ಜನಪ್ರತಿನಿಧಿ- ಅಧಿಕಾರಿಗಳು ನೋಡಲ್ಲ, ಗಾಂವಠಾಣಾ ಜನರ ಪಾಡು ಕೇಳೋರಿಲ್ಲ
ಕಾರವಾರ, ನವೆಂಬರ್ 6: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಿರವತ್ತಿ ಪಂಚಾಯತಿ ವ್ಯಾಪ್ತಿಯ ಗಾಂವಠಾಣಾ ಗ್ರಾಮದ ಜನತೆ ಕುಡಿಯುವ ನೀರಿಲ್ಲದೆ ಪಡಬಾರದ ಕಷ್ಟ ಪಡುತ್ತಿದ್ದಾರೆ. ಗ್ರಾಮಕ್ಕೆ ನೀರು ಪೂರೈಕೆ ಮಾಡಲು ಇರುವ ಕೊಳವೆ ಬಾವಿಯಲ್ಲಿ ಅಪಾಯಕಾರಿ ರಾಸಾಯನಿಕ ಪತ್ತೆಯಾಗಿದ್ದು, ಕೊಳಕು ನೀರಿನ ಕಾರಣಕ್ಕೆ ಇಲ್ಲಿಯ ಜನ 3 ಕಿಲೋಮೀಟರ್ ದೂರದಿಂದ ನೀರು ತಂದುಕೊಳ್ಳುತ್ತಿದ್ದಾರೆ.
ಕಿರವತ್ತಿಯ ಹೊಸಳ್ಳಿಯಲ್ಲಿ ಹಾಲು ಹಾಗೂ ಐಸ್ ಕ್ರೀಮ್ ತಯಾರಿಸುವ ಉದ್ಯಮಗಳಿದ್ದು, ಇದರಿಂದ ಹೊರಸೂಸುವ ತ್ಯಾಜ್ಯ ನೀರು ಹಾಗೂ ರಾಸಾಯನಿಕಗಳು ನೇರವಾಗಿ ಗಾಂವಠಾಣಾ ಬಳಿ ಇರುವ ಕೆರೆ ಸೇರುತ್ತಿವೆ. ಈ ಕಲುಷಿತ ನೀರಿನಿಂದಾಗಿ ಅಂತರ್ಜಲ ಹಾಳಾಗಿದೆ.
ಬೆಂಗಳೂರಿಗೆ ಮಳೆ ಹಾವಳಿ ಜತೆಗೆ ಕುಡಿಯುವ ನೀರಿನ ಸಮಸ್ಯೆ
ಕೆರೆ ಪಕ್ಕದಲ್ಲಿರುವ ಊರಿಗೆ ನೀರು ಪೂರೈಕೆ ಮಾಡುವ ಕೊಳವೆಬಾವಿಯಲ್ಲಿ ಈ ಕೊಳಚೆ ರಾಸಾಯನಿಕ ಬೆರೆತ ನೀರು ಸೇರಿಕೊಂಡಿದ್ದು, ಅಲ್ಲಿಂದ ಗ್ರಾಮದ ಮನೆಗಳಿಗೆ ಪೂರೈಕೆಯಾಗುವ ನೀರು ದುರ್ನಾತದಿಂದ ಕೂಡಿರುತ್ತದೆ. ಬಾಯಲ್ಲಿ ನೀರು ಹಾಕಿದರೆ ವಾಂತಿ ಬರುವಂತಿದೆ ಎಂದು ಸ್ಥಳೀಯರು ಅಲವತ್ತುಕೊಳ್ಳುತ್ತಾರೆ.
ಮಂಗಳೂರು: ಮಾಲಿನ್ಯದಿಂದ ಕಪ್ಪಾಯಿತು ಫಲ್ಗುಣಿ ನದಿ
ಈ ನೀರನ್ನು ಕುಡಿಯುವುದು ಹೋಗಲಿ, ಬಟ್ಟೆ ಒಗೆಯಲು, ಸ್ನಾನ ಮಾಡಲು, ಪಾತ್ರೆ ತೊಳೆಯಲು ಕೂಡ ಬಳಕೆಗೆ ಬಾರದಂತಹ ಸ್ಥಿತಿಯನ್ನು ಗಾಂವಠಾಣದ ಜನರು ಎದುರಿಸುತ್ತಿದ್ದಾರೆ.
