ತಂದೆ-ತಾಯಿ ಜೊತೆ ಎಸ್ಐಟಿ ಕಚೇರಿಗೆ ಬಂದ ಕುಣಿಗಲ್ ಗಿರಿ
ಬೆಂಗಳೂರು, ಸೆಪ್ಟೆಂಬರ್ 15 : ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ರೌಡಿ ಶೀಟರ್ ಕುಣಿಗಲ್ ಗಿರಿ ವಿಚಾರಣೆ ನಡೆಸಲಾಗಿತ್ತು. ಜೈಲಿನಿಂದ ಬಿಡುಗಡೆಗೊಂಡಿರುವ ಕುಣಿಗಲ್ ಗಿರಿ ಎಸ್ಐಟಿ ಕಚೇರಿಗೆ ಆಗಮಿಸಿದ್ದಾರೆ.
ಶುಕ್ರವಾರ ತಂದೆ-ತಾಯಿಯ ಜೊತೆ ಕುಣಿಗಲ್ ಗಿರಿ ಎಸ್ಐಟಿ ಕಚೇರಿಗೆ ಬಂದಿದ್ದರು. ಆದರೆ, ಅಧಿಕಾರಿಗಳು ಸಿಗದ ಕಾರಣ ಅಲ್ಲಿಂದ ವಾಪಸ್ ತೆರಳಿದ್ದಾರೆ. ಅಧಿಕಾರಿಗಳು ಇಂದು ಬರಲು ಸೂಚನೆ ನೀಡದಿದ್ದರೂ ಸ್ವಯಂ ಪ್ರೇರಿತವಾಗಿ ಅವರು ಕಚೇರಿಗೆ ಆಗಮಿಸಿದ್ದರು.

ರಾಮನಗರ ಜೈಲಿನಲ್ಲಿದ್ದ ಕುಣಿಗಲ್ ಗಿರಿಯನ್ನು ಎಸ್ಐಟಿ ಅಧಿಕಾರಿಗಳು ಗುರುವಾರ ವಿಚಾರಣೆ ನಡೆಸಿದ್ದರು. ನಿನ್ನೆ ಸಂಜೆ ಜಾಮೀನಿನ ಮೇಲೆ ಅವರು ಬಿಡುಗಡೆಗೊಂಡಿದ್ದರು. ಇಂದು ಅವರು ತಂದೆ-ತಾಯಿಯ ಜೊತೆ ಎಸ್ಐಟಿ ಕಚೇರಿಗೆ ಬಂದಿದ್ದರು.
ಮಾಧ್ಯಮಗಳ ಜೊತೆ ಮಾತನಾಡಿದ ಕುಣಿಗಲ್ ಗಿರಿ, 'ಯಾವ ಕಾರಣಕ್ಕೆ ಈ ಕೇಸಿನಲ್ಲಿ ನನ್ನ ಹೆಸರು ಬಂದಿದೆ ಎಂಬುದು ತಿಳಿದಿಲ್ಲ. ನನ್ನ ಕಡೆಯವರು ಯಾರೂ ಇದರಲ್ಲಿ ಭಾಗಿಯಾಗಿಲ್ಲ. ನನಗೆ ಆಗದವರು ನನ್ನ ಹೆಸರನ್ನು ಇದರಲ್ಲಿ ಸೇರಿಸಿದ್ದಾರೆ. ನಿನ್ನೆ ನಾನು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದೇನೆ' ಎಂದರು.
'ನಿನ್ನೆ ಪೊಲೀಸರು ಜೈಲಿಗೆ ಬಂದು ನನ್ನನ್ನು ಮಾತನಾಡಿಸಿದ್ದರು. ಮಾಧ್ಯಮಗಳಲ್ಲಿ ನನ್ನ ಹೆಸರು ಕೇಳಿಬರುತ್ತಿರುವುದರಿಂದ ತಂದೆ-ತಾಯಿ ಸಲಹೆಯಂತೆ ಅಧಿಕಾರಿಗಳನ್ನು ಭೇಟಿ ಮಾಡಲು ಆಗಮಿಸಿದ್ದೇನೆ' ಎಂದು ಹೇಳಿದರು.
ಕುಣಿಗಲ್ ಗಿರಿ ಯಾರು? : ಅಪಹರಣ, ಸುಲಿಗೆ, ದರೋಡೆ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಕುಣಿಗಲ್ ಗಿರಿಯನ್ನು 2014ರಲ್ಲಿ ಆಂಧ್ರಪ್ರದೇಶದಲ್ಲಿ ಬಂಧಿಸಲಾಗಿತ್ತು. ಕೆಲವು ಸುಪಾರಿ ಹತ್ಯೆ ಪ್ರಕರಣಗಳಲ್ಲೂ ಗಿರಿ ಹೆಸರು ಕೇಳಿ ಬಂದಿದೆ. ಆದ್ದರಿಂದ, ಎಸ್ಐಟಿ ಪೊಲೀಸರು ಗಿರಿ ವಿಚಾರಣೆ ನಡೆಸಿದ್ದರು.
ಗೌರಿ ಲಂಕೇಶ್ ಹತ್ಯೆ ಪ್ರಕರಣ, ಅಕ್ರಮ ಶಸ್ತ್ರಾಸ್ತ್ರ ಸಾಗಾಟ ಪ್ರಕರಣದ ಬಗ್ಗೆ ಮಾಹಿತಿ ಪಡೆಯಲು ಎಸ್ಐಟಿ ಅಧಿಕಾರಿಗಳು ಗಿರಿಯನ್ನು ವಿಚಾರಣೆ ನಡೆಸಿದ್ದರು. ನಿನ್ನೆ ಸಂಜೆಯೇ ಅವರು ರಾಮನಗರ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ.












Click it and Unblock the Notifications