ಬನ್ನೇರುಘಟ್ಟ ಅರಣ್ಯ ಪ್ರದೇಶದಲ್ಲಿ ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ ನಿರ್ಮಾಣ ಕೈ ಬಿಟ್ಟ ಸರ್ಕಾರ
ಬೆಂಗಳೂರು, ಜನವರಿ 06: ನಗರದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಬಳಿ ಹಾದು ಹೋಗಲಿರುವ ಸ್ಯಾಟಲೈಟ್ ಟೌನ್ ರಿಂಗ್ ರಸ್ತೆಯ (ಎಸ್ಟಿಟಿಆರ್) ಸುರಂಗ ಕಾಮಗಾರಿಯಲ್ಲಿ ತಪ್ಪಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಭೆಯ ಬಳಿಕ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಹೆದ್ದಾರಿ ನಿರ್ಮಾಣ ಕೈಬಿಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಎಸ್ಟಿಟಿಆರ್ ಹೆದ್ದಾರಿ ಬನ್ನೆರುಘಟ್ಟ ಅರಣ್ಯ ಪ್ರದೇಶದಲ್ಲಿ ಹಾದು ಹೋಗಲಿದೆ. ಯಾವ ಕಾರಣಕ್ಕೂ ಇಲ್ಲಿನ ಅರಣ್ಯ ಪ್ರದೇಶದಲ್ಲಿ ಹೆದ್ದಾರಿ ನಿರ್ಮಿಸಬಾರದು ಎಂದು ರಾಜ್ಯ ವನ್ಯಜೀವಿ ಸಮಿತಿ ಸರ್ಕಾರಕ್ಕೆ ಸಲಹೆ ನೀಡಿದೆ. ಹೀಗಾಗಿ ಈ ಸ್ಯಾಟಲೈಟ್ ಟೌನ್ ರಿಂಗ್ ರಸ್ತೆಯ ಪ್ರಸ್ತಾಪ ಕೈಬಿಡಲಾಗಿದೆ. ಬನ್ನೇರುಘಟ್ಟ ಉದ್ಯಾನದಿಂದ ದೂರದಲ್ಲಿ ಹೊರಭಾಗದಲ್ಲಿ ರಸ್ತೆ ನಿರ್ಮಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಸುಮಾರು ರೂ. 17 ಸಾವಿರ ಕೋಟಿ ಮೊತ್ತದ ಉದ್ದೇಶಿತ ಈ ಹೆದ್ದಾರಿಯು 288 ಕಿಲೋ ಮೀಟರ್ ಉದ್ದವಿದ್ದು, ತಮಿಳುನಾಡಿನ ಪ್ರದೇಶದಲ್ಲಿ 45 ಕಿಲೋ ಮೀಟರ್ ಹಾದು ಹೋಗಲಿದೆ. ಯೋಜನೆಗಾಗಿ ಈಗಾಗಲೇ 6,000 ಕೋಟಿ ರೂ. ಮೊತ್ತದಲ್ಲಿ 136 ಕಿಲೋ ಮೀಟರ್ ಮಾರ್ಗಕ್ಕೆ ಟೆಂಡರ್ ಪ್ರಕ್ರಿಯೆ ನಡೆದಿದೆ. 2025ಕ್ಕೆ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದರು.
ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ (ಎಸ್ಟಿಟಿಆರ್)ಯು ದಾಬಸ್ಪೇಟೆ, ದೊಡ್ಡಬಳ್ಳಾಪುರ, ದೇವನಹಳ್ಳಿ, ಸುಲಿಬೆಲೆ, ಹೊಸಕೋಟೆ, ಸರ್ಜಾಪುರ, ಅತ್ತಿಬೆಲೆ, ಆನೇಕಲ್, ತಟ್ಟೆಕೆರೆ, ಕನಕಪುರ, ರಾಮನಗರ, ಮಾಗಡಿ ಮೂಲಕ ಹಾದು ಹೋಗಲಿದೆ.
