ಗೌರಿ ಕೊಲೆ ಪ್ರಕರಣ: ಪರಶುರಾಮ್ ವಾಗ್ಮೋರೆ ಬೆನ್ನತ್ತಿದ ರೋಚಕ ಕಥೆ
Recommended Video

ಬೆಂಗಳೂರು, ಜೂನ್ 14: ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಪರಶುರಾಮ್ ವಾಗ್ಮೋರೆ ಬಂಧಿತನಾಗಿದ್ದಾನೆ. ಹಾಗೆ ನೋಡಿದರೆ ಹತ್ಯೆ ನಡೆದ ನಂತರ ಪೊಲೀಸರು ಯಾವೊಂದೂ ಸುಳಿವು ಸಿಗದೆ ಕಂಗಾಲಾಗಿದ್ದರು. ಹೇಗೇ ಹುಡುಕಿದರೂ ಹಂತಕರ ಒಂದೇ ಒಂದೂ ಸುಳಿವೂ ಸಿಕ್ಕಿರಲಿಲ್ಲ. ಹಾಗಿದ್ದರೆ ಪೊಲೀಸರ ಕೈಗೆ ವಾಗ್ಮೋರೆ ಸಿಕ್ಕಿದ್ದು ಹೇಗೆ? ಇದೇ ಒಂದು ರೋಚಕ ಕಥೆ.
ಸಾಮಾನ್ಯವಾಗಿ ಅಪರಾಧ ನಡೆದ ತಕ್ಷಣ ಸುತ್ತ ಮುತ್ತ ಯಾರಾದರೂ ರೂಂ ಬಾಡಿಗೆ ಮಾಡಿಕೊಂಡಿದ್ದವರು, ರೂಂ ಖಾಲಿ ಮಾಡಿದ್ದಾರಾ ಎಂದು ಪರಿಶೀಲನೆ ನಡೆಸುತ್ತಾರೆ. ಅದೇ ರೀತಿ ಗೌರಿ ಲಂಕೇಶ್ ಹತ್ಯೆ ನಡೆದಾಗ ಪೊಲೀಸರು ಈ ರೀತಿ ಬಾಡಿಗೆ ರೂಮುಗಳನ್ನು ತಡಕಾಡಿದ್ದರು. ಆಗಲೂ ಯಾವುದೇ ಸಣ್ಣ ಪುಟ್ಟ ಸಾಕ್ಷ್ಯಗಳು ಸಿಗದಾಗ ಈ ಬಗ್ಗೆ ಮಾಹಿತಿ ಇದ್ದರೆ ಕೊಡಿ ಎಂದು ಕೇಳಿಕೊಂಡಿದ್ದರು.
ಆಗ ಪೊಲೀಸರಿಗೆ ಒಂದು ಕುತೂಹಲಕಾರಿ ಮಾಹಿತಿ ನೀಡಿದರು ಸುಂಕದಕಟ್ಟೆ ನಿವಾಸಿ ಸುರೇಶ್.

