'ಮಾಜಿ ಸಿಎಂ ಎಸ್.ಎಂ ಕೃಷ್ಣಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿ'
ಬೆಂಗಳೂರು, ಅಕ್ಟೋಬರ್, 30: 'ಕರ್ನಾಟಕ ರತ್ನ' ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ. ಇನ್ನು ಪ್ರಶಸ್ತಿಯನ್ನು ಇದೀಗ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರಿಗೆ ರಾಜ್ಯ ಸರ್ಕಾರದ ವತಿಯಿಂದ ನೀಡಿ ಗೌರವಿಸಬೇಕೆಂದು ದಿನೇಶ್ ಗೂಳಿಗೌಡ ಹಾಗೂ ಗ್ಯಾರಂಟಿ ಯೋಜನೆ ಪ್ರಾಧಿಕಾರದ ಉಪಾಧ್ಯಕ್ಷರಾದ ಸ್ಟಾರ್ ಚಂದ್ರು ಅವರು ಸಿಎಂ ಸಿದ್ದರಾಮಯ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್ ತಂಗಡಗಿ ಅವರಿಗೆ ಮನವಿ ಮಾಡಿದ್ದಾರೆ.
ಮನವಿ ಪತ್ರದಲ್ಲೇ ಏನಿದೆ?: ನಾಡಿನ ಹಿರಿಯ ರಾಜಕೀಯ ನಾಯಕರು , ನಾಲ್ಕು ಸದನಗಳನ್ನು ಪ್ರತಿನಿಧಿಸಿ ಹಲವು ಸಾಂವಿಧಾನಿಕ ಹುದ್ದೆಗಳನ್ನು ಅಲಂಕರಿಸಿ ಸರ್ವ ಹುದ್ದೆಗಳಿಗೂ ಭೂಷಣರಾಗಿ ದೇಶಕ್ಕೆ ಅದರಲ್ಲೂ ಕನ್ನಡ ನಾಡಿಗೆ ಹೆಮ್ಮೆಯ ಕಳಶ ಪ್ರಯಾರಾಗಿದ್ದಾರೆ ಎಸ್.ಎಂ.ಕೃಷ್ಣ ಅವರು. ಕರ್ನಾಟಕ ರಾಜ್ಯ ನಾಮಾಂಕಿತವಾಗಿ 50 ವಸಂತಗಳನ್ನು ಪೂರೈಸಿ ಸುವರ್ಣ ಸಂಭ್ರಮದಲ್ಲಿರುವ ಶುಭ ಸಂಧರ್ಭದಲ್ಲಿ ಶ್ರೀಯುತರಿಗೆ ರಾಜ್ಯದ ಅತ್ಯುನ್ನತ ಗೌರವವಾದ ಕರ್ನಾಟಕ ರತ್ನ ಪ್ರಶಸ್ತಿ ನೀಡುವ ಮೂಲಕ ರಾಜ್ಯದ ಜನರ ಪರವಾಗಿ ಗೌರವಿಸುವಂತೆ ಕೋರುತ್ತೇವೆ.

ಮಂಡ್ಯ ಜಿಲ್ಲೆಯನ್ನು ಪ್ರತಿನಿಧಿಯಾಗಿ ರಾಜ್ಯ ಹಾಗೂ ರಾಷ್ಟ್ರದ ಸರ್ಕಾರಗಳಲ್ಲಿ ಮಂತ್ರಿಯಾಗಿ , ನಾಡಿನ ಮುಖ್ಯಮಂತ್ರಿ ಯಾಗಿ, ಇನ್ನೂ ಹಲವು ಹುದ್ದೆಗಳನ್ನು ಅಲಂಕರಿಸಿದ ಎಸ್.ಎಂ.ಕೃಷ್ಣ ಅವರು. ಮೈಸೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯಾಗಿ, ನಂತರ ಅಮೇರಿಕಾ ದೇಶದಲ್ಲಿ ವಿಧ್ಯಾಭ್ಯಾಸ ನಡೆಸಿ ಕಾನೂನು ಪದವಿ ಪಡೆದು ಅಪಾರ ವಿದ್ವತ್ ಪಡೆದು ತಮ್ಮ ಅಪಾರ ಜ್ಞಾನ ಭಂಡಾರದ ಮೂಲಕ ಭವಿಷ್ಯದ ಕನ್ನಡ ನಾಡಿನ ಅಭಿವೃದ್ಧಿಗೆ ಶ್ರಮಿಸಿದರು. ಬೆಂಗಳೂರನ್ನು ಐಟಿ-ಬಿಟಿ ರಾಜಧಾನಿಯಾಗಿಸಿ ನಾಡಿನ ಆರ್ಥಿಕ ಬೆಳವಣಿಗೆಗೆ ದಾರದೀಪವಾದವರು.