ಉದ್ಯಾನದಲ್ಲಿ 28ಕಿ.ಮಿ.ಹಾದು ಹೋಗಲಿದೆ
ಇನ್ನೂ ಇದೇಸ್ಯಾಟಲೈಟ್ ಟೌನ್ ರಿಂಗ್ ರಸ್ತೆಯು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಸೂಕ್ಷ್ಮ ವಲಯದಲ್ಲಿ ಸುಮಾರು 8 ಕಿಲೋ ಮೀಟರ್ ಸೇರಿ ಒಟ್ಟು 28 ಕಿಲೋ ಮೀಟರ್ ಹಾದು ಹೋಗಲಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಇದರಿಂದ ಅಲ್ಲಿನ ಪ್ರಾಣಿ, ಪಕ್ಷಗಳಿಗೆ ತೊಂದರೆ ಆಗುತ್ತದೆ. ಅರಣ್ಯ ಸಂಪತ್ತಿಗೆ ತೊಂದರೆ ಎದುರಾಗುವ ಸಾಧ್ಯತೆ ಇದೆ. ಉದ್ಯಾನ ಹೊರಭಾಗದಲ್ಲಿ ರಸ್ತೆ ನಿರ್ಮಿಸಿದರೆ ಉತ್ತಮ ಎಂಬುದು ಪರಿಸರ ತಜ್ಞರು ಅಭಿಪ್ರಾಯವಾಗಿದೆ.
ಇದಕ್ಕು ಮುನ್ನ ಬೆಳಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಮುಂಬೈ, ದೆಹಲಿ ಮೆಟ್ರೋ ನಗರಗಳಲ್ಲಿ ಸಹ ಹೆದ್ದಾರಿಗಳಲ್ಲಿ ಅರಣ್ಯ ಪ್ರದೇಶಗಳಲ್ಲಿಯೂ ಅರಣ್ಯಕ್ಕೆ ತೊಂದರೆ ಆಗದಂತೆ ಸುರಂಗ ಕೊರೆದು ಹೆದ್ದಾರಿ ನಿರ್ಮಿಸಲಾಗಿದೆ. ಅದೇ ಮಾದರಿಯನ್ನು ಬನ್ನೇರುಘಟ್ಟದಲ್ಲಿಯೂ ಅನುಸರಿಸಲಾಗುವುದು ಎಂದು ತಿಳಿಸಿದ್ದರು. ಸಂಜೆ ನಂತರ ಸಭೆಯಲ್ಲಿ ಉದ್ಯಾನ ಭಾಗದಲ್ಲಿ ರಸ್ತೆ ನಿರ್ಮಾಣ ಕೈ ಬಿಡಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಡಬಲ್ ಡೆಕ್ಕರ್ ಮೇಲ್ಸೇತುವೆ ಸೂಚನೆ
ಎಸ್ಟಿಆರ್ಆರ್ ಯೋಜನೆಯ ರಸ್ತೆಯಲ್ಲಿ ಡಬಲ್ ಡೆಕ್ಕರ್ ಮೇಲ್ಸೇತುವೆಗಳನ್ನು ನಿರ್ಮಿಸಲು ಅವಕಾಶ ಇರಿಸಿಕೊಳ್ಳುವಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಅಧಿಕಾರಿಗಳಿಗೆ ನಿತಿನ್ ಗಡ್ಕರಿ ಸೂಚಿಸಿದರು. ಈ ರಸ್ತೆಗಳಲ್ಲಿ ಮುಂದಿನ 10 ವರ್ಷದ ಬಳಿಕ ಭೂಸ್ವಾಧೀನ ಕಷ್ಟವಾಗಲಿದೆ. ವಾಹನ ದಟ್ಟಣೆ ಸಮಸ್ಯೆ ನಿವಾರಣೆಗೆ ಡಬಲ್ ಡೆಕ್ಕರ್ ಸೇತುವೆಗಳು ಅನುಕೂಲ ಆಗಲಿವೆ ಎಂದು ತಿಳಿಸಿದರು.