ಮಾಹಿತಿಯ ಜಾಡು ಹಿಡಿದು
ಕಟ್ಟಡ ನಿರ್ಮಾಣ ವ್ಯವಹಾರ ನಡೆಸುವ ಸುರೇಶ್ ಅವರಲ್ಲಿ ಬಾಡಿಗೆ ಕೋಣೆಗಳಿತ್ತು. ಇದರಲ್ಲಿ ಉಳಿದುಕೊಂಡಿದ್ದ ಇಬ್ಬರು ವ್ಯಕ್ತಿಗಳು ಗೌರಿ ಲಂಕೇಶ್ ಹತ್ಯೆಯಾದ ಸೆಪ್ಟೆಂಬರ್ 5ರಂದೇ ರಾತ್ರಿ 9 ಗಂಟೆಗೆ ಕೊಠಡಿ ಖಾಲಿ ಮಾಡಿ ಊರು ಬಿಟ್ಟಿದ್ದರು. ಈ ಸುಳಿವನ್ನು ಸುರೇಶ್ ಪೊಲೀಸರಿಗೆ ತಿಳಿಸಿದ್ದರು.
'ಹತ್ಯೆಯಾದ ದಿನ ಆರೋಪಿಗಳು ಮೂರು ಬಾರಿ ರೂಮಿನಿಂದ ಹೊರಗೆ ಹೋಗಿ ವಾಪಾಸ್ಸು ಬಂದಿದ್ದರು. ನಂತರ ರಾತ್ರಿ 9 ಗಂಟೆ ಹೊತ್ತಿಗೆ ತಮ್ಮ ಲಗೇಜ್ ಸಮೇತ ರೂಮಿಂದ ಹೊರ ಬಿದ್ದಿದ್ದರು' ಎಂಬುದನ್ನು ಸುರೇಶ್ ತಿಳಿಸಿದ್ದರು.
ಹಾಗೆ ರೂಮಿನಲ್ಲಿ ಉಳಿದುಕೊಂಡಿದ್ದವರ ಮಾಹಿತಿ ಪಡೆದಾಗ ಅವರಲ್ಲೊಬ್ಬನ ಹೆಸರು ಸುಜಿತ್ (ಸುಜಿತ್ ಅಲಿಯಾಸ್ ಪ್ರವೀಣ್) ಎಂದೂ, ಆತ ಮರಾಠಿಯಲ್ಲಿ ಮಾತನಾಡುತ್ತಿದ್ದ ಎಂಬ ಮಾಹಿತಿ ಸಿಕ್ಕಿತ್ತು. ಆದರೆ ಇವರೇ ಹಂತಕರು ಎನ್ನಲು ಯಾವುದೇ ಸಾಕ್ಷ್ಯಗಳಾಗಲಿ ಇರಲಿಲ್ಲ.

ಮೂರು ತಿಂಗಳ ಕಾರ್ಯಾಚರಣೆ
ಹಾಗಾಗಿ, 'ನಾವು ಅವರನ್ನು ಕಳೆದ ಮೂರು ತಿಂಗಳಿನಿಂದ ಹಿಂಬಾಲಿಸಿದ್ದೆವು' ಎನ್ನುತ್ತಾರೆ ತನಿಖೆಯ ಭಾಗವಾಗಿರುವ ಅಧಿಕಾರಿಯೊಬ್ಬರು. ಈ ಹಂತದಲ್ಲಿ ಸಿಕ್ಕಿದ ಮಾಹಿತಿಗಳನ್ನು ಸೋರಿಕೆಯಾಗದೆ ಹಿಡಿದಿಟ್ಟುಕೊಳ್ಳುವುದೇ ಪೊಲೀಸರಿಗೆ ಸವಾಲಿನದಾಗಿತ್ತು. ಹಂತಕರ ಜಾಲವು ಪ್ರತಿ ಹಂತದಲ್ಲೂ ಜಾಗೃತವಾಗಿತ್ತು. ಅದರಲ್ಲೂ ಪೊಲೀಸರಿಂದಲೇ ಈ ಜಾಲ ಮಾಹಿತಿ ಕದಿಯಲು ಹೊಂಚಿ ಹಾಕಿತ್ತು.
ಹೀಗಾಗಿ ತನಿಖಾ ವಿಭಾಗದ ಮುಖ್ಯಸ್ಥರಾದ ಬಿ.ಕೆ.ಸಿಂಗ್ ಮತ್ತು ಡಿಸಿಪಿ ಅನುಚೇತ್ ಎಚ್ಚರಿಕೆ ವಹಿಸಿದ್ದರು. ತನಿಖೆಯ ಎಲ್ಲಾ ಮಾಹಿತಿಗಳು ಇವರಿಬ್ಬರಿಗೆ ಮಾತ್ರ ಸಿಗುತ್ತಿದ್ದವು. ಉಳಿದವರಿಗೆ ಕೆಲವು ನಿರ್ಧಿಷ್ಟ ಕೆಲಸಗಳನ್ನು ಮಾತ್ರ ನೀಡಲಾಗಿತ್ತು. ಅವರಿಗೆ ಉಳಿದವರು ಏನು ಮಾಡುತ್ತಿದ್ದಾರೆ, ಏನು ಮಾಹಿತಿಗಳು ಸಿಕ್ಕಿವೆ ಎಂಬುದು ತಿಳಿಯುತ್ತಿರಲಿಲ್ಲ.

