ವಾಹನ, ಜನರ ಓಡಾಟವಿಲ್ಲದೆ ಸ್ತಬ್ಧವಾದ ಗಜೇಂದ್ರಗಡ
ಗದಗ, ಮಾರ್ಚ್,05: ಪಿಎಸ್ಐ ಮಂಜುನಾಥ ಕುಸುಗಲ್ ಅವರು ಸಾರ್ವಜನಿಕರ ಮೇಲೆ ನಡೆಸುತ್ತಿರುವ ದೌರ್ಜನ್ಯ ಖಂಡಿಸಿ ಬಿಜೆಪಿ ಕರೆ ನೀಡಿರುವ ಬಂದ್ ನಿಂದಾಗಿ ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣವು ಸಂಪೂರ್ಣ ಸ್ತಬ್ಧಗೊಂಡಿದೆ.
ಗಜೇಂದ್ರಗಡದಲ್ಲಿ ಇಂದು ನಡೆಯುತ್ತಿರುವ ಬಂದ್ ಗೆ ಸಾರ್ವಜನಿಕರು ಬೆಂಬಲ ವ್ಯಕ್ತಪಡಿಸಿದ್ದು, ನಗರಾದ್ಯಂತ ನೀರವ ಮೌನ ಆವರಿಸಿದೆ. ನಗರದ ಮಾರುಕಟ್ಟೆಯಲ್ಲಿನ ಎಲ್ಲ ಅಂಗಡಿಗಳು ಮುಚ್ಚಲ್ಪಟ್ಟಿದ್ದು, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಸರಕಾರಿ ಮತ್ತು ಖಾಸಗಿ ಬಸ್ ಸಂಚಾರ ಸ್ಥಗಿತಗೊಂಡಿವೆ. ಬಸ್ ನಿಲ್ದಾಣ ಪ್ರಯಾಣಿಕರಿಲ್ಲದೇ ಬಿಕೋ ಎನ್ನುತ್ತಿದೆ.[ಪಿಎಸ್ಐ ಮಂಜುನಾಥ್ ಕುಸುಗಲ್ ದೌರ್ಜನ್ಯ ಖಂಡಿಸಿ ಗಜೇಂದ್ರಗಡ ಬಂದ್]
ಹಲವಾರು ದಿನಗಳಿಂದ ಜನತೆಗೆ ಕಿರಿಕಿರಿ ಮಾಡುತ್ತಿರುವ ಪಿಎಸ್ಐ ಮಂಜುನಾಥ ಕುಸುಗಲ್ ಅವರನ್ನು ಕೂಡಲೇ ಅಮಾನತುಗೊಳಿಸಬೇಕೆಂದು ನಡೆದ ಈ ಬಂದ್ ವೇಳೆ ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ.
ಬಂದ್ ಕುರಿತು ಒನ್ ಇಂಡಿಯಾ ಕನ್ನಡದೊಂದಿಗೆ ಮಾತನಾಡಿದ ಮಾಜಿ ಸಚಿವ ಕಳಕಪ್ಪ ಬಂಡಿ ಅವರು, 'ಸಾರ್ವಜನಿಕರ ಮೇಲೆ ಇಲ್ಲಸಲ್ಲದ ಕಾನೂನುಗಳನ್ನು ಹೇರಿ ಶೋಷಣೆ ನಡೆಸುತ್ತಿರುವ ಪಿಎಸ್ಐ ವರ್ತನೆಗೆ ಬಂದ್ ಗೆ ಪ್ರತಿಕ್ರಿಯಿಸಿ ಪಿಎಸ್ಐ ಮೇಲಿರುವ ಕೋಪವನ್ನು ಹೊರಹಾಕಿದ್ದಾರೆ.[ಗದಗ: ಪಿಡಿಓಗಳ ಮೇಲೆ ಗರಂ ಆದ ಕಂದಾಯ ಇಲಾಖೆ]
ಈ ಕಾಂಗ್ರೆಸ್ ಕೃಪಾಪೋಷಿತ ಪಿಎಸ್ಐ ಮಂಜುನಾಥ ಕುಸುಗಲ್ ಅವರನ್ನು ರಾಜ್ಯ ಸರಕಾರ ಅಮಾನತು ಮಾಡಬೇಕು ಎಂದು ಹೇಳಿದರು. ಈ ಬಂದ್ ಗೆ ರಾಜ್ಯ ಸರಕಾರ ಸ್ಪಂದಿಸದಿದ್ದರೆ ಮುಂಬರುವ ದಿನಗಳಲ್ಲಿ ಗದಗ ಜಿಲ್ಲಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಬಂಡಿ ಎಚ್ಚರಿಸಿದ್ದಾರೆ.