ಎಸ್.ಎಂ.ಕೃಷ್ಣ ಅವರು ಆರು ದಶಕಗಳ ಸುದೀರ್ಘ ಅವಧಿಗೆ ಸಾಮಾಜಿಕ, ರಾಜಕೀಯ ಕ್ಷೇತ್ರದಲ್ಲಿದ್ದವರು. ತಾವು ಅಲಂಕರಿಸಿದ ಹುದ್ದೆಗಳಿಗೆ ಅವರು ನ್ಯಾಯ ಒದಗಿಸಿಕೊಟ್ಟ ಒಬ್ಬ ಶ್ರೇಷ್ಠ ರಾಜಕಾರಣಿ. ಅವರ ಸಾಧನೆಯನ್ನು ಪರಿಗಣಿಸಿ ಭಾರತ ಸರ್ಕಾರವು ಈಚೆಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು.
ಎಸ್.ಎಂ.ಕೃಷ್ಣ ರವರು ಮೈಸೂರು ವಿಶ್ವವಿದ್ಯಾನಿಲಯದ ಕೀರ್ತಿ ಕಳಶರಾಗಿದ್ದರೆ. ಇಂದು ತಾವು ರಾಜ್ಯದ ಕನ್ನಡ ನಾಡಿನ ಸುವರ್ಣ ಸಂಭ್ರಮದ ಸಂಧರ್ಭದಲ್ಲಿ ಮಂಡ್ಯ ಜಿಲ್ಲೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಹ ನಿಗಧಿಯಾಗಿದೆ. ಈ ಹಿನ್ನೆಲೆ ರವರು ನಾಡಿಗೆ ಸಲ್ಲಿಸಿದ ಕೀರ್ತಿಯನ್ನು ಪರಿಗಣಿಸಿ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡುವ ಮೂಲಕ ಕರ್ನಾಟಕಕ್ಕೆ ಅವರು ಸಲ್ಲಿಸಿದ ಸೇವೆಯನ್ನು ಸ್ಮರಿಸಬೇಕಿದೆ.
ತಾವು ಕರ್ನಾಟಕಕ್ಕೆ ಕನ್ನಡಕ್ಕೇ ಅಗ್ರ ಸ್ಥಾನ ಎಂದು ಘೋಷಿಸಿದ ಕೀರ್ತಿಯೂ ತಮ್ಮದಾಗಿದೆ. ತಮ್ಮ ಅವಧಿಯಲ್ಲಿ ಎಸ್.ಎಂ.ಕೃಷ್ಣ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಿದರೆ, ಆ ಪ್ರಶಸ್ತಿಯ ಮೌಲ್ಯವೂ ಮತ್ತಷ್ಟು ಹೆಚ್ಚಾಗಲಿದೆ. ಆದ್ದರಿಂದ ದಯಮಾಡಿ ನನ್ನ ಮನವಿಯನ್ನು ಪರಿಗಣಿಸುವಂತೆ ಕೋರುತ್ತೇವೆ ಎಂದು ಮನವಿ ಮಾಡಿದ್ದಾರೆ.












Click it and Unblock the Notifications