ಬಾಡಿಗೆ ಮನೆ ಪುರಾಣ, ವಾಗ್ಮೋರೆ ಎಂಟ್ರಿ
ಸುಜಿತ್ ಅಲಿಯಾಸ್ ಪ್ರವೀಣ್ ಗೆ ಸ್ನೇಹಿತರೊಬ್ಬರ ಮೂಲಕ ಪರಿಚಯವಾದವರು ಸುರೇಶ್. ಹೀಗೆ ಅದೇ ಪರಿಚಯದ ಮೇಲೆ ಸುರೇಶ್ ಅವರ ಬಾಡಿಗೆ ರೂಂ ಪಡೆದಿದ್ದ ಪ್ರವೀಣ್. ಹಾಗೆ ರೂಂ ಪಡೆದವನು ಅಲ್ಲೇ ಇರುತ್ತಿದ್ದ. ಸ್ವಲ್ಪ ದಿನ ಕಳೆದ ಮೇಲೆ ಮಾಲಿಕ ಸುರೇಶ್ ಬಳಿ ಬೇಡಿಕೆಯೊಂದನ್ನು ಮುಂದಿಟ್ಟ. "ಖಾಸಗಿ ಕೆಲಸದ ಮೇಲೆ ನನ್ನ ಸ್ನೇಹಿತನೊಬ್ಬ ಬೆಂಗಳೂರಿಗೆ ಬರುತ್ತಾನೆ. ಆತನೂ ನನ್ನ ರೂಂನಲ್ಲೇ ಇರುತ್ತಾನೆ," ಎಂದಿದ್ದ ಪ್ರವೀಣ. ಇದಕ್ಕೆ ಮಾಲಿಕರ ಒಪ್ಪಿಗೆ ಸಿಕ್ಕಿತ್ತು. ಹಾಗೆ ರೂಮಿಗೆ ಎಂಟ್ರಿ ಕೊಟ್ಟವನು ಪರಶುರಾಮ್ ವಾಗ್ಮೋರೆ.
ಮೊದಲಿಗೆ ಆತನ ರೂಂ ವಾಸ 2-3 ದಿನಗಳಿಗಷ್ಟೇ ಸೀಮಿತವಾಗಿತ್ತು. ಆದರೆ ಆಗಸ್ಟ್ ನಲ್ಲಿ ಬಂದು ರೂಂನಲ್ಲೇ ಝಂಡಾ ಊರಿದ. 'ಆತ ಮರಾಠಿಯಲ್ಲಿ ಮಾತನಾಡುತ್ತಿದ್ದ. ಅವನ ಭೇಟಿಗೆ ನವೀನ್ (ಅಲಿಯಾಸ್ ಹೊಟ್ಟೆ ಮಂಜ), ಮತ್ತು ಇತರರು ಬರುತ್ತಿದ್ದರು. ಇವರಲ್ಲಿ ಕೆಲವರ ಮುಖ ಚಹರೆ ಹೊರ ರಾಜ್ಯದವರಂತೆ ಕಾಣುತ್ತಿತ್ತು' ಎನ್ನುವುದು ಸುರೇಶ್ ಹೇಳಿಕೆ.

