ನನ್ನ ವಿರುದ್ಧ ನಿಂತು ಗೆಲ್ಲಲ್ಲಿ: ಸಿಎಂ ಸಿದ್ದರಾಮಯ್ಯ ವಿರುದ್ಧ ಗುಡುಗಿದ ಜಿ.ಟಿ ದೇವೇಗೌಡ
ಮೈಸೂರು, ಏಪ್ರಿಲ್ 03: ನಿಮ್ಮ ಬಗ್ಗೆ ನಾನು ಎಂದಾದರೂ ಮಾತನಾಡಿದ್ದೀನಾ..? ಬನ್ನಿ ಈಗಲೂ ನೀವೇ ಚುನಾವಣೆಗೆ ನಿಲ್ಲಿ, ವರುಣಾಗೆ ರಾಜೀನಾಮೆ ನೀಡಿ ನನ್ನ ಎದುರು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬಂದು ಚುನಾವಣೆ ಎದುರಿಸಿ. ಇಲ್ಲಾ ಬನ್ನಿ ಲೋಕಸಭೆಯಲ್ಲಿ ಜನ ನಿಮಗೆ ಮತ ಹಾಕುತ್ತಾರೋ ನನಗೆ ಹಾಕುತ್ತಾರೋ ನೋಡುತ್ತೇನೆ ಎಂದು ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಮ್ಮನ್ನು ಘನತೆ ಗೌರವದಿಂದ ನೋಡಿದ್ದೇನೆ. ಆ ಮರ್ಯಾದೆಯನ್ನು ಕಾಪಾಡಿಕೊಂಡು ಬಂದಿದ್ದೇನೆ. ಭಾರೀ ಗೌರವ ಕೊಟ್ಟಿದ್ದೇನೆ. ಯಾವತ್ತೂ ವಿರೋಧ ಮಾತನಾಡಲಿಲ್ಲ. ಚುನಾವಣೆ ಸೋತಾಗಲೂ ಅವರು ಸೋಲ ಬಾರದಿತ್ತು ಎಂದಿದ್ದೆ. ಅವರಂತವರು ಸೋಲಬಾರದು ವಿಧಾನಸೌಧದಲ್ಲಿ ಇರಬೇಕು ಎಂದಿದ್ದೆ ಎಂದು ಹೇಳಿದರು.

ಅಭಿವೃದ್ಧಿನೇ ಗೊತ್ತಿಲ್ಲದೇ, ಅಧಿಕಾರಿಗಳ ಮೂಲಕ ಕೆಲಸ ನಡೆಸುತ್ತಿದ್ದೀರಿ. ಕೇಂದ್ರ ಸರ್ಕಾರ ಹಣ ಕೊಡುವುದಿಲ್ಲ ಎಂದು ಆರೋಪಿಸುತ್ತಿದ್ದೀರಲ್ಲ, ಕೇಂದ್ರ ಸರ್ಕಾರ ಹಣ ನೀಡಿರುವುದೇ ಬರ ಪರಿಹಾರಕ್ಕೆ. ತೆಲಂಗಾಣ ಮುಖ್ಯಮಂತ್ರಿ, ಪ್ರಧಾನಿಗಳನ್ನು ಪ್ರೀತಿಯಿಂದ ಸ್ವಾಗತ ಮಾಡುತ್ತಾರೆ. ನೀವು ಎಲ್ಲಿಗೆ ಕರೆದರೂ ಬರುತ್ತೇವೆ ಎನ್ನುತ್ತಾರೆ. ಅವರ ಅಭಿವೃದ್ಧಿಗೋಸ್ಕರ ಪ್ರಧಾನಿಗಳನ್ನು ಮನವಿ ಮಾಡುತ್ತಾರೆ ಆದರೆ ನೀವೇನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು.
ಅವರೂ ಕಾಂಗ್ರೆಸ್, ನೀವೂ ಕಾಂಗ್ರೆಸ್, ಅವರು ಪ್ರಧಾನಿಗಳನ್ನು ಗೌರವಿಸಿ ಅಭಿವೃದ್ಧಿ ಮಾಡುತ್ತಾರೆ. ನೀವು ಏಕವಚನದಲ್ಲಿ ಪ್ರಧಾನಿಗಳನ್ನು ಟೀಕೆ ಮಾಡುತ್ತೀರಿ. ಟೀಕೆ ಮಾಡುವುದರಿಂದಲೇ ನೀವು ಗಟ್ಟಿ ಎಂದುಕೊಂಡಿದ್ದೀರಿ. ಸಂವಿಧಾನವನ್ನು ಬಿಜೆಪಿಯವರು ಬರೆಯಲು ಹೋಗಿದ್ದಾರಾ? ಸಂವಿಧಾನವನ್ನು ತಿದ್ದುಪಡಿ ಮಾಡಿದವರಾರ್ಯರು? ಇಂದಿರಾ ಗಾಂಧಿ ಅಲ್ಲವೇ..? ಕಾಂಗ್ರೆಸ್ನವರು ಎಷ್ಟು ಸರಿ ತಿದ್ದುಪಡಿ ಮಾಡಿದರು ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.












Click it and Unblock the Notifications