45 ಮನೆ, 500ಕ್ಕೂ ಹೆಚ್ಚು ಜನ ವಾಸ
ಈ ಗ್ರಾಮದಲ್ಲಿ 45 ಮನೆಗಳಿದ್ದು, 500ಕ್ಕೂ ಹೆಚ್ಚು ಜನ ವಾಸ ಮಾಡುತ್ತಾರೆ. ಗೌಳಿ ಸಮಾಜದವರೆ ಹೆಚ್ಚಿರುವ ಈ ಭಾಗ ಮೂಲಸೌಕರ್ಯದಿಂದ ವಂಚಿತವಾಗಿದೆ. ಗ್ರಾಮಕ್ಕೆ ಕೆಲವೆಡೆ ಸೂಕ್ತ ಒಳ ಚರಂಡಿ ವ್ಯವಸ್ಥೆಯಿಲ್ಲ, ರಸ್ತೆಗಳು ಹಾಳಾಗಿವೆ. ಇದೀಗ ಕುಡಿಯುವ ನೀರಿಗೂ ತತ್ವಾರವಾಗಿದೆ.
ಆರು ತಿಂಗಳಿಂದ ನಿರಂತರವಾಗಿ ದುರ್ವಾಸನೆ
ಐದಾರು ವರ್ಷದಿಂದ ಆಗಾಗ ಕೊಳವೆ ಬಾವಿಯಿಂದ ಪೂರೈಕೆಯಾಗುವ ನೀರಿನಲ್ಲಿ ವಾಸನೆ ಬರುತ್ತಿತ್ತು. ಆರು ತಿಂಗಳಿಂದ ನಿರಂತರವಾಗಿ ದುರ್ವಾಸನೆಯೊಂದಿಗೆ ಕೊಳಕು ನೀರು ಬರುತ್ತಿದೆ. ತಿಂಗಳ ಹಿಂದೆ ಕಿರವತ್ತಿ ಗ್ರಾಮ ಪಂಚಾಯಿತಿ ಟ್ರ್ಯಾಕ್ಟರ್ ಟ್ಯಾಂಕರ್ ಮೂಲಕ ನೀರು ಪೂರೈಸಲಾಯಿತು. 10 ದಿನಗಳಿಂದ ಪಂಚಾಯಿತಿ ಪೂರೈಸುತ್ತಿರುವ ನೀರನ್ನು ನಿಲ್ಲಿಸಲಾಗಿದೆ.
3 ಕಿ.ಮೀ ದೂರದ ಕಿರವತ್ತಿಯಿಂದ ನೀರು ತರಬೇಕಾಗಿದೆ
ಸ್ಥಳೀಯರು ಅನಿವಾರ್ಯವಾಗಿ ಬೈಕ್ ಮತ್ತು ಸೈಕಲ್ ಮೇಲೆ 3 ಕಿ.ಮೀ ದೂರದ ಕಿರವತ್ತಿಯಿಂದ ನೀರು ತರಬೇಕಾಗಿದೆ. ಪ್ರತಿ ದಿನ 30 ಬೈಕ್, 50 ಸೈಕಲ್ ಗಳ ಮೂಲಕ 3 ಕಿ.ಮೀ ದೂರದ ಕಿರವತ್ತಿಯಿಂದ ನೀರು ತರಬೇಕಾಗಿದೆ ಎಂದು ಸ್ಥಳೀಯ ಯುವಕ ಚಾಂಗೂ ಮಳ್ಳೂ ದೊಯಿಪುಡೆ ಹೇಳುತ್ತಾರೆ.
ವೃದ್ಧರು- ಮಹಿಳೆಯರಿಗೆ ಅದೇ ರಾಸಾಯನಿಕ ಬೆರೆತ ನೀರು
ಬೈಕ್ ಮತ್ತು ಸೈಕಲ್ ಇದ್ದವರಿಗೆ ಕಿರವತ್ತಿಯ ಶುದ್ಧ ಕುಡಿಯುವ ನೀರು ಸಿಕ್ಕರೆ, ವೃದ್ಧರು- ಮಹಿಳೆಯರು ಇರುವ ಇನ್ನುಳಿದ ಕುಟುಂಬದವರು ರಾಸಾಯನಿಕ ಬೆರೆತ ಕೊಳಕು ನೀರು ಕುಡಿಯುವುದು ಅನಿವಾರ್ಯವಾಗಿದೆ. ಈ ನೀರಿನ ಬಳಕೆಯಿಂದ ಕೆಲ ದಿನಗಳ ಹಿಂದೆ ಹಲವರಿಗೆ ವಾಂತಿ- ಭೇದಿ ಕಾಣಿಸಿಕೊಂಡಿದೆ.