ಸೆಪ್ಟೆಂಬರ್ 5ರ ಆ ದಿನ ನಡೆದದ್ದೇನು?
'ಸೆಪ್ಟೆಂಬರ್ 5ರಂದು ಬೆಳಿಗ್ಗೆ 10 ಕ್ಕೆ ರೂಮಿಂದ ಹೊರ ಹೋದ ಪ್ರವೀಣ್ ಮತ್ತು ವಾಗ್ಮೋರೆ ಮಧ್ಯಾಹ್ನ12 ಗಂಟೆಗೆ ವಾಪಸ್ ಬಂದಿದ್ದರು. ಮತ್ತೆ ಮೂರು ಗಂಟೆಗೆ ಹೋದವರು ಸಂಜೆ 4.30ರ ಸುಮಾರಿಗೆ ರೂಮಿಗೆ ಬಂದರು. ಕೊನೆಗೆ ಆರು ಗಂಟೆಗೆ ತಮ್ಮ ಬಾಡಿಗೆ ಕೋಣೆಯಿಂದ ಹೊರ ಬಿದ್ದವರು 9 ಗಂಟೆಗೆ ತಿರುಗಿ ಬಂದರು. ಹಾಗೆ ಬಂದವರೇ ರೂಂ ಖಾಲಿ ಮಾಡಿಕೊಂಡು ಹೊರಟೇ ಬಿಟ್ಟರು' ಎಂಬ ವಿವರವನ್ನು ಸುರೇಶ್ ನೀಡಿದ್ದರಂತೆ.
ಇಷ್ಟಾಗುವ ಹೊತ್ತಿಗೆ ಕೊಲೆಗಾರರಿಗೆ ಸಂಬಂಧಿಸಿದಂತೆ ಒಂದಷ್ಟು ತಾಂತ್ರಿಕ ಸಾಕ್ಷ್ಯಗಳನ್ನು ಎಸ್ಐಟಿ ಅಧಿಕಾರಿಗಳೂ ಸಂಗ್ರಹಿಸಿದ್ದರು. ಈ ಮೊಬೈಲ್ ಕರೆಗಳ ಸಾಕ್ಷ್ಯಗಳ ಜೊತೆ ಸುರೇಶ್ ಹೇಳಿಕೆ ತಾಳೆಯಾಗುತ್ತಿತ್ತು. ಅಲ್ಲಿಗೆ ಒಂದು ಹಂತದ ಅನುಮಾನಗಳು ನಿಜವಾಗಿತ್ತು.

ಮಿಂಚಿನ ಕಾರ್ಯಾಚರಣೆ
ಮೊದಲೇ ಹೇಳಿದ ಹಾಗೆ ಇವರ ಮೇಲೆ ಪೊಲೀಸರು ಕಣ್ಣಿಟ್ಟಿದ್ದರು. ಆರಂಭದಲ್ಲಿ ಪೊಲೀಸರ ಭಯದಿಂದ ಈ ಜಾಲದ ಯಾರೊಬ್ಬರೂ ಪರಸ್ಪರ ಸಂಪರ್ಕಕ್ಕೆ ಬಂದಿರಲಿಲ್ಲ. ಆದರೆ ನಮ್ಮ ಬಗ್ಗೆ ಪೊಲೀಸರಿಗೆ ಯಾವುದೇ ಸುಳಿವು ಸಿಕ್ಕಿಲ್ಲ ಎಂಬುದು ಈ 'ಜಾಲ'ಕ್ಕೆ ಖಾತರಿಯಾಗುತ್ತಿದ್ದಂತೆ ಗುಂಪಿನ ಯುವಕರು ಮತ್ತೆ ಸಮೀಪಿಸಲು ಆರಂಭಿಸಿದರು.
ಕಾಯಿನ್ ಬಾಕ್ಸ್ ಗಳಿಂದ ಕರೆ ಮಾಡುವುದು, ಸಂಪರ್ಕ ಬೆಳೆಸುವುದು ಆರಂಭವಾಯಿತು.
ಇದೇ ಸಂದರ್ಭಕ್ಕಾಗಿ ಕಾದಿದ್ದ ಎಸ್ಐಟಿ ಪೊಲೀಸರು ಆರೋಪಿಗಳನ್ನು ಬಲೆಗೆ ಕೆಡವಿದರು. ಹಾಗೆ ನಡೆದಿದ್ದೇ ಪ್ರವೀಣ್, ವಾಗ್ಮೋರೆ ಬಂಧನ. ಈಗ ಇವರೆಲ್ಲಾ ಪೊಲೀಸರ ಕಸ್ಟಡಿಯಲ್ಲಿದ್ದಾರೆ.
ಮೂಲಗಳ ಪ್ರಕಾರ ತಾನು ಹತ್ಯೆ ಸಮಯದಲ್ಲಿ ಇದ್ದೆ ಎಂಬುದಾಗಿ ವಾಗ್ಮೋರೆ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ.












Click it and Unblock the Notifications