ನಾನು ಓಡಿ ಹೋಗಿಲ್ಲ, ಬೆಂಗಳೂರಲ್ಲೇ ಇದ್ದೇನೆ: ಜನಾರ್ದನ ರೆಡ್ಡಿ ವಿಡಿಯೋ
Recommended Video
ಬೆಂಗಳೂರು, ನವೆಂಬರ್ 10: ಬಹುಕೋಟಿ ವಂಚನೆ ಪ್ರಕರಣದಲ್ಲಿ ಸಿಲುಕಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅಜ್ಞಾತ ಸ್ಥಳದಿಂದ ವಿಡಿಯೋ ಮುದ್ರಣ ಮಾಡಿ ಮಾಧ್ಯಮಗಳಿಗೆ ರವಾನೆ ಮಾಡಿದ್ದಾರೆ.
ವಕೀಲ ಚಂದ್ರಶೇಖರ್ ಅವರೊಂದಿಗೆ ಜನಾರ್ದನ ರೆಡ್ಡಿ ಈ ವಿಡಿಯೋ ತುಣುಕಿನಲ್ಲಿ ಕಾಣಿಸಿಕೊಂಡಿದ್ದಾರೆ.
ಭಾನುವಾರ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ವಕೀಲರ ಮೂಲಕ ನೋಟಿಸ್ ಜಾರಿ ಮಾಡಿರುವುದರಿಂದ ಇಂದೇ ವಿಚಾರಣೆಗೆ ಹಾಜರಾಗುತ್ತಿದ್ದೇನೆ ಎಂದು ಜನಾರ್ದನ ರೆಡ್ಡಿ ಮಾಹಿತಿ ನೀಡಿದ್ದಾರೆ.
ಹಣ ವಂಚನೆ ಪ್ರಕರಣ: ಸಿಸಿಬಿ ಕಚೇರಿಯತ್ತ ಜನಾರ್ದನ ರೆಡ್ಡಿ
ನಾನು ಎಲ್ಲಿಯೂ ಓಡಿಹೋಗಿಲ್ಲ. ಬೆಂಗಳೂರು ಮಹಾನಗರದಲ್ಲೇ ಇದ್ದೇನೆ. ಹೈದರಾಬಾದ್ಗೆ ಓಡಿ ಹೋಗಿಲ್ಲ. ಈ ಸುದ್ದಿ ನೋಡಿ ನಗುವುದೋ ಅಳುವುದೋ ತಿಳಿಯುತ್ತಿಲ್ಲ.
ಇಷ್ಟು ದೊಡ್ಡ ಮಹಾನಗರ ಬಿಟ್ಟು ಬೇರೆಡೆ ಹೋಗುವ ಅಗತ್ಯವೂ ಇಲ್ಲ. ನೋಟಿಸ್ ಬಾರದೆ ಹಾಜರಾಗುವುದು ಬೇಡ ಎಂದು ವಕೀಲರು ಸಲಹೆ ನೀಡಿದ್ದರಿಂದ ಅದು ಬರುವವರೆಗೂ ಕಾಯ್ದಿದ್ದೆ. ಪೊಲೀಸರು ಕೆಟ್ಟ ಉದ್ದೇಶದಿಂದ ಈ ರೀತಿ ಸುದ್ದಿ ಹರಡಿಸಿದ್ದಾರೆ.
ಜನಾರ್ದನ ರೆಡ್ಡಿಗೆ ಆಂಬಿಡೆಂಟ್ 20 ಕೋಟಿ ಕೊಟ್ಟಿದ್ದೇಕೆ? ಡೀಟೇಲ್ಸ್ ಇಲ್ಲಿದೆ
ಬೆಂಗಳೂರಿನಲ್ಲಿ ನನ್ನ ಮನೆ ಸುತ್ತ ಮುತ್ತ 15-20 ದಿನಗಳಿಂದ ಆತಂಕದ ವಾತಾವರಣ ಇದೆ ಎಂದು ಹೇಳಿದ್ದೆ. ಎರಡು ದಿನಗಳಿಂದ ಈಚೆಗೆ ಸಿಸಿಬಿ ಪೊಲೀಸರು ಮಾಧ್ಯಮದವರಿಗೆ ತಪ್ಪು ಮಾಹಿತಿ ನೀಡುವ ಮೂಲಕ ನನ್ನನ್ನು ಹುಡುಕುತ್ತಿರುವುದಾಗಿ ಬಿಂಬಿಸಿದ್ದಾರೆ ಎಂದು ರೆಡ್ಡಿ ಹೇಳಿದ್ದಾರೆ.
