ಮಕ್ಕಳಿಗೆ ನರಕ ತೋರಿಸುತ್ತಿರುವ ಕೊಡಗಿನ ಗಿರಿಜನ ವಸತಿ ಶಾಲೆ
ಮಡಿಕೇರಿ,ಮಾರ್ಚ್,29: ಗಿರಿಜನ ಮಕ್ಕಳಿಗೆ ಶಿಕ್ಷಣ ನೀಡುವ ಉದ್ದೇಶದಿಂದ ಆರಂಭಿಸಲ್ಪಟ್ಟ ಆಶ್ರಮ ಶಾಲೆಗಳತ್ತ ಸರ್ಕಾರ ಆಸ್ಥೆ ವಹಿಸದ ಕಾರಣದಿಂದಾಗಿ ಅವು ಅನಾಥಾಲಯಗಳಂತೆ ಗೋಚರಿಸುತ್ತಿವೆ. ವಿದ್ಯಾರ್ಥಿ ಹಾಗೂ ಶಿಕ್ಷಕರ ಪರಿಸ್ಥಿತಿ ಹೀನಾಯಮಾನವಾಗಿದೆ. ಸೌಲಭ್ಯದ ಕೊರತೆ ಎದ್ದು ಕಾಣುತ್ತಿದೆ.
ಈ ಎಲ್ಲಾ ಸಮಸ್ಯೆಗಳು ಕಂಡು ಬರುತ್ತಿರುವುದು ಕೊಡಗು ಜಿಲ್ಲೆಯ ಮರೂರಿನ ಗಿರಿಜನ ಆಶ್ರಮ ಶಾಲೆಯಲ್ಲಿ. ಇದು ಸಾರ್ವಜನಿಕ ಶಿಕ್ಷಣ ಇಲಾಖೆಯೊಂದಿಗೆ ನಿಕಟ ಸಂಬಂಧ ಹೊಂದಿಲ್ಲದಿರುವುದೇ ಈ ಸಮಸ್ಯೆಗೆ ಮೂಲ ಕಾರಣ.
ಅಲ್ಲದೇ ಶಿಕ್ಷಣದ ವಿಷಯದಲ್ಲಿ ಯಾವುದೇ ಕೌಶಲ್ಯ, ಸಾಮರ್ಥ್ಯ ಹಾಗೂ ಬದ್ಧತೆಗಳಿಲ್ಲದ ಐಟಿಡಿಪಿ (Institution for Transportation and development Policy) ಮತ್ತು ಸಮಾಜ ಕಲ್ಯಾಣ ಇಲಾಖೆಗಳೇ ಆಶ್ರಮ ಶಾಲೆಗಳ ನಿರ್ವಹಣೆಯ ಹೊಣೆ ಹೊತ್ತಿವೆ. ಹೀಗಾಗಿ ಈ ಶಾಲೆಗಳು ಅನಾಥಾಲಯಗಳಂತೆ ಗೋಚರಿಸುತ್ತಿವೆ.
ಬುಡಕಟ್ಟು ಜನರ ಶ್ರೇಯೋಭಿವೃದ್ದಿಗಾಗಿ ಇರುವ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ, ಕನಿಷ್ಟ ಸೌಲಭ್ಯಗಳೂ ಇಲ್ಲ. ಅನಾರೋಗ್ಯ ಎಂಬುದು ಇವರನ್ನು ವಿಟ್ಟು ಹೋಗುತ್ತಿಲ್ಲ. ನರಕ ಲೋಕದ ಅನುಭವವನ್ನು ಆಶ್ರಮ ಶಾಲೆಗಳ ಮಕ್ಕಳು ಭೂ ಲೋಕದಲ್ಲಿಯೇ ಅನುಭವಿಸುತ್ತಿದ್ದಾರೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಹ ಆಶ್ರಮ ಶಾಲೆಗಳತ್ತ ಗಮನ ಹರಿಸದಿರುವುದು ದುರಂತವೇ ಸರಿ. ಆಶ್ರಮ ಶಾಲೆಗಳ ಮಕ್ಕಳ ಬೇಡಿಕೆ, ನೋವುಗಳು ಏನು? ಅವರು ಎದುರಿಸುತ್ತಿರುವ ಸಮಸ್ಯೆ ಏನು ಇಲ್ಲಿದೆ ಮಾಹಿತಿ

