ಐಷಾರಾಮಿ ಗೋಲ್ಡನ್ ಚಾರಿಯಟ್ ರೈಲು ಸಂಚಾರ ಸ್ಥಗಿತ
ಬೆಂಗಳೂರು, ಆಗಸ್ಟ್ 30 : ಕರ್ನಾಟಕದ ಹೆಮ್ಮೆಯ ಗೋಲ್ಡನ್ ಚಾರಿಯಟ್ ರೈಲು ಸೇವೆ ಸ್ಥಗಿತವಾಗಿದೆ. ಐಷಾರಾಮಿ ರೈಲು ಸೇವೆ ನಷ್ಟವನ್ನು ಅನುಭವಿಸುತ್ತಿದ್ದು, ತಾತ್ಕಾಲಿಕವಾಗಿ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್ಟಿಡಿಸಿ)ಯ ರೈಲು ಸೇವೆ ಗೋಲ್ಡನ್ ಚಾರಿಯಟ್ ನಷ್ಟದ ಹಳಿಯ ಮೇಲೆ ಸಾಗುತ್ತಿದೆ. ಒಟ್ಟಾರೆ ನಷ್ಟ 41 ಕೋಟಿಗೆ ತಲುಪಿದೆ. ಆದ್ದರಿಂದ, ರೈಲು ಸೇವೆಯನ್ನು ನಿಲ್ಲಿಸಲಾಗಿದೆ.
ಪ್ರವಾಸೋದ್ಯಮ ಸಚಿವ ಸಿ. ಟಿ. ರವಿ ಇಲಾಖೆಯ ಅಧಿಕಾರಿಗಳ ಜೊತೆ ಮೊದಲ ಸಭೆ ನಡೆಸಿದರು. ಸಭೆಯಲ್ಲಿ ಮಾತನಾಡಿದ ಅವರು, 'ರೈಲು ಸೇವೆಯನ್ನು ತಕ್ಷಣದಿಂದ ಜಾರಿಗೆ ತರುವಂತೆ ನಿಲ್ಲಿಸಲಾಗುತ್ತಿದೆ. ನಷ್ಟದಿಂದ ಹೊರಬರುವ ತನಕ ರೈಲು ಸಂಚರಿಸುವುದಿಲ್ಲ" ಎಂದರು.

ಅಕ್ಟೋಬರ್ನಿಂದ ಮಾರ್ಚ್ತನಕ ಗೋಲ್ಡನ್ ಚಾರಿಯಟ್ ರೈಲು ಸಂಚಾರ ನಡೆಸುತ್ತಿತ್ತು. ಆದರೆ, ಕೆಎಸ್ಟಿಡಿಸಿಯ ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ ಎಂದಿನಂತೆ ಕಾರ್ಯ ನಿರ್ವಹಣೆ ಮಾಡಲಿದೆ ಎಂದು ಸ್ಪಷ್ಟಪಡಿಸಲಾಗಿದೆ.
ಸುಮಾರು 11 ವರ್ಷಗಳಿಂದ ಕೆಎಸ್ಟಿಡಿಸಿ ಗೋಲ್ಡನ್ ಚಾರಿಯಟ್ ರೈಲನ್ನು ಓಡಿಸುತ್ತಿದೆ. ಆದರೆ, ಲಾಭಕ್ಕಿಂತ ನಷ್ಟವೇ ಹೆಚ್ಚಾಗುತ್ತಿದೆ. ರೈಲನ್ನು ಲಾಭದ ಹಳಿಯ ಮೇಲೆ ತರುವ ಎಲ್ಲಾ ಪ್ರಯತ್ನಗಳು ಈಗ ವಿಫಲವಾಗಿವೆ.
ರೈಲ್ವೆ ಇಲಾಖೆ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಈ ರೈಲು ಸಂಚಾರ ನಡೆಸುತ್ತದೆ. 2018ರಲ್ಲಿ ಕೆಎಸ್ಟಿಡಿಸಿ ಖಾಸಗಿಯವರಿಗೆ ನೀಡಿದ್ದ ಟೆಂಡರ್ ಬದಲಾವಣೆ ಮಾಡಿತ್ತು. ರೈಲಿನ ವಿನ್ಯಾಸವನ್ನು ಬದಲಾವಣೆ ಮಾಡಿ ನಷ್ಟವನ್ನು ತಪ್ಪಿಸಲು ಪ್ರಯತ್ನವನ್ನು ಮಾಡಲಾಗಿತ್ತು.












Click it and Unblock the Notifications