ಬೆಂಗಳೂರಿನಲ್ಲಿಯೇ ಇದ್ದೆ
ನಾನು ಈ ಸಂದರ್ಭದಲ್ಲಿ ಬೆಂಗಳೂರಿನಲ್ಲಿಯೇ ಇದ್ದೆ. ಇಲ್ಲಿಂದಲೇ ವಕೀಲರನ್ನು ಸಂಪರ್ಕಿಸಿ, ಸಿಸಿಬಿ ಕಚೇರಿಗೆ ಹೋಗೋಣ. ಏನು ವಿಚಾರ ಎಂದು ಕೇಳೋಣ ಎಂದೆ. ಆಗ ಅವರು ನೋಟಿಸ್ ಬಂದಿಲ್ಲ, ಎಫ್ಐಆರ್ನಲ್ಲಿ ಹೆಸರಿಲ್ಲ. ಹೀಗಿರುವಾಗ ಯಾವ ಕಾರಣಕ್ಕೆ ನಾವು ಹೋಗಬೇಕು? ಕಾನೂನು ಬದ್ಧವಾಗಿ ನೋಟಿಸ್ ಬಂದರೆ ಹೋಗಬಹುದು ಎಂದು ಹೇಳಿದ್ದಕ್ಕೆ ಸುಮ್ಮನಾಗಿದ್ದೆ.
ತಪ್ಪು ಮಾಡಿಲ್ಲ
ನಾನು ಯಾವುದೇ ತಪ್ಪು ಮಾಡಿಲ್ಲ. ಸಣ್ಣ ಆಧಾರ ಇದ್ದರೂ ಅದನ್ನು ಮಾಧ್ಯಮದ ಮುಂದೆ ಅವರು ತೋರಿಸಬೇಕಿತ್ತು. ಆದರೆ, ಮಾಧ್ಯಮಗಳಿಗೆ ಸುಳ್ಳು ಮಾಹಿತಿ ನೀಡಿ ದಿಕ್ಕು ತಪ್ಪಿಸುತ್ತಿದ್ದಾರೆ.
ನಾನು ಪೊಲೀಸ್ ಕುಟುಂಬದಲ್ಲಿ ಹುಟ್ಟಿದವನು. ಪೊಲೀಸ್ ಕ್ವಾರ್ಟರ್ಸ್ನಲ್ಲಿ ಬೆಳೆದವನು. ಪೊಲೀಸರು ರಾಜಕೀಯ ಷಡ್ಯಂತ್ರಕ್ಕೆ ಒಳಗಾಗದೆ ವಿಚಾರಣೆ ನಡೆಸಲಿದ್ದಾರೆ ಎಂಬ ನಂಬಿಕೆ ಇದೆ.
ಎಂಇಪಿಯ ನೌಹೀರಾ ಶೇಖ್ರಿಂದ ಕೋಟ್ಯಂತರ ಹಣ ಪಡೆದಿದ್ದ ಜನಾರ್ದನ ರೆಡ್ಡಿ
ಸಹಾಯ ಮಾಡುವ ಕೈ ಇದು
ರೆಡ್ಡಿ ಜೈಲಿಗೆ ಹೋಗುತ್ತಾರಾ? ಡೀಲ್ ಮಾಡುತ್ತಿದ್ದಾರಾ? ಎಂಬ ಸುದ್ದಿಗಳು ಪ್ರಸಾರವಾಗುತ್ತಿವೆ. ಭಗವಂತ ನನಗೆ ಅಂತಹ ಪರಿಸ್ಥಿತಿ ತಂದಿಲ್ಲ. ನನ್ನದು ಹತ್ತು ಜನರಿಗೆ ಸಹಾಯ ಮಾಡುವಂತಹ ಕೈ. ಬೇಡುವುದಕ್ಕೆ ಒಡ್ಡಿಕೊಳ್ಳುವುದಿಲ್ಲ ಎಂದು 'ಕಸ್ತೂರಿ ನಿವಾಸ' ಸಿನಿಮಾದ ಸಂಭಾಷಣೆಯನ್ನು ನೆನಪಿಸಿದ್ದಾರೆ.
ಪೊಲೀಸರಿಗೆ ಸಹಕಾರ
ಪೊಲೀಸರು ಪೂರ್ವಗ್ರಹಪೀಡಿತರಾಗಿ ಈ ರೀತಿ ಮಾಡುತ್ತಿದ್ದಾರೆ ಎಂಬ ಅನುಮಾನ ಉಂಟಾಗಿದೆ. ಸಿಸಿಬಿ ಕಚೇರಿಗೆ ಹಾಜರಾಗಿ ಅವರಿಗೆ ಎಲ್ಲ ರೀತಿಯ ಸಹಕಾರ ನೀಡುತ್ತೇನೆ. ಸಾರ್ವಜನಿಕರಲ್ಲಿ ತಪ್ಪು ಗ್ರಹಿಕೆಗೆ ಅವಕಾಶ ನೀಡಬೇಡಿ ಎಂದು ರೆಡ್ಡಿ ವಿಡಿಯೋದಲ್ಲಿ ಹೇಳಿದ್ದಾರೆ.
ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ: ರೆಡ್ಡಿಗೆ ಬಂಧನ ಭೀತಿ