ಗಿರಿಜನ ಆಶ್ರಮ ಶಾಲೆಗಳ ಸ್ಥಾಪನೆ ಯಾಕೆ? ಎಂದು?
ಶೈಕ್ಷಣಿಕ ಸಬಲೀಕರಣಕ್ಕಾಗಿ ಬುಡಕಟ್ಟು ಹಿನ್ನಲೆಯಿಂದ 1952ರಿಂದಲೇ ಆಶ್ರಮ ಶಾಲೆಗಳ ವ್ಯವಸ್ಥೆಯನ್ನು ಗಿರಿಜನರಿಗಾಗಿ ಆರಂಭಿಸಲಾಗಿದೆ. ಆ ಮೂಲಕ ವಿದ್ಯಾರ್ಥಿಗಳಿಗೆ ವಸತಿ ಸಹಿತ ಶಿಕ್ಷಣ ನೀಡುವ ವ್ಯವಸ್ಥೆಯನ್ನು ಮಾಡಲಾಯಿತು.

ಕೊಡಗಿನಲ್ಲಿ ಎಷ್ಟಿವೆ ಆಶ್ರಮ ಶಾಲೆಗಳು? ಇವುಗಳ ಪರಿಸ್ಥಿತಿ ಏನು?
ಆಶ್ರಮ ಶಾಲೆಗಳು ಕೊಡಗಿನಲ್ಲಿ 12 ಇವೆ. ಆದರೆ ಇಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲು ನುರಿತ ಖಾಯಂ ಶಿಕ್ಷಕರಾಗಲಿ, ಅಗತ್ಯ ಸಹ ಸಿಬ್ಬಂದಿಗಳಾಗಲಿ, ಶಿಕ್ಷಣ ಸಂಬಂಧಿ ಕಲಿಕಾ ಪರಿಕರಗಳಾಗಲಿ, ಬೋಧನೆಗೆ ಸಂಬಂಧಿಸಿದ ಯಾವುದೇ ನಿಯಮಗಳಿಲ್ಲ. ಶೈಕ್ಷಣಿಕ ಪರಿಕರಗಳಂತೂ ಕೇಳುವುದೇ ಬೇಡ. ದೈಹಿಕ ಮತ್ತು ವೃತ್ತಿಪರ ಶಿಕ್ಷಕರ ನೇಮಕಾತಿಗೂ ಅವಕಾಶವಿಲ್ಲ.

ನಾನಾ ರೋಗಗಳ ತವರಾಗುತ್ತಿರುವ ಆಶ್ರಮ ಶಾಲೆ
ಈ ಆಶ್ರಮದ ಮಕ್ಕಳು ತೊಳೆದ ಬಟ್ಟೆಗಳನ್ನು ಒಣಗಿಸಲು ಸ್ಥಳವಿಲ್ಲ. ಆರೋಗ್ಯ ವಿಚಾರಿಸಲು ವೈದ್ಯರಿಲ್ಲ. ಇಲ್ಲಿರುವ ಹಲವು ಮಕ್ಕಳು ಚರ್ಮ ರೋಗಗಳಿಗೆ ತುತ್ತಾಗಿದ್ದು, ನಿತ್ಯವೂ ನರಕಯಾತನೆ ಅನುಭವಿಸುತ್ತಿದ್ದಾರೆ. ವೈಯಕ್ತಿಕ ಸ್ವಚ್ಚತೆಗೆ ಪೂರಕವಾಗಿ ಸ್ನಾನಕ್ಕೆ ಬೇಕಾದ ಬಿಸಿನೀರು, ಸಾಬೂನು ಮತ್ತು ಮಕ್ಕಳ ಬಟ್ಟೆಗಳನ್ನು ಸ್ವಚ್ಛಗೊಳಿಸುವವರಿಲ್ಲದೆ ಮಕ್ಕಳು ಕಜ್ಜಿ, ಚರ್ಮರೋಗ ಇತ್ಯಾದಿಗಳಿಂದ ಬಳಲುತ್ತಿದ್ದಾರೆ.