ಶೌಚಾಲಯಕ್ಕೂ ನೀರಿಲ್ಲ
ಗಾಂವಠಾಣಾ ಭಾಗದ ಜನತೆಗೆ ಬಟ್ಟೆ ಒಗೆಯಲು, ಸ್ನಾನಕ್ಕೆ, ಹೋಗಲಿ ಶೌಚಾಲಯಕ್ಕೂ ನೀರಿಲ್ಲದಂತಾಗಿದೆ. ನೀರಿನ ಕೊರತೆಯಿಂದಾಗಿ ಹಳೇ ಕೊಳಕು ಬಟ್ಟೆಗಳನ್ನು ಧರಿಸುವದು ಅನಿವಾರ್ಯವಾದರೆ, ವಾರಕ್ಕೊಮ್ಮೆ ಅಥವಾ ವಾರಕ್ಕೆರಡು ಬಾರಿ ಸ್ನಾನ ಮಾಡುವಂತಾಗಿದೆ. ಕೊಳವೆ ಬಾವಿಯ ನೀರನ್ನು ಶೌಚಾಲಯಕ್ಕೆ ಬಳಸಲು ಕೆಲವು ಜನ ಭಯ ಬೀಳುತ್ತಿದ್ದು, ಇದೀಗ ಶೌಚಾಲಯಕ್ಕೂ ನೀರಿಲ್ಲದಂತಾಗಿದೆ ಎಂದು ದೂಳು ಸಕ್ಕೂ ಡಾಯಿಪುಡೆ ನೋವಿನಿಂದ ತಿಳಿಸುತ್ತಾರೆ.
ನೀರು ಯೋಗ್ಯವಲ್ಲವೆಂದು ಪ್ರಯೋಗಾಲಯ ವರದಿ
ಸಮಸ್ಯೆಯ ಕುರಿತು ಗಾಂವಠಾಣಾ ಜನತೆ ಯಲ್ಲಾಪುರ ತಹಶೀಲ್ದಾರ್ ಹಾಗೂ ಕಿರವತ್ತಿ ಪಿಡಿಒಗೆ ಮನವಿ ಮಾಡಿದರೆ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಒಬ್ಬರಿಗೊಬ್ಬರು ಬೆರಳು ಮಾಡುತ್ತಾರೆ. ಗಾಂವಠಾಣಾ ಗ್ರಾಮಕ್ಕೆ ಪೂರೈಕೆಯಾಗುತ್ತಿರುವ ನೀರು ಅಶುದ್ಧವಾಗಿದೆ. ಕುಡಿಯಲಷ್ಟೇ ಅಲ್ಲ, ದಿನ ಬಳಕೆಗೂ ಯೋಗ್ಯವಲ್ಲ ಎಂದು ಈಗಾಗಲೇ ಪ್ರಯೋಗಾಲಯದ ವರದಿ ಬಂದಿದೆ.
ಬೇಡಿಕೆ ಪೂರೈಸಿ, ಇಲ್ಲ ಪ್ರತಿಭಟನೆ ಎದುರಿಸಿ
ಗಾಂವಠಾಣಾ ಗ್ರಾಮದ 500 ಜನರ ಬಳಕೆಗೆ ಪ್ರತಿ ದಿನ 2 ಟ್ಯಾಂಕರ್ ನೀರು ಪೂರೈಸಬೇಕು, ಅಲ್ಲದೆ ಕೆರೆಗೆ ಬಿಡುತ್ತಿರುವ ರಾಸಾಯನಿಕ ತ್ಯಾಜ್ಯವನ್ನು ನಿಲ್ಲಿಸಬೇಕು. ಮೂರು ದಿನಗಳಲ್ಲಿ ನೀರು ಪೂರೈಸುವ ವ್ಯವಸ್ಥೆ ಮಾಡಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ. ಸಮಸ್ಯೆ ಹೀಗೆಯೇ ಮುಂದುವರಿದರೆ ಮುಂಬರುವ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.