತೆರೆಯುವುದಿಲ್ಲ.
ಔಷಧ ಮಳಿಗೆಗಳ ಮಾಲೀಕರು ಬಂದ್ ಗೆ ಕರೆ ನೀಡಿದ ಬೆನ್ನಲ್ಲೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕರು ಅಗತ್ಯ ಜೀವರಕ್ಷಕ ಔಷಧವನ್ನು ದಾಸ್ತಾನು ಮಾಡಿಕೊಳ್ಳುವಂತೆ ರಾಜ್ಯದ ಆಸ್ಪತ್ರೆಗಳಿಗೆ ಸೂಚಿಸಿದ್ದಾರೆ. ಜಿಲ್ಲಾ, ತಾಲೂಕು, ಸಾರ್ವಜನಿಕ, ಸಮುದಾಯ ಕೇಂದ್ರ ಹಾಗೂ ಪ್ರಾಥಮಿಕ ಕೇಂದ್ರದಲ್ಲಿ ಜೀವರಕ್ಷಕ ಔಷಧ ಸಿಗಲಿದೆ.












Click it and Unblock the Notifications