ತರಬೇತಿ ಕೊರತೆ ಎದುರಿಸುತ್ತಿರುವ ಶಿಕ್ಷಕರು
ಬಹುತೇಕ ಆಶ್ರಮ ಶಾಲೆಗಳಲ್ಲಿ ಖಾಸಗಿ ಸಂಸ್ಥೆಗಳ ಮೂಲಕ ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿಗಳ ನೇಮಕಾತಿ ನಡೆಯುತ್ತಿದೆ. ಈ ಸಿಬ್ಬಂದಿಗಳಿಗೆ ಶಿಕ್ಷಣಕ್ಕೆ ಸಂಬಂಧಿತ ತರಬೇತಿಗಳಿಲ್ಲ, ನಿಗದಿತ ಸಮಯಕ್ಕೆ ಗೌರವಧನ ತಲುಪುತ್ತಿಲ್ಲ, ಮೇಲುಸ್ತುವಾರಿಯ ಕೊರತೆ. ಇದರಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮರೀಚಿಕೆಯಾಗಿದೆ.

ಮಕ್ಕಳಿಗೆ ಬಂದೊದಗಿದ ದುಸ್ಥಿತಿ ಏನು?
ಆಶ್ರಮ ಶಾಲೆಯಲ್ಲಿ ಶಿಕ್ಷಣದ ಗುಣಮಟ್ಟ ಕುಸಿದಿದೆ ಎಂಬುದಕ್ಕೆ ಇಲ್ಲಿನ ವಿದ್ಯಾರ್ಥಿಗಳೇ ಸಾಕ್ಷಿ. ಹೌದು ಏಳನೇ ತರಗತಿ ವಿದ್ಯಾರ್ಥಿಗೆ ತನ್ನ ಹೆಸರನ್ನೇ ಬರೆಯಲಾಗದ ದುಸ್ಥಿತಿ ಬಂದೊದಗಿದೆ. ಅಲ್ಲದೇ ಇಲ್ಲಿನ ಮಕ್ಕಳಿಗೆ ವರ್ಷಾಂತ್ಯದವರೆಗೂ ಪಠ್ಯಪುಸ್ತಕಗಳು ಮತ್ತು ಸಮವಸ್ತ್ರಗಳ ಪೂರೈಕೆಯಾಗುತ್ತಿಲ್ಲ.

ಕನಿಷ್ಟ ಪೌಷ್ಟಿಕತೆಯೂ ಇರದ ಆಹಾರ
ಇಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಉತ್ತಮ ಪೌಷ್ಟಿಕ ಆಹಾರವನ್ನು ಒದಗಿಸುವ ಆಹಾರದ ಪಟ್ಟಿಯನ್ನು ಗೋಡೆಗೆ ನೇತು ಹಾಕಲಾಗಿದೆ. ಆದರೆ ಒದಗಿಸುವ ಆಹಾರದಲ್ಲಿ ಕನಿಷ್ಟ ಪೌಷ್ಟಿಕಾಂಶಗಳೂ ಇಲ್ಲ. ಶುದ್ಧ ಕುಡಿಯುವ ನೀರು, ಶೌಚಾಲಯ, ಸ್ನಾನದ ಮನೆ, ಊಟದ ಮನೆ, ಅಡುಗೆ ಮನೆ, ಮಲಗುವ ಕೋಣೆ, ತರಗತಿ ಕೋಣೆಯಂತೂ ಇಲ್ಲವೇ ಇಲ್ಲ.

ಕರ್ನಾಟಕದ ಆಶ್ರಮ ಶಾಲೆಗಳಿಗೆ ಕೇರಳ ಶಾಲೆ ಮಾದರಿಯಾಗಲಿ
ನೆರೆ ರಾಜ್ಯವಾದ ಕೇರಳದಲ್ಲಿ ಬುಡಕಟ್ಟು ಮಕ್ಕಳಿಗಾಗಿ ಆಶ್ರಮ ಶಾಲೆಗಳಿವೆ. ಅಲ್ಲಿ ಒಂದನೇ ತರಗತಿಯಿಂದ ಪಿಯುಸಿ ವರೆಗೆ ಒಂದೇ ಆವರಣದೊಳಗೆ 350 ರಿಂದ 400 ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯುವ ಅವಕಾಶವಿದೆ. ಅಲ್ಲದೇ ವರ್ಷದಿಂದ ವರ್ಷಕ್ಕೆ ಈ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಅಧಿಕವಾಗುತ್ತಿದ್ದು, ಎಲ್ಲಾ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗುತ್ತಿದ್ದಾರೆ. ಆದರೆ ನಮ್ಮಲ್ಲಿ ಅದು ಸಾಧ್ಯವಾಗದೆ ಮಕ್ಕಳು ಅನಾಥರಂತೆ ಬದುಕುತ್ತಿರುವುದಂತೂ ಮಾತ್ರ ದುರಂತವೇ..












Click it and Unblock the Notifications